ನಾಳೆಯಿಂದ ಶ್ರೀಲಂಕಾ ವಿರುದ್ಧ ಮೊದಲ ಟೆಸ್ಟ್ ಆರಂಭ

Update: 2017-07-25 18:12 GMT

ಗಾಲೆ, ಜು.25: ಮೂರು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಬುಧವಾರ ಇಲ್ಲಿ ಆರಂಭವಾಗಲಿದ್ದು, ಸೋಲಿನಿಂದ ಕಂಗೆಟ್ಟಿರುವ ಶ್ರೀಲಂಕಾ ತಂಡ ವಿಶ್ವದ ನಂ.1 ತಂಡ ಭಾರತದ ಸವಾಲು ಎದುರಿಸಲಿದೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ತನ್ನ ಪ್ರಾಬಲ್ಯ ಮುಂದುವರಿಸುವತ್ತ ಚಿತ್ತವಿರಿಸಿರುವ ವಿರಾಟ್ ಕೊಹ್ಲಿ ಪಡೆ 2015ರಲ್ಲಿ ಗಾಲೆಯಲ್ಲಿ ಅನುಭವಿಸಿದ್ದ ಸೋಲಿಗೆ ಸೇಡು ತೀರಿಸಿಕೊಳ್ಳಲು ಎದುರು ನೋಡುತ್ತಿದೆ.

2015ರ ಗಾಲೆ ಟೆಸ್ಟ್‌ನ 4ನೆ ದಿನದಾಟದಲ್ಲಿ 176 ರನ್ ಬೆನ್ನಟ್ಟಿದ್ದ ಭಾರತ 112 ರನ್‌ಗೆ ಆಲೌಟ್ ಆಗಿ ಸೋಲುಂಡಿತ್ತು.

ಕಳೆದ ಎರಡು ವರ್ಷಗಳಲ್ಲಿ ಭಾರತದ ಟೆಸ್ಟ್ ತಂಡದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಯುವ ಹಾಗೂ ಆಕ್ರಮಣಕಾರಿ ಆಟಗಾರ ಕೊಹ್ಲಿ ಪ್ರಬುದ್ಧ ನಾಯಕನಾಗಿ ಬೆಳೆದಿದ್ದಾರೆ. 2016-17ರ ಋತುವಿನಲ್ಲಿ ಕೊಹ್ಲಿ ನಾಯಕತ್ವದಲ್ಲಿ 17 ಟೆಸ್ಟ್ ಪಂದ್ಯಗಳನ್ನು ಆಡಿದ್ದ ಭಾರತ 12ರಲ್ಲಿ ಜಯಭೇರಿ ಬಾರಿಸಿದೆ.

ಅನಿಲ್ ಕುಂಬ್ಳೆ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನವನ್ನು ತುಂಬಿರುವ ರವಿ ಶಾಸ್ತ್ರಿ ಕೋಚ್ ಆಯ್ಕೆಯ ವೇಳೆ ನಡೆದ ಎಲ್ಲ ಪ್ರಹಸನವನ್ನು ಬದಿಗಿಟ್ಟು, ತನ್ನ ಸ್ನೇಹಿತ ಭರತ್ ಅರುಣ್(ಬೌಲಿಂಗ್ ಕೋಚ್)ರೊಂದಿಗೆ ಟೀಮ್ ಇಂಡಿಯಾವನ್ನು ಸಜ್ಜುಗೊಳಿಸಲು ನಿರ್ಧರಿಸಿದ್ದಾರೆ.

ಗಾಲೆ ಟೆಸ್ಟ್‌ನಲ್ಲಿ ಸೋತ ಬಳಿಕ ಭಾರತ 2015-16 ಹಾಗೂ 2016-17ರ ಋತುವಿನಲ್ಲಿ 23 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಪುಣೆಯಲ್ಲಿ ಆಸ್ಟ್ರೇಲಿಯ ವಿರುದ್ಧ ಮಾತ್ರ ಸೋತಿದೆ.

ಭಾರತ ಎಲ್ಲ ವಿಭಾಗದಲ್ಲೂ ಸ್ಥಿರ ಪ್ರದರ್ಶನ ನೀಡಿದ್ದ ಕಾರಣ ಅಜೇಯ ಓಟವನ್ನು ಕಾಯ್ದುಕೊಂಡಿದೆ.

ಭುಜನೋವಿನಿಂದ ಚೇತರಿಸಿಕೊಂಡು ತಂಡಕ್ಕೆ ವಾಪಸಾಗಿರುವ ಕರ್ನಾಟಕದ ಆರಂಭಿಕ ಆಟಗಾರ ಕೆ.ಎಲ್. ರಾಹುಲ್ ಜ್ವರದಿಂದ ಬಳಲುತ್ತಿರುವ ಕಾರಣ ಮೊದಲ ಟೆಸ್ಟ್‌ನಲ್ಲಿ ಆಡುತ್ತಿಲ್ಲ. ನಾಯಕ ವಿರಾಟ್ ಕೊಹ್ಲಿ ಅವರು ಶಿಖರ್ ಧವನ್‌ರೊಂದಿಗೆ ಅಭಿನವ್ ಮುಕುಂದ್‌ರನ್ನು ಆರಂಭಿಕ ಆಟಗಾರನ್ನಾಗಿ ಕಣಕ್ಕಿಳಿಸುವ ಸಾಧ್ಯತೆಯಿದೆ.

ಮುಕುಂದ್ ಬೆಂಗಳೂರು ಟೆಸ್ಟ್‌ನಲ್ಲಿ ಆಸ್ಟ್ರೇಲಿಯ ವಿರುದ್ಧ ಆಡಿದ್ದು, ಎರಡು ಇನಿಂಗ್ಸ್‌ಗಳಲ್ಲಿ ಕೇವಲ 16 ರನ್ ಗಳಿಸಿದ್ದರು. ಇದೀಗ ಮುಕುಂದ್‌ಗೆ ಮತ್ತೊಂದು ಅವಕಾಶ ಲಭಿಸುವ ನಿರೀಕ್ಷೆಯಿದೆ.

ರೋಹಿತ್ ಶರ್ಮ ಟೆಸ್ಟ್ ಪಂದ್ಯಕ್ಕೆ ವಾಪಸಾಗುವ ಸಾಧ್ಯತೆಯಿದೆ. ರೋಹಿತ್ ಇಂದೋರ್‌ನಲ್ಲಿ ನ್ಯೂಝಿಲೆಂಡ್ ವಿರುದ್ಧ ಕೊನೆಯ ಬಾರಿ ಟೆಸ್ಟ್ ಪಂದ್ಯ ಆಡಿದ್ದರು.

ಇದೇವೇಳೆ, ಆರ್.ಅಶ್ವಿನ್ 50ನೆ ಟೆಸ್ಟ್ ಪಂದ್ಯವನ್ನಾಡಲು ಸಜ್ಜಾಗಿದ್ದಾರೆ. ಟಾಸ್ ಹಾರಿಸುವ ತನಕ ಭಾರತದ ಬೌಲಿಂಗ್ ಕಾಂಬಿನೇಶನ್ ಚರ್ಚೆಯ ವಿಷಯವಾಗಲಿದ್ದು, ಒಂದು ವೇಳೆ ಕೊಹ್ಲಿ ಐವರು ಬೌಲರ್‌ಗಳನ್ನು ಕಣಕ್ಕಿಳಿಸಲು ನಿರ್ಧರಿಸಿದರೆ ಅಶ್ವಿನ್ ಹೆಚ್ಚುವರಿ ಸ್ಪಿನ್ನರ್ ಕುಲ್‌ದೀಪ್ ಯಾದವ್‌ರೊಂದಿಗೆ ಆಡುವ ಅವಕಾಶ ಪಡೆಯಲಿದ್ದಾರೆ.

ಮತ್ತೊಂದೆಡೆ ಆತಿಥೇಯ ಶ್ರೀಲಂಕಾ ತಂಡದ ಇತ್ತೀಚೆಗೆ ತವರು ನೆಲದಲ್ಲಿ ಆಡಿರುವ 6 ಪಂದ್ಯಗಳ ಪೈಕಿ 5ರಲ್ಲಿ ಜಯ ಸಾಧಿಸಿದೆ. ಇದರಲ್ಲಿ ಆಸ್ಟ್ರೇಲಿಯ ವಿರುದ್ಧ ವೈಟ್‌ವಾಶ್ ಸರಣಿಯೂ ಸೇರಿದೆ. ಆಸೀಸ್ ವಿರುದ್ಧ ರಂಗನಾ ಹೆರಾತ್ ಶ್ರೇಷ್ಠ ಪ್ರದರ್ಶನ ನೀಡಿದ್ದರು.

ಈ ವರ್ಷಾರಂಭದಲ್ಲಿ ಬಾಂಗ್ಲಾದೇಶ ವಿರುದ್ಧ ಮೊದಲ ಬಾರಿ ಸೋತಿದ್ದ ಶ್ರೀಲಂಕಾ ತೀವ್ರ ಹಿನ್ನಡೆ ಅನುಭವಿಸಿತ್ತು. ಕೆಳ ರ್ಯಾಂಕಿನ ಝಿಂಬಾಬ್ವೆ ವಿರುದ್ಧದ ಏಕೈಕ ಟೆಸ್ಟ್‌ನಲ್ಲೂ ಸೋಲುವ ಭೀತಿ ಎದುರಿಸಿತ್ತು. ಈ ಹಿನ್ನೆಲೆಯಲ್ಲಿ ಭಾರತದ ವಿರುದ್ಧದ ಸರಣಿ ಶ್ರೀಲಂಕಾಕ್ಕೆ ಒಂದು ಸವಾಲಾಗಿ ಪರಿಗಣಿಸಿದೆ.

 ಗ್ರಹಾಂ ಫೋರ್ಡ್ ಕೋಚ್ ಹುದ್ದೆ ತೊರೆದ ಬಳಿಕ ನಿಕ್ ಪೊಥಾಸ್ ಹಂಗಾಮಿ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಹಾಯಕ ಸಿಬ್ಬಂದಿ ವಿಭಾಗದಲ್ಲಿ ಶಕ್ತಿ ತುಂಬಲು ಚಾಮಿಂಡ ವಾಸ್ ಹಾಗೂ ಹಶನ್ ತಿಲಕರತ್ನೆ ಕ್ರಮವಾಗಿ ಬೌಲಿಂಗ್ ಹಾಗೂ ಬ್ಯಾಟಿಂಗ್ ಕೋಚ್ ಆಗಿ ಆಯ್ಕೆಯಾಗಿದ್ದಾರೆ.

ಶ್ರೀಲಂಕಾದ ಹೊಸ ಟೆಸ್ಟ್ ನಾಯಕ ದಿನೇಶ್ ಚಾಂಡಿಮಾಲ್ ಅನಾರೋಗ್ಯದಿಂದಾಗಿ ಮೊದಲ ಪಂದ್ಯದಲ್ಲಿ ಆಡುತ್ತಿಲ್ಲ. ಅವರ ಅನುಪಸ್ಥಿತಿಯಲ್ಲಿ ಸ್ಪಿನ್ ಬೌಲರ್ ರಂಗನ ಹೆರಾತ್ ಶ್ರೀಲಂಕಾ ತಂಡದ ನಾಯಕತ್ವವಹಿಸಿಕೊಂಡಿದ್ದಾರೆ.

ಝಿಂಬಾಬ್ವೆ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಲ್ಲಿ ಹೆರಾತ್ 11 ವಿಕೆಟ್‌ಗಳನ್ನು ಕಬಳಿಸಿದ್ದರು. ವೇಗದ ಬೌಲರ್ ನುವಾನ್ ಪ್ರದೀಪ್ ತಂಡಕ್ಕೆ ವಾಪಸಾಗಿದ್ದಾರೆ. ಚಾಂಡಿಮಾಲ್ ಬದಲಿಗೆ ಧನಂಜಯ್ ಡಿಸಿಲ್ವಾಗೆ ಕರೆ ನೀಡಲಾಗಿದೆ. ಎಡಗೈ ಸ್ಪಿನ್ನರ್ ಮಲಿಂದಾ ಪುಷ್ಟಕುಮಾರ್ ಮೊದಲ ಬಾರಿ ಟೆಸ್ಟ್ ತಂಡಕ್ಕೆ ಸೇರ್ಪಡೆಯಾಗಿದ್ದು, ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 558 ವಿಕೆಟ್‌ಗಳನ್ನು ಪಡೆದಿದ್ದಾರೆ. ತಂಡಗಳು

ಭಾರತ: ವಿರಾಟ್ ಕೊಹ್ಲಿ(ನಾಯಕ), ಶಿಖರ್ ಧವನ್, ಲೋಕೇಶ್ ರಾಹುಲ್, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ರೋಹಿತ್ ಶರ್ಮ, ಆರ್.ಅಶ್ವಿನ್, ರವೀಂದ್ರ ಜಡೇಜ, ವೃದ್ಧಿಮಾನ್ ಸಹಾ(ವಿಕೆಟ್‌ಕೀಪರ್), ಇಶಾಂತ್ ಶರ್ಮ, ಉಮೇಶ್ ಯಾದವ್, ಹಾರ್ದಿಕ್ ಪಾಂಡ್ಯ, ಭುವನೇಶ್ವರ ಕುಮಾರ್, ಮುಹಮ್ಮದ್ ಶಮಿ, ಕುಲ್‌ದೀಪ್ ಯಾದವ್, ಅಭಿನವ್ ಮುಕುಂದ್.

ಶ್ರೀಲಂಕಾ:ರಂಗನ ಹೆರಾತ್(ನಾಯಕ), ಉಪುಲ್ ತರಂಗ, ಡಿಮುತ್ ಕರುಣರತ್ನೆ, ಕುಶಾಲ್ ಮೆಂಡಿಸ್, ಆ್ಯಂಜೆಲೊ ಮ್ಯಾಥ್ಯೂಸ್, ಅಸೆಲಾ ಗುಣರತ್ನೆ, ನಿರೊಶನ್ ಡಿಕ್‌ವೆಲ್ಲಾ, ಧನಂಜಯ್ ಡಿ’ಸಿಲ್ವ, ದನುಷ್ಕ ಗುಣತಿಲಕ, ದಿಲ್‌ರುವಾನ್ ಪೆರೇರ, ಸುರಂಗ ಲಕ್ಮಲ್, ಲಹಿರು ಕುಮಾರ, ವಿಶ್ವ ಫೆರ್ನಾಂಡೊ, ಮಲಿಂದ ಪುಷ್ಪಕುಮಾರ, ನುವಾನ್ ಪ್ರದೀಪ್.

ಪಂದ್ಯ ಆರಂಭದ ಸಮಯ: ಬೆಳಗ್ಗೆ 10:00

ಅಂಕಿ-ಅಂಶ

* ಆರ್.ಅಶ್ವಿನ್ 50ನೆ ಟೆಸ್ಟ್ ಪಂದ್ಯವನ್ನಾಡಲು ಸಜ್ಜಾಗಿದ್ದಾರೆ.

* ರಂಗನ ಹೆರಾತ್ ಐದನೆ ಬಾರಿ ಶ್ರೀಲಂಕಾ ಟೆಸ್ಟ್ ನಾಯಕತ್ವ ವಹಿಸಿಕೊಳ್ಳಲಿದ್ದಾರೆ. ನಾಲ್ಕು ಪಂದ್ಯಗಳಲ್ಲಿ ಮೂರರಲ್ಲಿ ಜಯ, ಒಂದರಲ್ಲಿ ಸೋತಿದ್ದಾರೆ. ಈ ಹಿಂದೆ ಝಿಂಬಾಬ್ವೆ ಹಾಗೂ ಬಾಂಗ್ಲಾದೇಶ ವಿರುದ್ಧ ತಂಡವನ್ನು ಮುನ್ನಡೆಸಿದ್ದರು.

*ಕಳೆದ ಮೂರು ವರ್ಷಗಳಿಂದ ಶ್ರೀಲಂಕಾದಲ್ಲಿ ಯಾವುದೇ ಟೆಸ್ಟ್ ಪಂದ್ಯ ಡ್ರಾಗೊಂಡಿಲ್ಲ. ಇತ್ತೀಚೆಗೆ ಆಡಿರುವ ಎಲ್ಲ 18 ಪಂದ್ಯಗಳಲ್ಲಿ ಸ್ಪಷ್ಟ ಫಲಿತಾಂಶ ಬಂದಿದೆ.

ಪಿಚ್ ಹಾಗೂ ಹವಾಗುಣ

ಪಿಚ್ ಮೊದಲೆರಡು ದಿನಗಳಲ್ಲಿ ಬ್ಯಾಟಿಂಗ್‌ಗೆ ನೆರವು ನೀಡುವ ಸಾಧ್ಯತೆಯಿದೆ. ಮಧ್ಯಾಹ್ನದ ಬಳಿಕ ಮಳೆ ಸುರಿಯುವ ಸಾಧ್ಯತೆಯೂ ಇದೆ. ಜುಲೈನಲ್ಲಿ ಈ ಭಾಗದಲ್ಲಿ ಯಾವಾಗಲೂ ಮಳೆಯಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News