ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಜಯಿಸಿದ ಸಿಂಧುಗೆ ಅಭಿನಂದನೆ ಸಲ್ಲಿಸದ ಸೈನಾ ನೆಹ್ವಾಲ್!

Update: 2021-08-02 15:18 GMT

ಹೊಸದಿಲ್ಲಿ: ಒಲಿಂಪಿಕ್ಸ್ ನಲ್ಲಿ ರವಿವಾರ  ಕಂಚಿನ ಪದಕ ಗೆದ್ದಿರುವುದಕ್ಕೆ  ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ಅವರು ಸೋಮವಾರ ಮುಖ್ಯ ರಾಷ್ಟ್ರೀಯ ಬ್ಯಾಡ್ಮಿಂಟನ್ ತರಬೇತುದಾರ ಪುಲ್ಲೇಲ ಗೋಪಿಚಂದ್ ಅವರಿಂದ ಅಭಿನಂದನಾ ಸಂದೇಶವನ್ನು ಸ್ವೀಕರಿಸಿದ್ದಾರೆ. ಆದರೆ ಹಿರಿಯ ಶಟ್ಲರ್ ಸೈನಾ ನೆಹ್ವಾಲ್ ಅವರಿಂದ ಅಂತಹ ಯಾವುದೇ ಸಂದೇಶವನ್ನು ನಾನು  ಸ್ವೀಕರಿಸಿಲ್ಲ ಎಂದು ಸ್ವತಃ  ಸಿಂಧು ಹೇಳಿದ್ದಾರೆ.

ಸಿಂಧು, ರವಿವಾರ, ಚೀನಾದ ಹೀ ಬಿಂಗ್ ಜಿಯಾವೊ ವಿರುದ್ಧ ನೇರ ಗೇಮ್ ಗಳಿಂದ ಗೆದ್ದ ನಂತರ ಎರಡು ಒಲಿಂಪಿಕ್ಸ್  ಪದಕಗಳನ್ನು ಗೆದ್ದ ಎರಡನೇ ಭಾರತೀಯರೆಂಬ ಕೀರ್ತಿಗೆ ಪಾತ್ರರಾಗಿದ್ದರು.

ತನ್ನ ಗೆಲುವಿನ ನಂತರ ಗೋಪಿಚಂದ್ ಹಾಗೂ  ನೆಹ್ವಾಲ್ ಅವರಿಂದ ಯಾವುದೇ ಶುಭಾಶಯವನ್ನು ಪಡೆದಿದ್ದೀರಾ ಎಂದು ಕೇಳಿದಾಗ, ಸಿಂಧು, "ಖಂಡಿತ, ಗೋಪಿಚಂದ್ ಸರ್ ನನಗೆ ಅಭಿನಂದನೆಗಳನ್ನು ಸಲ್ಲಿಸಿದರು. ಅಷ್ಟೆ. ನಾನು ಸಾಮಾಜಿಕ ಮಾಧ್ಯಮವನ್ನು ನೋಡಿಲ್ಲ. ನಾನು ನಿಧಾನವಾಗಿ ಎಲ್ಲರಿಗೂ ಉತ್ತರಿಸುತ್ತಿದ್ದೇನೆ" ಎಂದು ಹೇಳಿದರು.

ಮತ್ತಷ್ಟು ಪ್ರಶ್ನೆ ಕೇಳಿದಾಗ, ಸಿಂಧು, "ಗೋಪಿಚಂದ್ ಸರ್ ನನಗೆ ಸಂದೇಶ ಕಳುಹಿಸಿದ್ದರು. ನೆಹ್ವಾಲ್ ಕಳುಹಿಸಿಲ್ಲ. ನಾವು ಹೆಚ್ಚು ಮಾತನಾಡುವುದಿಲ್ಲ, ಹಾಗಾಗಿ ..." ಎಂದರು.

ಕಳೆದ ವರ್ಷ ಕೋವಿಡ್ -19 ಸಾಂಕ್ರಾಮಿಕದ ನಡುವೆ ಸಿಂಧು ಮೂರು ತಿಂಗಳ ಕಾಲ ತರಬೇತಿಗಾಗಿ ಲಂಡನ್‌ಗೆ ಪ್ರಯಾಣಿಸಿದ ನಂತರ  ಗೋಪಿಚಂದ್ ಹಾಗೂ ಸಿಂಧು ನಡುವೆ ಬಿರುಕು ಉಂಟಾದ ವರದಿಗಳು ಬಂದಿದ್ದವು. ಸಿಂಧು ಲಂಡನ್ ನಿಂದ ವಾಪಸಾದ ಬಳಿಕ ಗೋಪಿಚಂದ್ ಅಕಾಡೆಮಿಯಿಂದ ನಿರ್ಗಮಿಸಲು ನಿರ್ಧರಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News