ಟ್ವೆಂಟಿ-20 ವಿಶ್ವಕಪ್: ಅಕ್ಷರ್ ಪಟೇಲ್ ಬದಲಿಗೆ ಶಾರ್ದೂಲ್ ಠಾಕೂರ್ ಟೀಮ್ ಇಂಡಿಯಾಕ್ಕೆ ಸೇರ್ಪಡೆ
Update: 2021-10-13 12:45 GMT
ಹೊಸದಿಲ್ಲಿ: ಯುಎಇ ಹಾಗೂ ಒಮಾನ್ ನಲ್ಲಿ ಅಕ್ಟೋಬರ್ 17ರಿಂದ ಆರಂಭವಾಗಲಿರುವ ಟ್ವೆಂಟಿ-20 ವಿಶ್ವಕಪ್ ನ ಭಾರತ ಕ್ರಿಕೆಟ್ ತಂಡಕ್ಕೆ ಬುಧವಾರ ಆಲ್ ರೌಂಡರ್ ಅಕ್ಷರ್ ಪಟೇಲ್ ಬದಲಿಗೆ ವೇಗದ ಬೌಲರ್ ಶಾರ್ದೂಲ್ ಠಾಕೂರ್ ಆಯ್ಕೆಯಾಗಿದ್ದಾರೆ.
ಈಗ ನಡೆಯುತ್ತಿರುವ ಐಪಿಎಲ್ ಟೂರ್ನಿಯಲ್ಲಿ 29ರ ವಯಸ್ಸಿನ ಠಾಕೂರ್ ಚೆನ್ನೈ ಸೂಪರ್ ಕಿಂಗ್ಸ್ ಪರವಾಗಿ ಒಟ್ಟು 18 ವಿಕೆಟ್ ಗಳನ್ನು ಕಬಳಿಸಿ ಗಮನ ಸೆಳೆದಿದ್ದಾರೆ.
"ಅಖಿಲ ಭಾರತ ಸೀನಿಯರ್ ಆಟಗಾರರ ಆಯ್ಕೆ ಸಮಿತಿಯು ಟೀಮ್ ಮ್ಯಾನೇಜ್ ಮೆಂಟ್ ನೊಂದಿಗೆ ಚರ್ಚಿಸಿದ ಬಳಿಕ ಶಾರ್ದೂಲ್ ಠಾಕೂರ್ ಅವರನ್ನು ಪ್ರಮುಖ ತಂಡಕ್ಕೆ ಸೇರಿಸಿದ್ದಾರೆ. 15 ಸದಸ್ಯರ ತಂಡದ ಭಾಗವಾಗಿದ್ದ ಆಲ್ ರೌಂಡರ್ ಅಕ್ಷರ್ ಪಟೇಲ್ ಮೀಸಲು ಆಟಗಾರರ ಪಟ್ಟಿಯಲ್ಲಿರುತ್ತಾರೆ’’ ಎಂದು ಬಿಸಿಸಿಐ ಕಾರ್ಯದರ್ಶಿ ಜಯ ಶಾ ತಿಳಿಸಿದ್ದಾರೆ.