ಕಾಣೆಯಾಗಿದ್ದ ಧೋನಿ ಮೊಬೈಲ್ ಪತ್ತೆ

Update: 2017-03-19 18:06 GMT

 ಹೊಸದಿಲ್ಲಿ,ಮಾ.19: ಭಾರತದ ಮಾಜಿ ನಾಯಕ ಎಂಎಸ್ ಧೋನಿಗೆ ಸೇರಿದ ಬೆಲೆ ಬಾಳುವ ಮೂರು ಮೊಬೈಲ್ ಫೋನ್‌ಗಳು ರವಿವಾರ ಪತ್ತೆಯಾಗಿದೆ. ಇತ್ತೀಚೆಗೆ ನಗರದ ಪಂಚ ತಾರಾ ಹೊಟೇಲ್‌ನಲ್ಲಿ ಸಂಭವಿಸಿದ ಬೆಂಕಿ ದುರಂತದ ವೇಳೆ ಐ-ಫೋನ್ ಸಹಿತ 3 ಮೊಬೈಲ್‌ಗಳು ಕಳವಾಗಿದೆ ಎಂದು ಬಗ್ಗೆ ಕ್ರಿಕೆಟಿಗ ಧೋನಿ ದಿಲ್ಲಿ ಪೊಲೀಸರಿಗೆ ದೂರು ನೀಡಿದ್ದರು.

‘‘ಧೋನಿ ವಾಸ್ತವ್ಯವಿದ್ದ ಕೊಠಡಿಗೆ ತೆರಳಿದ್ದ ದಿಲ್ಲಿ ಅಗ್ನಿಶಾಮಕ ದಳದ ಅಧಿಕಾರಿಗಳಿಗೆ ಮೊಬೈಲ್ ಫೋನ್‌ಗಳು ಸಿಕ್ಕಿದ್ದವು. ಅವರಿಗೆ ಮೊಬೈಲ್ ಯಾರಿಗೆ ಸೇರಿದ್ದೆಂದು ಗೊತ್ತಿರಲಿಲ್ಲ. ಪೊಲೀಸರು ಅವರನ್ನು ಸಂಪರ್ಕಿಸಿದಾಗ ಮೊಬೈಲ್ ಫೋನ್‌ಗಳನ್ನು ಮರಳಿಸಿದ್ದಾರೆ’’ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯ್ ಹಝಾರೆ ಟ್ರೋಫಿ ಏಕದಿನ ಟೂರ್ನಮೆಂಟ್‌ನಲ್ಲಿ ಪಾಲ್ಗೊಳ್ಳಲು ಜಾರ್ಖಂಡ್ ಹಾಗೂ ತಮಿಳುನಾಡು ಆಟಗಾರರು ವಾಸ್ತವ್ಯ ಹೂಡಿದ್ದ ಪಂಚತಾರಾ ಹೊಟೇಲ್ ದ್ವಾರಕಾದಲ್ಲಿ ಶುಕ್ರವಾರ ಬೆಳಗ್ಗೆ ಅಗ್ನಿ ಆಕಸ್ಮಿಕ ಸಂಭವಿಸಿತ್ತು. ಧೋನಿ, ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ಸಹಿತ ಜಾರ್ಖಂಡ್ ಹಾಗೂ ತಮಿಳುನಾಡು ಆಟಗಾರರು ಭಾರೀ ಅಪಾಯದಿಂದ ಪಾರಾಗಿದ್ದರು.

ಹೊಟೇಲ್ ರೂಮ್‌ನಲ್ಲಿ ಮೊಬೈಲ್ ಫೋನ್‌ಗಳನ್ನು ಬಿಟ್ಟು ಧೋನಿ ಬೆಳಗ್ಗಿನ ಉಪಹಾರ ಸೇವಿಸಲು ತೆರಳಿದ್ದರು. ಈ ವೇಳೆ ದಟ್ಟ ಹೊಗೆ ಕಾಣಿಸಿಕೊಂಡಿದ್ದರಿಂದ ಧೋನಿ ಸಹಿತ ಹೊಟೇಲ್‌ನಲ್ಲಿದ್ದ ಆಟಗಾರರು ಹಾಗೂ ಅತಿಥಿಗಳನ್ನು ತೆರವುಗೊಳಿಸಲಾಗಿತ್ತು. ಕಳವಾಗಿದ್ದ ಧೋನಿಯ ಮೊಬೈಲ್‌ನಲ್ಲಿ ಟೀಮ್ ಇಂಡಿಯಾ ಹಾಗೂ ಬಿಸಿಸಿಐಗೆ ಸಂಬಂಧಿಸಿದ ಪ್ರಮುಖ ಮಾಹಿತಿಗಳು ಇದ್ದವು ಎನ್ನಲಾಗಿದೆ. ಬೆಂಕಿ ಅವಘಡದಲ್ಲಿ ಉಭಯ ತಂಡಗಳ ಆಟಗಾರರ ಕಿಟ್‌ಗಳು ಸುಟ್ಟು ಭಸ್ಮವಾಗಿದ್ದವು.

 ಹೊಟೇಲ್‌ನ ತಳಮಾಳಿಗೆಯಲ್ಲಿ ಬೆಳಗ್ಗೆ 6 ಗಂಟೆಗೆ ಕಾಣಿಸಿಕೊಂಡ ಬೆಂಕಿಯನ್ನು 30 ಅಗ್ನಿ ಶಾಮಕ ದಳಗಳು ಎರಡು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ತಹಬಂದಿಗೆ ತರುವಲ್ಲಿ ಯಶಸ್ವಿಯಾಗಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News