ಅರಮನೆಯ ಬಿಕ್ಕಟ್ಟು ಮುಕ್ತಾಯವಾಗಿದೆ: ಜೋರ್ಡಾನ್ ದೊರೆ ಅಬ್ದುಲ್ಲಾ
Update: 2021-04-08 16:47 GMT
ಅಮ್ಮಾನ್ (ಜೋರ್ಡಾನ್), ಎ. 8: ದಶಕಗಳಲ್ಲೇ ಪ್ರಥಮ ಕಠಿಣ ರಾಜಕೀಯ ಬಿಕ್ಕಟ್ಟು ಕೊನೆಗೊಂಡಿದೆ ಎಂದು ಜೋರ್ಡಾನ್ ದೊರೆ ಅಬ್ದುಲ್ಲಾ ಬುಧವಾರ ಹೇಳಿದ್ದಾರೆ.
ದೇಶದ ಭದ್ರತೆಯನ್ನು ಅಸ್ಥಿರತೆಗೊಳಿಸಲು ಪಿತೂರಿಯೊಂದನ್ನು ಹೂಡಲಾಗಿದೆ ಹಾಗೂ ದೊರೆಯ ಮಲ ಸಹೋದರನೂ ಆಗಿರುವ ರಾಜಕುಮಾರ ಹಂಝಾ ವಿದೇಶಿ ಶಕ್ತಿಗಳೊಂದಿಗೆ ಶಾಮೀಲಾಗಿ ಈ ಪಿತೂರಿ ರೂಪಿಸಿದ್ದಾರೆ ಎಂಬುದಾಗಿ ಜೋರ್ಡಾನ್ ಸರಕಾರ ಆರೋಪಿಸಿತ್ತು.
ಬಳಿಕ, ರಾಜಕುಟುಂಬದ ಒಳಗೆ ರಾಜಿ ಸಂಧಾನ ನಡೆದಿದ್ದು, ದೊರೆಗೆ ನಿಷ್ಠೆ ವ್ಯಕ್ತಪಡಿಸುವ ಹೇಳಿಕೆಗೆ ರಾಜಕುಮಾರ ಹಂಝಾ ಸಹಿ ಹಾಕಿದ್ದಾರೆ.
ಹಂಝಾ ಈಗ ತನ್ನ ಅರಮನೆಯಲ್ಲಿ ಸುರಕ್ಷಿತವಾಗಿದ್ದಾರೆ ಹಾಗೂ ಅವರು ನನ್ನ ‘‘ರಕ್ಷಣೆ’’ಯಲ್ಲಿದ್ದಾರೆ ಎಂದು ದೊರೆ ಅಬ್ದುಲ್ಲಾ ಹೇಳಿದರು.
‘‘ರಾಜದ್ರೋಹವನ್ನು ಮೊಳಕೆಯಲ್ಲೇ ಚಿವುಟಿ ಹಾಕಲಾಗಿದೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ’’ ಎಂದು ಅಬ್ದುಲ್ಲಾ ಹೇಳಿದರು. ಅವರ ಭಾಷಣವನ್ನು ಅವರ ಪರವಾಗಿ ಸರಕಾರಿ ಟಿವಿಯಲ್ಲಿ ಓದಿ ಹೇಳಲಾಯಿತು.