ಕ್ರೀಡಾ ಸಚಿವರನ್ನು ಮಂಗನಿಗೆ ಹೋಲಿಸಿ ವಿವಾದ ಸೃಷ್ಟಿಸಿದ ಮಾಲಿಂಗ
ಕೊಲಂಬೊ, ಜೂ.22: ಶ್ರೀಲಂಕಾದ ವೇಗದ ಬೌಲರ್ ಲಸಿತ್ ಮಾಲಿಂಗ ದೇಶದ ಕ್ರೀಡಾ ಸಚಿವರನ್ನು ಮಂಗನಿಗೆ ಹೋಲಿಕೆ ಮಾಡುವ ಮೂಲಕ ವಿವಾದಕ್ಕೆ ಸಿಲುಕಿದ್ದಾರೆ. ಮಾಲಿಂಗ ವಿವಾದಾತ್ಮಕ ಹೇಳಿಕೆಗೆೆೆ ಸಂಬಂಧಿಸಿ ತನಿಖೆ ಎದುರಿಸಬೇಕಾಗಿದೆ.
ಲಂಕಾದ ಕ್ರೀಡಾ ಸಚಿವ ದಯಸಿರಿ ಜಯಸೇಖರ ಶ್ರೀಲಂಕಾ ತಂಡ ಪಾಕಿಸ್ತಾನ ವಿರುದ್ಧ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಮಾಲಿಂಗ ಬೌಲಿಂಗ್ನಲ್ಲಿ ಸರ್ಫ್ರಾಜ್ ಅಹ್ಮದ್ಗೆ ಎರಡು ಬಾರಿ ಜೀವದಾನ ನೀಡಿ ಗ್ರೂಪ್ ಹಂತದಲ್ಲೇ ನಿರ್ಗಮಿಸಿದ್ದನ್ನು ಉಲ್ಲೇಖಿಸಿ ಟೀಕಿಸಿದ್ದರು. ಆಟಗಾರರ ಫಿಟ್ನೆಸ್ ಬಗ್ಗೆಯೂ ಪ್ರಶ್ನಿಸಿದ್ದರು. ಕ್ರೀಡಾ ಸಚಿವರ ಟೀಕೆಗೆ ಪ್ರತಿಯಾಗಿ ಮಾಲಿಂಗ ಅವರನ್ನು ಮಂಗನಿಗೆ ಹೋಲಿಸಿದ್ದಾರೆ.
ಗಿಣಿಯ ಗೂಡಿನ ಬಗ್ಗೆ ಮಂಗನಿಗೆ ಏನು ಗೊತ್ತು. ಇದೊಂದು ರೀತಿಯಲ್ಲಿ ಗಿಣಿಯ ಮನೆಯೊಳಗೆ ಪ್ರವೇಶಿಸಿ ಮಂಗ ಮಾತನಾಡಿದ್ದಂತಾಗಿದೆ ಎಂದು ಮಾಲಿಂಗ ಅವರು ಕ್ರೀಡಾಸಚಿವರ ಹೇಳಿಕೆಗೆ ಪ್ರತಿಕ್ರಿಯಿಸಿದ್ದರು.
ಮಾಲಿಂಗ ಇಂತಹ ಹೇಳಿಕೆ ನೀಡುವ ಮೂಲಕ ದೇಶದ ಕ್ರಿಕೆಟ್ ಮಂಡಳಿಯೊಂದಿಗಿನ ಒಪ್ಪಂದವನ್ನು ಉಲ್ಲಂಘಿಸಿದ್ದಾರೆ.ನಾನು ನಮ್ಮ ಆಟಗಾರರ ಫಿಟ್ನೆಸ್ ಮಟ್ಟವನ್ನು ಟೀಕಿಸಿದ್ದೆ. ನಾನು ಮಾಲಿಂಗರ ಬಗ್ಗೆ ಏನೂ ಹೇಳಿರಲಿಲ್ಲ. ಆದರೆ ಅವರು ನನ್ನ ಮೇಲೆ ಸಾರ್ವಜನಿಕವಾಗಿ ವಾಗ್ದಾಳಿ ನಡೆಸಿದ್ದಾರೆ ಎಂದು ಕ್ರೀಡಾಸಚಿವರು ತಿಳಿಸಿದ್ದಾರೆ.