×
Ad

ಏಶ್ಯನ್ ಗೇಮ್ಸ್ ಹಾಕಿ: ಭಾರತಕ್ಕೆ ಶ್ರೀಜೇಶ್ ಸಾರಥ್ಯ

Update: 2018-07-09 23:55 IST

ಹೊಸದಿಲ್ಲಿ, ಜು.9: ಇಂಡೋನೇಶಿಯಾದಲ್ಲಿ ಆಗಸ್ಟ್ 18ರಿಂದ ನಡೆಯಲಿರುವ 18ನೇ ಏಶ್ಯನ್ ಗೇಮ್ಸ್‌ನಲ್ಲಿ ಪಾಲ್ಗೊಳ್ಳಲಿರುವ ಭಾರತದ ಪುರುಷರ ಹಾಕಿ ತಂಡದ ನಾಯಕರನ್ನಾಗಿ ಗೋಲ್‌ಕೀಪರ್ ಪಿ.ಆರ್.ಶ್ರೀಜೇಶ್ ಅವರನ್ನೇ ಉಳಿಸಿಕೊಳ್ಳಲಾಗಿದೆ. ಇತ್ತೀಚೆಗೆ ಮುಕ್ತಾಯಗೊಂಡ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ಅತ್ಯುತ್ತಮ ಗೋಲ್‌ಕೀಪರ್ ಪುರಸ್ಕಾರ ಪಡೆದಿದ್ದ ಶ್ರೀಜೇಶ್ ಸಾರಥ್ಯದ 18 ಸದಸ್ಯರ ತಂಡದ ಆಟಗಾರರ ಹೆಸರನ್ನು ಪ್ರಕಟಿಸಲಾಗಿದೆ.ಚಾಂಪಿಯನ್ಸ್ ಟ್ರೋಫಿ ಟೂರ್ನಿಯಿಂದ ವಿಶ್ರಾಂತಿ ನೀಡಲಾಗಿದ್ದ ಡ್ರಾಗ್‌ಫ್ಲಿಕರ್ ರೂಪೀಂದರ್ ಪಾಲ್ ಸಿಂಗ್ ಅವರನ್ನೂ ತಂಡಕ್ಕೆ ಸೇರ್ಪಡೆ ಮಾಡಲಾಗಿದೆ. ಏಶ್ಯನ್ ಗೇಮ್ಸ್ ಹಾಕಿಯಲ್ಲಿ ಭಾರತದ ಪುರುಷರ ತಂಡ ಹಾಲಿ ಚಾಂಪಿಯನ್ ಆಗಿದೆ. ಮಿಡ್‌ಫೀಲ್ಡರ್ ಚಿಂಗ್ಲೆನ್‌ಸನ ಸಿಂಗ್ ಕಂಗುಜಮ್‌ರನ್ನು ಉಪನಾಯಕರಾಗಿ ಆಯ್ಕೆ ಮಾಡಲಾಗಿದೆ. ಸರ್ದಾರ್ ಸಿಂಗ್, ಮನ್‌ಪ್ರೀತ್ ಸಿಂಗ್, ಸಿಮ್ರನ್‌ಜಿತ್ ಸಿಂಗ್ ಹಾಗೂ ವಿವೇಕ್ ಸಾಗರ್ ಪ್ರಸಾದ್ ಮಿಡ್‌ಫೀಲ್ಡ್ ವಿಭಾಗದ ಇತರ ಸದಸ್ಯರಾಗಿದ್ದಾರೆ. ಫಾರ್ವರ್ಡ್ ವಿಭಾಗದಲ್ಲಿ ಆಕಾಶ್‌ದೀಪ್ ಸಿಂಗ್ ತಂಡಕ್ಕೆ ಪುನರಾಯ್ಕೆಗೊಂಡರೆ, ಅನುಭವೀ ಆಟಗಾರ ಎಸ್.ವಿ.ಸುನಿಲ್, ಮನ್‌ದೀಪ್ ಸಿಂಗ್, ಲಲಿತ್ ಕುಮಾರ್ ಉಪಾಧ್ಯಾಯ್ ಮತ್ತು ದಿಲ್‌ಪ್ರೀತ್ ಸಿಂಗ್ ಇತರ ಆಟಗಾರರು.

ಅನುಭವೀ ಆಟಗಾರರಾದ ಸುರೇಂದರ್ ಕುಮಾರ್ ಮತ್ತು ಬೀರೇಂದ್ರ ಲಾಕ್ರಾರನ್ನು ಹೊಂದಿರುವ ಬ್ಯಾಕ್‌ಲೈನ್ ಇತರ ಮೂವರು ಡ್ರಾಗ್‌ಫ್ಲಿಕರ್‌ಗಳಾದ ಹರ್ಮನ್‌ಪ್ರೀತ್ ಸಿಂಗ್, ವರುಣ್ ಕುಮಾರ್, ಅಮಿತ್ ರೋಹಿದಾಸ್‌ರನ್ನು ಒಳಗೊಂಡಿದೆ. ತಂಡದ ಸ್ವರೂಪದ ಬಗ್ಗೆ ಮುಖ್ಯ ಕೋಚ್ ಹರೇಂದ್ರ ಸಿಂಗ್ ಸಂತೃಪ್ತಿ ಸೂಚಿಸಿದ್ದಾರೆ. ಇತ್ತೀಚಿನ ಟೂರ್ನಿಗಳಲ್ಲಿ ತಮ್ಮ ಸಾಮರ್ಥ್ಯ ಪ್ರದರ್ಶಿಸಿದ ಆಟಗಾರರ ಸಮ್ಮಿಲಿತ ತಂಡ ಇದಾಗಿದೆ. ರಮಣ್‌ದೀಪ್ ಸಿಂಗ್ ಗಾಯಗೊಂಡಿರುವ ಕಾರಣ ಟೂರ್ನಿಯಿಂದ ಹೊರಗುಳಿದಿದ್ದು ಅವರ ಅನುಪಸ್ಥಿತಿ ತಂಡವನ್ನು ಕಾಡಲಿದೆ. ಆದರೂ ಆಕಾಶ್‌ದೀಪ್ ಸಿಂಗ್ ತಂಡಕ್ಕೆ ಮರಳಿರುವುದು ತಂಡಕ್ಕೆ ಪ್ಲಸ್ ಪಾಯಿಂಟ್ ಆಗಿದೆ ಎಂದು ಹರೇಂದ್ರ ಸಿಂಗ್ ತಿಳಿಸಿದ್ದಾರೆ. ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಪಾಲ್ಗೊಂಡಿದ್ದ 18 ಸದಸ್ಯರ ತಂಡವು ಐದು ದಿನದ ವಿರಾಮದ ಬಳಿಕ ಬೆಂಗಳೂರಿನ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿದೆ.

ಆಯ್ಕೆ ಯಾದ ತಂಡ

►ಗೋಲ್‌ಕೀಪರ್‌ಗಳು: ಪಿ.ಆರ್.ಶ್ರೀಜೇಶ್ (ನಾಯಕ), ಕೃಶನ್ ಬಿ.ಪಾಠಕ್. 

►ರಕ್ಷಣಾ ವಿಭಾಗ: ಹರ್ಮನ್‌ಪ್ರೀತ್ ಸಿಂಗ್, ವರುಣ್ ಕುಮಾರ್, ಅಮಿತ್ ರೋಹಿದಾಸ್ , ಬೀರೇಂದ್ರ ಲಾಕ್ರಾ, ಸುರೇಂದರ್ ಕುಮಾರ್, ರೂಪೀಂದರ್ ಪಾಲ್ ಸಿಂಗ್.

►ಮಿಡ್‌ಫೀಲ್ಡರ್‌ಗಳು: ಮನ್‌ಪ್ರೀತ್ ಸಿಂಗ್, ಚಿಂಗ್ಲೆನ್‌ಸನ ಸಿಂಗ್ ಕಂಗುಜಮ್(ಉಪ ನಾಯಕ), ಸಿಮ್ರಾನ್‌ಜೀತ್ ಸಿಂಗ್, ಸರ್ದಾರ್ ಸಿಂಗ್, ವಿವೇಕ್ ಸಾಗರ್ ಪ್ರಸಾದ್.

►ಫಾರ್ವರ್ಡ್ ವಿಭಾಗ: ಎಸ್.ವಿ.ಸುನಿಲ್, ಮನ್‌ದೀಪ್ ಸಿಂಗ್, ಆಕಾಶದೀಪ್ ಸಿಂಗ್, ಲಲಿತ್‌ಕುಮಾರ್ ಉಪಾಧ್ಯಾಯ್, ದಿಲ್‌ಪ್ರೀತ್ ಸಿಂಗ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News