ಶ್ರೇಷ್ಠ ನಾಯಕನ ಕುರಿತು ರವಿ ಶಾಸ್ತ್ರಿ ಹೇಳಿಕೆ ಮೂರ್ಖತನದ್ದು: ಅಝರುದ್ದೀನ್

Update: 2017-01-11 12:25 GMT

ಹೊಸದಿಲ್ಲಿ, ಜ.11: ಭಾರತದ ಶ್ರೇಷ್ಠ ನಾಯಕ ಯಾರು ಎಂಬ ಕುರಿತು ರವಿ ಶಾಸ್ತ್ರಿ ನೀಡಿರುವ ಹೇಳಿಕೆ ‘ಮೂರ್ಖತನದಿಂದ ಕೂಡಿದೆ’ ಎಂದು ಭಾರತದ ಮಾಜಿ ನಾಯಕ ಮುಹಮ್ಮದ್ ಅಝರುದ್ದೀನ್ ಕಿಡಿಕಾರಿದ್ದಾರೆ.

ರವಿ ಶಾಸ್ತ್ರಿ ಅವರು ಇತ್ತೀಚೆಗೆ ಭಾರತದ ಶ್ರೇಷ್ಠ ನಾಯಕರು ಯಾರು ಎಂಬ ಕುರಿತು ನೀಡಿರುವ ಹೇಳಿಕೆ ಎಲ್ಲರನ್ನು ಅಚ್ಚರಿಗೊಳಿಸಿತ್ತು. ಎಂ.ಎಸ್. ಧೋನಿ ಭಾರತ ಕಂಡ ಶ್ರೇಷ್ಠ ನಾಯಕ ಎಂದು ಬಣ್ಣಿಸಿದ್ದ ಶಾಸ್ತ್ರಿ ಶ್ರೇಷ್ಠ ನಾಯಕರ ಪಟ್ಟಿ ಮಾಡಿದ್ದರು. ಅದರಲ್ಲಿ ಸೌರವ್ ಗಂಗುಲಿ ಹೆಸರನ್ನು ಕೈಬಿಟ್ಟಿದ್ದರು. ಕಪಿಲ್‌ದೇವ್, ಅಜಿತ್ ವಾಡೇಕರ್ ಹಾಗೂ ಎಂಎಸ್‌ಕೆ ಪಟೌಡಿ ಹೆಸರನ್ನು ಪಟ್ಟಿಯಲ್ಲಿ ನಮೂದಿಸಿದ್ದರು.

ಭಾರತೀಯ ಕ್ರಿಕೆಟ್‌ನಲ್ಲಿ ಧೋನಿಯ ನಾಯಕತ್ವದ ಸಾಧನೆಗೆ ಯಾರೊಬ್ಬರೂ ಹೋಲಿಕೆಯಾಗುವುದಿಲ್ಲ್ಲ ಎಂದು ರವಿ ಶಾಸ್ತ್ರಿ ಅಭಿಪ್ರಾಯಪಟ್ಟಿದ್ದರು.

ಶಾಸ್ತ್ರಿಯ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿರುವ ಅಝರುದ್ದೀನ್,‘‘ಇಂತಹ ಹೇಳಿಕೆ ಅತ್ಯಂತ ಮೂರ್ಖತನದ್ದು. ಶಾಸ್ತ್ರಿ ಅವರು ಭಾರತದ ಶ್ರೇಷ್ಠ ನಾಯಕರ ಹೆಸರನ್ನು ಉಲ್ಲೇಖಿಸುವಾಗ ವೈಯಕ್ತಿಕ ತಾರತಮ್ಯವನ್ನು ತೋರ್ಪಡಿಸಬಾರದು. ಭಾರತೀಯ ಕ್ರಿಕೆಟ್‌ಗೆ ಸಾಕಷ್ಟು ಕೊಡುಗೆ ನೀಡಿದವರನ್ನು(ಗಂಗುಲಿ) ಅವಮಾನಿಸಬಾರದು ಎಂದು ‘ದಿ ಹಿಂದೂಸ್ತಾನ್ ಟೈಮ್ಸ್’ಗೆ ಅಝರುದ್ದೀನ್ ತಿಳಿಸಿದ್ದಾರೆ.

ಶಾಸ್ತ್ರಿಯ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸಿದ್ದ ಶ್ರೀಲಂಕಾದ ಸ್ಪಿನ್ ದಂತಕತೆ ಮುತ್ತಯ್ಯ ಮುರಳೀಧರನ್, ಗಂಗುಲಿ ಶ್ರೇಷ್ಠ ನಾಯಕ ಎಂದು ಬಣ್ಣಿಸಿದ್ದರು.

‘‘ಖಂಡಿತವಾಗಿಯೂ ಗಂಗುಲಿ ಭಾರತದ ನಾಯಕನಾದ ಬಳಿಕ ಉತ್ತಮ ಕೆಲಸ ಮಾಡಿದ್ದಾರೆ. ನನ್ನ ಪ್ರಕಾರ ಅವರು ಶ್ರೇಷ್ಠ ನಾಯಕ’’ ಎಂದು ಬಂಗಾಳ ಕ್ರಿಕೆಟ್ ಸಂಸ್ಥೆಯ ವಿಷನ್ 2020ರ ಕಾರ್ಯಕ್ರಮದ ಸ್ಪಿನ್ ಬೌಲಿಂಗ್ ಸಲಹೆಗಾರನಾಗಿರುವ ಮುರಳಿ ಹೇಳಿದರು.

ಭಾರತದ ಶ್ರೇಷ್ಠ ಬ್ಯಾಟ್ಸ್‌ಮನ್ ಆಗಿದ್ದ ಅಝರುದ್ದೀನ್ ಭಾರತದ ಪರ 99 ಟೆಸ್ಟ್ ಪಂದ್ಯಗಳನ್ನು ಆಡಿದ್ದು 24 ಶತಕಗಳ ಸಹಿತ 6,000 ರನ್ ಗಳಿಸಿದ್ದರು.

ಅಝರುದ್ದೀನ್ ಮಂಗಳವಾರ ಹೈದರಾಬಾದ್ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸುವ ಮೂಲಕ ವಿಶ್ವ ಕ್ರಿಕೆಟ್‌ನ ರಾಜಕೀಯಕ್ಕೆ ಪ್ರವೇಶಿಸುವ ಸೂಚನೆ ನೀಡಿದ್ದಾರೆ. ಲೋಧಾ ಸಮಿತಿಯ ಶಿಫಾರಸುಗಳನ್ನ ಜಾರಿಗೆ ತರುವಂತೆ ಸುಪ್ರೀಂಕೋರ್ಟ್ ಆದೇಶಿಸಿರುವ ಹಿನ್ನೆಲೆಯಲ್ಲಿ ಅರ್ಷದ್ ಅಯೂಬ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News