ವಿಜಯ ಹಝಾರೆ ಟ್ರೋಫಿ ಸೆಮಿ ಫೈನಲ್: ಮುಂಬೈ ವಿರುದ್ಧ ಮುಗ್ಗರಿಸಿದ ಕರ್ನಾಟಕ

Update: 2021-03-11 12:21 GMT

ಹೊಸದಿಲ್ಲಿ: ವಿಜಯ ಹಝಾರೆ ಟ್ರೋಫಿಯ ಎರಡನೇ ಸೆಮಿ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ ಮುಂಬೈ ವಿರುದ್ಧ 72 ರನ್ ಗಳಿಂದ ಸೋಲನುಭವಿಸಿದೆ.

ಗುರುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಮುಂಬೈ ತಂಡ ಆರಂಭಿಕ ಬ್ಯಾಟ್ಸ್ ಮನ್ ಪೃಥ್ವಿ ಶಾ(165)ಭರ್ಜರಿ ಶತಕದ ನೆರವಿನಿಂದ 49.2 ಓವರ್ ಗಳಲ್ಲಿ 322 ರನ್ ಗಳಿಸಿ ಆಲೌಟಾಗಿದೆ.

ಗೆಲ್ಲಲು ಕಠಿಣ ಗುರಿ ಬೆನ್ನಟ್ಟಿದ ಕರ್ನಾಟಕ ತಂಡ 42.4 ಓವರ್ ಗಳಲ್ಲಿ 250 ರನ್ ಗಳಿಸಿ ಸೋಲೊಪ್ಪಿಕೊಂಡಿದೆ. ಆರಂಭಿಕ ಬ್ಯಾಟ್ಸ್ ಮನ್ ದೇವದತ್ತ ಪಡಿಕ್ಕಲ್(64, 64 ಎಸೆತ, 9 ಬೌಂಡರಿ, 1 ಸಿಕ್ಸರ್) ಹಾಗೂ ವಿಕೆಟ್ ಕೀಪರ್ ಶರತ್ (61, 39 ಎಸೆತ, 8 ಬೌಂಡರಿ, 2 ಸಿಕ್ಸರ್)ಅರ್ಧಶತಕಗಳ ಕೊಡುಗೆ ನೀಡಿದರೂ ಕರ್ನಾಟಕ  ಸೆಮಿ ಫೈನಲ್ ತಲುಪಲು ವಿಫಲವಾಯಿತು.

ಮುಂಬೈ ಬೌಲಿಂಗ್ ವಿಭಾಗದಲ್ಲಿ ತನುಷ್ ಕೋಟ್ಯಾನ್ (2-23), ತುಷಾರ್ ದೇಶಪಾಂಡೆ(2-37), ಶಮ್ಸ್ ಮುಲಾನಿ(2-47) ಹಾಗೂ ಪ್ರಶಾಂತ್ ಸೋಲಂಕಿ(2-61) ತಲಾ ಎರಡು ವಿಕೆಟ್ ಗಳನ್ನು ಪಡೆದರು.

ಮುಂಬೈ ಪರವಾಗಿ 45 ರನ್(71 ಎಸೆತ) ಕೊಡುಗೆ ನೀಡಿರುವ ಮುಲಾನಿ ಆಲ್ ರೌಂಡ್ ಆಟದಿಂದ ಗಮನ ಸೆಳೆದರು.

ಕರ್ನಾಟಕದ ಪರವಾಗಿ ವಿಜಯಕುಮಾರ್ ವ್ಯಾಶಕ್ (4-56) ಹಾಗೂ ಪ್ರಸಿದ್ದ ಕೃಷ್ಣ (3-64) ಏಳು ವಿಕೆಟ್ ಗಳನ್ನು ಹಂಚಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News