ನಾಲ್ಕನೇ ಟೆಸ್ಟ್: ಬೌಲಿಂಗ್ ವೇಳೆ ನವದೀಪ್ ಸೈನಿಗೆ ಕಾಡಿದ ನೋವು
ಬ್ರಿಸ್ಬೇನ್: ಈಗ ನಡೆಯುತ್ತಿರುವ ಆಸ್ಟ್ರೇಲಿಯ ಪ್ರವಾಸದಲ್ಲಿ ಭಾರತದ ಗಾಯದ ಸಮಸ್ಯೆಗಳು ಮುಂದುವರಿದಿದ್ದು, ನಾಲ್ಕನೇ ಟೆಸ್ಟ್ ನ ಮೊದಲ ದಿನದಾಟದಲ್ಲಿ ಬೌಲಿಂಗ್ ಮಾಡುತ್ತಿದ್ದಾಗಲೇ ತೊಡೆ ಸಂಧಿನ ನೋವು ಕಾಡಿದ ಕಾರಣ ನವದೀಪ್ ಸೈನಿ ಮೈದಾನವನ್ನು ತೊರೆದರು.
ಪಂದ್ಯದ 36ನೇ ಓವರ್ನ 5ನೇ ಎಸೆತವನ್ನು ಸೈನಿ ಬೌಲಿಂಗ್ ಮಾಡುತ್ತಿದ್ದಾಗ ನೋವು ಕಾಣಿಸಿಕೊಂಡಿದೆ. ತಕ್ಷಣವೇ ಟೀಮ್ ಇಂಡಿಯಾ ಫಿಸಿಯೊ ನಿತಿನ್ ಪಟೇಲ್ ಮೈದಾನದೊಳಗೆ ಧಾವಿಸಿ ಬಂದು ಸೈನಿ ಅವರನ್ನು ಪರೀಕ್ಷಿಸಿದರು. ಆ ನಂತರ ಸೈನಿ ಡ್ರೆಸ್ಸಿಂಗ್ ರೂಮ್ ನತ್ತ ಹೆಜ್ಜೆ ಹಾಕಿದರು. ಸ್ವಲ್ಪ ಹೊತ್ತಿನ ಬಳಿಕ ಮೈದಾನಕ್ಕೆ ವಾಪಸಾದ ಸೈನಿ ಬೌಲಿಂಗ್ ಮಾಡದೇ ಮತ್ತೆ ಮೈದಾನವನ್ನು ತೊರೆದರು.
ಸೈನಿ ಗಬ್ಬಾ ಸ್ಟೇಡಿಯಂನಲ್ಲಿ ಮೊದಲ ದಿನದಾಟದಲ್ಲಿ ಕೇವಲ 7.5 ಓವರ್ ಬೌಲಿಂಗ್ ಮಾಡಿದ್ದು, ರೋಹಿತ್ ಶರ್ಮಾ ಓವರ್ ಪೂರ್ಣಗೊಳಿಸಿದರು.
ನವದೀಪ್ ಸೈನಿ ತೊಡೆಸಂದಿನಲ್ಲಿ ನೋವಿದೆ ಎಂದು ಹೇಳಿದ್ದಾರೆ. ಇದೀಗ ಅವರನ್ನು ಬಿಸಿಸಿಐ ವೈದ್ಯಕೀಯ ತಂಡ ನಿಗಾವಹಿಸಿದೆ ಎಂದು ಬಿಸಿಸಿಐ ಟ್ವೀಟಿಸಿದೆ.