ಭಾರತೀಯ ಕ್ರಿಕೆಟ್ ತಂಡದ ಸಂಭಾವನೆ ದ್ವಿಗುಣಗೊಳಿಸಿದ ಬಿಸಿಸಿಐ

Update: 2017-03-22 15:10 GMT

ಹೊಸದಿಲ್ಲಿ, ಮಾ.22: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) 2017-18ರ ಸಾಲಿನ ಆಟಗಾರರ ವಾರ್ಷಿಕ ಗುತ್ತಿಗೆ ಪಟ್ಟಿಯನ್ನು ಬುಧವಾರ ಪ್ರಕಟಿಸಿದ್ದು, ಭಾರತೀಯ ಕ್ರಿಕೆಟ್ ತಂಡದ ಸದಸ್ಯರ ಸಂಭಾವನೆ ಹಾಗೂ ಪಂದ್ಯ ಶುಲ್ಕದಲ್ಲಿ ಹೆಚ್ಚಳ ಮಾಡಿದೆ.

ಪ್ರಸ್ತುತ ಆಸ್ಟ್ರೇಲಿಯ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಆಲ್‌ರೌಂಡ್ ಪ್ರದರ್ಶನದಿಂದ ಮಿಂಚುತ್ತಿರುವ ರವೀಂದ್ರ ಜಡೇಜ, ಬ್ಯಾಟ್ಸ್‌ಮನ್‌ಗಳಾದ ಚೇತೇಶ್ವರ ಪೂಜಾರ ಹಾಗೂ ಮುರಳಿ ವಿಜಯ್ ‘ಎ’ ಶ್ರೇಣಿಗೆ ಭಡ್ತಿ ಪಡೆದಿದ್ದಾರೆ. ಕಳೆದ ವರ್ಷ ಪೂಜಾರ ಹಾಗೂ ವಿಜಯ್ ‘ಬಿ’ ಗುಂಪಿನಲ್ಲಿ, ಜಡೇಜ ಸಿ ಗುಂಪಿನಲ್ಲಿದ್ದರು.

ಸುಪ್ರೀಂಕೋರ್ಟ್‌ನಿಂದ ನೇಮಿಸಲ್ಪಟ್ಟಿರುವ ಆಡಳಿತಾಧಿಕಾರಿಗಳ ಸಮಿತಿ(ಸಿಒಎ) 2016ರ ಅಕ್ಬೋಬರ್‌ನಿಂದ ಅನ್ವಯವಾಗುವ ಆಟಗಾರರ ವಾರ್ಷಿಕ ಗುತ್ತಿಗೆ ಪಟ್ಟಿಯನ್ನು ಇಂದು ಅಂತಿಮಗೊಳಿಸಿತು. ಆಟಗಾರರ ಹಳೆಯ ಗುತ್ತಿಗೆ ಅವಧಿ 2017ರ ಸೆಪ್ಟಂಬರ್ 30ಕ್ಕೆ ಕೊನೆಗೊಂಡಿತ್ತು.

ಎಲ್ಲ ಶ್ರೇಣಿಯ ಆಟಗಾರರ ಸಂಭಾವನೆಯನ್ನು ದ್ವಿಗುಣಗೊಳಿಸಲಾಗಿದೆ. ‘ಎ’ ಶ್ರೇಣಿಯ ಆಟಗಾರ ಪ್ರತಿ ವರ್ಷ 2 ಕೋಟಿ ರೂ., ‘ಬಿ’ ಶ್ರೇಣಿಯ ಆಟಗಾರ ಪ್ರತಿ ವರ್ಷ 1 ಕೋ.ರೂ. ಹಾಗೂ ‘ಸಿ’ ಶ್ರೇಣಿಯ ಆಟಗಾರ ಪ್ರತಿವರ್ಷ 50 ಲಕ್ಷ ರೂ. ಸಂಭಾವನೆ ಪಡೆಯಲಿದ್ದಾನೆ.

ಆಟಗಾರರ ಪಂದ್ಯ ಶುಲ್ಕದಲ್ಲೂ ಹೆಚ್ಚಳಗೊಳಿಸಲಾಗಿದ್ದು, ಪ್ರತಿ ಟೆಸ್ಟ್ ಪಂದ್ಯಕ್ಕೆ 15 ಲಕ್ಷ ರೂ., ಪ್ರತಿ ಏಕದಿನ ಪಂದ್ಯಕ್ಕೆ 6 ಲಕ್ಷ ರೂ. ಹಾಗೂ ಟ್ವೆಂಟಿ-20 ಅಂತಾರಾಷ್ಟ್ರೀಯ ಪಂದ್ಯಕ್ಕೆ 3 ಲಕ್ಷ ರೂ. ನಿಗದಿಪಡಿಸಲಾಗಿದ್ದು, ಇದು 2016ರ ಅಕ್ಟೋಬರ್ 1 ರಿಂದ ಅನ್ವಯ.

ಏಳು ಕ್ರಿಕೆಟಿಗರು ‘ಎ’ ಗುಂಪಿನಲ್ಲಿದ್ದು, ಅವರುಗಳೆಂದರೆ: ಧೋನಿ, ಕೊಹ್ಲಿ, ಪೂಜಾರ, ಅಜಿಂಕ್ಯ ರಹಾನೆ, ಆರ್. ಅಶ್ವಿನ್,ಜಡೇಜ ಹಾಗೂ ವಿಜಯ್.

ಇದೇ ವೇಳೆ, ಹಿರಿಯ ಆಟಗಾರರಾದ ಯುವರಾಜ್ ಸಿಂಗ್ ಹಾಗೂ ಆಶೀಷ್ ನೆಹ್ರಾ ಕ್ರಮವಾಗಿ ಬಿ ಹಾಗೂ ಸಿ ಗುಂಪಿನಲ್ಲಿ ಸಾನ ಪಡೆದಿದ್ದಾರೆ. ಆದರೆ, ಸುರೇಶ್ ರೈನಾರನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಅವರು 32 ಸದಸ್ಯರ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ. ಯುವ ಆಟಗಾರ ರಿಷಬ್ ಪಂತ್ ‘ಸಿ’ ಗ್ರೇಡ್‌ನಲ್ಲಿ ಸ್ಥಾನ ಪಡೆದಿದ್ದಾರೆ. ಕಳೆದ ವರ್ಷ ಸಿ ಶ್ರೇಣಿಯಲ್ಲಿದ್ದ ಕೆಎಲ್ ರಾಹುಲ್ ಹಾಗೂ ವೃದ್ಧಿಮಾನ್ ಸಹಾ ಈ ವರ್ಷ ‘ಬಿ’ ಶ್ರೇಣಿಗೆ ಭಡ್ತಿ ಪಡೆದಿದ್ದಾರೆ. ಇತ್ತೀಚೆಗೆ ಕಳಪೆ ಫಾರ್ಮ್‌ನಲ್ಲಿರುವ ಶಿಖರ್ ಧವನ್‌ರನ್ನು ಸಿ ಶ್ರೇಣಿಗೆ ಹಿಂಭಡ್ತಿ ನೀಡಲಾಗಿದೆ.

 ಗುತ್ತಿಗೆ ಅವಧಿ ಆರಂಭವಾಗುವ ಮೊದಲೇ ಕ್ರಿಕೆಟ್ ಪಂದ್ಯವನ್ನಾಡಿರುವ ಕಾರಣ ಹರ್ಭಜನ್ ಸಿಂಗ್ ಹಾಗೂ ಗೌತಮ್ ಗಂಭೀರ್ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ.

‘ಎ’ ಶ್ರೇಣಿ: ವಿರಾಟ್ ಕೊಹ್ಲಿ, ಎಂಎಸ್ ಧೋನಿ, ಆರ್.ಅಶ್ವಿನ್, ಅಜಿಂಕ್ಯ ರಹಾನೆ, ಚೇತೇಶ್ವರ ಪೂಜಾರ, ರವೀಂದ್ರ ಜಡೇಜ, ಮುರಳಿ ವಿಜಯ್.

ಬಿ’ ಶ್ರೇಣಿ: ರೋಹಿತ್ ಶರ್ಮ, ಕೆ.ಎಲ್.ರಾಹುಲ್, ಭುವನೇಶ್ವರ ಕುಮಾರ್, ಮುಹಮ್ಮದ್ ಶಮಿ, ಇಶಾಂತ್ ಶರ್ಮ, ಉಮೇಶ್ ಯಾದವ್, ವೃದ್ಧಿಮಾನ್ ಸಹಾ, ಜಸ್‌ಪ್ರಿತ್ ಬುಮ್ರಾ, ಯುವರಾಜ್ ಸಿಂಗ್.

‘ಸಿ’ ಶ್ರೇಣಿ: ಶಿಖರ್ ಧವನ್, ಅಂಬಟಿ ರಾಯುಡು, ಅಮಿತ್ ಮಿಶ್ರಾ, ಮನೀಷ್ ಪಾಂಡೆ, ಅಕ್ಷರ್ ಪಟೇಲ್, ಕರುಣ್ ನಾಯರ್, ಹಾರ್ದಿಕ್ ಪಾಂಡ್ಯ, ಆಶೀಷ್ ನೆಹ್ರಾ, ಕೇದಾರ್ ಜಾಧವ್, ಯುಜ್ವೇಂದ್ರ ಚಾಹಲ್, ಪಾರ್ಥಿವ್ ಪಟೇಲ್, ಜಯಂತ್ ಯಾದವ್, ಮನ್‌ದೀಪ್ ಸಿಂಗ್, ಧವಳ್ ಕುಲಕರ್ಣಿ, ಶಾರ್ದೂಲ್ ಠಾಕೂರ್, ರಿಷಬ್ ಪಂತ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News