ಕೆಪಿಎಲ್: ಶಿವಮೊಗ್ಗಕ್ಕೆ 6 ವಿಕೆಟ್‌ಗಳ ಜಯ

Update: 2019-08-17 18:26 GMT

 ಬೆಂಗಳೂರು, ಆ.17: ಕರ್ನಾಟಕ ಪ್ರೀಮಿಯರ್ ಲೀಗ್ ಟ್ವೆಂಟಿ-20 ಟೂರ್ನಿಯ 2ನೇ ಲೀಗ್ ಪಂದ್ಯದಲ್ಲಿ ಹುಬ್ಬಳ್ಳಿ ಟೈಗರ್ಸ್ ವಿರುದ್ಧ ನಮ್ಮ ಶಿವಮೊಗ್ಗ ತಂಡ 6 ವಿಕೆಟ್‌ಗಳ ಜಯ ಗಳಿಸಿದೆ.

ಶನಿವಾರ ಇಲ್ಲಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 155 ರನ್‌ಗಳ ಸವಾಲನ್ನು ಪಡೆದ ಶಿವಮೊಗ್ಗ ತಂಡ ಇನ್ನೂ 12 ಎಸೆತಗಳು ಬಾಕಿ ಇರುವಾಗಲೇ ಗೆಲುವಿನ ತಡ ತಲುಪಿತು.

 ಶಿವಮೊಗ್ಗ ತಂಡ ನಿಹಾಲ್ ಉಳ್ಳಾಲ್ ಅವರ ಆಕರ್ಷಕ 88 ರನ್(60ಎ, 11ಬೌ,3ಸಿ)ಗಳ ನೆರವಿನಲ್ಲಿ ಸುಲಭವಾಗಿ ಗೆಲುವಿನ ದಡ ಸೇರಿತು. ನಿಹಾಲ್‌ಗೆ ಪಂದ್ಯಶ್ರೇಷ್ಠ ಪ್ರಶಸ್ತಿ ದೊರೆಯಿತು.

ಪವನ್ ದೇಶಪಾಂಡೆ 20 ರನ್, ಎ.ಬಲ್ಲಾಳ್ 20 ರನ್ ಗಳಿಸಿದರು.

ಇದಕ್ಕೂ ಮೊದಲು ಟಾಸ್ ಜಯಿಸಿದ ಹುಬ್ಬಳ್ಳಿ ಟೈಗರ್ಸ್ ಬ್ಯಾಟಿಂಗ್ ಆಯ್ದುಕೊಂಡು 20 ಓವರ್‌ಗಳಲ್ಲಿ 154 ರನ್‌ಗಳಿಗೆ ಆಲೌಟಾಗಿತ್ತು.

ಕೆ.ಬಿ.ಪವನ್ ಅರ್ಧಶತಕ (53) ದಾಖಲಿಸಿದರು. ಮುಹಮ್ಮದ್ ತಾಹ 18ರನ್, ಕೆ.ಎಲ್. ಶಿರ್ಜಿತ್ 33 ರನ್, ಪಿ.ದುಬೆ 19ರನ್ ಮತ್ತು ನಾಯಕ ಆರ್.ವಿನಯ್ ಕುಮಾರ್ 11 ರನ್ ಸೇರಿಸಿದರು.

ನಮ್ಮ ಶಿವಮೊಗ್ಗ ತಂಡದ ಟಿ.ಪ್ರದೀಪ್(47ಕ್ಕೆ 3), ರಿಷಭ್ ಸಿಂಗ್(19ಕ್ಕೆ 3) ಮತ್ತು ಎಚ್.ಎಸ್. ಶರತ್ 30ಕ್ಕೆ 2 ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News