ಕರಣ್, ಪಾಂಡ್ಯ, ರಾಹುಲ್ ವಿರುದ್ಧ ದೂರು: ‘ಕಾಫಿ ವಿತ್ ಕರಣ್’ ವಿವಾದ
Update: 2019-02-06 17:57 GMT
ಜೋಧ್ಪುರ, ಫೆ.6: ಭಾರತ ತಂಡದ ಕ್ರಿಕೆಟ್ ತಂಡದ ಆಟಗಾರರಾದ ಹಾರ್ದಿಕ್ ಪಾಂಡ್ಯ ಹಾಗೂ ಕೆ.ಎಲ್.ರಾಹುಲ್ ಅವರಿಗೆ ‘ಕಾಫಿಯ ಕಹಿ’ ಇನ್ನೂ ಬಿಟ್ಟಿಲ್ಲ. ಟಿವಿ ಕಾರ್ಯಕ್ರಮದಲ್ಲಿ ಮಹಿಳೆಯರ ಕುರಿತು ಅನುಚಿತ ಹೇಳಿಕೆ ನೀಡಿದ ಆರೋಪದ ಮೇಲೆ ‘ಕಾಫಿ ವಿತ್ ಕರಣ್’ ಕಾರ್ಯಕ್ರಮ ನಡೆಸಿಕೊಡುವ ಕರಣ್ ಜೋಹರ್ ಹಾಗೂ ಈ ಇಬ್ಬರು ಆಟಗಾರರ ವಿರುದ್ಧ ಜೋಧ್ಪುರದ ಲೂನಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಐಪಿಸಿಯ ವಿವಿಧ ಸೆಕ್ಷನ್ಗಳ ಅಡಿ ಡಿ.ಆರ್.ಮೇಘ್ವಾಲ್ ಎಂಬುವವರು ಈ ಮೂವರ ವಿರುದ್ಧ ದೂರು ದಾಖಲಿಸಿದ್ದಾರೆ. ‘ಕಾಫಿ ವಿತ್ ಕರಣ್’ ಟಿವಿ ಕಾರ್ಯಕ್ರಮದಲ್ಲಿ ಮಹಿಳೆಯರ ಕುರಿತು ಅನುಚಿತವಾಗಿ ಮಾತನಾಡಿದ್ದ ಪಾಂಡ್ಯ ಹಾಗೂ ರಾಹುಲ್ಗೆ ಬಿಸಿಸಿಐ ಅಮಾನತು ಶಿಕ್ಷೆ ವಿಧಿಸಿತ್ತು. ಜಾಲತಾಣಿಗರು ಪಾಂಡ್ಯ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು. ಆ ಬಳಿಕ ಘಟನೆಯ ಕುರಿತು ಪಾಂಡ್ಯ ಸಾಮಾಜಿಕ ಜಾಲತಾಣದಲ್ಲಿ ಕ್ಷಮೆಯನ್ನೂ ಕೋರಿದ್ದರು.