ಕೆಆರ್ಎಸ್ನಿಂದ ನಾಲೆಗೆ ಹರಿದ ಕಾವೇರಿ
Update: 2016-09-08 05:56 GMT
ಮಂಡ್ಯ, ಸೆ.8: ಕಾವೇರಿಕೊಳ್ಳದ ರೈತರ ಬೆಳೆಗಳಿಗೆ ನೀರು ಒದಗಿಸಲು ಕೆಆರ್ಎಸ್ನಿಂದ ನಾಲೆಗೆ ಕಾವೇರಿ ನೀರನ್ನು ಹರಿಯಬಿಡಲಾಗಿದೆ.
ತಮಿಳುನಾಡಿಗೆ ಕಾವೇರಿ ನೀರು ಹರಿಯಬಿಟ್ಟಿದ್ದರಿಂದ ಆಕ್ರೋಶಗೊಂಡಿರುವ ರೈತರನ್ನು ಸಮಾಧಾನಪಡಿಸುವ ಉದ್ದೇಶದಿಂದ ರಾಜ್ಯಸರಕಾರ ಈ ಹೆಜ್ಜೆ ಇಟ್ಟಿದ್ದು, ಗುರುವಾರ ಬೆಳಗ್ಗೆ ರಾಜ್ಯದ ರೈತರ ಜಮೀನಿಗೆ ನೀರು ಬಿಡುಗಡೆ ಮಾಡಲಾಗಿದೆ.
ಕಾವೇರಿ ನೀರು ಅವಲಂಬಿತ ರೈತರು 2.92 ಲಕ್ಷ ಎಕರೆ ಪ್ರದೇಶದಲ್ಲಿ ಬೆಳೆಯುತ್ತಿರುವ ಬೆಳೆಗಳಿಗೆ ನೀರು ಹರಿಸಲು ಕ್ರಮ ಕೈಗೊಳ್ಳುವುದಾಗಿ ಬುಧವಾರ ನಡೆದ ಮಾಧ್ಯಮ ಸಂಪಾದಕರ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಭರವಸೆ ನೀಡಿದ್ದರು.
ಮಂಡ್ಯ ಜಿಲ್ಲೆಯ ರೈತರು ಬೆಳೆಯುತ್ತಿರುವ ಬೆಳೆಗಳಿಗೆ ನೀರು ಹರಿಸಬೇಕು. ಅಲ್ಲದೆ ಕಾವೇರಿ ಅವಲಂಬಿತರಿಗೆ ಕುಡಿಯುವ ನೀರು ಪೂರೈಕೆ ಆಗಬೇಕು. ರೈತರ ಬೆಳೆಗಳಿಗೆ ನಿಗದಿಯಂತೆ 10 ದಿನಗಳ ಕಾಲ ಕಾವೇರಿ ನೀರು ಒದಗಿಸಬೇಕೆಂದು ರೈತರ ಪರವಾಗಿ ಈಗಾಗಲೇ ಶಾಸಕ ಪುಟ್ಟಣಯ್ಯ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದರು.