ಟಿಪ್ಪುಅಭಿಮಾನಿ, ಸಮಾಜವಾದಿ ಸುಭಾಷ್‌ಚಂದ್ರ ಬೋಸ್ - ಆರೆಸ್ಸೆಸ್‌ಗೆ ದಕ್ಕುವರೇ?

Update: 2023-01-25 02:31 GMT

ಸುಭಾಷ್‌ಚಂದ್ರ ಬೋಸ್‌ರಂತಹ ಅಪ್ಪಟ ಧರ್ಮಾತೀತ, ಕೋಮುವಾದ ವಿರೋಧಿ, ಸಮಾಜವಾದಿ ರಾಷ್ಟ್ರವಾದಿಯನ್ನು ಆರೆಸ್ಸೆಸ್ ಎಂದಿಗೂ ದಕ್ಕಿಸಿಕೊಳ್ಳಲಾಗದು. ದಕ್ಕಿಸಿಕೊಳ್ಳಲು ಬಿಡಬಾರದು. ಅದಕ್ಕಿರುವ ಒಂದು ರಾಜಮಾರ್ಗ ಅವರ ಸುಳ್ಳು ಇತಿಹಾಸವನ್ನು ನೈಜ ಇತಿಹಾಸದ ಮೂಲಕ ಜನರೆದುರು ಬಯಲು ಮಾಡುವುದು. ಇದೂ ಕೂಡ ಒಂದು ಆಂದೋಲನವೇ ಆಗಬೇಕು.


ಜನವರಿ 23-ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ, ಧರ್ಮಾತೀತ- ಸಮಾಜವಾದಿ ಆಶಯಗಳ ನಾಯಕ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಹುಟ್ಟಿದ ದಿನ. ಆದರೆ ಈ ದಿನವನ್ನು ಬ್ರಿಟಿಷರ ಬಿಜೆಪಿ ಸರಕಾರ ‘ಪರಾಕ್ರಮ ದಿನ’ವೆಂದು ಆಚರಿಸುತ್ತಾ ನೈಜ ಸುಭಾಷ್‌ರನ್ನು ಅಪಹರಿಸಲು ಪ್ರಯತ್ನಿಸುತ್ತಿದೆ.

ಪರಾಕ್ರಮಕ್ಕೆ ಶೌರ್ಯ ಎಂಬ ಅರ್ಥವಿದ್ದರೂ ಸಂಘ ಪರಿವಾರದ ಲೆಕ್ಕದಲ್ಲಿ ಅದಕ್ಕೆ ಪರರ ಮೇಲೆ ಆಕ್ರಮಣ ಅರ್ಥಾತ್ ದುರ್ಬಲ ಮತ್ತು ಅಸಹಾಯಕರ ಮೇಲೆ ಆಕ್ರಮಣ ಮಾಡುವುದು ಎಂಬ ಅರ್ಥವೂ ಬಂದುಬಿಟ್ಟಿದೆ. ಸುಭಾಷರು ಸಂಘಪರಿವಾರಿಗರ ಅರ್ಥದ ಪರಾಕ್ರಮಿ ಎಂದೂ ಆಗಿರಲಿಲ್ಲ. ಅವರು ಬಲಿಷ್ಠ ಬ್ರಿಟಿಷರ ವಿರುದ್ಧ ದುರ್ಬಲ ಹಾಗೂ ಶೋಷಿತ ಜನರನ್ನು ಒಟ್ಟುಗೂಡಿಸಿ ಪ್ರಾಣದ ಹಂಗು ತೊರೆದು ಹೋರಾಡಿದ ನಿಜವಾದ ಅರ್ಥದ ವೀರರಾಗಿದ್ದರು.

ಇಂದು ನೇತಾಜಿಯ ಪರಂಪರೆಗೆ ತಾವೇ ವಾರಸುದಾರರೆಂದು ಹೇಳಿಕೊಳ್ಳುತ್ತಿರುವ ಸಂಘ ಪರಿವಾರಿಗರು ಅಂದು ಸುಭಾಷ್‌ರನ್ನು ಸೋಲಿಸಲು ಬ್ರಿಟಿಷರ ಸೇನಾ ಪ್ರಯತ್ನಗಳಿಗೆ ನಿಷ್ಠಾವಂತ ಸೇವೆ ಸಲ್ಲಿಸುತ್ತಿದ್ದರು. ಅಗ ಎರಡನೇ ಮಹಾಯುದ್ಧದಲ್ಲಿ ಸುಭಾಷರು ಬ್ರಿಟಿಷರ ವಿರುದ್ಧ ಸೇನಾತ್ಮಕ ದಾಳಿಗೆ ಜಗತ್ತಿನ ವಿವಿಧೆಡೆ ಸೈನಿಕರನ್ನು ನೋಂದಾಯಿಸಿಕೊಳ್ಳುತ್ತಿದ್ದರೆ, ಸಾವರ್ಕರ್ ನೇತೃತ್ವದಲ್ಲಿ ಈ ಹಿಂದುತ್ವವಾದಿಗಳು ಹಿಂದೂಗಳನ್ನು ಬ್ರಿಟಿಷ್ ಸೈನ್ಯಕ್ಕೆ ಸೇರಿಸುವ ದಲ್ಲಾಳಿ ಕೆಲಸಗಳಲ್ಲಿ ತೊಡಗಿದ್ದರು. ಹಾಗಿದ್ದರೂ ಅವರೇ ಈಗ ನೇತಾಜಿಯನ್ನು ಹಾಡಿಹೊಗಳಲು ಹೊರಟಿರುವ ಹಿಂದೆ ಒಂದು ಸ್ಪಷ್ಟ ದುರುದ್ದೇಶವಿದೆ.

ಮೊದಲನೆಯದು- ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಪರಂಪರೆಯೇ ಇಲ್ಲದ ಸಂಘ ಪರಿವಾರಿಗರು ಅಂದು ಸ್ವಾತಂತ್ರ್ಯ ಹೋರಾಟದಲ್ಲಿ ಸಹಜವಾಗಿ ಇದ್ದ ಎಲ್ಲಾ ಕಾಂಗ್ರೆಸೇತರ ಭಿನ್ನಧಾರೆಗಳ ನಾಯಕರನ್ನು ಹೈಜಾಕ್ ಮಾಡಿ ತಾವೇ ಆ ಧಾರೆಗಳ ವಾರಸುದಾರರು ಎಂದು ಬಿಂಬಿಸಿಕೊಳ್ಳುವುದು.

ಎರಡನೆಯದು- ಸ್ವಾತಂತ್ರ್ಯ ಹೋರಾಟದಲ್ಲಿ ಕಾಂಗ್ರೆಸ್ ಮತ್ತು ಕಾಂಗ್ರೆಸೇತರ ಧಾರೆಗಳಿಗೂ ಹಾಗೂ ಕಾಂಗ್ರೆಸಿನೊಳಗೆ ಗಾಂಧಿ-ನೆಹರೂರಿಗೂ ಮತ್ತು ಇತರರಿಗೂ ಇದ್ದ ಸಹಜ ಮತ್ತು ಆರೋಗ್ಯಪೂರ್ಣ ರಾಜಕೀಯ ಮತ್ತು ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಬಳಸಿಕೊಳ್ಳುವುದು ಮತ್ತು ಅದರ ಸುತ್ತ ಸುಳ್ಳು ಇತಿಹಾಸವನ್ನು ಸೃಷ್ಟಿಸಿ ಗಾಂಧಿ- ನೆಹರೂ ಜೊತೆ ಭಿನ್ನಾಭಿಪ್ರಾಯಗಳಿದ್ದವರೆಲ್ಲಾ ತಮ್ಮ ರೀತಿ ಹಿಂದುತ್ವವಾದಿ ಹಿಂದೂ ರಾಷ್ಟ್ರವಾದಿಗಳೇ ಎಂದು ಅಪಪ್ರಚಾರ ಮಾಡುತ್ತಾ ತಮ್ಮ ಇಂದಿನ ಹಿಂದೂ ರಾಷ್ಟ್ರ ಅಜೆಂಡಾಗೆ ಬಳಸಿಕೊಳ್ಳುವುದು ಸಂಘಪರಿವಾರದ ನೈಜ ಉದ್ಡೇಶವಾಗಿದೆ.

ಈ ದುರುದ್ದೇಶದಿಂದಲೇ ಅವರು ಸುಭಾಷ್ ಚಂದ್ರ ಬೋಸರ ವಿರುದ್ಧ ಗಾಂಧಿ-ನೆಹರೂ ಸಂಚು ಮಾಡಿದರು ಮತ್ತು ಸಾವರ್ಕರ್‌ರಂತಹ ಹಿಂದುತ್ವವಾದಿಗಳು ಅವರ ಪರವಾಗಿ ನಿಂತರು ಎಂಬ ಸುಳ್ಳು-ಪೊಳ್ಳುಗಳಿಂದ ಕೂಡಿದ ಅಪಪ್ರಚಾರದಲ್ಲಿ ತೊಡಗಿದ್ದಾರೆ. ಆ ಮೂಲಕ ಸುಭಾಷ್‌ರಿಗೆ ಅತ್ಯಂತ ದೊಡ್ಡ ಅಪಮಾನ ಮಾಡುತ್ತಿದ್ದಾರೆ.

ತಮ್ಮ ದುರುದ್ದೇಶಗಳನ್ನು ಈಡೇರಿಸಿಕೊಳ್ಳಲು ರಾಜಕೀಯ, ಸಿದ್ಧಾಂತ, ಭಿನ್ನಾಭಿಪ್ರಾಯಗಳಿದ್ದರೂ ಗಾಂಧಿ ನೆಹರೂಗಳ ಬಗ್ಗೆ ಸುಭಾಷ್‌ರಿಗಿದ್ದ ಸದಭಿಪ್ರಾಯಗಳನ್ನು, ಸೆಕ್ಯುಲರ್ ದೃಷ್ಟಿಕೋನಗಳನ್ನು ಮುಚ್ಚಿಡುತ್ತಿದ್ದಾರೆ. ಅದೇ ಸಮಯದಲ್ಲಿ ಸಾವರ್ಕರ್, ಹಿಂದೂ ಮಹಾಸಭಾ, ಮುಸ್ಲಿಮ್ ಲೀಗ್ ಗಳಂಥ ಕೋಮುವಾದಿಗಳ ಬಗ್ಗೆ ಸುಭಾಷ್ ಬಹಿರಂಗವಾಗಿ ವ್ಯಕ್ತಪಡಿಸಿದ್ದ ತಿರಸ್ಕಾರಗಳನ್ನು ಬಚ್ಚಿಡುತ್ತಿದ್ದಾರೆ. ಈ ಲೇಖನದಲ್ಲಿ ಪ್ರಮುಖವಾಗಿ ಸೆಕ್ಯುಲರಿಸಂ, ಹಿಂದೂ-ಮುಸ್ಲಿಮ್ ಐಕ್ಯತೆ, ಸಾವರ್ಕರ್‌ರಂಥವರ ಬಗ್ಗೆ ಸುಭಾಷರಿಗೆ ಇದ್ದ ಅಭಿಪ್ರಾಯಗಳನ್ನು ಮಾತ್ರ ವಿವರಿಸುವ ಪ್ರಯತ್ನವನ್ನು ಪಡಲಾಗಿದೆ. ಇದಕ್ಕೆ ಪ್ರಮುಖವಾಗಿ ಸುಭಾಷ್‌ಅವರೇ ಬರೆದಿರುವ An Indian Piligrim ಮತ್ತು  Indian Struggle ಎಂಬ ಸುದೀರ್ಘ ಗ್ರಂಥಗಳನ್ನು ಹಾಗೂ ಸುಭಾಷ್‌ರ ಮೊಮ್ಮಗ ಹಾಗೂ ವಿದ್ವಾಂಸ ಸುಗತ ಬೋಸ್ ಅವರು ಸುಭಾಷ್ ಅವರು ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ನಡೆಸಿದ ಹೋರಾಟದ ಬಗ್ಗೆ ಬರೆದಿರುವ His Majesty’s Opponent ಪುಸ್ತಕವನ್ನು ಹಾಗೂ ಸಿಸಿರ್ ಕುಮಾರ್ ಬೋಸ್ ಅವರು ಸಂಪಾದಿಸಿರುವ Collected Works Of Netaji ಪುಸ್ತಕಗಳನ್ನು ಆಧರಿಸಲಾಗಿದೆ. ಈ ಎಲ್ಲಾ ಪುಸ್ತಕಗಳು ಅಂತರ್ಜಾಲದಲ್ಲಿ ಲಭ್ಯವಿದ್ದು ಆಸಕ್ತರು ನೇರವಾಗಿ ಅವುಗಳನ್ನು ಓದುವ ಮೂಲಕ ಸಂಘಪರಿವಾರದ ರಾಜಕೀಯ-ಐತಿಹಾಸಿಕ ಕುಕೃತ್ಯಗಳನ್ನು ಅರ್ಥಮಾಡಿಕೊಳ್ಳಬಹುದು.

ಸುಭಾಷ್ ಚಂದ್ರ ಬೋಸರು ಕಾಂಗ್ರೆಸಿನ ಅಗ್ರಗಣ್ಯ ನಾಯಕರಾಗಿದ್ದು ಮಾತ್ರವಲ್ಲದೆ, ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ನಮ್ಮನ್ನಾಳುತ್ತಿದ್ದ ಬ್ರಿಟಿಷರನ್ನು ಹೊಡೆದೋಡಿಸಲು ಆಝಾದ್ ಹಿಂದ್ ಫೌಜನ್ನು ಕಟ್ಟಿ, ಆ ಪ್ರಯತ್ನದಲ್ಲೇ ಹುತಾತ್ಮರಾದವರು. ಇತಿಹಾಸ ಪಠ್ಯಗಳು ಬಂಗಾಳಿಯೇತರ ವಿದ್ಯಾರ್ಥಿಗಳಿಗೆ ಇದಕ್ಕಿಂತ ಹೆಚ್ಚು ತಿಳಿಸಿಲ್ಲ. ಆದರೆ ಸುಭಾಷ್ ಕೋಮು ಸಾಮರಸ್ಯ ಮತ್ತು ಹಿಂದೂ-ಮುಸ್ಲಿಮ್ ಏಕತೆಯ ಅಪ್ರತಿಮ ಪ್ರತಿಪಾದಕರಾಗಿದ್ದರು. ಅತ್ಯುನ್ನತ ದರ್ಜೆಯ ರಾಷ್ಟ್ರವಾದಿಯಾಗಿದ್ದ ಸುಭಾಷ್ ಭವಿಷ್ಯದ ಭಾರತವನ್ನು ಸಮಾಜವಾದಿ ಆದರ್ಶಗಳಲ್ಲಿ ಕಟ್ಟಬೇಕೆಂದು ಕನಸುಕಟ್ಟಿಕೊಂಡಿದ್ದರು. ಇದು ಭಾರತದ ಇತಿಹಾಸದ ಬಗ್ಗೆ ಅವರಿಗಿದ್ದ ದೃಷ್ಟಿಕೋನಗಳಲ್ಲಿ, ಆಝಾದ್ ಹಿಂದ್ ಫೌಜನ್ನು ಅವರು ಕಟ್ಟಿದ ಬಗೆಯಲ್ಲಿ ಮತ್ತು ಸಾವರ್ಕರ್ ಅಂಥವರ ಬಗ್ಗೆ ಇದ್ದ ಸ್ಪಷ್ಟ ತಿರಸ್ಕಾರಗಳಲ್ಲಿ ವ್ಯಕ್ತವಾಗುತ್ತದೆ.

ಟಿಪ್ಪುವಿನ ಹುಲಿಯೇ ಆಝಾದ್ ಹಿಂದ್ ಫೌಜ್‌ನ ಬಾವುಟವಾಗಿತು

ಭಾರತದ ಅಪ್ರತಿಮ ಸ್ವಾತಂತ್ರ್ಯ ಪ್ರೇಮಿ ಟಿಪ್ಪು-ಹೈದರರನ್ನು ಮತಾಂಧ ರಾಕ್ಷಸರನ್ನಾಗಿ ಚಿತ್ರಿಸಲು ಸಂಘಿಗಳು ಹಗಲಿರುಳು ಪ್ರಯತ್ನಿಸುತ್ತಿದ್ದಾರಷ್ಟೆ. ಆದರೆ ಟಿಪ್ಪು-ಹೈದರ್ ಬಗ್ಗೆ ಸುಭಾಷ್ ಚಂದ್ರ ಬೋಸರಿಗೆ ಮತ್ತು ಆಝಾದ್ ಹಿಂದ್ ಫೌಜ್‌ಗೆ ಇದ್ದ ಗೌರವವನ್ನು ನೋಡಿದರೆ ಈ ಸಂಘ ಪರಿವಾರಿಗರು ನಾಲಿಗೆ ಕತ್ತರಿಸಿಕೊಳ್ಳಬೇಕಾಗುತ್ತದೆ. ಸುಭಾಷ್ ಅವರು ಆಝಾದ್ ಹಿಂದ್ ಫೌಜ್‌ನ ಮೊದಲ ಬಾವುಟದಲ್ಲಿ ಟಿಪ್ಪುವಿನ ಹಾರುವ ಹುಲಿಯನ್ನು ಬ್ರಿಟಿಷ್ ವಿರೋಧಿ ಸಮರದ ಸಂಕೇತವನ್ನಾಗಿ ಬಳಸಿಕೊಂಡಿದ್ದರು. ಬಾವುಟವನ್ನು ಬಿಡುಗಡೆ ಮಾಡುತ್ತಾ ಸುಭಾಷ್ ಈ ಹಾರುವ ಹುಲಿ ಟಿಪ್ಪು ಸುಲ್ತಾನನ ಬ್ರಿಟಿಷ್ ವಿರೋಧಿ ಪರಾಕ್ರಮದ ಸಂಕೇತ ಎಂದು ಫೌಜ್‌ನ ಸೈನಿಕರಿಗೆ ವಿವರಿಸಿದ್ದನ್ನು ಅವರೇ ತಮ್ಮ ಆತ್ಮಚರಿತ್ರೆಯಲ್ಲಿ ಬರೆದುಕೊಂಡಿದ್ದಾರೆ. ಅಷ್ಟು ಮಾತ್ರವಲ್ಲ, 1943ರ ಅಕ್ಟೋಬರ್ 21ರಂದು ಆಝಾದ್ ಹಿಂದ್ ಫೌಜ್ ಭಾರತದ ತಾತ್ಕಾಲಿಕ ಸ್ವತಂತ್ರ ಸರಕಾರವನ್ನು ಘೋಷಣೆ ಮಾಡಿತು. ಆ ಘೋಷಣೆಯನ್ನು ಮಾಡುತ್ತಾ ಆಝಾದ್ ಹಿಂದ್ ಫೌಜ್ ಮತ್ತು ನೇತಾಜಿ ಜಗತ್ತಿಗೆ ನೀಡಿದ ಘೋಷಣಾ ಪತ್ರದ ಮೊದಲ ಪ್ಯಾರಾದಲ್ಲೂ ಆಝಾದ್ ಹಿಂದ್ ಫೌಜ್ ದೇಶದ ಹಲವಾರು ನೈಜ ನಾಯಕರ ಜೊತೆಜೊತೆಗೆ ಟಿಪ್ಪು ಮತ್ತು ಹೈದರ್ ಅವರನ್ನೂ ಕೂಡ ಕೃತಜ್ಞತೆಯಿಂದ ನೆನೆಯುತ್ತದೆ. ಇದನ್ನು ಓದಿದರೆ ಸಾಕು, ಸುಭಾಷ್‌ರನ್ನು ಆರೆಸ್ಸೆಸ್ ದಕ್ಕಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅರ್ಥವಾಗುತ್ತದೆ.

Proclamation Of The Provisional Government Of Aazd Hind ಆ ಘೋಷಣಾ ಪತ್ರ ಹೀಗೆ ಶುರುವಾಗುತ್ತದೆ:

 ‘‘ಬಂಗಾಳದಲ್ಲಿ 1757ರಲ್ಲಿ ಬ್ರಿಟಿಷರ ಕೈಯಲ್ಲಿ ಮೊತ್ತ ಮೊದಲ ಪರಾಜಯವನ್ನು ಅನುಭವಿಸಿದ ನಂತರ ಭಾರತದ ಜನರು ನೂರು ವರ್ಷಗಳ ಕಾಲ ಬ್ರಿಟಿಷರ ವಿರುದ್ಧ ನಿರಂತರ ಸಮರ ನಡೆಸುತ್ತಲೇ ಬಂದಿದ್ದಾರೆ. ಈ ಅವಧಿಯು ಭಾರತದ ಜನರು ತೋರಿದ ಅಪ್ರತಿಮ ಸಾಹಸ, ನಿಸ್ವಾರ್ಥ ತ್ಯಾಗಗಳಿಂದ ತುಂಬಿದೆ ಮತ್ತು ಈ ಆವಧಿಯ ಭಾರತದ ಇತಿಹಾಸದಲ್ಲಿ ಬಂಗಾಳದ ಸಿರಾಜುದ್ದೌಲ ಮತ್ತು ಮೋಹನ್ ಲಾಲ್, ದಕ್ಷಿಣ ಭಾರತದ ಹೈದರ್ ಅಲಿ, ಟಿಪ್ಪುಸುಲ್ತಾನ್, ವೇಲು ಥಂಪು..ಇನ್ನಿತರರ ಹೆಸರುಗಳನ್ನು ಸುವರ್ಣಾಕ್ಷರಗಳಲ್ಲಿ ಕೊರೆದಿಡಲಾಗಿದೆ...’’

ಆಸಕ್ತರು ಸುಭಾಷರು ಮಾಡಿದ ಆ ಘೋಷಣೆಯ ಪೂರ್ಣ ಪಠ್ಯ ಹಾಗೂ ಚಿತ್ರವನ್ನು ಈ ವೆಬ್ ವಿಳಾಸದಲ್ಲಿ ಓದಬಹುದು:

https://www.roots.gov.sg/Collection-Landing/listing/1278996

ಹಿಂದೂ-ಮುಸ್ಲಿಮ್ ಐಕ್ಯತೆ- ಆಝಾದ್ ಹಿಂದ್ ಫೌಜ್‌ನ ಅಡಿಪಾಯ

ದೇಶದ ಏಕಮಾತ್ರ ಭಾಷೆಯನ್ನಾಗಿ ಬ್ರಾಹ್ಮಣೀಯ ಹಿಂದಿಯನ್ನು ಮೋದಿ ಸರಕಾರ ಹೇರಲು ಹೊರಟಿದೆಯಷ್ಟೆ. ಅದಕ್ಕೆ ತದ್ವಿರುದ್ಧವಾಗಿ ಸುಭಾಷ್‌ರ ಆಝಾದ್ ಹಿಂದ್ ಫೌಜ್‌ನ ಅಧಿಕೃತ ಭಾಷೆ ಉತ್ತರ ಭಾರತದ ಜನಸಾಮಾನ್ಯರು ಬಳಸುತ್ತಿದ್ದ ಉರ್ದು-ಹಿಂದೂಸ್ಥಾನಿಯಾಗಿತ್ತು ಹಾಗೂ ದಕ್ಷಿಣ ಭಾರತದ ಸೈನಿಕರಿಗೆ ಅರ್ಥವಾಗಲೆಂದು ಇಂಗ್ಲಿಷ್ ಬಳಸಲಾಗುತ್ತಿತ್ತು. ಫೌಜ್‌ನ ಘೋಷವಾಕ್ಯವೇ ಉರ್ದುವಿನಲ್ಲಿ ಹೀಗೆ ಬರೆಯಲ್ಪಟ್ಟಿತ್ತು: ‘‘ಇತ್ಮದ್ (ವಿಶ್ವಾಸ), ಇತ್ತೆಫಾಕ್ (ಐಕ್ಯತೆ) ಮತ್ತು ಖುರ್ಬಾನಿ (ತ್ಯಾಗ).’’

1857ರಲ್ಲಿ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕೊನೆಯ ಮೊಗಲ್ ಚಕ್ರವರ್ತಿ ಬಹಾದ್ದೂರ್ ಶಾ ಝಫರ್ ಅವರ ನೇತೃತ್ವದಲ್ಲಿ ಭಾರತದ ಪಡೆಗಳು ದಿಲ್ಲಿ ಚಲೋಗೆ ಕರೆ ಕೊಟ್ಟಿತ್ತಷ್ಟೆ. 1943ರ ಸೆಪ್ಟಂಬರ್‌ನಲ್ಲಿ ಕೂಡ ಸುಭಾಷ್‌ರ ಆಝಾದ್ ಹಿಂದ್ ಫೌಜ್ ಬ್ರಿಟಿಷರನ್ನು ಭಾರತದಿಂದ ಓಡಿಸಲು ಬರ್ಮಾದ (ಈಗಿನ ಮ್ಯಾನ್ಮಾರ್) ರಂಗೂನ್‌ನಿಂದ ಹೊರಟಿತು. 1857ರ ಪ್ರಥಮ ಬಂಡಾಯದ ನೆನಪಿನಲ್ಲಿ ಸುಭಾಷ್ ಈ ಮಹಾ ಪ್ರಸ್ಥಾನಕ್ಕೆ ‘‘ದಿಲ್ಲಿ ಚಲೋ’’ ಎಂದು ಕರೆ ಕೊಟ್ಟರು. ಅಷ್ಟು ಮಾತ್ರವಲ್ಲ, 1943ರ ಸೆಪ್ಟಂಬರ್ 26ರಂದು ಬಹದ್ದೂರ್ ಶಾ ಝಫರ್ ಅವರ ಸಮಾಧಿಯ ಬಳಿ ಆಝಾದ್ ಹಿಂದ್ ಫೌಜ್‌ನ ವಿಶೇಷ ಪ್ರಾರ್ಥನಾ ಸಭೆಯನ್ನು ಏರ್ಪಡಿಸಲಾಗಿತ್ತು.

 ಸುಭಾಷ್‌ರ ಮೊಮ್ಮಗ ಸುಗತ ಬೋಸ್ ತಮ್ಮ ವಿದ್ವತ್ಪೂರ್ಣ ಕೃತಿಯಲ್ಲಿ ವಿವರಿಸಿರುವಂತೆ ಆಝಾದ್ ಫೌಜ್‌ನಲ್ಲಿ ಮುಸ್ಲಿಮ್ ಸೈನಿಕರ ಪ್ರಮಾಣ ಇತರರಿಗಿಂತ ಸ್ವಲ್ಪಹೆಚ್ಚಿನ ಪ್ರಮಾಣದಲ್ಲೇ ಇತ್ತು. ಸುಭಾಷ್‌ರ ಅತ್ಯಂತ ಸಮೀಪವರ್ತಿಗಳಲ್ಲೂ ಮುಸ್ಲಿಮರು ಹೆಚ್ಚಾಗಿದ್ದರು. 1843ರಲ್ಲಿ ಸುಭಾಷ್‌ರು ಕೈಗೊಳ್ಳಬೇಕಾಗಿ ಬಂದ ರಹಸ್ಯ ಸಬ್ ಮೆರೀನ್ ಸಾಹಸ ಪ್ರಯಾಣದಲ್ಲಿ ಅವರ ಜೊತೆಗೆ ಪ್ರಯಾಣ ಮಾಡಿದ ಏಕೈಕ ಸಹವರ್ತಿ ದಕ್ಷಿಣದ ಹೈದರಾಬಾದಿನ ಆಬಿದ್ ಹಸನ್. ಇಡೀ ಯೂರೋಪ್ ಮತ್ತು ಏಶ್ಯ ಪ್ರವಾಸದುದ್ದಕ್ಕೂ ಅವರೇ ಸುಭಾಷರ ನಿಕಟ ಸಹಾಯಕರಾಗಿದ್ದರು.

ಆಝಾದ್ ಹಿಂದ್ ಫೌಜ್‌ನ ಮೊದಲ ಡಿವಿಜನ್‌ನ ಕಮಾಂಡರ್ ಆಗಿದ್ದವರು ಮುಹಮ್ಮದ್ ಜಮಾನ್ ಕಮಾನಿ. ಭಾರತದ ತ್ರಿವರ್ಣ ಧ್ವಜವನ್ನು ಮೊತ್ತ ಮೊದಲು ಮಣಿಪುರದ ಇಂಫಾಲದಲ್ಲಿ ಹಾರಿಸಿದ್ದು ಫೌಜ್‌ನ ಅಧಿಕಾರಿ ಶೌಕತ್ ಮಲಿಕ್. ದುರಂತಕ್ಕೀಡಾದ ಅವರ ಕೊನೆಯ ಪಯಣದಲ್ಲಿ ಜೊತೆಗೆ ಹುತಾತ್ಮರಾದವರು ಹಬೀಬುರ್ ರಹಮಾನ್. ಆದರೆ ಈ ಬಂಡಾಯವು ವಿಫಲವಾಗಿ ಫೌಜ್‌ನ ಸೈನಿಕರನ್ನು ಬ್ರಿಟಿಷರು ಸೆರೆ ಹಿಡಿದರು. ಅವರ ಮೇಲೆ ಬ್ರಿಟಿಷರು ರಾಜದ್ರೋಹದ ಆಪಾದನೆ ಹೊರಿಸಿ ವಿಚಾರಣೆ ನಡೆಸಿದರು. ಆಗ ಸಾಂಕೇತಿಕವಾಗಿ ಕೆಂಪುಕೋಟೆಯಲ್ಲಿ ವಿಚಾರಣೆಗೊಳಪಟ್ಟ ಮೂವರು ಆಝಾದ್ ಹಿಂದ್ ಫೌಜ್‌ನ ಸೈನಿಕರ ಹೆಸರು: ಪ್ರೇಮ್ ಸೆಹಗಲ್ ಎಂಬ ಹಿಂದೂ, ಶಾ ನವಾಝ್ ಖಾನ್ ಎಂಬ ಮುಸ್ಲಿಮ್ ಮತ್ತು ಗುರುಭಕ್ಶ್ ಸಿಂಗ್ ಧಿಲ್ಲೋನ್ ಎಂಬ ಸಿಖ್. ಇದೂ ಕೂಡ ಸಂಕೇತಿಕವಾಗಿ ಸುಭಾಷರ ಫೌಜ್‌ನಲ್ಲಿ ಪಾಲಿಸುತ್ತಿದ್ದ ಧರ್ಮಾತೀತ ದೇಶಪ್ರೇಮಕ್ಕೆ ಸಂಕೇತವಾಗಿತ್ತು. ((His Majesty’s Opponent, p. 4)

ಭಾರತದ ಇತಿಹಾಸದ ಹಿಂದೂ-ಮುಸ್ಲಿಮ್ ವಿಭಜನೆ ತಿರಸ್ಕರಿಸಿದ್ದ ನೇತಾಜಿ

ಹಿಂದುತ್ವವಾದಿ ಸಂಘಪರಿವಾರಿಗರು ಭಾರತದ ಇತಿಹಾಸವನ್ನು 1,200 ವರ್ಷಗಳ ಆಕ್ರಮಣಕ್ಕೆ ಸಿಲುಕಿದ್ದ ಇತಿಹಾಸವೆಂದು ತಮ್ಮ ಕೋಮು ಧ್ರುವೀಕರಣದ ದುರುದ್ದೇಶಕ್ಕೆ ತಕ್ಕವಾಗಿ ಬಣ್ಣಿಸುತ್ತಾರೆ. ಹೀಗಾಗಿ ಬ್ರಿಟಿಷ್ ಪೂರ್ವದ ಮೊಗಲ್ ಆಳ್ವಿಕೆ ಹಾಗೂ ಆ ಹಿಂದಿನ ಮುಸ್ಲಿಮ್ ದೊರೆಗಳು ಆಳಿದ ಇಡೀ ಕಾಲಘಟ್ಟವನ್ನು ಮುಸ್ಲಿಮ್ ದಾಳಿಕೋರರ ಕೆಳಗೆ ಹಿಂದೂಗಳು ನಲುಗಿದ ಇತಿಹಾಸವೆಂದು ಬಣ್ಣಿಸುತ್ತಾರೆ. ಆದರೆ ಸುಭಾಷರು ಈ ರೀತಿ ಭಾರತದ ಇತಿಹಾಸವನ್ನು ಕೋಮುವಾದೀಕರಿಸಿ ನೋಡುವ ನೋಟ ಕೊಟ್ಟಿದ್ದೇ ಬ್ರಿಟಿಷರು,. ಅದು ಭಾರತವನ್ನು ಹಿಂದೂ-ಮುಸ್ಲಿಮ್ ಎಂದು ಒಡೆದಾಳುವ ತಂತ್ರದ ಭಾಗವಾಗಿ ಎಂದು ತಿರಸ್ಕರಿಸುತ್ತಾರೆ. ಹಾಗೂ:

‘‘ಬ್ರಿಟಿಷರು ಭಾರತಕ್ಕೆ ಬರುವ ಮುಂಚಿನ ಭಾರತದ ರಾಜಕೀಯವನ್ನು ‘ಮುಸ್ಲಿಮ್ ಆಳ್ವಿಕೆ’ಯೆಂದು ಕರೆಯುವುದು ಒಂದು ವಿರೋಧಾಭಾಸವೇ ಸರಿ. ನಾವು ದಿಲ್ಲಿಯ ಮೊಗಲ್ ದೊರೆಗಳ ಬಗ್ಗೆ ಅಥವಾ ಬಂಗಾಳದ ಮುಸ್ಲಿಮ್ ದೊರೆಗಳ ಬಗ್ಗೆ ಮಾತನಾಡುವಾಗ ಎರಡು ಕಡೆ ಹಿಂದೂ-ಮುಸ್ಲಿಮರಿಬ್ಬರೂ ಜೊತೆಗೂಡಿ ಆಡಳಿತವನ್ನು ನಡೆಸುತ್ತಿದ್ದುದನ್ನು ಕಾಣುತ್ತೇವೆ. ಮುಸ್ಲಿಮ್ ದೊರೆಗಳ ಆಡಳಿತದಲ್ಲಿ ಹಲವಾರು ಸೇನಾಧಿಕಾರಿಗಳು ಮತ್ತು ಪ್ರಮುಖ ಮಂತ್ರಿಗಳು ಹಿಂದೂಗಳೇ ಆಗಿರುತ್ತಿದ್ದರು. ಹಿಂದೂ ದಂಡನಾಯಕರ ಸಹಾಯದಿಂದಲೇ ಮೊಗಲ್ ಆಡಳಿತ ದೃಢಗೊಂಡಿತು. 1757ರ ಪ್ಲಾಸಿ ಕದನದಲ್ಲಿ ಬ್ರಿಟಿಷರು ಸೋಲಿಸಿದ ಸಿರಾಜುದ್ದೌಲ್‌ನ ದಂಡನಾಯಕ ಹಿಂದೂ ಆಗಿದ್ದ ಮತ್ತು 1857ರಲ್ಲಿ ಹಿಂದೂ-ಮುಸ್ಲಿಮರು ಜೊತೆಗೂಡಿ ಬ್ರಿಟಿಷರ ವಿರುದ್ಧ ಬಂಡಾಯ ಹೂಡಿದ್ದು ಮುಸ್ಲಿಮ್ ದೊರೆ ಬಹದ್ದೂರ್ ಶಾನ ಬಾವುಟದಡಿಯಲ್ಲಿ.’’

(An Indian Piligrim, p. 13 )

ಕೋಮುವಾದಿ ಹಿಂದೂಸಭಾ ಮತ್ತು ಮುಸ್ಲಿಮ್‌ ಲೀಗ್‌ಗಳ ಬಗ್ಗೆ ಸುಭಾಷರ ಆಕ್ರೋಶ 

 ಭಾರತದ ಸ್ವಾತಂತ್ರ್ಯ ಹೋರಾಟದ ಅವಧಿಯಲ್ಲಿ ಬ್ರಿಟಿಷರ ಪರವಾಗಿ ಕೆಲಸ ಮಾಡುತ್ತಿದ್ದ ಹಾಗೂ ಜನರಲ್ಲಿ ಒಡಕುಂಟು ಮಾಡುತ್ತಿದ್ದ ಹಿಂದೂಮಹಾಸಭಾ ಮತ್ತು ಮುಸ್ಲಿಮ್ ಲೀಗ್‌ಗಳ ಬಗ್ಗೆ ಸುಭಾಷರಿಗೆ ಅಪಾರ ತಿರಸ್ಕಾರವಿತ್ತು. ಅವರು 1938ರಲ್ಲಿ ಕಾಂಗ್ರೆಸ್‌ನ ಅಧ್ಯಕ್ಷರಾಗಿ ಆಯ್ಕೆಯಾದಾಗ ಈ ವಿಷಯದ ಬಗ್ಗೆ ವಿಶೇಷ ಒತ್ತುಕೊಟ್ಟು ಮಾತಾಡಿದ್ದರು: ‘‘ನಾವು ಹಿಂದೂ ರಾಜ್ ಎಂಬ ಮಾತುಗಳನ್ನು ಅಗಾಗ ಕೇಳುತ್ತಿರುತ್ತೇವೆ. ಇದರಿಂದ ಯಾವ ಪ್ರಯೋಜನವೂ ಇಲ್ಲ. ಭಾರತದ ಕಾರ್ಮಿಕ ವರ್ಗವು ಎದುರಿಸುತ್ತಿರುವ ಸಮಸ್ಯೆಗಳನ್ನು ಈ ಕೋಮುವಾದಿ ಸಂಘಟನೆಗಳು ಬಗೆಹರಿಸಬಲ್ಲವೇ? ಇಂತಹ ಯಾವುದೇ ಸಂಘಟನೆಗಳ ಬಳಿ ನಿರುದ್ಯೋಗ ಮತ್ತು ಬಡತನದ ಸಮಸ್ಯೆಗಳ ಬಗ್ಗೆ ಉತ್ತರವಿದೆಯೇ?’’ ಎಂದು ಆಕ್ರೋಶದಿಂದ ಕೇಳಿದ್ದರು.

ಅಷ್ಟು ಮಾತ್ರವಲ್ಲ ಹಿಂದೂ ಮಹಾ ಸಭಾ ಮತ್ತು ಮುಸ್ಲಿಮ್ ಲೀಗಿನ ಸದಸ್ಯರಿಗೆ ಕಾಂಗ್ರೆಸ್‌ನ ಸದಸ್ಯತ್ವವನ್ನು ನಿಷೇಧಿಸಿದ್ದರು. ಏಕೆಂದರೆ,

 ‘‘ಜಿನ್ನಾ ಅವರಿಗೆ ಇರುವ ಆಲೋಚನೆ ಎಂದರೆ ಬ್ರಿಟಿಷರ ಸಹಾಯದೊಂದಿಗೆ ತನ್ನ ಕನಸಾದ ಪಾಕಿಸ್ತಾನವನ್ನು ಹೇಗೆ ಪಡೆದುಕೊಳ್ಳಬಹುದು ಎಂಬುದೊಂದೇ. ಕಾಂಗ್ರೆಸ್‌ನ ಜೊತೆ ಸೇರಿ ಭಾರತದ ಬಿಡುಗಡೆಗೆ ಜಂಟಿ ಹೋರಾಟ ಮಾಡುವ ಯೋಚನೆಯೇ ಅವರಿಗಿಲ್ಲ.’’ ‘‘ಮತ್ತೊಂದು ಕಡೆ ಸಾವರ್ಕರ್‌ಗೆ ಬ್ರಿಟಿಷರ ಜೊತೆ ಕೈಗೂಡಿಸಿ ಬ್ರಿಟಿಷ್ ಸೈನ್ಯಕ್ಕೆ ಸೇರಿಕೊಂಡು ಹಿಂದೂಗಳಿಗೆ ಸೈನಿಕ ತರಬೇತಿ ಪಡೆದುಕೊಳ್ಳುವುದೊಂದೇ ಉದ್ದೇಶವಾಗಿದೆ. ಇವರಿಬ್ಬರನ್ನು ಭೇಟಿಯಾದ ನಂತರ ಭಾರತ ಸ್ವಾತಂತ್ರ್ಯಕ್ಕಾಗಿ ಇವರಿಂದ ಏನನ್ನೂ ನಿರೀಕ್ಷೆ ಮಾಡಲು ಸಾಧ್ಯವಿಲ್ಲ’’ ಎಂಬ ತೀರ್ಮಾನಕ್ಕೆ ಬಂದಿದ್ದೇನೆ ಎಂದು ಘೋಷಿಸಿದ್ದರು.

(The Indian Struggle p. 344)

ಹೀಗೆ ಸುಭಾಷ್ ಚಂದ್ರ ಬೋಸ್‌ರ ಬರಹಗಳನ್ನು ಮತ್ತು ಅವರ ಬಗ್ಗೆ ಬರೆದಿರುವ ವಿದ್ವತ್ಪೂರ್ಣ ಕೃತಿಗಳನ್ನು ಓದಿದರೂ ಈ ಸಂಘ ಪರಿವಾರಿಗ ಫ್ಯಾಶಿಸ್ಟರು ಸುಭಾಷ್ ಚಂದ್ರ ಬೋಸರ ಬಗ್ಗೆ ಕೊಡುತ್ತಿರುವ ಚಿತ್ರಣ ಎಷ್ಟು ದುರುದ್ದೇಶಪೂರಿತವಾಗಿದೆ ಎಂಬುದು ಸ್ಪಷ್ಟವಾಗಿದೆ. ಬ್ರಿಟಿಷರ ಗುಲಾಮಗಿರಿ, ಕಾರ್ಪೊರೇಟ್ ಬಂಡವಾಳಿಗರ ಸೇವೆ ಮತ್ತು ಕೋಮುದ್ವೇಷದ ವಿಚ್ಛಿದ್ರಕಾರಿ ಚರಿತ್ರೆ ಬಿಟ್ಟರೆ ದೇಶ ಕಟ್ಟಿದ ಮತ್ತು ದೇಶಕ್ಕಾಗಿ ಹೋರಾಡಿದ ಚರಿತ್ರೆಯಿಲ್ಲದ ಈ ಫ್ಯಾಶಿಸ್ಟರು ಈಗ ಕಾಂಗ್ರೆಸೇತರ ಮತ್ತು ಗಾಂಧಿ-ನೆಹರೂರವರ ಜೊತೆ ಭಿನ್ನಾಭಿಪ್ರಾಯವಿದ್ದ ನಾಯಕರನ್ನೆಲ್ಲಾ ಹೈಜಾಕ್ ಮಾಡುತ್ತಿದ್ದಾರೆ ಹಾಗೂ ಅವರೂ ಕೂಡ ತಮ್ಮಂತೆ ಹಿಂದುತ್ವವಾದಿಗಳೇ ಎಂಬ ಅಭಿಪ್ರಾಯ ಬರುವ ಚಿತ್ರಣ ನೀಡುತ್ತಾ ಆ ನಾಯಕರಿಗೆ, ಈ ದೇಶಕ್ಕೆ, ಈ ದೇಶದ ಇತಿಹಾಸಕ್ಕೆ ಅವಮಾನಮಾಡುತ್ತಿದ್ದಾರೆ. ಸುಭಾಷ್ ಚಂದ್ರ ಬೋಸ್‌ರಂತಹ ಅಪ್ಪಟ ಧರ್ಮಾತೀತ, ಕೋಮುವಾದ ವಿರೋಧಿ, ಸಮಾಜವಾದಿ ರಾಷ್ಟ್ರವಾದಿಯನ್ನು ಆರೆಸ್ಸೆಸ್ ಎಂದಿಗೂ ದಕ್ಕಿಸಿಕೊಳ್ಳಲಾಗದು. ದಕ್ಕಿಸಿಕೊಳ್ಳಲು ಬಿಡಬಾರದು. ಅದಕ್ಕಿರುವ ಒಂದು ರಾಜಮಾರ್ಗ ಅವರ ಸುಳ್ಳು ಇತಿಹಾಸ ವನ್ನು ನೈಜ ಇತಿಹಾಸದ ಮೂಲಕ ಜನರೆದುರು ಬಯಲು ಮಾಡುವುದು. ಇದೂ ಕೂಡ ಒಂದು ಆಂದೋಲನವೇ ಆಗಬೇಕು. ಅಲ್ಲವೇ?

Similar News