ಮೂರನೆ ಟೆಸ್ಟ್ಗೆ ಧೋನಿಯ ತವರೂರು ರಾಂಚಿ ಸಜ್ಜು
ರಾಂಚಿ, ಮಾ.14: ಭಾರತ ಹಾಗೂ ಆಸ್ಟ್ರೇಲಿಯ ನಡುವೆ ಗವಾಸ್ಕರ್-ಬಾರ್ಡರ್ ಟ್ರೋಫಿಗಾಗಿ ನಡೆಯುತ್ತಿರುವ ಮೂರನೆ ಟೆಸ್ಟ್ ಪಂದ್ಯಕ್ಕೆ ಮಾಜಿ ನಾಯಕ ಎಂಎಸ್ ಧೋನಿಯ ತವರೂರು ರಾಂಚಿ ಆತಿಥ್ಯವಹಿಸಿಕೊಳ್ಳಲಿದೆ. ಇದೇ ಮೊದಲ ಬಾರಿ ಟೆಸ್ಟ್ ಪಂದ್ಯದ ಆತಿಥ್ಯವಹಿಸಿಕೊಂಡಿರುವ ರಾಂಚಿ ಸ್ಟೇಡಿಯಂನಲ್ಲಿ ಸ್ಥಳೀಯ ಹೀರೊ ಧೋನಿಯ ಅನುಪಸ್ಥಿತಿ ಎದ್ದುಕಾಣುತ್ತಿದೆ.
2014ರಲ್ಲಿ ಟೆಸ್ಟ್ ಕ್ರಿಕೆಟ್ನಿಂದ ನಿವೃತ್ತಿಯಾಗಿರುವ ಧೋನಿ ಪ್ರಸ್ತುತ ದೇಶೀಯ ಕ್ರಿಕೆಟ್ ಟೂರ್ನಿಯಲ್ಲಿ ಆಡಲು ಹೊಸದಿಲ್ಲಿಗೆ ತೆರಳಿದ್ದಾರೆ. ಬುಧವಾರ ಆರಂಭವಾಗಲಿರುವ ವಿಜಯ್ ಹಝಾರೆ ಟ್ರೋಫಿಯ ಕ್ವಾರ್ಟರ್ಫೈನಲ್ನಲ್ಲಿ ವಿದರ್ಭ ತಂಡದ ವಿರುದ್ಧ ಆಡಲಿದೆ.
‘‘ಧೋನಿಯಿಂದಾಗಿ ನಾವು ಮೊದಲ ಬಾರಿ ರಾಂಚಿಯಲ್ಲಿ ಟೆಸ್ಟ್ ಪಂದ್ಯ ಆಯೋಜಿಸುವಂತಾಗಿದೆ. ಧೋನಿ ರಾಂಚಿ ನಗರವನ್ನ್ನು ಅಂತಾರಾಷ್ಟ್ರೀಯ ಭೂಪಟದಲ್ಲಿ ರಾರಾಜಿಸುವಂತೆ ಮಾಡಿದ್ದಾರೆ. ಈಗ ಅವರು ಹೊಸದಿಲ್ಲಿಯಲ್ಲಿದ್ದು, ಅಲ್ಲಿ ಚೆನ್ನಾಗಿ ಆಡಲಿ ಎಂದು ಹಾರೈಸುತ್ತೇವೆ. ರಾಂಚಿ ಟೀಮ್ ಇಂಡಿಯಾದ ಅದೃಷ್ಟದ ಮೈದಾನವಾಗಿದೆ’’ ಎಂದು ಧೋನಿಯ ಬಾಲ್ಯದ ಕೋಚ್ ಕೇಶವ್ ಬ್ಯಾನರ್ಜಿ ಹೇಳಿದ್ದಾರೆ.
ರಾಂಚಿ ಕ್ರಿಕೆಟ್ ಸಂಸ್ಥೆಯು ಶಾಲೆಗಳು ಹಾಗೂ ಸಂಸ್ಥೆಗಳಿಗೆ ಉಚಿತ ಪಾಸ್ಗಳನ್ನು ವಿತರಿಸಲು ನಿರ್ಧರಿಸಿದೆ.ಪ್ರತಿದಿನ ಸುಮಾರು 10,000 ಶಾಲಾ ಮಕ್ಕಳು ಪಂದ್ಯವನ್ನು ವೀಕ್ಷಿಸಲಿದ್ದಾರೆ.
‘‘ಧೋನಿ ರಾಂಚಿಯ ಏಕೈಕ ಐಕಾನ್ ಆಟಗಾರನಾಗಿದ್ದಾರೆ. ಐತಿಹಾಸಿಕ ಸಂದರ್ಭದಲ್ಲಿ ಇಲ್ಲಿನ ಜನರು ಧೋನಿಯ ಆಟ ನೋಡುವುದರಿಂದ ವಂಚಿತರಾಗಿದ್ದಾರೆ.ಪ್ರತಿದಿನ 30,000 ಪ್ರೇಕ್ಷಕರು ಆಗಮಿಸುವ ನಿರೀಕ್ಷೆಯಿದೆ’’ ಎಂದು ಜಾರ್ಖಂಡ್ ರಾಜ್ಯ ಕ್ರಿಕೆಟ್ ಸಂಸ್ಥೆ(ಜೆಎಸ್ಸಿಎ) ಕಾರ್ಯದರ್ಶಿ ದೆಬಾಸಿಸ್ ಚಕ್ರವರ್ತಿ ಹೇಳಿದ್ದಾರೆ.
ಜೆಮ್ಶೆಡ್ಪುರದಲ್ಲಿರುವ ಕೀನಾನ್ ಸ್ಟೇಡಿಯಂ ರಾಜ್ಯದ ಮುಖ್ಯ ಸ್ಟೇಡಿಯಂ ಆಗಿತ್ತು. ಧೋನಿ ಕ್ರಿಕೆಟ್ ತಂಡದಲ್ಲಿ ಎತ್ತರಕ್ಕೆ ಏರಿದ ಬಳಿಕ 180 ಕೋಟಿ ರೂ. ವೆಚ್ಚದಲ್ಲಿ ಅತ್ಯಂತ ಶೀಘ್ರದಲ್ಲಿ ರಾಂಚಿಯಲ್ಲಿ ಹೊಸ ಸ್ಟೇಡಿಯಂ ತಲೆ ಎತ್ತಿತ್ತು.
ಮೂರು ವರ್ಷಗಳ ಹಿಂದೆ ಮೊದಲ ಬಾರಿ ಏಕದಿನ ಕ್ರಿಕೆಟ್ನ ಆತಿಥ್ಯವಹಿಸಿಕೊಂಡಿರುವ ರಾಂಚಿ ಸ್ಟೇಡಿಯಂನಲ್ಲಿ ಈ ತನಕ ನಾಲ್ಕು ಏಕದಿನ ಹಾಗೂ ಒಂದು ಟ್ವೆಂಟಿ-20 ಪಂದ್ಯ ನಡೆದಿವೆ. ಭಾರತ-ಆಸ್ಟ್ರೇಲಿಯ ನಡುವೆ ಮೂರನೆ ಟೆಸ್ಟ್ ಪಂದ್ಯ ನಡೆಯುವ ಮೂಲಕ ಸ್ಟೇಡಿಯಂ ಇತಿಹಾಸದಲ್ಲಿ ಹೊಸ ಅಧ್ಯಾಯ ಆರಂಭವಾಗಲಿದೆ.
ಟೆಸ್ಟ್ ಕ್ರಿಕೆಟ್ನ್ನು ಜನಪ್ರಿಯಗೊಳಿಸಲು ಸಣ್ಣ ಪಟ್ಟಣಗಳಲ್ಲೂ ಟೆಸ್ಟ್ ಕ್ರಿಕೆಟ್ನ್ನು ಆಯೋಜಿಸಬೇಕೆಂಬ ಬಿಸಿಸಿಐ ಮಹಾತ್ವಾಕಾಂಕ್ಷೆ ಯೋಜನೆಯಿಂದಾಗಿ ರಾಂಚಿಯಲ್ಲಿ ಟೆಸ್ಟ್ ಕ್ರಿಕೆಟ್ ನಡೆಯುತ್ತಿದೆ.
‘‘ರಾಂಚಿಗೆ ಟೆಸ್ಟ್ ಆತಿಥ್ಯದ ಹಕ್ಕನ್ನು ನೀಡಿರುವ ಬಿಸಿಸಿಐಗೆ ನಾವು ಋಣಿಯಾಗಿದ್ದೇವೆ. ಜಾರ್ಖಂಡ್ನಲ್ಲಿ ಮೊದಲ ಬಾರಿ ಟೆಸ್ಟ್ ಪಂದ್ಯ ನಡೆಯುತ್ತಿದೆ ಎಂದು ಜನತೆಗೆ ತಿಳಿಸುವ ಸಲುವಾಗಿ ನಗರದೆಲ್ಲೆಡೆ ಧೋನಿಯ ಭಾವಚಿತ್ರವಿರುವ ಹೋಲ್ಡಿಂಗ್ನ್ನು ಹಾಕಿದ್ದೇವೆ. ಧೋನಿ ನಮ್ಮ ರಾಯಭಾರಿ. ಧೋನಿ ನಗರಕ್ಕೆ ಬಂದಾಗಲೆಲ್ಲಾ ಸ್ಟೇಡಿಯಂಗೆ ಭೇಟಿ ನೀಡುತ್ತಾರೆ. ಫಿಟ್ನೆಸ್ ತರಬೇತಿಯ ಮೂಲಕ, ಉಪಯುಕ್ತ ಸಲಹೆ ನೀಡುವ ಮೂಲಕ ನಮ್ಮಾಂದಿಗೆ ಅಮೂಲ್ಯ ಸಮಯ ಕಳೆಯುತ್ತಾರೆ’’ ಎಂದು ಚಕ್ರವರ್ತಿ ತಿಳಿಸಿದ್ದಾರೆ.
ಜಾರ್ಖಂಡ್ ಕ್ರಿಕೆಟ್ ಸಂಸ್ಥೆ(ಜೆಎಸ್ಸಿಎ)ಧೋನಿ ಕುಟುಂಬಸ್ಥರನ್ನು ಮೂರನೆ ಟೆಸ್ಟ್ ಪಂದ್ಯಕ್ಕೆ ಆಹ್ವಾನಿಸಿದ್ದು, ಧೋನಿ ಕುಟುಂಬ ಸದಸ್ಯರು ಟೆಸ್ಟ್ ಪಂದ್ಯ ವೀಕ್ಷಿಸಲು ಆಗಮಿಸುವ ನಿರೀಕ್ಷೆಯಿದೆ.