×
Ad

ಬಿಳಿ ಚುಕ್ಕಿ ಮತ್ತು ಕಪ್ಪು ಚುಕ್ಕಿಯ ಮಧ್ಯೆ ಪ್ರೇಮ ಚಿತ್ತಾರ!

Update: 2025-10-25 12:25 IST

ಚಿತ್ರ: ಬಿಳಿ ಚುಕ್ಕಿ ಹಳ್ಳಿ ಹಕ್ಕಿ

ನಿರ್ದೇಶನ: ಮಹೇಶ್ ಗೌಡ

ತಾರಾಗಣ: ಮಹೇಶ್ ಗೌಡ, ಕಾಜಲ್ ಕುಂದರ್, ವೀಣಾ ಸುಂದರ್ ಮೊದಲಾದವರು.

ಒಬ್ಬ ವ್ಯಕ್ತಿಗೆ ತಾನು ಹುಟ್ಟಿನಿಂದಲೇ ಎಲ್ಲರ ಹಾಗೆ ಇಲ್ಲ; ತನ್ನಲ್ಲೇನೋ ಕೊರತೆ ಇದೆ ಎನ್ನುವ ಶಂಕೆ ಕಾಡತೊಡಗಿದರೆ, ಬಳಿಕ ಆ ಕೀಳರಿಮೆಯೇ ಆತನ ಬೆಳವಣಿಗೆಗೆ ಮುಳ್ಳಾಗಬಹುದು. ಆದರೆ ಇಂಥ ಮುಳ್ಳಿನ ಬದುಕಿಗೆ ಎಂಟ್ರಿಕೊಡುವ ಹೆಣ್ಣೋರ್ವಳು ಹೂವಾಗಬಹುದೇ ಎನ್ನುವ ಪ್ರಶ್ನೆಗೆ ಈ ಚಿತ್ರದ ಮೂಲಕ ನಿರ್ದೇಶಕರು ಉತ್ತರ ಪತ್ತೆ ಮಾಡುವ ಪ್ರಯತ್ನ ನಡೆಸಿದ್ದಾರೆ.

ದೇಹದಲ್ಲಿ ಕೊರತೆಯಂತೆ ಎದ್ದು ಕಾಣುವ ವಿಚಾರವನ್ನೇ ಪ್ರಧಾನ ವಸ್ತುವಾಗಿಸಿ ಒಂದಷ್ಟು ಸಿನೆಮಾಗಳು ಬಂದು ಹೋಗಿವೆ. ತನ್ನ ಬೋಳು ತಲೆಯ ನೋವನ್ನೇ ಪರದೆಯ ಮೇಲೆ ರಸವತ್ತಾಗಿ ಅನಿಸುವಂತೆ ಹೇಳಿದ ನಟ, ನಿರ್ದೇಶಕ ರಾಜ್ ಬಿ. ಶೆಟ್ಟಿಯ ‘ಒಂದು ಮೊಟ್ಟೆಯ ಕಥೆ’ಯಿಂದ ಹಿಡಿದು ಇತ್ತೀಚೆಗಷ್ಟೇ ತೆರೆ ಕಂಡ ‘ಅರಸಯ್ಯನ ಪ್ರೇಮ ಪ್ರಸಂಗ’ದಲ್ಲಿನ ನಾಯಕನ ತನಕ ಸಾಕಷ್ಟು ವೈವಿಧ್ಯಮಯ ಚಿತ್ರಗಳು ಕನ್ನಡದಲ್ಲೇ ತೆರೆಕಂಡಿವೆ. ಇವುಗಳ ಮಧ್ಯೆ ತನ್ನ ದೇಹದಲ್ಲಿನ ಬಿಳಿಚುಕ್ಕಿಯನ್ನೇ ವಸ್ತುವಾಗಿಸಿರುವ ಮಹೇಶ್ ಗೌಡ ಇದೇ ಕಾರಣದಿಂದಲೇ ವಿಶೇಷ ಅನಿಸುತ್ತಾರೆ.

ಶಾಂತಮ್ಮನಿಗೆ ಶಿವು ಒಬ್ಬನೇ ಮಗ. ಆದರೆ ಆತನ ಮೈ ಮೇಲಿನ ಬಿಳಿಚುಕ್ಕಿ ಕಂಡು ಆಕೆಯ ಮನಶ್ಶಾಂತಿಯೇ ಹೋಗಿದೆ. ಹಾಗಂತ ಮಗನ ಮದುವೆ ವಿಚಾರ ಬಂದಾಗ ಮಾತ್ರ ಇದೊಂದು ಕೊರತೆ ಎಂದು ಪರಿಗಣಿಸುವುದೇ ಇಲ್ಲ. ಒಂದೊಳ್ಳೆಯ ಹುಡುಗಿಯನ್ನೇ ನೋಡಿ ಮಗನಿಗೆ ಮದುವೆ ಮಾಡಲು ಪಣ ತೊಡುತ್ತಾಳೆ. ವಿಚಿತ್ರ ಎನ್ನುವಂತೆ ಸುಂದರಿಯೊಬ್ಬಳು ಶಿವುನ ಕಂಡೊಡನೆ ಒಪ್ಪಿಯೂ ಬಿಡುತ್ತಾಳೆ. ತನ್ನ ಮೈ ಮೇಲಿನ ಬಿಳಿ ಚುಕ್ಕಿ ನೋಡಿಯೂ ಕೂಡ ಈ ಸುಂದರಿ ಹೇಗೆ ಒಪ್ಪಿಕೊಂಡಳು ಎನ್ನುವುದೇ ಶಿವುಗೆ ಅಚ್ಚರಿ ಮೂಡಿಸುತ್ತದೆ. ಶಿವುನ ಕುತೂಹಲ ಪ್ರೇಕ್ಷಕರ ಕುತೂಹಲವೂ ಆಗಿರುವ ಕಾರಣ ಇದರ ಉತ್ತರವನ್ನು ವಿರಾಮದ ಬಳಿಕ ಆರಾಮಾಗಿ ಬಿಡಿಸಿಡಲಾಗುತ್ತದೆ.

ಮೈಮೇಲೆ ಬಿಳಿಚುಕ್ಕಿ ಮೂಡಿಸಿಕೊಂಡ ವ್ಯಕ್ತಿಯಾಗಿ ತನ್ನ ನೈಜ ದೇಹವನ್ನೇ ಚಿತ್ರಕ್ಕೆ ವಸ್ತುವಾಗಿ ಸಮರ್ಪಿಸಿದ್ದಾರೆ ಮಹೇಶ್ ಗೌಡ. ನಟನಾಗಿ ಮಾತ್ರವಲ್ಲ ನಿರ್ದೇಶಕರಾಗಿಯೂ ಪಾತ್ರವನ್ನು ಅನುಭವದ ಆಳಕ್ಕೆ ಒಯ್ಯುವಲ್ಲಿ ಯಶಸ್ವಿಯಾಗಿದ್ದಾರೆ. ಶಿವುಗೆ ಒಲಿಯುವ ಮಡದಿಯಾಗಿ ಕಾಜಲ್ ಕುಂದರ್ ನಟಿಸಿದ್ದಾರೆ. ಮುಗ್ಧತೆಯೇ ಮೈವೆತ್ತ ಮುಖವಿದ್ದರೂ ಅದರ ಹಿಂದೆ ಇನ್ನೇನೋ ಅಡಗಿರಬಹುದು ಎನ್ನುವ ಕುತೂಹಲಕ್ಕೆ ಪೂರಕವಾದ ನಟನೆ ನೀಡಿದ್ದಾರೆ.

ಮಗನಿಗೆ ಹೇಗಾದರೂ ಮದುವೆ ಮಾಡಿಸಬೇಕು ಎನ್ನುವ ಹಠಗಾತಿ ಶಾಂತಮ್ಮನಾಗಿ ಲಕ್ಷ್ಮೀ ಸಿದ್ದಯ್ಯ ನಟಿಸಿದ್ದರೆ ಮಗಳನ್ನು ಈ ಶಿವು ಸಂಬಂಧದಿಂದ ದೂರ ಮಾಡುವ ಶತ ಪ್ರಯತ್ನ ನಡೆಸುವ ಸುಶೀಲಳಾಗಿ ವೀಣಾ ಸುಂದರ್ ಕಾಣಿಸಿದ್ದಾರೆ. ಮಗಳ ಭವ್ಯ ಭವಿಷ್ಯಕ್ಕಾಗಿ ಸಿಕ್ಕಾಪಟ್ಟೆ ತಲೆ ಕೆಡಿಸಿಕೊಂಡ ಸಾಮಾನ್ಯ ತಾಯಿಯ ತೊಳಲಾಟವನ್ನು ತನ್ನ ನಟನೆಯಿಂದ ಸಾಕ್ಷಾತ್ಕಾರಗೊಳಿಸಿದ್ದಾರೆ. ಮಗಳ ಆಸೆಯನ್ನು ಅರಿತು ಒಳಗಿಂದಲೇ ಬೆಂಬಲವಾಗಿ ನಿಲ್ಲುವ ತಂದೆಯ ಪಾತ್ರವನ್ನು ರವಿಭಟ್ ನಿಭಾಯಿಸಿದ್ದಾರೆ. ನಾಯಕ ಶಿವು ಮನೆಯಲ್ಲಿ ಬೆಂಬಲವಾಗಿ ನಿಲ್ಲುವ ತಾಯಿಯ ಸಹೋದರನ ಪಾತ್ರದಲ್ಲಿ ಜಹಾಂಗೀರ್ ನಟಿಸಿದ್ದಾರೆ.

ಬೆರಳೆಣಿಕೆಯ ಪಾತ್ರಗಳಿರುವ ಈ ಚಿತ್ರದಲ್ಲಿ ಬಾಹ್ಯ ಸೌಂದರ್ಯಕ್ಕಿಂತ ಅಂತರಂಗ ಚೆನ್ನಾಗಿರುವುದು ಮುಖ್ಯ ಎನ್ನುವ ಸಂದೇಶವಿದೆ. ಅದರಾಚೆ ಬಿಳಿಚುಕ್ಕಿಯಂಥ ಸಮಸ್ಯೆಯಿಂದ ಬಳಲುವವರಿಗೆ ಒಂದು ತಾತ್ಕಾಲಿಕ ನೆಮ್ಮದಿಯನ್ನೂ ಕೊಡಬಹುದು.

ರಿಯೋ ಆಂಟೋನಿ ಸಂಗೀತ, ಕಿರಣ್ ಸಿ. ಎಚ್.ಎಮ್. ಛಾಯಾಗ್ರಹಣ ಚಿತ್ರಕ್ಕೆ ತಕ್ಕಂತೆ ಇದೆ. ಆದರೆ ಎರಡೂವರೆ ಗಂಟೆಯ ಸಿನೆಮಾದಲ್ಲಿ ಇದರ ಹೊರತಾಗಿಯೂ ಇನ್ನಷ್ಟು ನಿರೀಕ್ಷೆಗಳೊಂದಿಗೆ ಬರುವ ಪ್ರೇಕ್ಷಕರಿಗೆ ಹೇಗೆ ಆಸಕ್ತಿಕರವಾಗಿ ಸಿನೆಮಾ ತೋರಿಸಬಹುದು ಎನ್ನುವುದನ್ನೇ ನಿರ್ದೇಶಕರು ಮರೆತು ಹೋದಂತಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಶಶಿಕರ ಪಾತೂರು

contributor

Similar News