ಕುಸ್ತಿಪಟು ಸುಶೀಲ್ ಕುಮಾರ್ ಬಂಧಿಸಲು ಮನೆ ಮೇಲೆ ದಿಲ್ಲಿ ಪೊಲೀಸರ ದಾಳಿ

Update: 2021-05-09 13:22 GMT

ಹೊಸದಿಲ್ಲಿ: ಮಾಜಿ ಕಿರಿಯ ರಾಷ್ಟ್ರೀಯ ಚಾಂಪಿಯನ್, 23 ವರ್ಷದ ಸಾಗರ್ ರಾಣಾ ಅವರನ್ನು ಚತ್ರಸಲ್ ಸ್ಟೇಡಿಯಂ ಪಾರ್ಕಿಂಗ್ ಪ್ರದೇಶದಲ್ಲಿ ನಡೆದ ಜಗಳದ ವೇಳೆ ಹೊಡೆದು ಸಾಯಿಸಿದ ಕೆಲ ದಿನಗಳ ನಂತರ ಗಾಯಗೊಂಡವರು ದಿಲ್ಲಿ ಪೊಲೀಸರ ಮುಂದೆ ತಮ್ಮ ಹೇಳಿಕೆಗಳನ್ನು ದಾಖಲಿಸಿದ್ದಾರೆ ಹಾಗೂ  ಎರಡು ಬಾರಿ ಒಲಿಂಪಿಕ್ಸ್  ಪದಕ ವಿಜೇತ ಸುಶೀಲ್ ಕುಮಾರ್ ಘಟನೆಯಲ್ಲಿ ಭಾಗಿಯಾಗಿದ್ದಾರೆ ಎಂದು ಅವರು ಹೇಳಿದ್ದಾರೆ ಎಂದು Indianexpress.com ವರದಿ ಮಾಡಿದೆ.

 “ನಾವು ಎಲ್ಲ ಸಂತ್ರಸ್ತರ ಹೇಳಿಕೆಗಳನ್ನು ದಾಖಲಿಸಿದ್ದೇವೆ ಮತ್ತು ಅವರೆಲ್ಲರೂ ಸುಶೀಲ್ ಕುಮಾರ್ ವಿರುದ್ಧ ಆರೋಪಗಳನ್ನು ಮಾಡಿದ್ದಾರೆ. ನಾವು ಕೊಲೆ, ಅಪಹರಣ, ಕ್ರಿಮಿನಲ್ ಪಿತೂರಿಯ ಬಗ್ಗೆ ಎಫ್‌ಐಆರ್ ದಾಖಲಿಸಿದ್ದೇವೆ ಹಾಗೂ  ಸುಶೀಲ್ ಕುಮಾರ್ ಅವರನ್ನು ಬಂಧಿಸಲು ದಾಳಿ ನಡೆಸುತ್ತಿದ್ದೇವೆ” ಹೆಚ್ಚುವರಿ ಡಿಸಿಪಿ (ವಾಯುವ್ಯ ಜಿಲ್ಲೆ) ಡಾ.ಗುರಿಕ್ಬಾಲ್ ಸಿಂಗ್ ಸಿಧು ಹೇಳಿದ್ದಾರೆ..

ಕುಮಾರ್ ಹಾಗೂ ಅವರ ಸಹಚರರು ಸಾಗರ್‌ನನ್ನು ಮಾಡೆಲ್ ಟೌನ್‌ನಲ್ಲಿರುವ ಅವರ ಮನೆಯಿಂದ ಅಪಹರಿಸಿ ಇತರ ಕುಸ್ತಿಪಟುಗಳ ಮುಂದೆ ಸುಶೀಲ್ ಕುಮಾರ್ ಬಗ್ಗೆ ಕೆಟ್ಟದ್ದಾಗಿ ಮಾತನಾಡಿದ್ದಕ್ಕೆ ಮಾರಣಾಂತಿಕ ಹಲ್ಲೆ ನಡೆಸಿದ್ದರು ಎಂದು ಸಂತ್ರಸ್ತರು ಆರೋಪಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪರಾರಿಯಾಗಿದ್ದ ಸುಶೀಲ್ ಕುಮಾರ್‌ ಬಂಧನಕ್ಕೆ ದಿಲ್ಲಿ, ಉತ್ತರಾಖಂಡ ಹಾಗೂ  ಹರ್ಯಾಣದ ಹೊರವಲಯದಲ್ಲಿ ದಿಲ್ಲಿ ಪೊಲೀಸರು ದಾಳಿ ನಡೆಸುತ್ತಿದ್ದಾರೆ.

ಮಂಗಳವಾರ, ಎರಡು ಗುಂಪುಗಳ ನಡುವೆ ನಡೆದ ಘರ್ಷಣೆಯಲ್ಲಿ97 ಕೆಜಿ ಗ್ರೀಕೋ-ರೋಮನ್ ವಿಭಾಗದಲ್ಲಿ ಸ್ಪರ್ಧಿಸಿದ್ದ ಸಾಗರ್ ರಾಣಾ ಅವರನ್ನು ಹೊಡೆದು ಸಾಯಿಸಲಾಗಿತ್ತು ರಾಣಾ ಮಾಜಿ ಕಿರಿಯ ರಾಷ್ಟ್ರೀಯ ಚಾಂಪಿಯನ್ ಹಾಗೂ ಹಿರಿಯರ ರಾಷ್ಟ್ರೀಯ ಶಿಬಿರದ ಭಾಗವಹಿಸಿದ್ದರು.

 "ಕ್ರೀಡಾಂಗಣದ ಪಾರ್ಕಿಂಗ್ ಪ್ರದೇಶದಲ್ಲಿ ಸುಶೀಲ್ ಕುಮಾರ್, ಅಜಯ್, ಪ್ರಿನ್ಸ್ ದಲಾಲ್, ಸೋನು, ಸಾಗರ್, ಅಮಿತ್ ಹಾಗೂ  ಇತರರ ನಡುವೆ ಜಗಳ ನಡೆದಿದೆ ಎಂದು ತನಿಖೆಯ ಸಮಯದಲ್ಲಿ ನಾವು ಕಂಡುಕೊಂಡಿದ್ದೇವೆ" ಎಂದು ಸಿಧು ಹೇಳಿದರು.

ಎಲ್ಲಾ ಸಂತ್ರಸ್ತರ ಹೇಳಿಕೆಗಳನ್ನು ಪೊಲೀಸರು ದಾಖಲಿಸಿದ್ದು, ಗ್ಯಾಂಗ್ ಸ್ಟರ್ ಕಲಾ ಜಥೆಡಿಯವರ ಆಪ್ತರಾಗಿದ್ದ ಗಾಯಗೊಂಡ ಸೋನು ಮಹಲ್ ಸೇರಿದಂತೆ ಸಾಗರ್ ಹಾಗೂ  ಅವರ ಕೆಲವು ಸ್ನೇಹಿತರು ಕ್ರೀಡಾಂಗಣದ ಸಮೀಪದ ಸುಶೀಲ್‌ಗೆ ಸಂಬಂಧಪಟ್ಟ ಮನೆಯೊಂದರಲ್ಲಿ ವಾಸವಾಗಿದ್ದರು ಎಂದು ಅವರು ಹೇಳಿದ್ದಾರೆ.

 " ಸಾಗರ್ ಹಾಗೂ ಇತರರನ್ನು ಇತ್ತೀಚೆಗೆ ಮನೆ ಖಾಲಿ ಮಾಡಲು ಕೇಳಲಾಯಿತು ಹಾಗೂ  ಅವರನ್ನು ಮನೆಯಿಂದ ಬಲವಂತವಾಗಿ ಹೊರಹಾಕಲಾಯಿತು. ಇತರ ಕುಸ್ತಿಪಟುಗಳ ಸಮ್ಮುಖದಲ್ಲಿ ಛತ್ರಸಲ್ ಕ್ರೀಡಾಂಗಣದಲ್ಲಿ ಸಾಗರ್ ತನ್ನನ್ನು ಕೆಟ್ಟದಾಗಿ ದೂಷಿಸಿರುವುದು ಹಾಗೂ  ಬೆದರಿಕೆ ಒಡ್ಡಿರುವುದು ಸುಶೀಲ್ ನಂತರ ತಿಳಿದುಕೊಂಡಿದ್ದರು  ”ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News