ಶಿವಮೊಗ್ಗ ಲಯನ್ಸ್‌ಗೆ 14 ರನ್‌ಗಳ ಜಯ

Update: 2019-08-18 17:57 GMT

ಬೆಂಗಳೂರು, ಆ.18: ಕರ್ನಾಟಕ ಪ್ರೀಮಿಯರ್ ಲೀಗ್‌ನ 4ನೇ ಪಂದ್ಯದಲ್ಲಿ ಇಂದು ಮೈಸೂರು ವಾರಿಯರ್ಸ್‌ ವಿರುದ್ಧ ಶಿವಮೊಗ್ಗ ಲಯನ್ಸ್ 14 ರನ್‌ಗಳ ಅಂತರದಲ್ಲಿ ರೋಚಕ ಜಯ ದಾಖಲಿಸಿದೆ.

 ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 167 ರನ್‌ಗಳ ಕಠಿಣ ಸವಾಲನ್ನು ಪಡೆದ ಮೈಸೂರು ವಾರಿಯರ್ಸ್‌ 19.2 ಓವರ್‌ಗಳಲ್ಲಿ 152 ರನ್ ಸೇರಿಸುವಷ್ಟರಲ್ಲಿ ಆಲೌಟಾಗಿದೆ.

ಇದರೊಂದಿಗೆ ಶಿವಮೊಗ್ಗ ಆಡಿರುವ ಎರಡು ಪಂದ್ಯಗಳಲ್ಲೂ ಗೆಲುವು ದಾಖಲಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

ಕೃಷ್ಣಮೂರ್ತಿ ಸಿದ್ಧಾರ್ಥ 77 ರನ್(54ಎ, 10ಬೌ,1ಸಿ) ಗಳಿಸಿ ಹೋರಾಟ ನಡೆಸಿದರೂ ತಂಡ ಗೆಲುವಿನ ದಡ ಸೇರುವಲ್ಲಿ ಎಡವಿತು.

ಶಿವಮೊಗ್ಗ ತಂಡದ ಪ್ರದೀಪ್ ಟಿ(22ಕ್ಕೆ 3), ಎಚ್.ಎಸ್.ಶರತ್(36ಕ್ಕೆ 3), ನಾಯಕ ಅಭಿಮನ್ಯು ಮಿಥುನ್(34ಕ್ಕೆ 2), ಮತ್ತು ಎಸ್. ಮಂಜುನಾಥ್(17ಕ್ಕೆ 2) ದಾಳಿಗೆ ಸಿಲುಕಿದ ಮೈಸೂರು ವಾರಿಯರ್ಸ್‌ ಬೇಗನೇ ಇನಿಂಗ್ಸ್ ಮುಗಿಸಿದೆ.

ಮೈಸೂರು ತಂಡದ ನಾಯಕ ಅಮಿತ್ ವರ್ಮಾ(14), ಅನಿರುದ್ಧ್ ಜೋಶಿ(26) ಮತ್ತು ಪಿ.ವೆಂಕಟೀಶ್ ಮೂರ್ತಿ (13) ಎರಡಂಕೆಯ ಕೊಡುಗೆ ನೀಡಿದರು.

ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಶಿವಮೊಗ್ಗ ತಂಡ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 166 ರನ್ ಗಳಿಸಿತ್ತು.

ಪವನ್ ದೇಶಪಾಂಡೆ (53) ತಂಡದ ಪರ ಗರಿಷ್ಠ ವೈಯಕ್ತಿಕ ಸ್ಕೋರ್ ದಾಖಲಿಸಿದರು. ಆರಂಭಿಕ ದಾಂಡಿಗ ಅರ್ಜುನ್ ಹೊಯ್ಸಳ (28), ವಿಕೆಟ್ ಕೀಪರ್ ನಿಹಾಲ್ ಉಳ್ಳಾಲ್ (28), ಅಕ್ಷಯ್ ಬಲ್ಲಾಳ್ (13), ಹೆಚ್.ಎಸ್.ಶರತ್ (10), ಎಸ್.ಪಿ. ಮಂಜುನಾಥ್(14) ಮತ್ತು ನಾಯಕ ಅಭಿಮನ್ಯು ಮಿಥುನ್(10) ನೆರವಿನಲ್ಲಿ ಶಿವಮೊಗ್ಗ ಉತ್ತಮ ಮೊತ್ತ ಕಲೆ ಹಾಕಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News