ಅಂಡರ್-21 ವಿಭಾಗದಲ್ಲಿ ಚಂಡಿಗಡಕ್ಕೆ ಚಿನ್ನ

Update: 2019-01-19 18:19 GMT

ಪುಣೆ, ಜ.19: ಕೊನೆಯ ನಿಮಿಷದವರೆಗೂ ರೋಚಕತೆ ಉಳಿಸಿಕೊಂಡಿದ್ದ ಪುರುಷರ ಅಂಡರ್-21 ವಿಭಾಗದ ಕಬಡ್ಡಿ ಫೈನಲ್ ಪಂದ್ಯದಲ್ಲಿ ಚಂಡಿಗಡ, ತಮಿಳುನಾಡು ತಂಡವನ್ನು ಮಣಿಸಿ ಬಂಗಾರದ ಪದಕ ಗೆದ್ದುಕೊಂಡಿತು. ಆ ಮೂಲಕ ಖೇಲೋ ಇಂಡಿಯಾ ಗೇಮ್ಸ್‌ನಲ್ಲಿ ಕಬಡ್ಡಿ ಸ್ಪರ್ಧೆಗಳು ಅಂತ್ಯಕಂಡವು.

ನಿಗದಿತ ಸಮಯ ಮುಗಿದಾಗ ಎರಡೂ ತಂಡಗಳು 40-40 ಸಮಾನ ಅಂಕ ಗಳಿಸಿದ್ದವು. ಆದರೆ ಹೆಚ್ಚುವರಿ ಸಮಯದಲ್ಲಿ ಗೋಲ್ಡನ್ ರೈಡ್ ಮೂಲಕ ಚಂಡಿಗಡ 1 ಅಂಕ ಗಳಿಸಿ 41-40 ಅಂಕಗಳಿಂದ ಜಯ ಗಳಿಸಿತು.

ಪಂದ್ಯದ ದ್ವಿತೀಯಾರ್ಧ ಅಂತ್ಯವಾಗಲು ಕೆಲವೇ ಸೆಕೆಂಡ್‌ಗಳು ಬಾಕಿ ಇದ್ದಾಗ ಸ್ಕೋರ್ 40-39 ಆಗಿತ್ತು. ತಮಿಳುನಾಡು ತಾನು ಗೆದ್ದೆ ಎಂಬ ಉತ್ಸಾಹದಲ್ಲಿತ್ತು. ಆದರೆ ಈ ಹಂತದಲ್ಲಿ ತಮಿಳುನಾಡು ಆಟಗಾರನ ಯಡವಟ್ಟು ಚಂಡಿಗಡಕ್ಕೆ ವರವಾಯಿತು. ಪಂದ್ಯ ಮುಗಿಸುವ ಸೀಟಿ ಊದುವ ಮುನ್ನವೇ ಬದಲಿ ಆಟಗಾರನಾಗಿದ್ದ ಆತ ಅಂಗಣಕ್ಕೆ ಪ್ರವೇಶಿಸಿದ್ದ. ಇದರಿಂದ ಚಂಡಿಗಡಕ್ಕೆ ಒಂದು ತಾಂತ್ರಿಕ ಅಂಕ ದಕ್ಕಿತು. ಈ ವೇಳೆ ಸ್ಕೋರ್ 40-40ರಿಂದ ಸಮಬಲವಾಯಿತು. ಭಾರತದ ರಾಷ್ಟ್ರೀಯ ಕಬಡ್ಡಿ ತಂಡದ ಸ್ಟಾರ್ ಆಟಗಾರ ದೀಪಕ್ ನರ್ವಾಲ್ ಅವರ ಸಹೋದರ ಅಂಕುಶ್ ನರ್ವಾಲ್ ಚಂಡಿಗಡಕ್ಕೆ ಹೆಚ್ಚುವರಿ ರೇಡ್‌ನಲ್ಲಿ ಅಂಕ ತಂದುಕೊಟ್ಟು ಹೀರೊ ಆಗಿ ಮೆರೆದರು.

ಈ ವಿಭಾಗದಲ್ಲಿ ಉತ್ತರಪ್ರದೇಶ ಹಾಗೂ ಕೇರಳ ತಂಡಗಳು ಕಂಚಿನ ಪದಕಕ್ಕೆ ತೃಪ್ತಿಪಟ್ಟವು.

ಬಾಲಕಿಯರ ಹಾಕಿಯಲ್ಲಿ ಹರ್ಯಾಣ ಪಾರಮ್ಯ

ಪುಣೆ, ಜ.19: ಸ್ಟ್ರೈಕರ್ ದೀಪಿಕಾ ಅವರ ಅವಳಿ ಗೋಲುಗಳ ನೆರವಿನಿಂದ ಹರ್ಯಾಣ ಬಾಲಕಿಯರ ಹಾಕಿ ತಂಡ ಖೇಲೋ ಇಂಡಿಯಾ ಗೇಮ್ಸ್‌ನ ಅಂಡರ್-17 ವಿಭಾಗದ ಫೈನಲ್‌ನಲ್ಲಿ ಜಾರ್ಖಂಡ್ ತಂಡವನ್ನು 2-1 ಗೋಲುಗಳ ಅಂತರದಿಂದ ಸೋಲಿಸಿ ಬಂಗಾರದ ಪದಕಕ್ಕೆ ಮುತ್ತಿಕ್ಕಿತು. ಶನಿವಾರ ಇಲ್ಲಿಯ ನ್ಯಾಶನಲ್ ಡಿಫೆನ್ಸ್ ಅಕಾಡಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಜಾರ್ಖಂಡ್ ಗಮನಾರ್ಹ ಸಾಧನೆ ತೋರಿದರೂ ಬೆಳ್ಳಿ ಪದಕ ಜಯಿಸಿ ಅಭಿಮಾನಿಗಳ ಹೃದಯ ಗೆಲುವಲ್ಲಿ ಯಶಸ್ವಿಯಾಯಿತು.

<ಅತ್ಯಂತ ತುರುಸಿನಿಂದ ನಡೆದ ಫೈನಲ್ ಪಂದ್ಯದಲ್ಲಿ ಜಾರ್ಖಂಡ್ ಗೋಲು ಗಳಿಸುವ ಅವಕಾಶಗಳನ್ನು ಕೈಚೆಲ್ಲಿ ದಂಡ ತೆತ್ತಿತು. ಹರ್ಯಾಣ ಪರ ದೀಪಿಕಾ ಅವಳಿ ಗೋಲು ಬಾರಿಸಿದರೆ, ಜಾರ್ಖಂಡ್ ಪರ ಪ್ರಿನಿ ಕಂದಿರ್ ಕೊನೆಯ ನಿಮಿಷದಲ್ಲಿ ಗೋಲು ಬಾರಿಸಿದರು. ಒಡಿಶಾಗೆ ಕಂಚು: ಬೆಳಗ್ಗೆ ನಡೆದ ಮತ್ತೊಂದು ಪಂದ್ಯದಲ್ಲಿ ಒಡಿಶಾ ತಂಡ, ಪಂಜಾಬ್ ಸವಾಲನ್ನು ಹಿಮ್ಮೆಟ್ಟಿಸಿ 3-2 ಗೋಲುಗಳ ಅಂತರದಿಂದ ಜಯಿಸಿ ಕಂಚಿನ ಪದಕಕ್ಕೆ ಕೊರಳೊಡ್ಡಿತು. ಒಡಿಶಾ ಪರ ಪ್ರಥಮಾರ್ಧದಲ್ಲೇ ಸುನೀತಾ ಕ್ಸಾಕ್ಸಾ, ಜ್ಯೋತಿ ಚಾತ್ರಿ ಹಾಗೂ ನಿಂಬಾತಿ ಸಿಂಗ್ ತಲಾ ಒಂದು ಬಾರಿಸಿ 3-1ರ ಮುನ್ನಡೆಗೆ ಕಾರಣರಾಗಿದ್ದರು. ಪಂಜಾಬ್ ಪರ ಚೆವಾಂಗ್ ತಮಾಂಗ್ ಹಾಗೂ ಸಿಮ್ರನ್‌ಜಿತ್ ಕೌರ್ ತಲಾ ಒಂದು ಗೋಲು ಹೊಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News