ಐಪಿಎಲ್: ಆರ್ ಸಿಬಿಯ ಗೆಲುವಿನ ಓಟಕ್ಕೆ ಕಡಿವಾಣ ಹಾಕಿದ ಚೆನ್ನೈ ಸೂಪರ್ ಕಿಂಗ್ಸ್

Update: 2021-04-25 13:48 GMT

ಮುಂಬೈ:ರವೀಂದ್ರ ಜಡೇಜ ಅವರ ಆಲ್ ರೌಂಡ್ ಆಟದ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಐಪಿಎಲ್ ನ 19ನೇ ಪಂದ್ಯದಲ್ಲಿ 69 ರನ್ ಗಳ  ಅಂತರದಿಂದ ಮಣಿಸಿತು. ಈ ಮೂಲಕ ಆರ್ ಸಿಬಿಯ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿತು. ಆರ್ ಸಿಬಿ ಸತತ 4 ಪಂದ್ಯಗಳಲ್ಲಿ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಕ್ಖೇರಿತ್ತು.

ಗೆಲ್ಲಲು 192 ರನ್ ಕಠಿಣ ಗುರಿ ಬೆನ್ನಟ್ಟಿದ ಆರ್ ಸಿಬಿ ಸ್ಪಿನ್ನರ್ ಗಳಾದ  ರವೀಂದ್ರ ಜಡೇಜ(3-13) ಹಾಗೂ ಇಮ್ರಾನ್ ತಾಹಿರ್(2-16) ಬೌಲಿಂಗ್ ದಾಳಿಗೆ ತತ್ತರಿಸಿ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 122 ರನ್ ಗಳಿಸಿತು.

ನಾಯಕ ವಿರಾಟ್ ಕೊಹ್ಲಿ ಕೇವಲ 8 ರನ್ ಗಳಿಸಿ ಕರ್ರನ್ ಗೆ ವಿಕೆಟ್ ಒಪ್ಪಿಸಿದರು. ವಾಷಿಂಗ್ಟನ್ ಸುಂದರ್ (7), ಎಬಿಡಿ ವಿಲಿಯರ್ಸ್ (4), ಡೇನಿಯಲ್ ಕ್ರಿಸ್ಟಿಯನ್ (1) ಒಂದಂಕಿಗೆ ಔಟಾದರು. ದೇವದತ್ತ ಪಡಿಕ್ಕಲ್ (34, 15 ಎಸೆತ), ಗ್ಲೆನ್ ಮ್ಯಾಕ್ಸ್ ವೆಲ್ (22) ಹಾಗೂ ಜಮೀಸನ್ (16)ಎರಡಂಕೆಯ ಸ್ಕೋರ್ ಗಳಿಸಿದರು.

ಇದಕ್ಕೂ ಮೊದಲು ವಾಂಖೆಡೆ ಸ್ಟೇಡಿಯಂನಲ್ಲಿ ರವಿವಾರ ಟಾಸ್ ಜಯಿಸಿದ ಚೆನ್ನೈ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು.

ಇನಿಂಗ್ಸ್ ಅಂತ್ಯದಲ್ಲಿ ಅಬ್ಬರಿಸಿದ ರವೀಂದ್ರ ಜಡೇಜ(ಔಟಾಗದೆ 62, 28 ಎಸೆತ, 4 ಬೌಂಡರಿ,5 ಸಿಕ್ಸರ್) ಹಾಗೂ ಎಫ್ ಡು ಪ್ಲೆಸಿಸ್(50, 41 ಎಸೆತ, 5 ಬೌಂ.1 ಸಿ.)ಅರ್ಧಶತಕಗಳ ಕೊಡುಗೆಯ ನೆರವಿನಿಂದ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 191 ರನ್ ಗಳಿಸಿತು.

ಇನಿಂಗ್ಸ್ ಆರಂಭಿಸಿದ ಪ್ಲೆಸಿಸ್ ಹಾಗೂ ಋತುರಾಜ್ ಗಾಯಕ್ವಾಡ್ (33)ಮೊದಲ ವಿಕೆಟ್ ಗೆ 74 ರನ್ ಗಳಿಸಿ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು.  ಸುರೇಶ್ ರೈನಾ 24 ಹಾಗೂ ರಾಯುಡು 14 ರನ್ ಗಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News