ಕಿವೀಸ್ ವಿರುದ್ಧ ಕ್ಲೀನ್ ಸ್ವೀಪ್ ಗೆ ಭಾರತದ ಲಕ್ಷ್ಯ
ಮೌಂಟ್ ಮಾಂಗಾನುಯಿ(ನ್ಯೂಝಿಲ್ಯಾಂಡ್), ಫೆ.1: ರವಿವಾರ ಇಲ್ಲಿ ನಡೆಯಲಿರುವ ಅಂತಿಮ ಟ್ವೆಂಟಿ-20 ಅಂತರ್ರಾಷ್ಟ್ರೀಯ ಪಂದ್ಯದಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ ಇದೇ ಮೊದಲ ಬಾರಿ 5-0 ಅಂತರದಿಂದ ಕ್ಲೀನ್ಸ್ವೀಪ್ ಸಾಧಿಸುವತ್ತ ಭಾರತ ಚಿತ್ತಹರಿಸಿದೆ.
ನ್ಯೂಝಿಲ್ಯಾಂಡ್ ತವರು ನೆಲದಲ್ಲಿ ಈ ವರೆಗೆ ದ್ವಿಪಕ್ಷೀಯ ಟ್ವೆಂಟಿ-20 ಸರಣಿಯ(ಮೂರು ಅಥವಾ ಅದಕ್ಕಿಂತ ಹೆಚ್ಚು ಪಂದ್ಯಗಳು)ಎಲ್ಲ ಪಂದ್ಯಗಳನ್ನು ಸೋತಿಲ್ಲ. ಒಂದು ವೇಳೆ ಭಾರತ 5ನೇ ಪಂದ್ಯವನ್ನು ಜಯಸಿದರೆ ಐಸಿಸಿ ಟ್ವೆಂಟಿ-20 ರ್ಯಾಂಕಿಂಗ್ನಲ್ಲಿ ಪ್ರಗತಿ ಸಾಧಿಸಬಹುದು. ಪ್ರಸ್ತುತ ಕೊಹ್ಲಿ ಪಡೆಯು ಪಾಕಿಸ್ತಾನ, ಆಸ್ಟ್ರೇಲಿಯ, ಇಂಗ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾದ ಬಳಿಕ 5ನೇ ಸ್ಥಾನದಲ್ಲಿದೆ.ಚ್ಟ ಟ್ವೆಂಟಿ-20 ವಿಶ್ವಕಪ್ ಆರಂಭಕ್ಕೆ ಇನ್ನು 8 ತಿಂಗಳುಗಳಷ್ಟೇ ಬಾಕಿ ಉಳಿದಿದ್ದು, ನವಿರಾದ ಪ್ರಯೋಗಗಳು ಆರಂಭವಾಗಿವೆ. ನಾಲ್ಕನೇ ಟ್ವೆಂಟಿ-20ಯಲ್ಲಿ ಪ್ರಯೋಗ ಮಾಡುವತ್ತ ಹೆಜ್ಜೆ ಇಡಲಾಗಿತ್ತು. ಸಂಜು ಸ್ಯಾಮ್ಸನ್, ವಾಷಿಂಗ್ಟನ್ ಸುಂದರ್ ಹಾಗೂ ನವದೀಪ ಸೈನಿ ಅವಕಾಶ ಗಿಟ್ಟಿಸಿಕೊಂಡಿದ್ದರು. ಶ್ರೀಲಂಕಾ ಹಾಗೂ ನ್ಯೂಝಿಲ್ಯಾಂಡ್ ವಿರುದ್ಧದ ಸೀಮಿತ ಅವಕಾಶದಲ್ಲಿ ಸ್ಯಾಮ್ಸನ್ ಅಗ್ರ ಸರದಿಗೆ ಭಡ್ತಿ ಪಡೆದಿದ್ದರು. ಆಕ್ರಮಣಕಾರಿ ಆಟಕ್ಕೆ ಮುಂದಾಗಿ ಬೇಗನೆ ವಿಕೆಟ್ ಕೈಚೆಲ್ಲಿದ್ದರು.ಚ್ಟ ಇದೇ ವೇಳೆ, ಕನ್ನಡಿಗ ಮನೀಷ್ ಪಾಂಡೆ ಭಾರತ 5 ಪಂದ್ಯಗಳ ಸರಣಿಯಲ್ಲಿ 4-0 ಮುನ್ನಡೆ ಸಾಧಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಮುಂಬೈನಲ್ಲಿ ನಡೆದ ಆಸ್ಟ್ರೇಲಿಯ ವಿರುದ್ಧ ಮೊದಲ ಏಕದಿನ ಪಂದ್ಯದ ವೇಳೆ ಚೆಂಡಿನೇಟಿಗೆ ಒಳಗಾಗಿದ್ದ ರಿಷಭ್ ಪಂತ್ ಸದ್ಯ ಕ್ರಿಕೆಟ್ನಿಂದ ದೂರ ಉಳಿದಿದ್ದು,ಪಂತ್ ಬದಲಿಗೆ ಪಾಂಡೆ ಐದನೇ ಹಾಗೂ ಆರನೇ ಸ್ಥಾನದಲ್ಲಿ ಆಡುತ್ತಿದ್ದಾರೆ.
ಒಂದು ವೇಳೆ ಪಂತ್ರನ್ನು ಆಡಿಸಲು ಟೀಮ್ ಮ್ಯಾನೇಜ್ಮೆಂಟ್ ಬಯಸಿದರೆ, ರಾಹುಲ್ ಆಡುವ ಬಳಗದಿಂದ ಹೊರಗುಳಿಯಲಿದ್ದಾರೆ. ಕೊಹ್ಲಿ ವಿಶ್ರಾಂತಿ ಪಡೆದರೆ ವೆಲ್ಲಿಂಗ್ಟನ್ನಲ್ಲಿ ನಡೆದ 4ನೇ ಪಂದ್ಯದಿಂದ ವಿಶ್ರಾಂತಿ ಪಡೆದಿದ್ದ ರೋಹಿತ್ ಶರ್ಮಾ ಅಂತಿಮ ಪಂದ್ಯದಲ್ಲಿ ತಂಡದ ನೇತೃತ್ವವಹಿಸುವ ಸಾಧ್ಯತೆಯಿದೆ. ಬೌಲಿಂಗ್ ವಿಭಾಗದಲ್ಲಿ ಜಸ್ಪ್ರೀತ್ ಬುಮ್ರಾ ವಿಶ್ರಾಂತಿ ಪಡೆಯಲಿದ್ದು, ಶಮಿ ಮತ್ತೆ ತಂಡಕ್ಕೆ ವಾಪಸಾಗಲಿದ್ದಾರೆ. ಕುಲದೀಪ್ ಯಾದವ್ ಅವಕಾಶ ಪಡೆದರೆ, ಯಜುವೇಂದ್ರ ಚಹಾಲ್ ಜಾಗ ಖಾಲಿ ಮಾಡಬೇಕಾಗುತ್ತದೆ. ಚ್ಟ ಬಲ ಭುಜನೋವಿನಿಂದ 4ನೇ ಪಂದ್ಯದಿಂದ ವಂಚಿತರಾಗಿದ್ದ ನ್ಯೂಝಿಲ್ಯಾಂಡ್ ನಾಯಕ ಕೇನ್ ವಿಲಿಯಮ್ಸನ್ ಅಂತಿಮ ಹಣಾಹಣಿಗೆ ವಾಪಸಾಗುವ ನಿರೀಕ್ಷೆಯಿದೆ. ಮೂರು ದಿನಗಳಲ್ಲಿ ಎರಡು ಬಾರಿ ಭಾರತ ವಿರುದ್ಧ ಸೂಪರ್ ಓವರ್ನಲ್ಲಿ ಸೋತಿರುವ ನ್ಯೂಝಿಲ್ಯಾಂಡ್ ತೀವ್ರ ಹಿನ್ನಡೆ ಕಂಡಿದೆ. ವಿಲಿಯಮ್ಸನ್ ಬಳಗ 2019ರಲ್ಲಿ ಇಂಗ್ಲೆಂಡ್ನಲ್ಲಿ ನಡೆದಿದ್ದ ಏಕದಿನ ವಿಶ್ವಕಪ್ ಸಹಿತ ಒಟ್ಟು ನಾಲ್ಕು ಬಾರಿ ಸೂಪರ್ ಓವರ್ ಪಂದ್ಯ ಆಡಿತ್ತು. ಪ್ರತಿ ಬಾರಿಯೂ ಸೋಲಿನೊಂದಿಗೆ ತನ್ನ ಹೋರಾಟ ಕೊನೆಗೊಳಿಸಿತ್ತು.