‘19.20.21’ರ ಹಿನ್ನೆಲೆಯಲ್ಲಿ 10,552ರ ಬಗ್ಗೆ

ಭಾಗ -3

Update: 2023-03-10 05:40 GMT

ಭಾಗ -3

2019ರಲ್ಲಿ ಎರಡನೇ ಬಾರಿ ಮೋದಿ ಸರಕಾರ ಅಧಿಕಾರಕ್ಕೆ ಬಂದಮೇಲೆ UAPA ಅಡಿ ಯಾವುದೇ ಟೆರರಿಸ್ಟ್ ಸಂಘಟನೆ ಅಥವಾ ಗ್ಯಾಂಗಿನ ಸದಸ್ಯನಲ್ಲದ ಬಿಡಿವ್ಯಕ್ತಿನ್ನು ಬಂಧಿಸುವಂತಹ ಘೋರ ತಿದ್ದುಪಡಿಯನ್ನು ತಂದಿತು ಹಾಗೂ NIA ಅಡಿ ಬೇರೆ ಯಾವುದಾದರೂ ರಾಜ್ಯದಲ್ಲಿ ಆಸ್ತಿಪಾಸ್ತಿಗಳನ್ನು ಜಪ್ತಿ ಮಾಡುವಾಗ ಆ ರಾಜ್ಯದ ಡಿಜಿಪಿಗೆ ತಿಳಿಸುವ ಅಗತ್ಯವಿಲ್ಲವೆಂಬ ಅಧಿಕಾರವನ್ನು ನೀಡಿತು.

ಇದರ ಬಗ್ಗೆ ಸಂಸತ್ತಿನಲ್ಲಿ ಚರ್ಚೆ ನಡೆದಾಗ ಈ ತಿದ್ದುಪಡಿಯನ್ನು ಕಾಂಗ್ರೆಸ್ ಲೋಕಸಭೆಯಲ್ಲಿ ವಿರೋಧಿಸಿದರೂ ರಾಜ್ಯ ಸಭೆಯಲ್ಲಿ ಬೆಂಬಲಿಸಿತು. ಎಡಪಕ್ಷಗಳು, ಟಿಎಂಸಿ, ಡಿಎಂಕೆ ಮತ್ತು ಆರ್‌ಜೆಡಿಗಳನ್ನು ಬಿಟ್ಟರೆ ಬಿಎಸ್‌ಪಿ, ಎಸ್‌ಪಿ, ಆಮ್ ಆದ್ಮಿಯಂಥ ಪ್ರಾದೇಶಿಕ ಪಕ್ಷಗಳೂ ಇಂತಹ ಅತ್ಯಂತ ಫೆಡರಲ್ ವಿರೋಧಿ ಹಾಗೂ ಮಾನವ ಹಕ್ಕು ವಿರೋಧಿ ತಿದ್ದುಪಡಿಯನ್ನು ಬೆಂಬಲಿಸಿದವು.

ಯುಪಿಎ ಸರಕಾರದ ಕನಿಷ್ಠ ಸಾಮಾನ್ಯ ಕಾರ್ಯಕ್ರಮದಲ್ಲಿ ಭಯೋತ್ಪಾದನಾ ನಿಗ್ರಹ ಕಾಯ್ದೆಯನ್ನು ಬಿಜೆಪಿ ಅಮಾಯಕರನ್ನು ಹಾಗೂ ಅಲ್ಪಸಂಖ್ಯಾತರನ್ನು ಬಲಿಹಾಕಲು ಬಳಸಿಕೊಡ ರೀತಿಯ ಬಗ್ಗೆ ಸ್ಪಷ್ಟವಾದ ಖಂಡನೆಗಳಿದ್ದರೂ, ಕಾಂಗ್ರೆಸ್ ಪಕ್ಷ ತನ್ನ ಹೊಸ UAPA ಮಸೂದೆಯನ್ನು ಸಮರ್ಥಿಸಿಕೊಳ್ಳಲು ಕೊಟ್ಟ ಸಮರ್ಥನೆಗಳು ಬಿಜೆಪಿಗಿಂತ ಯಾವುದೇ ರೀತಿಯಲ್ಲೂ ಭಿನ್ನವಿರಲಿಲ್ಲ.

ಎಡಪಕ್ಷಗಳು ಈ ಸರಕಾರಕ್ಕೆ ಬಾಹ್ಯ ಬೆಂಬಲ ಕೊಟ್ಟ ಹಾಗೂ ಯುಪಿಎ ಸರಕಾರ ಸ್ಥಾಪನೆಯಾಗಲು ಕಾರಣವಾದ ಪ್ರಮುಖ ಘಟಕಗಳು. ಆದರೆ ಯುಪಿಎಯ ಸಂಯೋಜನಾ ಸಭೆಯಲ್ಲಿ ಈ ಬಗ್ಗೆ ಎಡಪಕ್ಷಗಳ ಅಭಿಪ್ರಾಯವನ್ನು ಕೇಳಿದ ಶಾಸ್ತ್ರ ಮಾಡಿದ ಕಾಂಗ್ರೆಸ್ ಪಕ್ಷ ಸಂಸತ್ತಿನಲ್ಲಿ ಎರಡು ಪ್ರಮುಖ ಎಡಪಕ್ಷಗಳು ಮುಂದಿಟ್ಟ ಯಾವುದೇ ಸಲಹೆಗಳನ್ನು ಒಪ್ಪಿಕೊಳ್ಳುವುದಿಲ್ಲ. ಕನಿಷ್ಠ ಮಸೂದೆಯನ್ನು ಸಂಸತ್ತಿನ ವಿಷಯ ಸಮಿತಿಯ ಪರಿಶೀಲನೆಗೆ ಒಪ್ಪಿಸಬೇಕೆಂಬ ಒತ್ತಾಯವನ್ನು ಸರಕಾರ ಒಪ್ಪಿಕೊಳ್ಳುವುದಿಲ್ಲ.

ಆದರೂ ತಮ್ಮ ಎಲ್ಲಾ ಕಾಳಜಿಗಳನ್ನು ಕಾಯ್ದೆಗೆ ನಿಯಮಾವಳಿಗಳನ್ನು ರಚಿಸುವಾಗ ಗಮನಕ್ಕೆ ತೆಗೆದುಕೊಳ್ಳಲಾ ಗುವುದು ಎಂದು ಸರಕಾರ ಕೊಟ್ಟ ಭರವಸೆಯನ್ನು ಎಡ ಹಾಗೂ ಇನ್ನಿತರ ಪಕ್ಷಗಳು ಒಪ್ಪಿಕೊಂಡವು. ನಂತರದಲ್ಲಿ UAPAಯಂಥ ಕರಾಳ ಕಾಯ್ದೆ ಸಂಸದೀಯ ಉಸ್ತುವಾರಿಯೂ ಇಲ್ಲದ ಶಾಶ್ವತ ಕಾಯ್ದೆಯಾಗಿ ಸರ್ವಾಧಿಕಾರಿ ಸರಕಾರದ ಹಾಗೂ ಪೊಲೀಸರ ಬತ್ತಳಿಕೆಯನ್ನು ಸೇರಿಕೊಂಡುಬಿಟ್ಟಿತು.

ಆಸಕ್ತರು ಆಗ ನಡೆದ ಸಂಸದೀಯ ಚರ್ಚೆಯನ್ನು ಈ ವೆಬ್ ವಿಳಾಸದಲ್ಲಿ ಗಮನಿಸಬಹುದು:

https://eparlib.nic.inbitstream/ 123456789/730920/1/864.pdf

2008ರ ತಿದ್ದುಪಡಿಗಳು-ಪ್ರಜಾತಂತ್ರದ ಕಗ್ಗೊಲೆಗೆ ರಾಜಮಾರ್ಗ

2008ರ ನವೆಂಬರ್ 26 ರಂದು ಪಾಕಿಸ್ತಾನದಿಂದ ನುಸುಳಿ ಬಂದ ಉಗ್ರರು ಮುಂಬೈ ಮೇಲೆ ದಾಳಿ ಮಾಡಿ 150ಕ್ಕೂ ಹೆಚ್ಚು ಜನ ಬಲಿಯಾದದ್ದು ಈ ಕಾಯ್ದೆಯನ್ನು ಬಳಸಿಕೊಂಡು ಜನರನ್ನು ಸದೆಬಡಿಯಲು ಬೇಕಾದ ಉಗ್ರಬಲವನ್ನು ತಂದುಕೊಟ್ಟಿತು!.

ಇಂತಹ ಭಯೋತ್ಪಾದನೆಯನ್ನು ದೇಶ ಒಗ್ಗಟ್ಟಾಗಿ ಎದುರಿಸುವ ಅಗತ್ಯವಿತ್ತು. ಆದರೆ ಇದಾದ ಕೇವಲ ಆರು ತಿಂಗಳ ನಂತರ 2009ರಲ್ಲಿ ಸಾರ್ವತ್ರಿಕ ಚುನಾವಣೆ ಇದ್ದಿದ್ದರಿಂದ ಬಿಜೆಪಿ ಈ ದುರಂತವನ್ನೂ ತನ್ನ ಕೋಮುವಾದಿ ರಾಜಕಾರಣಕ್ಕೆ ದಾಳವಾಗಿ ಬಳಸಿಕೊಂಡಿತು. ಮುಂಬೈ ದಾಳಿಯನ್ನು ನೆಪವಾಗಿರಿಸಿಕೊಂಡು ಈ ದೇಶದ ಎಲ್ಲಾ ಮುಸ್ಲಿಮರನ್ನು ಅನುಮಾನದಿಂದ ನೋಡುವ ಹಾಗೂ ಇಸ್ಲಾಮ್ ಆಚರಣೆಗಳನ್ನೂ ಉಗ್ರವಾದದ ಬೆಂಬಲವೆಂದು ನೋಡುವ ಕಥನವನ್ನೂ ಹರಿಬಿಟ್ಟಿತು ಹಾಗೂ ಕಾಂಗ್ರೆಸ್ ಇಂತಹ ಉಗ್ರವಾದವನ್ನು ಹತ್ತಿಕ್ಕಲು ಅಸಮರ್ಥ ಎಂಬ ಕಥನವನ್ನೂ ಹುಟ್ಟುಹಾಕಿತು.

ಈ ಕೋಮುವಾದಿ ದಾಳಿಯನ್ನು ರಾಜಕೀಯವಾಗಿ ಮತ್ತು ಸೈದ್ಧಾಂತಿಕವಾಗಿ ಶಕ್ತಿಯುತವಾದ ಪ್ರಜಾತಾಂತ್ರಿಕ ನೆಲೆಯಿಂದ ಎದುರಿಸುವ ಸಾಂವಿಧಾನಿಕ ಬದ್ಧತೆಯನ್ನಾಗಲೀ, ಪ್ರಾಮಾಣಿಕತೆಯಾಗಲೀ ತೋರದ ಕಾಂಗ್ರೆಸ್ ಪಕ್ಷ ಬಿಜೆಪಿಗಿಂತಲೂ ತಾನು ಹೆಚ್ಚು ರಾಷ್ಟ್ರಭಕ್ತ ಎಂದು ಸಾಬೀತು ಮಾಡಲು UAPA ಕಾಯ್ದೆಗೆ ಇನ್ನಷ್ಟು ಕರಾಳ, ವಿಕರಾಳ ಅಂಶಗಳನ್ನು ಸೇರಿಸಿತು.

ಮುಂಬೈ ದಾಳಿ 2008ರ ನವೆಂಬರ್‌ನಲ್ಲಿ ನಡೆದರೆ ಕೇವಲ ಮೂರು ವಾರದಲ್ಲಿ ಅಂದರೆ ಡಿಸೆಂಬರ್ 13ರಂದು ಲೋಕಸಭೆಯಲ್ಲಿ UAPA ತಿದ್ದುಪಡಿ ಹಾಗೂ ಹೊಸ NIA (National Investigation Agency- ರಾಷ್ಟ್ರೀಯ ತನಿಖಾ ಸಂಸ್ಥೆ) ರಚಿಸುವ ಮಸೂದೆಯನ್ನು ಕಾಂಗ್ರೆಸ್ ಮಂಡಿಸಿತು.

UAPA ಹೊಸ ತಿದ್ದುಪಡಿಗಳು:

- 2008ರ ಹೊಸ ತಿದ್ದುಪಡಿಯು ಸೆಕ್ಷನ್ ೧೫ಕ್ಕೆ ತಂದ ತಿದ್ದುಪಡಿಯ ಪ್ರಕಾರ, ‘‘ದೇಶದ ಭದ್ರತೆ ಮತ್ತು ಸಾರ್ವಭೌಮತೆಯ ಮೇಲೆ ಬಾಂಬು ಬಂದೂಕುಗಳಿಂದ ದಾಳಿ ಮಾಡಿದರೆ ಮಾತ್ರವಲ್ಲ ಇತರ ಯಾವುದೇ ಕ್ರಮಗಳ ಮೂಲಕ’’ ಭಯೋತ್ಪಾದನೆಯನ್ನುಂಟು ಮಾಡಲು ಪ್ರಯತ್ನಿಸುವುದೂ ಭಯೋತ್ಪಾದನೆಯಾಯಿತು ಹಾಗೂ ಆ ಕ್ರಮಗಳು ಯಾವುದು ಎಂಬ ನಿರ್ವಚನೆಯನ್ನು ಪೊಲೀಸರಿಗೆ ಬಿಟ್ಟುಕೊಡಲಾಯಿತು.

ಅದರ ಜೊತೆಗೆ ಭಯೋತ್ಪಾದನೆಯೆಂಬ ಪರಿಣಾಮ ಸಂಭವಿಸದಿದ್ದರೂ ಅಂಥಾ ಸಾಧ್ಯತೆ (...likely) ಇದ್ದರೂ ಅದನ್ನು ಟೆರರಿಸ್ಟ್ ಆ್ಯಕ್ಟ್ ಎಂದು ಪರಿಗಣಿಸಬೇಕೆಂದಿತು.

ಅಂದರೆ ಸರಕಾರ ಯಾವುದನ್ನು ಬೇಕಾದರೂ ಟೆರರಿಸ್ಟ್ ಆ್ಯಕ್ಟ್ ಎಂದು ಭಾವಿಸುವ ಅಧಿಕಾರವನ್ನು ಪೊಲೀಸರಿಗೆ ನೀಡಿತು.

- ಸೆಕ್ಷನ್ 43ಡಿ (2-7) ಎಂಬ ಹೊಸ ಸೇರ್ಪಡೆಯನ್ನು ಮಾಡಲಾಯಿತು. ಇದರ ಪ್ರಕಾರ ಚಾರ್ಜ್‌ಶೀಟ್ ಅನ್ನು ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ ನಂತರವೂ, ಆರೋಪಿಯನ್ನು ಜಾಮೀನು ಕೊಡದಿರುವ ಅಧಿಕಾರವನ್ನು ನ್ಯಾಯಾಲಯಕ್ಕೆ ನೀಡಿತು. ಹೀಗೆ ಈ ಕಾಯ್ದೆಯಡಿ ಬಂಧಿತರಾದವರಿಗೆ ವಿಚಾರಣೆ ಮುಗಿಯುವವರೆಗೆ ಅಂದರೆ ೧೦-೨೦ ವರ್ಷಗಳ ಕಾಲ ಜಾಮೀನು ಕೂಡ ಸಿಗದಿರುವ ಅಮಾನುಷ ಅವಕಾಶವನ್ನು ಒದಗಿಸಿದ್ದು ೨೦೦೮ರ ತಿದ್ದುಪಡಿಗಳೇ..

ಚಾರ್ಜ್‌ಶೀಟ್ ಸಲ್ಲಿಸಲು ಪೊಲೀಸರಿಗೆ ಇದ್ದ ಅವಕಾಶವನ್ನು 90 ದಿನಗಳಿಂದ 180 ದಿನಗಳವರೆಗೆ ವಿಸ್ತರಿಸುವ ಅವಕಾಶವನ್ನು ನೀಡಲಾಯಿತು.

-ಸೆಕ್ಷನ್ 43ಇ ಎಂಬ ಹೊಸ ಸೇರ್ಪಡೆಯ ಮೂಲಕ ನಿರಪರಾಧಿತ್ವವನ್ನು ಸಾಬೀತು ಮಾಡುವ ಹೊಣೆಗಾರಿಕೆಯನ್ನು ಆರೋಪಿಗೆ ವರ್ಗಾಯಿಸಲಾಯಿತು.

ಸಂವಿಧಾನ ಕೊಟ್ಟಿರುವ ಮೂಲಭೂತ ಹಕ್ಕುಗಳನ್ನು ಹಾಗೂ ಮಾನವ ಹಕ್ಕುಗಳನ್ನು ಗಂಭೀರವಾಗಿ ಉಲ್ಲಂಘನೆಯನ್ನು ಮಾಡುವ ಹಾಗೂ ಜಗತ್ತಿನ ಯಾವ ನಾಗರಿಕ ದೇಶಗಳಲ್ಲೂ ಇಲ್ಲದ ಇನ್ನೂ ಹಲವಾರು ಅಂಶಗಳನ್ನು ಈ ತಿದ್ದುಪಡಿಯ ಮೂಲಕ ಸೇರಿಸಲಾಯಿತು.

ದೇಶಭದ್ರತೆಯ ಹೆಸರಲ್ಲಿ ರಾಜ್ಯಗಳ ಪರಮಾಧಿಕಾರವನ್ನು ಉಲ್ಲಂಘಿಸುವ NIA

ಇದೇ ಸಂದರ್ಭವನ್ನು ಬಳಸಿಕೊಂಡು ಕಾಂಗ್ರೆಸ್ ನೇತೃತ್ವ ಯುಪಿಎ ಸರಕಾರ ಒಂದು ಹೊಸ NIA (National Investigation Agency)-ರಾಷ್ಟ್ರೀಯ ತನಿಖಾ ಸಂಸ್ಥೆಯನ್ನು ಸ್ಥಾಪಿಸುವ ಕಾನೂನನ್ನು ಮಾಡಿತು.

ನಮ್ಮ ದೇಶದ ಸಂವಿಧಾನದ ಏಳನೇ ಶೆಡ್ಯೊಲಿನ ಪ್ರಕಾರ ಕಾನೂನು ಮತ್ತು ಸುವ್ಯವಸ್ಥೆ ರಾಜ್ಯ ಸರಕಾರಗಳ ಜವಾಬ್ದಾರಿ ಮತ್ತು ಅಧಿಕಾರ. ಒಂದು ವೇಳೆ ಕೇಂದ್ರ ತನಿಖಾ ದಳಗಳು ರಾಜ್ಯದಲ್ಲಿ ತನಿಖೆಯನ್ನು ಮಾಡಬೇಕೆಂದರೂ ರಾಜ್ಯ ಸರಕಾರಕ್ಕೆ ತಿಳಿಸಿ ಅದರ ಅನುಮತಿಯನ್ನು ಪಡೆದು ಮಾಡಬೇಕು.

ಆದರೆ ಈ ಹೊಸ NIA ಕಾಯ್ದೆಯ ಪ್ರಕಾರ ಅದರ ಶೆಡ್ಯೂಲಿನಲ್ಲಿ ಕೇಂದ್ರ ಸರಕಾರ ನಿಗದಿ ಪಡಿಸಿರುವ ಅಪರಾಧಗಳು ದೇಶದಲ್ಲಿ ಎಲ್ಲೇ ಸಂಭವಿಸಿದರೂ ಕೇಂದ್ರ ಸರಕಾರದ ಆದೇಶದ ಮೇರೆಗೆ NIA ರಾಜ್ಯಗಳ ಅನುಮತಿಯನ್ನು ಕೇಳದೆ ನೇರವಾಗಿ ಆ ಪ್ರಕರಣಗಳನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳಬಹುದು ಹಾಗೂ ಅಂತಹ ತನಿಖೆಗೆ ರಾಜ್ಯ ಸರಕಾರಗಳ ಪೂರ್ವಾನುಮತಿಯ ಅಗತ್ಯವಿರುವುದಿಲ್ಲ. ಹಾಗೂ ಯಾವುದೇ ಆಸ್ತಿಪಾಸ್ತಿಗಳ ಜಪ್ತಿ ಇತ್ಯಾದಿಗಳನ್ನು ಮಾಡಬಹುದು. ಜೊತೆಗೆ ಈ ಪ್ರಕರಣಗಳ ವಿಚಾರಣೆಗಳು ಕೇಂದ್ರ ಸರಕಾರ ಸೂಚಿಸುವ ವಿಶೇಷ NIA ನ್ಯಾಯಾಲಯಗಳಲ್ಲೇ ನಡೆಯಬೇಕು. ಅರ್ಥಾತ್ ಈ ವಿಷಯಗಳಲ್ಲಿ ರಾಜ್ಯ ಸರಕಾರ ಸಂಪೂರ್ಣವಾಗಿ ತನ್ನ ಸ್ವಾಯತ್ತತೆಯನ್ನೇ ಕಳೆದುಕೊಳ್ಳುತ್ತದೆ.

ಇದಕ್ಕೆ ಇತ್ತೀಚಿನ ಉದಾಹರಣೆ ಸ್ಟ್ಯಾನ್ ಸ್ವಾಮಿಯವರನ್ನು ಬಂಧಿಸಿದ್ದ ಭೀಮಾ ಕೋರೆಗಾಂವ್ ಪ್ರಕರಣ.

೨೦೧೮ರ ಜೂನ್‌ನಲ್ಲಿ ಮಹಾರಾಷ್ಟ್ರದಲ್ಲಿ ಬಿಜೆಪಿ ಸರಕಾರವಿತ್ತು. ಆ ಸರಕಾರ ಭೀಮಾ ಕೋರೆಗಾಂವ್ ಪ್ರಕರಣಕ್ಕೆ ಮೋದಿ ಕೊಲೆ ಸಂಚೆಂಬ ತಿರುವನ್ನು ನೀಡಿ ದೇಶಾದ್ಯಂತ ಮೋದಿ ಸರಕಾರದ ವಿರೋಧಿಗಳನ್ನೆಲ್ಲಾ UAPA ಅಡಿ ಬಂಧಿಸಿತು. ಆದರೆ ತನಿಖೆಯನ್ನು ರಾಜ್ಯ ಪೊಲೀಸರೇ ನಡೆಸುತ್ತಿದ್ದರು. ಏಕೆಂದರೆ ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರಕಾರವೇ ಇತ್ತು.

ಆದರೆ 2019ರಲ್ಲಿ ಮಹಾರಾಷ್ಟ್ರದಲ್ಲಿ ನಡೆದ ಶಾಸನ ಸಭಾ ಚುನಾವಣೆಯ ನಂತರ ಅಲ್ಲಿ ಕಾಂಗ್ರೆಸ್-ಎನ್‌ಸಿಪಿ-ಶಿವಸೇನಾ ಸರಕಾರ ಅಧಿಕಾರಕ್ಕೆ ಬಂತು ಹಾಗೂ ಅ ಸರಕಾರ ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಹಿಂದಿನ ಬಿಜೆಪಿ ಸರಕಾರ ರಾಜಕೀಯ ಸಂಚನ್ನು ಮಾಡಿ ಮಾನವ ಹಕ್ಕು ಕಾರ್ಯಕರ್ತರನ್ನು ಸಿಲುಕಿಸಿರುವ ಬಗ್ಗೆ ವಿಶೇಷ ತನಿಖೆಯನ್ನು ನಡೆಸುವ ಸಿದ್ಧತೆಯನ್ನು ನಡೆಸಿತ್ತು.

ಕೂಡಲೇ ಕಾರ್ಯಪ್ರವೃತ್ತವಾದ ಕೇಂದ್ರ ಸರಕಾರ NIA ಕಾಯ್ದೆ ಕೊಡುವ ಅವಕಾಶವನ್ನು ಬಳಸಿಕೊಂಡು ರಾಜ್ಯ ಸರಕಾರಕ್ಕೆ ಯಾವ ಸೂಚನೆಯನ್ನೂ ಕೊಡದೆ ಇಡೀ ಪ್ರಕರಣವನ್ನು NIAಗೆ ವಹಿಸಿತು. ಆನಂತರ ಶಿವಸೇನಾ ಮುಖ್ಯಮಂತ್ರಿ ಅದಕ್ಕೆ ಒಪ್ಪಿಗೆ ಸೂಚಿಸಿದ್ದು ಬೇರೆ ವಿಷಯ. ಇಂತಹ ಫೆಡರಲ್ ವಿರೋಧಿ ಹತಾರವನ್ನು 2008ರ ತಿದ್ದುಪಡಿಯ ಮೂಲಕ ಹರಿತ ಮಾಡಿಕೊಟ್ಟದ್ದು ಮಾತ್ರ ಕಾಂಗ್ರೆಸ್ ಸರಕಾರವೇ.

ಈ ಎರಡೂ ಮಸೂದೆಗಳ ಬಗ್ಗೆ 2008ರ ಡಿಸೆಂಬರ್‌ನಲ್ಲಿ ಲೋಕಸಭೆ ಹಾಗೂ ರಾಜ್ಯಸಭೆಗಳಲ್ಲಿ ತಲಾ ಒಂದೊಂದು ದಿನಗಳ ಚರ್ಚೆ ಮಾತ್ರ ನಡೆಯಿತು. ಭಯೋತ್ಪಾದನೆಯನ್ನು ವಿರೋಧಿಸುವಲ್ಲಿ ಕಾಂಗ್ರೆಸ್ ವಿಫಲವಾಗಿದೆ ಎಂಬ ವಿಷಯವನ್ನು ರಾಜಕೀಯ ಪ್ರಚಾರ ಮಾಡಿಕೊಳ್ಳಲು ಬಿಜೆಪಿಯು ಸಂಸತ್ತಿನ ವೇದಿಕೆಯನ್ನು ಬಳಸಿಕೊಂಡಿತು. ಹೊಸ ಕಾಯ್ದೆ ತಾವು 2002ರಲ್ಲಿ ಜಾರಿಗೆ ತಂದ POTA ಕಾಯ್ದೆಯ ನಕಲಾಗಿದೆಯೆಂದೂ ಹಾಗೂ ಅದನ್ನು ರದ್ದು ಮಾಡಿದ್ದಕ್ಕೆ ಕಾಂಗ್ರೆಸ್ ಕ್ಷಮೆ ಯಾಚಿಸಬೇಕೆಂದೂ ಪಟ್ಟು ಹಿಡಿಯಿತು. ಬಿಜೆಪಿಯ ಈ ದೇಶಭಕ್ತಿಯ ಟ್ರಾಪಿಗೆ ಬಿದ್ದ ಕಾಂಗ್ರೆಸ್ ತಾನು ಬಿಜೆಪಿಗಿಂತ ದೊಡ್ಡ ದೇಶಭಕ್ತ ಎಂದು ತೋರಿಸಿಕೊಳ್ಳಲು ಹೇಗೆ ತಮ್ಮ ಕಾಯ್ದೆ POTAಗಿಂತಲೂ ಭೀಕರವಾಗಿದೆ ಎಂದು ಸಮರ್ಥಿಸಿಕೊಂಡಿತು!!

ಎಡಪಕ್ಷಗಳು, ಆರ್‌ಜೆಡಿ ಹಾಗೂ ಇತರ ಪಕ್ಷಗಳು ಕಾಯ್ದೆಯನ್ನು ತರಾತುರಿಯಲ್ಲಿ ಜಾರಿ ಮಾಡಬಾರದೆಂದು ವಿಷಯ ಸಮಿತಿಯ ಪರಿಶೀಲನೆಗೆ ಒಪ್ಪಿಸಬೇಕೆಂದೂ ಆಗ್ರಹಿಸಿದವು. ವಿಪರ್ಯಾಸವೆಂದರೆ ಕಾಯ್ದೆಯಲ್ಲಿನ ಕೆಲವು ಅಂಶಗಳ ಬಗ್ಗೆ ವೋಟಿಂಗ್ ನಡೆದಾಗ ಎಡಪಕ್ಷಗಳು ಹಾಗೂ ವಿರೋಧ ಪಕ್ಷಗಳು ಪೂರ್ಣಪ್ರಮಾಣದಲ್ಲಿ ಹಾಜರಿರಲಿಲ್ಲ. ಉದಾಹರಣೆಗೆ ಚಾರ್ಜ್‌ಶೀಟ್ ಸಲ್ಲಿಸಲು ಪೊಲೀಸರಿಗೆ 180 ದಿನಗಳ ಅವಕಾಶ ಕೊಡಕೂಡದು ಎಂಬ ಪ್ರಸ್ತಾವದ ಪರವಾಗಿ ಕೇವಲ 27 ವೋಟುಗಳು ಬಿದ್ದವು. ಆಗ ಸಂಸತ್ತಿನಲ್ಲಿ ಎಡಪಕ್ಷಗಳ ಸಂಖ್ಯಾಬಲವೇ 59 ಇತ್ತು!

ಅಷ್ಟು ಮಾತ್ರವಲ್ಲ. ಎಡಪಕ್ಷಗಳ ಸದಸ್ಯರು ರಾಜ್ಯಗಳು ಭಯೋತ್ಪಾದನೆಯನ್ನು ಎದುರಿಸಲು ಅಷ್ಟು ಶಕ್ತವಾಗಿಲ್ಲವಾದ್ದರಿಂದ NIA ರಚನೆಯನ್ನು ಹಾಗೂ ಒಟ್ಟಾರೆ ಕಾಯ್ದೆಯನ್ನು ತಾವು ವಿರೋಧಿಸುತ್ತಿಲ್ಲವೆಂದೂ ವಿವರಿಸಿಕೊಂಡರು! ಆರ್‌ಜೆಡಿ ಹಾಗೂ ಇತರ ಪ್ರಾದೇಶಿಕ ಪಕ್ಷಗಳು ಫೆಡರಲ್ ಸ್ವರೂಪಕ್ಕಾಗಬಹುದಾದ ಧಕ್ಕೆಗಳ ಬಗ್ಗೆ ಮಾತ್ರ ವಿಶೇಷ ಕಾಳಜಿಯನ್ನು ವ್ಯಕ್ತಪಡಿಸಿದವು.

ಒಟ್ಟಿನಲ್ಲಿ ಈ ಸಾಂಕೇತಿಕ ಭಿನ್ನಮತಗಳೊಂದಿಗೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಜಗತ್ತಿನಲ್ಲೇ ಅತ್ಯಂತ ಕರಾಳವಾದ ಕಾಯ್ದೆಯನ್ನು ಜಾರಿ ಮಾಡಿತು.

ಆಸಕ್ತರು ಇದರ ಬಗ್ಗೆ ಸಂಸತ್ತಿನಲ್ಲಿ ನಡೆದ ಚರ್ಚೆಯನ್ನು ಈ ವಿಳಾಸದಲ್ಲಿ ಓದಬಹುದು:

https://eparlib.nic.in/bitstream/ 123456789/722419/1/10813.pdf

2012ರಲ್ಲಿ ಈ ಕಾಯ್ದೆಗೆ ಮತ್ತೊಂದು ತಿದ್ದುಪಡಿಯನ್ನು ಜಾರಿ ಮಾಡಿ ಆರ್ಥಿಕ ಭದ್ರತೆಗಳಿಗೆ ಅಪಾಯ ಉಂಟು ಮಾಡುವ ಕಂಪೆನಿಗಳನ್ನು, ಸಂಸ್ಥೆಗಳನ್ನು ಹಾಗೂ ಕ್ರಿಯೆಗಳನ್ನೂ ಟೆರರಿಸಂ ಎಂದು ಘೋಷಿಸಲಾಯಿತು. ಆಗಲೂ ಬಿಜೆಪಿ ಸಂಭ್ರಮಿಸಿದರೆ ಎಡವನ್ನೂ ಒಳಗೊಂಡಂತೆ ಉಳಿದ ವಿರೋಧ ಪಕ್ಷಗಳ ವಿರೋಧಗಳು ಸಾಂಕೇತಿಕಕ್ಕೆ ಸೀಮಿತವಾಯಿತು.

ಹಿಂದುತ್ವ ಟೆರರಿಸಂ ಮತ್ತು UAPA

ಇಷ್ಟೆಲ್ಲಾ ಆದರೂ ಯುಪಿಎ ಸರಕಾರದ ಬಗ್ಗೆ ಹೇಳಬಹುದಾದ ಒಂದು ಮಾತೆಂದರೆ ಆ ಸರಕಾರ ಈ ಕಾಯ್ದೆಯನ್ನು ಅಮಾಯಕ ಆದಿವಾಸಿಗಳು ಹಾಗೂ ದಲಿತರ ಮೇಲೆ ಬಳಸಿದಷ್ಟು ಅಲ್ಪಸಂಖ್ಯಾತರ ಮೇಲೆ ಬಳಸಲಿಲ್ಲ ಹಾಗೂ ಹಿಂದುತ್ವವಾದಿ ಭಯೋತ್ಪಾದಕರನ್ನು ಬಂಧಿಸಲೂ ಈ ಅವಧಿಯಲ್ಲಿ ಈ ಕಾಯ್ದೆಯನ್ನು ಬಳಸಿದ್ದರು.

ಇಂದು ವಿರೋಧಪಕ್ಷಗಳು ಅದರಲ್ಲೂ ವಿಶೇಷವಾಗಿ ಕಾಂಗ್ರೆಸ್ ಪಕ್ಷ, ತನ್ನ ರಾಜಕೀಯ ಅಸ್ತಿತ್ವದ ಕಾರಣಕ್ಕಾಗಿಯಾದರೂ UAPA ಮತ್ತು NIA ಬಗ್ಗೆ ತನ್ನ ಧ್ವನಿ ಎತ್ತಿರುವುದು ಒಳ್ಳೆಯದೇ. ಛತ್ತೀಸ್‌ಗಡ ಸರಕಾರ ಎನ್‌ಐಎ ತಿದ್ದುಪಡಿಗಳ ಬಗ್ಗೆ ಸುಪ್ರೀಂ ಕೋರ್ಟ್‌ನಲ್ಲಿ ಅಹವಾಲನ್ನೂ ದಾಖಲಿಸಿದೆ. ಆದರೆ ಅಷ್ಟು ಸಾಲದು. ಮತ್ತದು ನಿಜವಾದ ಪ್ರಜಾತಾಂತ್ರಿಕ ವಿರೋಧ ಎಂದು ಪರಿಗಣಿಸಲಾಗದು. ಏಕೆಂದರೆ ಕಾಂಗ್ರೆಸ್‌ನಂಥ ಈ ಹಿಂದಿನ ಅಧಿಕಾರರೂಢ ಪಕ್ಷಗಳು ಪ್ರಜಾತಾಂತ್ರಿಕ ಮೌಲ್ಯಗಳಲ್ಲಿ ತಾನು ಮಾಡಿಕೊಂಡ ರಾಜಿಯ ಬಗ್ಗೆ ಮರುಮೌಲ್ಯಮಾಪನ ಮಾಡಿಕೊಳ್ಳುವ ಅಗತ್ಯವಿದೆ.

ಆದರೆ ಹಿಂದುತ್ವವಾದಿ ಭಯೋತ್ಪಾದಕರನ್ನು ಸಹ ತ್ವರಿತವಾಗಿ ವಿಚಾರಣೆಗೆ ಒಳಪಡಿಸಿ ಶಿಕ್ಷೆ ನೀಡಬೇಕೇ ವಿನಾ ವಿಚಾರಣೆಯಿಲ್ಲದೆ, ಜಾಮೀನಿಲ್ಲದೆ ಅನಿರ್ದಿಷ್ಟ ಕಾಲ ವಿಚಾರಣಾಧೀನ ಬಂದಿಗಳನ್ನಾಗಿ ಉಳಿಸಿಕೊಳ್ಳಬಾರದು. ಆದರೆ ಅಂಥವರ ಸಂಖ್ಯೆ ತುಂಬಾ ಕಡಿಮೆ ಹಾಗೂ ಮೋದಿ ಸರಕಾರ ಬಂದ ಮೇಲೆ ಅಂಥವರಿಗೆ ಕೋರ್ಟುಗಳು ಉದಾರವಾಗಿ ಜಾಮೀನು ನೀಡುತ್ತಿರುವುದು ಮಾತ್ರವಲ್ಲ ಪ್ರಜ್ಞಾಸಿಂಗ್ ಅಂತಹವರು ಎಂಪಿಗಳೂ ಆಗಿದ್ದಾರೆ. ಹೀಗಾಗಿ ಇಂತಹ ಕಾಯ್ದೆಗಳನ್ನು ಹಿಂದುತ್ವ ಭಯೋತ್ಪಾದನೆಯ ಆರೋಪಿಗಳ ಮೇಲೆ ಬಳಕೆಯಾಗುವುದು ಇಂತಹ ಪ್ರಜಾತಂತ್ರ ವಿರೋಧಿ ಕರಾಳ ಕಾಯ್ದೆಗಳಿಗೆ ಸಮರ್ಥನೆಯಾಗಬಾರದು.

ಏಕೆಂದರೆ ಇಂತಹ ಕಾಯ್ದೆಗಳು ಯಾವಾಗಲೂ ಬಲಿತೆಗೆದುಕೊಳ್ಳುವುದು ಆದಿವಾಸಿ, ದಲಿತ, ಅಲ್ಪಸಂಖ್ಯಾತ, ರೈತ, ಕಾರ್ಮಿಕರನ್ನು ಹಾಗೂ ನೈಜ ಪ್ರಜಾತಂತ್ರವಾದಿಗಳ ಸ್ವಾತಂತ್ರ್ಯಗಳನ್ನು ಹಾಗೂ ಪ್ರಾಣಗಳನ್ನೇ..

2019ರ ಮೋದಿ ತಿದ್ದುಪಡಿಗಳು

-ನಾಮಕಾವಸ್ಥೆ ವಿರೋಧವೂ ಮಾಯ!

೨೦೧೯ರಲ್ಲಿ ಎರಡನೇ ಬಾರಿ ಮೋದಿ ಸರಕಾರ ಅಧಿಕಾರಕ್ಕೆ ಬಂದಮೇಲೆ UAPA ಅಡಿ ಯಾವುದೇ ಟೆರರಿಸ್ಟ್ ಸಂಘಟನೆ ಅಥವಾ ಗ್ಯಾಂಗಿನ ಸದಸ್ಯನಲ್ಲದ ಬಿಡಿವ್ಯಕ್ತಿನ್ನು ಬಂಧಿಸುವಂತಹ ಘೋರ ತಿದ್ದುಪಡಿಯನ್ನು ತಂದಿತು ಹಾಗೂ NIA ಅಡಿ ಬೇರೆ ಯಾವುದಾದರೂ ರಾಜ್ಯದಲ್ಲಿ ಆಸ್ತಿಪಾಸ್ತಿಗಳನ್ನು ಜಪ್ತಿ ಮಾಡುವಾಗ ಆ ರಾಜ್ಯದ ಡಿಜಿಪಿಗೆ ತಿಳಿಸುವ ಅಗತ್ಯವಿಲ್ಲವೆಂಬ ಅಧಿಕಾರವನ್ನು ನೀಡಿತು.

ಇದರ ಬಗ್ಗೆ ಸಂಸತ್ತಿನಲ್ಲಿ ಚರ್ಚೆ ನಡೆದಾಗ ಈ ತಿದ್ದುಪಡಿಯನ್ನು ಕಾಂಗ್ರೆಸ್ ಲೋಕಸಭೆಯಲ್ಲಿ ವಿರೋಧಿಸಿದರೂ ರಾಜ್ಯ ಸಭೆಯಲ್ಲಿ ಬೆಂಬಲಿಸಿತು. ಎಡಪಕ್ಷಗಳು, ಟಿಎಂಸಿ, ಡಿಎಂಕೆ ಮತ್ತು ಆರ್‌ಜೆಡಿಗಳನ್ನು ಬಿಟ್ಟರೆ ಬಿಎಸ್‌ಪಿ, ಎಸ್‌ಪಿ, ಆಮ್ ಆದ್ಮಿಯಂಥ ಪ್ರಾದೇಶಿಕ ಪಕ್ಷಗಳೂ ಇಂತಹ ಅತ್ಯಂತ ಫೆಡರಲ್ ವಿರೋಧಿ ಹಾಗೂ ಮಾನವ ಹಕ್ಕು ವಿರೋಧಿ ತಿದ್ದುಪಡಿಯನ್ನು ಬೆಂಬಲಿಸಿದವು.

(https://www.thehindu.com/news/national/rajya-sabha-passes-controversial-uapa-bill/article28800643.ece)

ಹಾಗೆ ನೋಡಿದರೆ UAPA ಮತ್ತು NIA ದುರ್ಬಳಕೆಗಳು ಬಿಜೆಪಿಯ ನೇರ ಹಾಗೂ ಪರೋಕ್ಷ ಆಡಳಿತದಲ್ಲಿರುವ ಮಣಿಪುರ, ಉತ್ತರ ಪ್ರದೇಶ, ಅಸ್ಸಾಂ ಹಾಗೂ ತಮಿಳುನಾಡುಗಳಲ್ಲಿ (2019ರ ತನಕ) ಜಾಸ್ತಿ ನಡೆದಿರುವುದು ನಿಜವಾದರೂ ಕಾಂಗ್ರೆಸ್ ಅಧಿಕಾರದಲ್ಲಿರುವ ಪಂಜಾಬ್ ಮತ್ತು ಛತ್ತೀಸ್‌ಗಡಗಳಲ್ಲಿ ಕೂಡ ಬಳಸಲಾಗಿದೆ.

ಎಡಪಕ್ಷಗಳು ಅಧಿಕಾರದಲ್ಲಿರುವ ಕೇರಳದಲ್ಲಿ ಕೂಡಾ ಪಿಣರಾಯಿ ವಿಜಯನ್ ಅವರ ನೇತೃತ್ವದಲ್ಲಿ UAPA ಅನ್ನು ವಿವೇಚನೆಯಿಲ್ಲದೆ ಹಾಗೂ ರಾಜಕೀಯ ಭಿನ್ನಮತೀಯರ ಮೇಲೆ ಬಳಸಿರುವ ಸಾಕಷ್ಟು ಉದಾಹರಣೆಗಳಿವೆ.

 (https://thesouthfirst.com/kerala/growing-number-of-uapa-cases-in-kerala-exposes-cpim-double-standards-on-dissent/)

ಇದು UAPA ಮತ್ತು NIAಯಂಥ ಫ್ಯಾಶಿಸ್ಟ್ ಕಾಯ್ದೆಗಳನ್ನು ವಿರೋಧಿಸುವಲ್ಲಿ ಸಂಖ್ಯಾತ್ಮಕವಾಗಿ ಮಾತ್ರವಲ್ಲದೆ ಸೈದ್ಧಾಂತಿಕವಾಗಿ ಹಾಗೂ ರಾಜಕೀಯವಾಗಿ ಕೂಡಾ ಕಾಂಗ್ರೆಸ್‌ನಂಥ ವಿರೋಧ ಪಕ್ಷಗಳಿಗಿರುವ ದೌರ್ಬಲ್ಯ ಮತ್ತು ಹಿತಾಸಕ್ತಿಗಳ ಸಾಮಾನ್ಯ ವರ್ಗಸ್ವರೂಪ. ಬಿಜೆಪಿಯ ದೇಶರಕ್ಷಣೆಯೆಂಬ ಬ್ಲ್ಯ್ಲಾಕ್‌ಮೇಲ್ ಕೋಮುವಾದಿ ರಾಜಕಾರಣಕ್ಕೆ ಪ್ರತಿಯಾಗಿ ಪ್ರಜಾತಾಂತ್ರಿಕ ನೆಲೆಯಲ್ಲಿ ದೇಶರಕ್ಷಣೆಯ ರಾಜಕಾರಣವನ್ನು ಮುಂದಿಡಲಾಗದ ವೈಫಲ್ಯದಲ್ಲೇ ಬಿಜೆಪಿಯ ಜಯವಿದೆ.

ಇಂದು ವಿರೋಧಪಕ್ಷಗಳು ಅದರಲ್ಲೂ ವಿಶೇಷವಾಗಿ ಕಾಂಗ್ರೆಸ್ ಪಕ್ಷ, ತನ್ನ ರಾಜಕೀಯ ಅಸ್ತಿತ್ವದ ಕಾರಣಕ್ಕಾಗಿಯಾದರೂ UAPA ಮತ್ತು NIA ಬಗ್ಗೆ ತನ್ನ ಧ್ವನಿ ಎತ್ತಿರುವುದು ಒಳ್ಳೆಯದೇ. ಛತ್ತೀಸ್‌ಗಡ ಸರಕಾರ ಎನ್‌ಐಎ ತಿದ್ದುಪಡಿಗಳ ಬಗ್ಗೆ ಸುಪ್ರೀಂ ಕೋರ್ಟ್‌ನಲ್ಲಿ ಅಹವಾಲನ್ನೂ ದಾಖಲಿಸಿದೆ. ಆದರೆ ಅಷ್ಟು ಸಾಲದು. ಮತ್ತದು ನಿಜವಾದ ಪ್ರಜಾತಾಂತ್ರಿಕ ವಿರೋಧ ಎಂದು ಪರಿಗಣಿಸಲಾಗದು. ಏಕೆಂದರೆ ಕಾಂಗ್ರೆಸ್‌ನಂಥ ಈ ಹಿಂದಿನ ಅಧಿಕಾರರೂಢ ಪಕ್ಷಗಳು ಪ್ರಜಾತಾಂತ್ರಿಕ ಮೌಲ್ಯಗಳಲ್ಲಿ ತಾನು ಮಾಡಿಕೊಂಡ ರಾಜಿಯ ಬಗ್ಗೆ ಮರುಮೌಲ್ಯಮಾಪನ ಮಾಡಿಕೊಳ್ಳುವ ಅಗತ್ಯವಿದೆ.

ಎಲ್ಲಾ ವಿರೋಧ ಪಕ್ಷಗಳು ಇಷ್ಟನ್ನು ಮಾಡಬಹುದೇ?:

ಈಗ ಚುನಾವಣೆಯ ಸಮಯ. ಆಳುವ ಪಕ್ಷಗಳು ಮತ್ತು ವಿರೋಧ ಪಕ್ಷಗಳು ಪೈಪೋಟಿಯಲ್ಲಿ ಪುಕ್ಕಟೆ ಭರವಸೆಗಳನ್ನು ಕೊಡುವ ಸಮಯ.  ಫ್ಯಾಶಿಸ್ಟ್ ಬಿಜೆಪಿಯನ್ನು ಸೋಲಿಸಲೆಂದು ಕಾಂಗ್ರೆಸನ್ನೋ, ಇತರ ವಿರೋಧ ಪಕ್ಷಗಳನ್ನೋ ಬೆಂಬಲಿಸುವುದು ಅನಿವಾರ್ಯವೆಂಬುದು ಅತ್ಮವಂಚನೆಯಾಗಬಾರದೆಂದರೆ, ಆ ಪಕ್ಷಗಳು ಹಿಂದಿನಂತಲ್ಲದೆ ಕನಿಷ್ಠ UAPAಯನ್ನಾದರೂ ರದ್ದು ಮಾಡಬೇಕೆಂದು ಜನಚಳವಳಿಗಳು ಒತಾಯಿಸಬೇಕಲ್ಲವೇ?

ಹಾಗಿದ್ದಲ್ಲಿ..

-ಸಿಎಎ-ಎನ್‌ಆರ್‌ಸಿ ವಿಷಯಗಳಲ್ಲಿ ಕೆಲವು ವಿರೋಧ ಪಕ್ಷಗಳ ಸರಕಾರಗಳು ತಮ್ಮಲ್ಲಿ ಅದನ್ನು ಜಾರಿ ಮಾಡುವುದಿಲ್ಲ ಎಂದು ತೀರ್ಮಾನಿಸಿದಂತೆ ಎಲ್ಲಾ ವಿರೋಧ ಪಕ್ಷಗಳ ಸರಕಾರಗಳು ತಮ್ಮ ರಾಜ್ಯಗಳಲ್ಲಿ UAPAಯನ್ನೂ ಬಳಸುವುದಿಲ್ಲ ಎಂದು ಘೋಷಿಸಬಲ್ಲರೇ?

-ರಾಜ್ಯ ಸರಕಾರಗಳು ನಿರಾಕರಿಸಿದರೂ, NIA ಅಡಿ ಕೇಂದ್ರ ಸರಕಾರವೇ ರಾಜ್ಯಗಳಲ್ಲಿ UAPA ಬಂಧನಗಳನ್ನು ಮಾಡಬಹುದು.

ಹೀಗಾಗಿ, ಎಲ್ಲಾ ವಿರೋಧ ಪಕ್ಷಗಳು ಒಟ್ಟಾಗಿ UAPA ಮತ್ತು NIA ಕಾಯ್ದೆಗಳ ವಿರುದ್ಧ ಸುಪ್ರೀಂ ಕೋರ್ಟಿನಲ್ಲಿ ಒಟ್ಟು ಅಹವಾಲನ್ನು ಸಲ್ಲಿಸಿ ಫ್ಯಾಶಿಸ್ಟ್ ಕಥನಕ್ಕೆ ಪ್ರತಿಯಾಗಿ ಪ್ರಜಾತಾಂತ್ರಿಕ ದೇಶರಕ್ಷಣೆಯ ಕಥನವನ್ನು ಕಟ್ಟಬಲ್ಲರೇ?

- UAPA ಮತ್ತು NIA ಅನ್ನು ರದ್ದುಗೊಳಿಸೋಣ ಮತ್ತು ಭಾರತದ ಫ್ಯಾಶೀಕರಣವನ್ನು ತಡೆಗಟ್ಟೋಣ ಎಂಬುದನ್ನು ರಾಜಕೀಯ ಘೋಷಣೆಯಾಗಿ ಅಳವಡಿಸಿಕೊಳ್ಳಬಲ್ಲರೇ?

Similar News