ಬೌದ್ಧಿಕ ಭಿನ್ನಮತದ ವಿರುದ್ಧ ಸಮರವೆ?

Update: 2022-11-02 03:56 GMT

ಮೋದಿ ಸರಕಾರದ ಪ್ರಕಾರ ಪೆನ್ನು ಭಯೋತ್ಪಾದನೆ ಎಂದರೆ ಬಾಂಬು ಬಂದೂಕುಗಳ ಬಳಕೆಗೆ ಕರೆ ಕೊಡಬೇಕು ಎಂದೇನೂ ಇಲ್ಲ. ಸರಕಾರದ ಹಾಗೂ ಸಂಘಪರಿವಾರದ ನೀತಿಗಳ ಟೀಕೆಯೇ ಭಯೋತ್ಪಾದನೆ. ಅದಕ್ಕೆ ಅವರು ಬಾಂಬು-ಬಂದೂಕು ಬಳಸಲು ಕರೆಕೊಟ್ಟಿರಬೇಕು ಎಂಬ ಶರತ್ತೂ ಇಲ್ಲ. ಉದಾಹರಣೆಗೆ ಇತ್ತೀಚೆಗೆ ಮೋದಿಯವರು ಗುಜರಾತಿನಲ್ಲಿ ಭಾಷಣ ಮಾಡುತ್ತಾ ಈ ದೇಶ ಕಂಡ ಅತ್ಯಂತ ಅಹಿಂಸಾತ್ಮಕ ಆದಿವಾಸಿಗಳ ಹೋರಾಟವಾದ ನರ್ಮದಾ ಬಚಾವ್ ಆಂದೋಲನದ ಮೇಧಾ ಪಾಟ್ಕರ್‌ರಂತಹ ಗಾಂಧಿವಾದಿ ನಾಯಕರನ್ನು ಕೂಡ ಅರ್ಬನ್ ನಕ್ಸಲರೆಂದು ಬಣ್ಣಿಸಿದ್ದರು. ಅಷ್ಟೇಕೆ, ರಾಹುಲ್ ಗಾಂಧಿಯವರ ‘ಭಾರತ ಜೋಡೊ’ವನ್ನು ಅರ್ಬನ್ ನಕ್ಸಲರ ಯೋಜನೆಯೆಂದೂ ಹಣೆಪಟ್ಟಿ ಕಟ್ಟುವ ಪ್ರಯತ್ನ ಮಾಡಿದ್ದಲ್ಲದೆ, ಕೇಜ್ರಿವಾಲ್‌ರಿಂದ ಹಿಡಿದು ಮಮತಾ ಬ್ಯಾನರ್ಜಿಯವರಿಗೆ ಎಲ್ಲ ವಿರೋಧ ಪಕ್ಷಗಳನ್ನು ಒಂದಲ್ಲ ಒಂದು ಹಂತದಲ್ಲಿ ಅರ್ಬನ್ ನಕ್ಸಲರೆಂದು ಆಪಾದಿಸಿದ್ದರು.


ನನ್ನ ಕಣ್ಣಮುಂದೆ

ಕಸದ ರಾಶಿ ಇದೆಯೆಂದರೆ

ನನ್ನ ಕಣ್ಣನ್ನೇ ಕೀಳಬಯಸಿದರು.. ..

ಇಷ್ಟೆಲ್ಲಾ ಏಕೆಂದರೆ ..

ಅವರ ಹಾಡಿಗೆ ನಾನು

ಪಲ್ಲವಿಯಾಗದಿದ್ದಕ್ಕೆ

ಅವರ ಪಲ್ಲಕಿಯನ್ನು

ನಾನು ಹೊರದಿದ್ದಕೆ..

-ಚರಬಂಡರಾಜು

ಮೊನ್ನೆ ಹರ್ಯಾಣದ ಸೂರಜ್ ಕುಂಡ್‌ನಲ್ಲಿ ದೇಶದ ಎಲ್ಲಾ ರಾಜ್ಯಗಳ ಗೃಹಮಂತ್ರಿಗಳು ಮತ್ತು ಪೊಲೀಸ್ ಅಧಿಕಾರಿಗಳ ಸಮ್ಮೇಳನದಲ್ಲಿ ಪ್ರಧಾನಿ ಮೋದಿಯವರು ಈ ದೇಶದ ಜನರ ಮೇಲೆ ತಾವು ನಡೆಸುತ್ತಿರುವ ಯುದ್ಧದ ಮುಂದಿನ ಮಜಲನ್ನು ಘೋಷಿಸಿದ್ದಾರೆ. ಆ ಸಮ್ಮೇಳನಕ್ಕೆ ಮಾರ್ಗದರ್ಶನ ಮಾಡುತ್ತಾ ಮೋದಿಯವರು ಇಂದಿನ ಭಾರತಕ್ಕೆ ‘‘ಗನ್ನು ಹಿಡಿದ ನಕ್ಸಲರಿಗಿಂತ ಪೆನ್ನು ಹಿಡಿದ ನಕ್ಸಲರು ಅಪಾಯಕಾರಿ’’ಯೆಂದೂ, ದೇಶದ ಯುವಜನತೆಯನ್ನು ಅವರ ದುಷ್ಟ್ರಭಾವದಿಂದ ಬಚಾವು ಮಾಡಲು ಪೆನ್ನು ಹಿಡಿದ ನಕ್ಸಲರನ್ನು ನಿಗ್ರಹಿಸುವುದು ಅತ್ಯಗತ್ಯವೆಂದೂ ಸೂಚಿಸಿದ್ದಾರೆ ಹಾಗೂ ಅದಕ್ಕೆ ತಮ್ಮ ಸರಕಾರವು ಭಯೋತ್ಪಾದಕರನ್ನು ನಿಗ್ರಹಿಸಲು ಜಾರಿಗೆ ತಂದಿರುವ UAPA  ಕಾಯ್ದೆ ಅತ್ಯುತ್ತಮ ಸಾಧನ’’ವೆಂದೂ ಸಲಹಿಸುತ್ತಾ ಭಾರತದ ಬೌದ್ಧಿಕ ಭಿನ್ನಮತದ ಮೇಲೆ ರಾಷ್ಟ್ರೀಯ ಯುದ್ಧವನ್ನೇ ಸಾರಿದ್ದಾರೆ.

ಪ್ರಧಾನಿಗಳ ಈ ಮಾರ್ಗದರ್ಶನವನ್ನು ಚಾಚೂ ತಪ್ಪದಂತೆ ಪಾಲಿಸಿದ ಅವರ ವಿದೇಶಾಂಗ ಸಚಿವ ಜೈಶಂಕರ್ ಅವರು ಮಾರನೇ ದಿನ ವಿಶ್ವಸಂಸ್ಥೆಯ ‘ಕೌಂಟರ್ ಟೆರರಿಸಂ’ ಸಮ್ಮೇಳನದಲ್ಲಿ, ಭಯೋತ್ಪಾದಕರು ತಂತ್ರಜ್ಞಾನವನ್ನು ಹಾಗೂ ಪ್ರಜಾತಾಂತ್ರಿಕ ದೇಶಗಳ ಉದಾರವಾದಿ ಧೋರಣೆಗಳ ಅವಕಾಶಗಳನ್ನು ದುರ್ಬಳಕೆ ಮಾಡಿಕೊಂಡು ತಮ್ಮ ಪ್ರಭಾವವನ್ನು ಸಮಾಜದಲ್ಲಿ ವಿಸ್ತರಿಸಿಕೊಳ್ಳುವುದನ್ನು ತಡೆಗಟ್ಟಲು ವಿಶ್ವಸಂಸ್ಥೆಯ ಸದಸ್ಯ ದೇಶಗಳು ಕಠಿಣ ಧೋರಣೆಯನ್ನು ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.

ಈಗಾಗಲೇ ಮೋದಿ ಸರಕಾರ ಭೀಮಾ ಕೋರೆಂಗಾಂವ್ ಪ್ರಕರಣದಲ್ಲಿ ಮತ್ತು ಸಿಎಎ ವಿರೋಧಿ ಹೋರಾಟಗಳಲ್ಲಿ ಪೆನ್ನಿನ ಮೂಲಕ ದಮನವನ್ನು ವಿರೋಧಿಸಿದ್ದ ಹಲವಾರು ಲೇಖಕರನ್ನು, ಕವಿಗಳನ್ನು ಸಂಚಿನ ಆರೋಪ ಹೊರಿಸಿ ವರ್ಷಾನುಗಟ್ಟಲೆ ಜೈಲಿಗೆ ತಳ್ಳಿದೆ. ಈಗ ಮೋದಿತ್ವದ ಸರ್ವಾಧಿಕಾರ, ಶೋಷಣೆ ಮತ್ತು ದಮನಗಳ ಬಗ್ಗೆ ಶೋಷಿತ ಜನರಲ್ಲಿ ಅರಿವು ಮೂಡಿಸುವ, ಬದುಕಿನ ಬವಣೆಗಳ ಹಿಂದಿನ ರಾಜಕೀಯದ ಬಗ್ಗೆ ಪ್ರಜ್ಞೆ ಮೂಡಿಸುವ ಮತ್ತು ಆ ಅರಿವನ್ನು ಸಂಘಟಿತ ಹೋರಾಟವನ್ನಾಗಿ ಮಾಡಿ ಬದಲಾವಣೆ ಸಾಧ್ಯವಾಗಿಸುವ ಪ್ರಕ್ರಿಯೆಯನ್ನೇ ಅಪರಾಧೀಕರಿಸಿ ಸೆರೆಗೆ ದೂಡುವ ವ್ಯವಸ್ಥಿತ ಪ್ರಯತ್ನವನ್ನು ಮಾಡುತ್ತಿದೆ. ಮೋದಿಯವರು ಭಾಷಣ ಮಾಡಿರುವುದು ಆ ಕರಾಳ ಸರ್ವಾಧಿಕಾರದ ಮತ್ತೊಂದು ಮಜಲಿನ ಘೋಷಣೆಯೇ ಆಗಿದೆ.

ಭಿನ್ನ ಚಿಂತನೆಗಳನ್ನು ಬೆದರಿಸಬಹುದೇ?

ಈವರೆಗಿನ ಭಾರತದ ನ್ಯಾಯ ಸಂಹಿತೆಯಲ್ಲಿ ಯಾವುದೇ ಅಭಿಪ್ರಾಯವನ್ನು ಅದು ಸಂವಿಧಾನ ಬಾಹಿರವೇ ಆಗಿದ್ದರೂ ಅವನ್ನು ದೇಶದ್ರೋಹಿ ಎಂದೋ ಭಯೋತ್ಪಾದಕವೆಂದೋ ಪರಿಗಣಿಸಿರಲಿಲ್ಲ. ಎಲ್ಲಿಯತನಕ ಒಂದು ಅಭಿಪ್ರಾಯವು ನೇರವಾಗಿ ಒಂದು ನಿರ್ದಿಷ್ಟ ಭಯೋತ್ಪಾದನೆಗೆ ಪ್ರಚೋದನೆ ನೀಡಿದೆಯೆಂದು ಸಾಬೀತು ಮಾಡಲಾಗುವುದಿಲ್ಲವೋ ಅಲ್ಲಿಯವರೆಗೆ ಅಂಥ ಬರಹಗಳ ಮೇಲೆ ಹಾಗೂ ಬರಹಗಾರರ ಮೇಲೆ ಭಯೋತ್ಪಾದನೆಯ ಆರೋಪ ಹೊರಿಸಲು ಸಾಧ್ಯವಿಲ್ಲ ಎಂಬುದನ್ನೇ ಸುಪ್ರೀಂ ಕೋರ್ಟ್ ತನ್ನ ಹಲವಾರು ನ್ಯಾಯಾದೇಶಗಳಲ್ಲಿ ಸ್ಪಷ್ಟಪಡಿಸುತ್ತಾ ಬಂದಿದೆ.

ಏಕೆಂದರೆ ಒಂದು ಪ್ರಜಾತಂತ್ರದಲ್ಲಿ ಚಿಂತನೆಯನ್ನು ನಿಷೇಧಿಸಲು ಸಾಧ್ಯವಿಲ್ಲ. ಹಾಗೆಯೇ ಇತ್ತೀಚೆಗೆ ಸೆಡಿಶನ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಸರಕಾರವನ್ನು ಟೀಕಿಸುವುದನ್ನು ದೇಶದ್ರೋಹವೆಂದು ಪರಿಗಣಿಸುವುದು ವಸಾಹತುಶಾಹಿ ಧೋರಣೆಯಾಗುತ್ತದೆಯೆಂದು ಘೋಷಿಸಿ ದೇಶದಲ್ಲೆಲ್ಲೂ ಸೆಡಿಶನ್ ಕಾನೂನಿನನ್ವಯ ಪ್ರಕರಣಗಳನ್ನು ದಾಖಲಿಸಬಾರದೆಂದೂ ಆದೇಶಿಸಿತ್ತು. ಹಾಗಿದ್ದರೂ ಮೋದಿಯವರು ಪೆನ್ನು ಹಿಡಿದವರ ಮೇಲೆ ಅರ್ಥಾತ್ ತನ್ನ ಸರಕಾರದ ವಿರುದ್ಧದ ಭಿನ್ನಮತೀಯ ಚಿಂತನೆಗಳನ್ನೇ ಭಯೋತ್ಪಾದನೆ ಎಂದು ಘೋಷಿಸಿ ಯುದ್ಧ ನಡೆಸಲು ಹೊರಟಿದೆ. ಮೋದಿಯವರು ಸೂಚಿಸುತ್ತಿರುವ ಈ ಪೆನ್ನು ಹಿಡಿದ ನಕ್ಸಲರು ಯಾರು ಮತ್ತು ಯಾವುದು ಪೆನ್ನು ಭಯೋತ್ಪಾದನೆ ಎಂಬುದನ್ನು ಅರ್ಥಮಾಡಿಕೊಂಡರೆ ಈ ವಿಷಯ ಇನ್ನಷ್ಟು ಸ್ಪಷ್ಟವಾಗುತ್ತದೆ.

ದೇಶದ ತುಂಬೆಲ್ಲ ಅರ್ಬನ್ ನಕ್ಸಲರೇ!

ಮೋದಿ ಸರಕಾರದ ಪ್ರಕಾರ ಪೆನ್ನು ಭಯೋತ್ಪಾದನೆ ಎಂದರೆ ಬಾಂಬು ಬಂದೂಕುಗಳ ಬಳಕೆಗೆ ಕರೆ ಕೊಡಬೇಕು ಎಂದೇನೂ ಇಲ್ಲ. ಸರಕಾರದ ಹಾಗೂ ಸಂಘಪರಿವಾರದ ನೀತಿಗಳ ಟೀಕೆಯೇ ಭಯೋತ್ಪಾದನೆ. ಅದಕ್ಕೆ ಅವರು ಬಾಂಬು-ಬಂದೂಕು ಬಳಸಲು ಕರೆಕೊಟ್ಟಿರಬೇಕು ಎಂಬ ಶರತ್ತೂ ಇಲ್ಲ. ಉದಾಹರಣೆಗೆ ಇತ್ತೀಚೆಗೆ ಮೋದಿಯವರು ಗುಜರಾತಿನಲ್ಲಿ ಭಾಷಣ ಮಾಡುತ್ತಾ ಈ ದೇಶ ಕಂಡ ಅತ್ಯಂತ ಅಹಿಂಸಾತ್ಮಕ ಆದಿವಾಸಿಗಳ ಹೋರಾಟವಾದ ನರ್ಮದಾ ಬಚಾವ್ ಆಂದೋಲನದ ಮೇಧಾ ಪಾಟ್ಕರ್‌ರಂತಹ ಗಾಂಧಿವಾದಿ ನಾಯಕರನ್ನು ಕೂಡ ಅರ್ಬನ್ ನಕ್ಸಲರೆಂದು ಬಣ್ಣಿಸಿದ್ದರು. ಅಷ್ಟೇಕೆ, ರಾಹುಲ್ ಗಾಂಧಿಯವರ ‘ಭಾರತ ಜೋಡೊ’ವನ್ನು ಅರ್ಬನ್ ನಕ್ಸಲರ ಯೋಜನೆಯೆಂದೂ ಹಣೆಪಟ್ಟಿ ಕಟ್ಟುವ ಪ್ರಯತ್ನ ಮಾಡಿದ್ದಲ್ಲ

ದೆ, ಕೇಜ್ರಿವಾಲ್‌ರಿಂದ ಹಿಡಿದು ಮಮತಾ ಬ್ಯಾನರ್ಜಿಯವರಿಗೆ ಎಲ್ಲ ವಿರೋಧ ಪಕ್ಷಗಳನ್ನು ಒಂದಲ್ಲ ಒಂದು ಹಂತದಲ್ಲಿ ಅರ್ಬನ್ ನಕ್ಸಲರೆಂದು ಆಪಾದಿಸಿದ್ದರು. ಅದೇ ರೀತಿ ಚಿಂತಕ ತೇಲ್ತುಂಬ್ಡೆ, ಮಾನವ ಹಕ್ಕು ಹೋರಾಟಗಾರ ಗೌತಮ್ ನವ್ಲಾಖಾ, ವಕೀಲೆ ಸುಧಾ ಭಾರದ್ವಾಜ್ ..ಇನ್ನಿತರರನ್ನು ಬಂಧಿಸುವಾಗ ಅವರು ವಿದೇಶದಲ್ಲಿ ಮೋದಿ ಹತ್ಯೆಗೆ ಬೇಕಾದ ಹಣಸಂಗ್ರಹ ಮಾಡುತ್ತಿದ್ದರೆಂಬ ಅತ್ಯಂತ ಹಾಸ್ಯಾಸ್ಪದವಾದ ಸುಳ್ಳನ್ನು ಹೇಳಿತ್ತು. ಇವೆಲ್ಲವೂ ಹಸಿಹಸಿ ಸುಳ್ಳಾಗಿರುವುದರಿಂದ ಮತ್ತು ಯಾವುದಕ್ಕೂ ಪುರಾವೆಯಿಲ್ಲದಿರುವುದರಿಂದ ಪೆಗಾಸಸ್ ತಂತ್ರಜ್ಞಾನ ಬಳಸಿ ಇಲ್ಲದ ಕಾಗದ ಪತ್ರಗಳನ್ನು ಈ ಚಿಂತಕರ ಮತ್ತು ಹೋರಾಟಗಾರರ ಮೊಬೈಲ್ ಮತ್ತು ಲ್ಯಾಪ್‌ಟಾಪಿನಲ್ಲಿ ಇರಿಸಲಾಯಿತೆಂಬುದು ಈಗ ಸ್ಪಷ್ಟವಾಗುತ್ತಿದೆ. ಇದೆಲ್ಲಕ್ಕೂ ಕಾರಣ ಇವರೆಲ್ಲರೂ ಮೋದಿ ಸರಕಾರದ ನೀತಿಗಳ ಜನದ್ರೋಹ ಹಾಗೂ ದೇಶದ್ರೋಹಗಳನ್ನು ವಿರೋಧಿಸುತ್ತಿದ್ದದ್ದು.

ಮೋದಿ ಸರಕಾರ ಜನರಲ್ಲಿ ಕೋಮುವಾದವನ್ನು ಬಡಿದೆಬ್ಬಿಸಿ ಅಂತರ್ಯುದ್ಧದ ವಾತಾವರಣ ಸೃಷ್ಟಿಸುವ ಮೂಲಕ ದೇಶದ ಸಂಪನ್ಮೂಲಗಳನ್ನು ಯಾವುದೇ ಜನವಿರೋಧ ಇಲ್ಲದಂತೆ ಕಾರ್ಪೊರೇಟ್ ಅದಾನಿ-ಅಂಬಾನಿಗಳಿಗೆ ಮಾರಿಕೊಳ್ಳುತ್ತಿರುವುದರ ಬಗ್ಗೆ ಅರಿವನ್ನು ಉಂಟು ಮಾಡುತ್ತಿದ್ದದ್ದು. ಆದರೆ ಈ ಚಿಂತಕರ ಪ್ರಜಾತಂತ್ರ ಪರ-ಬಿಜೆಪಿ ಸರಕಾರದ ನೀತಿಗಳ ವಿರೋಧಿ ಬರಹಗಳನ್ನೇ ಭಯೋತ್ಪಾದನೆಗೆ ಒಂದು ಪುರಾವೆಯೆಂದು ನ್ಯಾಯಾಲಯವನ್ನು ಒಪ್ಪಿಸಲು ಕೆಲವರ್ಷಗಳ ಹಿಂದಿನವರೆಗೆ ಸಾಧ್ಯವಾಗುತ್ತಿರಲಿಲ್ಲ.

ಆದರೆ ದಿನಗಳೆದಂತೆ ದೇಶವೆಂದರೆ ಮೋದಿ, ಮೋದಿಯೆಂದರೆ ದೇಶ ಎಂಬ ಭಾವನೆ ಅಲಿಖಿತ ಶಾಸನವೇ ಆಗುತ್ತಿದ್ದಂತೆ ಮೋದಿಯವರನ್ನು ವಿರೋಧಿಸುವುದೆಂದರೆ ದೇಶದ್ರೋಹಕ್ಕೆ ಸಮವೆಂಬ ಅಭಿಪ್ರಾಯವನ್ನು ಸಾಂವಿಧಾನಿಕ ಕೋರ್ಟ್‌ಗಳಾಗಿರುವ ಹೈಕೋರ್ಟು ಮತ್ತು ಸುಪ್ರೀಂ ಕೋರ್ಟುಗಳೂ ಮಾನ್ಯ ಮಾಡುತ್ತಿವೆ!. ಹೀಗಾಗಿ ಈಗ ಮೋದಿ ಸರಕಾರದ ಪೊಲೀಸರು ತಮಗೆ ಬಗ್ಗದವರನ್ನು ಮಣಿಸಲು ಬಾಂಬ್ ಭಯೋತ್ಪಾದನೆಗಳ ಸುಳ್ಳು ಆರೋಪಗಳನ್ನು ಹೊರಿಸಿ ಅದಕ್ಕೆ ಸುಳ್ಳು ಪುರಾವೆಯನ್ನು ಜೋಡಿಸಲು ಹೆಣಗುವ ಅಗತ್ಯವೇ ಇಲ್ಲ. ಮೋದಿ ಸರಕಾರದ ನೀತಿಗಳ ಟೀಕೆಯು, ಅದರ ಬಗ್ಗೆ ಪೆನ್ನು ಬಳಸಿ ಬರೆವ ವರದಿ, ಲೇಖನ ಮತ್ತು ನಾಟಕಗಳು ಕೂಡ ದೇಶದ್ರೋಹದ ಆರೋಪವನ್ನು ಸಾಬೀತುಪಡಿಸುವ ಪುರಾವೆಗಳಾಗಲಿವೆ ಎಂಬುದರ ಮುನ್ಸೂಚನೆಯನ್ನು ಕೋರ್ಟ್‌ಗಳೇ ನೀಡಿವೆ.. ಇದು ಊಹೆಯಲ್ಲ. ವಾಸ್ತವ.

‘ಅಚ್ಛೇದಿನ್’, ‘ಗೋಮೂತ್ರ’ ಪದಬಳಕೆ -
ಭಯೋತ್ಪಾದನೆಗೆ ಪುರಾವೆ!

ತೀರಾ ಇತ್ತೀಚೆಗೆ-ಅಕ್ಟೋಬರ್ 17ರಂದು, ಬಾಂಬೆ ಹೈಕೋರ್ಟ್‌ನ ದ್ವಿಸದಸ್ಯ ಪೀಠ, ಭೀಮಾಕೋರೆಗಾಂವ್ ಪ್ರಕರಣದಲ್ಲಿ ಜೈಲಿನಲ್ಲಿರುವ ಕಬೀರ್ ಕಲಾ ಮಂಚ್‌ನ ನಟಿ/ಸದಸ್ಯೆ ಜ್ಯೋತಿ ಜಗತಪ್ ಅವರ ಜಾಮೀನು ನಿರಾಕರಿಸಿತು. ಅದಕ್ಕೆ ಅವರ ಕೊಟ್ಟ ಕಾರಣಗಳಲ್ಲಿ ಈ ಪೆನ್ನು ಹಿಡಿದ ನಕ್ಸಲೈಟರು ಯಾರಾಗಿರುತ್ತಾರೆ ಎಂಬ ವಿವರಗಳನ್ನು ನ್ಯಾಯಾಲಯವೇ ಸ್ಪಷ್ಟಪಡಿಸಿದೆ. ಜ್ಯೋತಿಯವರಿಗೆ ಜಮೀನು ನಿರಾಕರಿಸುತ್ತಾ ಕೋರ್ಟ್ ಹೀಗೆ ಅಭಿಪ್ರಾಯ ಪಟ್ಟಿದೆ:

‘‘ಕಬೀರ್ ಕಲಾಮಂಚ್ (ಕೆ.ಕೆ.ಎಂ.) ಪ್ರದರ್ಶಿಸಿದ ನಾಟಕದ ಪಠ್ಯವನ್ನು ನಾವೂ ಗಂಭೀರವಾಗಿ ಪರಿಶೀಲಿಸಿದ್ದೇವೆ..ಅದರಲ್ಲಿ ಪ್ರಜಾತಾಂತ್ರಿಕವಾಗಿ ಆಯ್ಕೆಯಾದ ಸರಕಾರವನ್ನು ವಿರೋಧಿಸುವ, ಸರಕಾರವನ್ನು ಗೇಲಿ ಮಾಡುವ, ಅದನ್ನು ಉರುಳಿಸುವ, ಹಲವಾರು ಪದಗಳು ಮತ್ತು ಕೊಂಕುನುಡಿಗಳೂ ಇವೆ. ಇವುಗಳು ನಾಟಕದಲ್ಲಿ ಪ್ರಶ್ನೋತ್ತರ ರೂಪದಲ್ಲಿ ಇವೆ.’’ ‘‘ಅಂತಹ ಪದಗಳು/ಕೊಂಕುನುಡಿಗಳು ಹೀಗಿವೆ:

‘ಅಚ್ಛೇದಿನ್’, ‘ಗೋಮೂತ್ರ’, ‘ಶಾಖಾಹಾರ’, ‘ಪ್ರಧಾನಿಯನ್ನು ಮಗುವೆಂದು ಸಂಬೋಧಿಸಿರುವುದು’, ‘ಪ್ರಧಾನಿಗಳ ಪ್ರವಾಸಶಾಸ್ತ್ರ’, ‘ಆರೆಸ್ಸೆಸ್‌ನ ಸಮವಸ್ತ್ರ’, ‘ನೋಟುನಿಷೇಧದಂತಹ ನೀತಿಗಳು’, ‘ಸನಾತನ ಧರ್ಮ’, ‘ರಾಮ ಮಂದಿರ’, ಶಿವಾಜಿ ಮಹಾರಾಜರು ಮುಸ್ಲಿಮರ ವಿರುದ್ಧವಿದ್ದರೆಂಬ, ‘ಟಿಪ್ಪುಸುಲ್ತಾನ್ ಹಿಂದೂಗಳ ವಿರುದ್ಧವಿದ್ದುದು ಮಾತ್ರವಲ್ಲ, ಹಿಂದೂಗಳ ಕಗ್ಗೊಲೆ ಮಾಡಿದ್ದರು ಮತ್ತು ದೇವಸ್ಥಾನಗಳನ್ನು ಕೆಡವಿದ್ದರೆಂಬ ಪ್ರಚಾರದ ಬಗ್ಗೆ’, ‘ಗುರೂಜಿ ಗೋಳ್ವಾಲ್ಕರ್ ಪ್ರಕಾರ ಸಂವಿಧಾನಕ್ಕಿಂತ ಮನುಸ್ಮತಿಯೇ ಅತ್ಯುನ್ನತ ಗ್ರಂಥ’, ‘ದಲಿತರ ಬಗ್ಗೆ ಪೇಶ್ವೆಗಳ ಧೋರಣೆ ಮತ್ತು ನಡೆಸಿದ ಅತ್ಯಾಚಾರಗಳ ಬಗ್ಗೆ’, ‘ಇಂದಿನ ಭಾರತದಲ್ಲಿ ದಲಿತರ ಮೇಲೆ ನಡೆಯುತ್ತಿರುವ ಅತ್ಯಾಚಾರ’..ಇತ್ಯಾದಿಗಳು.’’ ‘‘ಎಲ್ಗಾರ್ ಪರಿಷತ್‌ನ ಕಾರ್ಯಕ್ರಮದಲ್ಲಿ ಕೆ.ಕೆ.ಎಂ. ಈ ಮೇಲಿನಂತೆ ನಾಟಕವಾಡುವ ಮೂಲಕ ದ್ವೇಷದ ಭಾವನೆಗಳನ್ನು ಕೆರಳಿಸಿರುವುದು ಸ್ಪಷ್ಟ. ಹೀಗಾಗಿ ಎಲ್ಗಾರ್ ಪರಿಷತ್‌ನ ಕಾರ್ಯಕ್ರಮದಲ್ಲಿ ಕೆ.ಕೆ.ಎಂ. ಮತ್ತು ಮಾವೋವಾದಿಗಳು ಬೇರೊಂದು ಸಂಚು ನಡೆಸಿರುವುದು ಖಚಿತವಾಗಿದೆ.’’ ಹೆಚ್ಚಿನ ವಿವರಗಳಿಗೆ ಆಸಕ್ತರು ಈ ನ್ಯಾಯದೇಶದ ಸಂಪೂರ್ಣ ವಿವರವಿರುವ ಈ ವೆಬ್‌ಸೈಟನ್ನು ಸಂದರ್ಶಿಸಬಹುದು.

(https://indiankanoon.org/doc/93752869/)

ಹೀಗೆ ಕಬೀರ್ ಕಲಾ ಮಂಚ್ ಎಂಬ ಜನಪರ ಕಲಾ ಸಂಸ್ಥೆಯ ಸದಸ್ಯೆ ಜ್ಯೋತಿ ಜಗತಪ್‌ಗೆ ಜಾಮೀನು ನಿರಾಕರಿಸಲು ಹಾಗೂ ಮೇಲ್ನೋಟಕ್ಕೆ ಭಯೋತ್ಪಾದಕಿ ಎಂದು ಭಾವಿಸಲು ಭಾರತದ ಒಂದು ಸಾಂವಿಧಾನಿಕ ಕೋರ್ಟ್ ನ ದ್ವಿಸದಸ್ಯ ಪೀಠಕ್ಕೆ, ಮೋದಿ ಸರಕಾರದ ನೀತಿಗಳ ಮೇಲಿನ ಟೀಕೆಯಷ್ಟೆ ಸಾಕಾಗಿತ್ತು. ಅಂದರೆ ಕೋರ್ಟ್ ಮಾಡಿರುವ ಉಲ್ಲೇಖಗಳನ್ನು ನೋಡಿದರೆ ಇನ್ನು ಮುಂದೆ ಈ ದೇಶದ ವರದಿಗಾರರು, ಲೇಖಕರು, ರಂಗಕರ್ಮಿಗಳು, ಕವಿಗಳು ಮೋದಿ ಸರಕಾರದ ಯಾವುದೇ ನೀತಿಗಳನ್ನು, ಆರೆಸ್ಸೆಸ್ಸೇ ನೀಡಿರುವ ಹೇಳಿಗಳನ್ನು, ಇತಿಹಾಸದ ಸತ್ಯಗಳ ಮತ್ತೊಂದು ಮುಖವನ್ನು, ಕೊನೆಗೆ ಗೋಮೂತ್ರ ಹಾಗೂ ಅಚ್ಛೇದಿನ್‌ಗಳ ಬಗ್ಗೆಯೂ ಮಾತಾಡಬಾರದು, ಬರೆಯಬಾರದು, ಹಾಡಬಾರದು. ಹಾಗೆ ಮಾಡಿದವರೆಲ್ಲರೂ ಮೋದಿ ಆಳ್ವಿಕೆಯಲ್ಲಿ ‘‘ಪೆನ್ನು ಹಿಡಿದ ನಕ್ಸಲರಾಗುತ್ತಾರೆ!’’ ಇತ್ತೀಚಿನ ದಿನಗಳಲ್ಲಿ ಇದೊಂದು ದಿನನಿತ್ಯದ ವಿದ್ಯಮಾನವೂ ಆಗುತ್ತಿದೆ.

ಇಂಕ್ವಿಲಾಬ್- ದೇಶದ್ರೋಹಿ, ಭಯೋತ್ಪಾದಕ, ಗೋಲಿಮಾರೋ- ದೇಶಭಕ್ತ, ಅಹಿಂಸಾತ್ಮಕ 

ಸಿಎಎ ವಿರೋಧಿ ಜನಚಳವಳಿಯಲ್ಲಿ ಭಾಗವಹಿಸಿ ಅದರ ಜನವಿರೋಧಿತನಗಳ ಬಗ್ಗೆ ಅರಿವು ಮೂಡಿಸುತ್ತಿದ್ದ ಈ ದೇಶ ಕಂಡ ಅಪರೂಪದ ಯುವ ಚಿಂತಕ-ಹೋರಾಟಗಾರ ಉಮರ್ ಖಾಲಿದ್‌ರನ್ನು ಭಯೋತ್ಪಾದನಾ ಕಾಯ್ದೆಯಡಿಯಲ್ಲಿ ಸೆರೆಗೆ ದೂಡಿ ಎರಡು ವರ್ಷಗಳಾಯಿತು. ಅವರ ಜಾಮೀನು ಅರ್ಜಿಯನ್ನು ಇತ್ತೀಚೆಗೆ ತಿರಸ್ಕರಿಸಿದ ಮತ್ತೊಂದು ಸಾಂವಿಧಾನಿಕ ನ್ಯಾಯಾಲಯವೇ ಆಗಿರುವ ದಿಲ್ಲಿ ಹೈಕೋರ್ಟ್‌ನ ದ್ವಿಸದಸ್ಯ ಪೀಠ ಇತರ ಎಲ್ಲಾ ಕಾರಣಗಳ ಜೊತೆಗೆ ಉಮರ್ ಖಾಲಿದ್ ‘‘ಇಂಕ್ವಿಲಾಬ್ ಜಿಂದಾಬಾದ್’’ ಎಂಬ ಘೋಷಣೆಯನ್ನು ಹಾಕಿದ್ದನ್ನು ಉಮರ್ ಅವರ ಭಯೋತ್ಪಾದನೆಗೆ ಒಂದು ಪ್ರಮುಖ ಪುರಾವೆಯಾಗಿ ಗುರುತಿಸಿದೆ.

ನ್ಯಾಯಪೀಠದ ಪ್ರಕಾರ ಉಮರ್ ಖಾಲಿದ್ ‘‘ಇಂಕ್ವಿಲಾಬ್-ಕ್ರಾಂತಿ’’ ಎಂದಿದ್ದು ಹಿಂಸೆಗೆ ಪ್ರಚೋದನೆಯಂತೆ! ಸ್ವಾತಂತ್ರ್ಯ ಪೂರ್ವದಲ್ಲಿ ಮತ್ತು ಆ ನಂತರದಲ್ಲಿ ಎಷ್ಟು ಅಹಿಂಸಾತ್ಮಕ ಜನಹೋರಾಟಗಳು ಹಾಗೂ ಪಕ್ಷಗಳು ‘‘ಇಂಕ್ವಿಲಾಬ್ ಜಿಂದಾಬಾದ್’’ ಘೋಷಣೆ ಹಾಕಿಲ್ಲ?? ಆದರೂ ಅದೇ ಘೋಷಣೆ ಯನ್ನು ಒಬ್ಬ ಉಮರ್ ಖಾಲಿದ್ ಹಾಕಿದರೆ ಅದು ಹಿಂಸೆಗೆ ಪ್ರಚೋದನೆಯಂತೆ ಕಾಣುವುದರ ಹಿಂದಿರುವುದು ನ್ಯಾಯಾಲಯಗಳ ಮೇಲಿರುವ ಮೋದಿ ಪ್ರಣೀತ ನ್ಯಾಯ ಸಂಹಿತೆಯ ಪ್ರಭಾವವಲ್ಲದೆ ಮತ್ತೇನು? ಆದರೆ, ಇದೇ ಸಿಎಎ ಹೋರಾಟದ ಸಂದರ್ಭದಲ್ಲಿ ಇಂದು ಮೋದಿ ಸರಕಾರದ ಮಂತ್ರಿಯಾಗಿರುವ ಅನುರಾಗ್ ಠಾಕೂರ್ ‘‘ದೇಶ ಕೆ ಗದ್ದಾರೋಂಕೋ, ಗೋಲಿ ಮಾರೋ ಸಾಲೋಂಕೋ’’ ಎಂದು ಕರೆಕೊಟ್ಟು 53 ಜನರ ಬಲಿಗೆ ಕಾರಣವಾಗಿದ್ದರ ಮೇಲೆ ಪ್ರಕರಣ ದಾಖಲಿಸುವುದನ್ನು ಇದೇ ಕೋರ್ಟ್ ನ ಮತ್ತೊಂದು ಪೀಠ ಸಮ್ಮತಿಸಲಿಲ್ಲ. ಕಾರಣ ಆ ಕರೆ ನೀಡಿದಾಗ ಠಾಕೂರ್ ಮುಖದ ಮೇಲೆ ನಗೆಯಿತ್ತಂತೆ. ಹೀಗಾಗಿ ಅವರು ಕೊಟ್ಟ ಕರೆ ಗಂಭೀರವಾಗಿರಲಿಲ್ಲವಂತೆ.. ಇದು ಬಿಜೆಪಿ ನಾಯಕನೊಬ್ಬ ಟಿವಿ ಡಿಬೇಟ್‌ನಲ್ಲಿ ಆಡಿದ ಮಾತುಗಳಲ್ಲ. ಒಂದು ಸಾಂವಿಧಾನಿಕ ಕೋರ್ಟ್ ಸಾಕ್ಷಿ-ಪುರಾವೆಗಳನ್ನು ತೂಗಿ ಆಮೇಲೆ ಕೊಟ್ಟ ನ್ಯಾಯಿಕ ನಿರ್ಧಾರ! ಅಂದರೆ ಈಗಾಗಲೇ ಮೋದಿ ಪ್ರಣೀತ ಹಿಂದುತ್ವ ನ್ಯಾಯ ಸಂಹಿತೆ ಜಾರಿಯಲ್ಲಿದೆ ಎಂತಾಯಿತಲ್ಲವೇ?
ಹೆಚ್ಚಿನ ವಿವರಗಳಿಗೆ ಆಸಕ್ತರು ಈ ನ್ಯಾಯಾದೇಶದ ಸಂಪೂರ್ಣ ವಿವರವಿರುವ ಈ ವೆಬ್ ಸೈಟನ್ನು ಸಂದರ್ಶಿಸಬಹುದು.
https://indiankanoon.org/doc/76884242/
ಮೋದಿ ಆಳ್ವಿಕೆಯು ಆ ಅರ್ಥದಲ್ಲಿ ಬ್ರಿಟಿಷ್ ವಸಾಹತುಶಾಹಿಗಳನ್ನು, ಇಂದಿರಾ ಗಾಂಧಿಯವರ ತುರ್ತುಸ್ಥಿತಿಯ ಕಾಲವನ್ನು ಮೀರಿಸುತ್ತಿದೆ.

ತುರ್ತುಸ್ಥಿತಿಗಿಂತ ಭೀಕರ, ಅಪಾಯಕಾರಿ 

ಬ್ರಿಟಿಷ್ ವಸಾಹತುಶಾಹಿಗಳು ಈ ದೇಶವನ್ನು ಆಳುತ್ತಿದ್ದಾಗ ಭಾರತದ ಜನರು ಅವರ ವಿರುದ್ಧ ಬಂಡಾಯ ಹೂಡದಂತೆ ತಡೆಗಟ್ಟಲು ಹಲವಾರು ಕರಾಳ ಕಾನೂನುಗಳನ್ನು ಜಾರಿಗೆ ತಂದಿದ್ದರು. ಬ್ರಿಟಿಷ್ ಸರಕಾರದ ವಿರುದ್ಧ ಹೋರಾಡಿದ ಕ್ರಾಂತಿಕಾರಿಗಳನ್ನು (ಚಂದ್ರಶೇಖರ್ ಆಝಾದ್ ತರದವರನ್ನು) ಬೀದಿಗಳಲ್ಲೇ ಗುಂಡಿಟ್ಟು ಕೊಲ್ಲುವುದು, ಅಥವಾ ವಿಚಾರಣೆಯ ನಾಟಕ ನಡೆಸಿ ಗಲ್ಲಿಗೇರಿಸುವುದು (ಭಗತ್ ಸಿಂಗ್ ಅಂತಹವರನ್ನು), ಬ್ರಿಟಿಷ್ ವಿರೋಧಿ ಮಂದಗಾಮಿಗಳನ್ನು ಹಲವಾರು ವರ್ಷ ಜೈಲುಗಳಲ್ಲಿ ಕೊಳೆಯುವಂತೆ ಮಾಡುವುದು (ಹಲವಾರು ಕಾಂಗ್ರೆಸ್ ನಾಯಕರು) ಆಗಿನ ವಸಾಹತುಶಾಹಿಗಳ ಕರಾಳ ಆಡಳಿತದ ಲಕ್ಷಣವಾಗಿತ್ತು. ಸಾವರ್ಕರ್ ಅಂತಹ ಶರಣಾಗತಿಕೋರರು ಅಥವಾ ವಾಜಪೇಯಿಯಂತಹ ಜೊತೆಗಿದ್ದ ಹೋರಾಟಗಾರರನ್ನು ಹಿಡಿದುಕೊಟ್ಟವರನ್ನು ಮಾತ್ರ ಬ್ರಿಟಿಷರು ಪೋಷಿಸಿದರು. ಅಷ್ಟು ಮಾತ್ರವಲ್ಲ. ಆಗ ಬ್ರಿಟಿಷರ ವಿರುದ್ಧ ಗನ್ನು ಹಿಡಿದು ಹೋರಾಡಿದವರು ಮಾತ್ರವಲ್ಲ, ಪೆನ್ನು ಹಿಡಿದು ಹೋರಾಡಿದವರನ್ನು ಸಹ ರೌಲೆಟ್ ಕಾಯ್ದೆ ಹಾಗೂ ಇನ್ನಿತರ ಕರಾಳ ರಾಜದ್ರೋಹಿ ಕಾಯ್ದೆಯಡಿ ಬಂಧಿಸಿ ಸೆರೆಮನೆಯಲ್ಲಿ ಕೊಳೆಸುತ್ತಿದ್ದರು. ಏಕೆಂದರೆ ಆಗ ರಾಜ್ ಎಂದರೆ ಬ್ರಿಟಿಷರು. ಸರಕಾರವನ್ನು ವಿರೋಧಿಸು ವುದೆಂದರೆ ಬ್ರಿಟಿಷ್ ಸಾಮ್ರಾಜ್ಯವನ್ನೇ ವಿರೋಧಿಸಿದಂತೆ ಎಂಬುದು ವಸಾಹತು ಶಾಹಿಯ ಕಾನೂನಿನ ತಿರುಳಾಗಿತ್ತು.

ಆದರೆ ವಸಾಹತುಶಾಹಿಗಳೂ ಜನಹೋರಾಟಕ್ಕೆ ಮಣಿದು ಹಲವಾರು ಸುಧಾರಣೆಗಳನ್ನು ಜಾರಿ ಮಾಡಬೇಕಾ ಯಿತು ಮತ್ತು ಅಂತಿಮವಾಗಿ ದೇಶ ಬಿಟ್ಟು ತೊಲಗಬೇಕಾಯಿತು. ಅದೇರೀತಿ ಭಾರತವು ಸ್ವತಂತ್ರ ಪ್ರಜಾತಂತ್ರವಾದ ನಂತರವೂ ವಸಾಹತುಶಾಹಿಗಳು ಜಾರಿಗೆ ತಂದ ರಾಜದ್ರೋಹ ಕಾಯ್ದೆ ಮುಂದುವರಿಯಿತು. ಸುಪ್ರೀಂ ಕೋರ್ಟ್ ಕೂಡ ಅದನ್ನು ಇತ್ತೀಚಿನವರೆಗೆ ಮಾನ್ಯ ಮಾಡಿತ್ತು. ಸರಕಾರದ ವಿರೋಧವೆಂದರೆ ದೇಶದ ವಿರೋಧವೆಂಬಂತೆ ಸರಕಾರ ನಡೆದುಕೊಳ್ಳುವುದನ್ನು ಮುಂದುವರಿಸಿತ್ತು. ತುರ್ತುಸ್ಥಿತಿಯ ಕಾಲದಲ್ಲಿ ಅವೆಲ್ಲವೂ ಮತ್ತೊಮ್ಮೆ ಅತಿರೇಕಕ್ಕೆ ಮುಟ್ಟಿತು. ಇಂದಿರಾ ಎಂದರೆ ಇಂಡಿಯಾ ಎಂಬಂತಹ ಭಟ್ಟಂಗಿಗಳೊಂದಿಗೆ ಘೋಷಿತ ಸರ್ವಾಧಿಕಾರವನ್ನು ಜಾರಿ ಮಾಡಿದ ಇಂದಿರಾಗಾಂಧಿ ಸರಕಾರ, ತನ್ನ ವಿರುದ್ಧ ಹೋರಾಡಿದವರನ್ನು ನಕ್ಸಲರೆಂದು ಆರೋಪಿಸಿ ಸಾವಿರಾರು ಯುವಕರನ್ನು ಸುಳ್ಳು ಎನ್‌ಕೌಂಟರ್ ಮಾಡಿ ಕೊಂದುಹಾಕಿತು. ವಿರೋಧ ಪಕ್ಷದವರನ್ನು ಶಾಂತಿಭಂಗದ ಅಪರಾಧ ಹೊರಿಸಿ MISA ಕಾಯ್ದೆಯಡಿ ವರ್ಷಗಟ್ಟಲೆ ಜೈಲಿಗೆ ತಳ್ಳಿತ್ತು.

ಅಷ್ಟು ಮಾತ್ರವಲ್ಲ. ಸರಕಾರದ ವಿರುದ್ಧ ವರದಿ ಮಾಡುವುದು, ಟೀಕಿಸುವುದು, ಹಾಡುವುದು, ಲೇಖನ-ಕವನಗಳನ್ನು ಬರೆಯುವುದನ್ನೂ ಸರಕಾರದ ವಿರುದ್ಧದ ರಾಜದ್ರೋಹವೆಂದು ಪರಿಗಣಿಸಿ ಜೈಲಿಗಟ್ಟಿತು. ಆದರೆ ಇಂದಿರಾ ಸರಕಾರವು ಜನವಿರೋಧಕ್ಕೆ ಮಣಿದು ತುರ್ತುಸ್ಥಿತಿಯನ್ನು ಹಿಂದಕ್ಕೆ ತೆಗೆದುಕೊಂಡು ಪ್ರಜಾತಾಂತ್ರಿಕ ಚುನಾವಣೆ ಘೋಷಿಸಿತು. ಆದರೆ ಕಳೆದ ಎಂಟು ವರ್ಷಗಳಿಂದ ಮೋದಿ ಸರಕಾರದ ಅವಧಿಯಲ್ಲಿ ವಸಾಹತುಷಾಹಿ ಹಾಗೂ ತುರ್ತುಸ್ಥಿತಿಗಳಿಗಿಂತಲೂ ಕರಾಳವಾದ ಅಘೋಷಿತ ಸರ್ವಾಧಿಕಾರಕ್ಕೆ ಭಾರತದ ಜನರು ಗುರಿಯಾಗಿದ್ದಾರೆ. ಮೋದಿಯೆಂದರೆ ಭಾರತ ಎಂದು ಮಾತ್ರವಲ್ಲ, ಮೋದಿ ಎಂದರೆ ಭಗವಂತ ಎಂಬಂತೆ ಉನ್ಮಾದ ಕೆರಳಿಸಲಾಗಿದೆ. ಹಿಂದುತ್ವದ ರಾಜಕಾರಣದ ಮೂಲಕ ಜನರನ್ನು ಧ್ರುವೀಕರಣಗೊಳಿಸಿ, ಹುಸಿ ಶತ್ರುಗಳನ್ನು ತೋರಿಸಿ ಜನರ ಆಕ್ರೋಶವು ಸರಕಾರದ ವಿರುದ್ಧ ತಿರುಗದಂತೆ ಜನರನ್ನು ಅಂತರ್ಯುದ್ಧದಲ್ಲಿ ತೊಡಗಿಸುವ ಹುನ್ನಾರವನ್ನು ಮೋದಿ ಸರಕಾರ ನಡೆಸುತ್ತಿದೆ ಹಾಗೂ ಜನರಿಗಾಗಿ ಧ್ವನಿ ಎತ್ತುವವರನ್ನು ದೇಶದ್ರೋಹಿ/ಭಯೋತ್ಪಾದಕರೆಂದು ಹಣೆಪಟ್ಟಿ ಕಟ್ಟಿ, ಜೈಲಿಗಟ್ಟುವ, ಗುಂಪುದಾಳಿಗಳಲ್ಲಿ ಕೊಂದುಹಾ�

Similar News