ಖತರ್ ಓಪನ್ನಲ್ಲಿ ಸ್ಪರ್ಧಿಸುವ ಗುರಿ: ರೋಹನ್ ಬೋಪಣ್ಣ
Update: 2019-12-05 18:06 GMT
ಮುಂಬೈ, ಡಿ.5: ಭುಜನೋವಿನಿಂದಾಗಿ ಇತ್ತೀಚೆಗೆ ನಡೆದ ಡೇವಿಸ್ ಕಪ್ ಪಂದ್ಯದಿಂದ ದೂರ ಉಳಿದಿದ್ದ ಡಬಲ್ಸ್ ಸ್ಪೆಷಲಿಸ್ಟ್ ರೋಹನ್ ಬೋಪಣ್ಣ, ನಾನು ಸರಿಯಾದ ದಿಕ್ಕಿನಲ್ಲಿ ಚೇತರಿಸಿಕೊಳ್ಳುತ್ತಿದ್ದು, ಜನವರಿಯಲ್ಲಿ ನಡೆಯುವ ಖತರ್ ಓಪನ್ನಲ್ಲಿ ಸ್ಪರ್ಧಿಸುವ ಗುರಿ ಹಾಕಿಕೊಂಡಿದ್ದೇನೆ ಎಂದು ಹೇಳಿದ್ದಾರೆ.
‘‘ನನ್ನ ಭುಜನೋವು ಗುಣಮುಖವಾಗುತ್ತಿದೆ. 2-3 ದಿನಗಳಲ್ಲಿ ಅಭ್ಯಾಸ ಆರಂಭಿಸುವೆ. ಮೊದಲ ಟೂರ್ನಮೆಂಟ್ ಖತರ್ನಲ್ಲಿ ಜ.6ರಂದು ಆರಂಭವಾಗುವ ವೇಳೆಗೆ ಸಂಪೂರ್ಣ ಫಿಟ್ ಆಗುವ ವಿಶ್ವಾಸ ನನಗಿದೆ’’ ಎಂದು ಬೋಪಣ್ಣ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ. ಖತರ್ ಓಪನ್ ಟೆನಿಸ್ ಟೂರ್ನಿಯು ದೋಹಾದಲ್ಲಿ ಜ.6ರಿಂದ 12ರ ತನಕ ನಡೆಯಲಿದೆ. ಭುಜನೋವಿನ ಕಾರಣದಿಂದ 39ರ ಹರೆಯದ ಬೋಪಣ್ಣ ಪಾಕಿಸ್ತಾನ ವಿರುದ್ಧ ಇತ್ತೀಚೆಗೆ ನಡೆದಿದ್ದ ಡೇವಿಸ್ ಕಪ್ ಪಂದ್ಯದಿಂದ ದೂರ ಉಳಿದಿದ್ದರು.