ಶಶಾಂಕ್ ಮನೋಹರ್ ಭಾರತದ ಕ್ರಿಕೆಟ್ ವಿರೋಧಿ ಕೆಲಸ ಮಾಡುತ್ತಿದ್ದಾರೆ
ಗ್ರೇಟರ್ ನೊಯ್ಡ, ಸೆ.10: ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ಶನಿವಾರ ಐಸಿಸಿ ಚೇರ್ಮನ್ ಶಶಾಂಕ್ ಮನೋಹರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬಿಸಿಸಿಐ ಇತ್ತೀಚೆಗೆ ಐಸಿಸಿ ನಿರ್ಧಾರದ ಬಗ್ಗೆ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದು, ಇಂಗ್ಲೆಂಡ್ನಲ್ಲಿ 2017ರಲ್ಲಿ ನಡೆಯುವ ಚಾಂಪಿಯನ್ಸ್ ಟ್ರೋಫಿಯನ್ನು ಬಹಿಷ್ಕರಿಸುವುದಾಗಿ ಹೇಳಿತ್ತು. ‘‘ಐಸಿಸಿ ಚೇರ್ಮನ್ ಭಾರತದ ಕ್ರಿಕೆಟ್ಗೆ ವಿರುದ್ಧವಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಹೇಳಿಕೆಯಿಂದ ನನಗೆ ಬೇಸರವಾಗಿದೆಯೋ, ಇಲ್ಲವೋ ಎಂಬುದು ಇಲ್ಲಿ ವಿಷಯವಲ್ಲ. ಕ್ರಿಕೆಟ್ ಮಂಡಳಿಗೆ ಮನೋಹರ್ ಅವರು ಅಧ್ಯಕ್ಷರಾಗಿ ಮುಂದುವರಿಯುವ ಅಗತ್ಯವಿದ್ದಾಗ ಅಧ್ಯಕ್ಷ ಸ್ಥಾನ ತೊರೆದರು. ಮುಳುಗುತ್ತಿರುವ ದೋಣಿಯನ್ನು ತೊರೆದ ನಾಯಕನಂತೆ ಮನೋಹರ್ ವರ್ತಿಸಿದ್ದಾರೆ. ಐಸಿಸಿ ಸಂವಿಧಾನವನ್ನು ಬದಲಿಸಿದ ಸಂದರ್ಭದಲ್ಲಿ ಮನೋಹರ್ ಬಿಸಿಸಿಐ ಅಧ್ಯಕ್ಷರಾಗಿದ್ದರು. ಆಗ ಅವರು ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾಗಿತ್ತು. ಆದರೆ, ಅವರು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಆಸಕ್ತಿ ತೋರಿದರು’’ ಎಂದು ಠಾಕೂರ್ ಆರೋಪಿಸಿದರು