ಹಾಸ್ಯ, ಭಾವನಾತ್ಮಕ, ಮಾನವೀಯ ಮೌಲ್ಯದ ಪುರುಷೋತ್ತಮನ ಪ್ರಸಂಗ

Update: 2024-03-03 08:26 GMT
Editor : Thouheed | Byline : ರವಿ

ಯುವಸಮೂಹ ತಕ್ಷಣ ಹಣ ಗಳಿಸಬೇಕು, ನೆನೆಸಿದ್ದನ್ನೆಲ್ಲಾ ಈಡೇರಿಸಿಕೊಳ್ಳಬೇಕೆಂಬ ಧಾವಂತದಲ್ಲಿರುವುದು ಪ್ರಸಕ್ತ ಕಾಲಘಟ್ಟದ ಸನ್ನಿವೇಶ. ಅದಕ್ಕಾಗಿ ನಾನಾ ಕನಸು ಕಾಣುತ್ತಾರೆ. ಏನೆಲ್ಲಾ ಸರ್ಕಸ್ ಮಾಡುತ್ತಾರೆ. ಇಲ್ಲೊಬ್ಬ ಪುರುಷ ತಾನು ದುಬೈಗೆ ಹೋಗಬೇಕು, ಕುಟುಂಬ ಸಲಹಬೇಕು, ಅಕ್ಕನ ಮದುವೆ ಮಾಡಿ ತಾನೂ ಮದುವೆಯಾಗಿ ಸುಖವಾಗಿರಬೇಕು ಎಂಬ ದೃಢ ನಿಲುವಿನೊಂದಿಗೆ ದುಬೈಗೆ ಹೋಗುತ್ತಾನೆ. ಇದು ‘ಪುರುಷೋತ್ತಮನ ಪ್ರಸಂಗ’ ಚಿತ್ರದ ಥೀಮ್.

ಪಕ್ಕಾ ಮಂಗಳೂರಿಗರ ಕನ್ನಡ ಭಾಷೆಯಲ್ಲಿ ಚಿತ್ರೀಕರಣಗೊಂಡಿರುವ ಈ ಚಲನಚಿತ್ರ ದುಬೈ, ಅಬುಧಾಬಿ, ದೇರಾದ ಬ್ಲೂ ರಾಯಲ್ ಕಂಪೆನಿ, ಶರಫಿಯಾ ಲೇಬರ್ ಕ್ಯಾಂಪ್ ಮತ್ತು ಮಂಗಳೂರಿನ ಬಜ್ಪೆ, ಕೆಂಜಾರು, ಮುರನಗರ, ದೇರಳಕಟ್ಟೆ, ಸ್ಟೇಟ್ ಬ್ಯಾಂಕ್, ಕ್ಲಾಕ್ ಟವರ್ ಸುತ್ತಮುತ್ತಲ ಪ್ರದೇಶದಲ್ಲಿ ಶೂಟಿಂಗ್ ನಡೆಸಿದೆ. ಬಹುತೇಕ ಕಲಾವಿದರು ತುಳು ಚಿತ್ರರಂಗದ ನಟ, ನಟಿಯರೇ. ಆದ್ದರಿಂದ ಇಲ್ಲಿ ಸಹಜವಾಗಿ ಕಾಮಿಡಿ ಸೀನ್ ಇದ್ದರೂ ಮಾನವೀಯ ಮೌಲ್ಯವನ್ನು ಪ್ರತಿಪಾದಿಸುವ ನವನಟನ ಚಾಕಚಕ್ಯತೆಗೆ ಭೇಷ್ ಎನ್ನಲೇಬೇಕು.

ಬೆಂಗಳೂರು ಮೂಲದ ಅಜಯ್ ಪೃಥ್ವಿ ಇಡೀ ಚಿತ್ರಕ್ಕೆ ಜೀವ ತುಂಬಿದ ನಾಯಕ ನಟ. ಮೂರು ವರ್ಷಗಳ ಕಾಲ ಕೆನಡಾದ ಟೊರೆಂಟೋ ಫಿಲಂ ಇಂಡಸ್ಟ್ರಿಯಲ್ಲಿ ನಟನೆಯನ್ನು ಕಲಿತು ಪ್ರಪ್ರಥಮವಾಗಿ ಚಿತ್ರಕ್ಕೆ ನಾಯಕನಾಗಿದ್ದು, ತುಂಬಾ ಅನುಭವಿ ಕಲಾವಿದನಂತೆ ಪಾತ್ರ ನಿರ್ವಹಿಸಿ ಭೇಷ್ ಎನಿಸಿಕೊಂಡಿದ್ದಾರೆ.

ಕರಾವಳಿಯಲ್ಲಿ ಮನೆ ಮನೆಗಳಲ್ಲಿ ಇಂತಹ ಪುರುಷೋತ್ತಮನನ್ನು ನಾವು ಕಾಣಬಹುದು. ಹೊಟ್ಟೆಪಾಡಿಗಾಗಿ ದುಬೈ ಕನಸು ಕಾಣುವ ಪುರುಷರು, ಆ ಮಾಯಾನಗರಿಯ ಹಿಂದಿನ ಮುಖವಾಡವನ್ನು ಈ ಚಿತ್ರ ಬಿಚ್ಚಿಟ್ಟಿದೆ. ದುಬೈ ಎಂದರೆ ಬಹುಮಹಡಿ ಆಕಾಶ ಚುಂಬಿಸುವ ಕಟ್ಟಡಗಳು, ಜಗಮಗಿಸುವ ದೀಪಗಳು, ಜಾಲಿ ಲೈಫ್, ಮರುಭೂಮಿಯ ನಿದ್ದೆಗೆಡಿಸುವ ರಾತ್ರಿಗಳು, ಕ್ಲೀನ್ ಸಿಟಿ, ಐಶಾರಾಮಿ ಕಾರುಗಳು, ಸೂಟ್‌ಬೂಟ್‌ಗಳು, ಸೆಂಟಿನ ಪರಿಮಳ... ಇತ್ಯಾದಿ ಎಂದು ತಿಳಿದಿರುವವರಿಗೆ ಅದಕ್ಕೂ ಆಚೆಗೆ ಇನ್ನೊಂದು ಕರಾಳ ಮುಖವಿದೆ, ಕಷ್ಟವಿದೆ, ಪ್ರವಾಸಿಯ ಬವಣೆಗೆ ಓಗೊಡುವವರಿಲ್ಲ ಎಂಬುವುದನ್ನು ಬಹಳ ಆಳವಾಗಿ ಈ ಚಿತ್ರ ಬಿಂಬಿಸಿದೆ. ಲೇಬರ್ ಕ್ಯಾಂಪಿನ ಬದುಕನ್ನು ಬಹಿರಂಗಪಡಿಸಿದೆ. ನಮ್ಮಲ್ಲೂ ತುಂಬಾ ಮಂದಿ ಪುರುಷೋತ್ತಮರು, ಅಶ್ರಫ್‌ಗಳು, ಚಾರ್ಲಿಯಂತಹವರು ದುಬೈ ಜೀವನವನ್ನು ಅನುಭವಿಸಿ ಅಲ್ಲಿನ ಬದುಕು-ಬವಣೆಗಳಿಗೆ ಸಾಕ್ಷಿಯಾಗಿ ಮತ್ತೆ ಊರಲ್ಲಿ ಸೆಟಲ್ ಆದವರಿದ್ದಾರೆ.

ಈ ಚಿತ್ರದಲ್ಲಿ ದುಬೈಗೆ ಹೋದ ಪುರುಷೋತ್ತಮ ಮೋಸಹೋದ ಕಥೆ, ಹಿಂದಿರುಗಿ ಊರಲ್ಲಿ ಹಗಲೂ ರಾತ್ರಿ ಕಷ್ಟಪಟ್ಟು ಹಣ ಸಂಪಾದಿಸುವುದು, ಇತ್ತ ಅಕ್ಕನ ಮದುವೆ ಸಮೀಪಿಸುವಾಗಲೇ ದುಡಿದು ಕೂಡಿಟ್ಟ ಹಣ ದರೋಡೆಯಾಗುವುದು, ಪ್ರೀತಿಸಿದ ಹುಡುಗಿ ಬೇರೆ ಮದುವೆಯಾಗುವುದು, ನಿರಂತರ ನೋವು ಅನುಭವಿಸುವುದು, ಕೊನೆಗೆ ನಟನ ಮಾನವೀಯ ಮೌಲ್ಯಗಳಿಂದಾಗಿ, ಸತ್ಯಸಂಧತೆಯಿಂದಾಗಿ, ಒಳ್ಳೆಯ ಗುಣಗಳಿಂದಾಗಿ ಸುಂದರ ಅಂತ್ಯ ಕಾಣುತ್ತದೆ.

‘ಪುರುಷೋತ್ತಮನ ಪ್ರಸಂಗ’ ಕುಟುಂಬಿಕರು ಕೂತು ನೋಡಬಹುದಾದ ಸುಂದರ, ಅರ್ಥಪೂರ್ಣ ಚಿತ್ರ. ನಾಡಿನ ಖ್ಯಾತ ಹಿರಿಯ ಸಾಹಿತಿಗಳಿಂದ ರಚಿಸಲಾದ ಮನಕ್ಕೆ ಮುದ ನೀಡುವ ನಾಲ್ಕು ಹಾಡುಗಳಿವೆ. ಅದ್ಭುತ ಸಂಗೀತವಿದೆ. ಕಥೆ ಕಾಮಿಡಿಯೊಂದಿಗೆ ಭಾವನಾತ್ಮಕವಾಗಿ ಕಣ್ಣಲ್ಲಿ ಆನಂದ ಬಾಷ್ಪ ಭರಿಸುತ್ತದೆ.

ಬೆಂಗಳೂರು ರಾಷ್ಟ್ರಕೂಟ ಫಿಲಂಸ್‌ನ ರವಿಕುಮಾರ್ ಚಿತ್ರದ ನಿರ್ಮಾಪಕರು. ಅವರು ತುಳು ಕಲಾವಿದರಾದ ಡಾ. ದೇವದಾಸ್ ಕಾಪಿಕಾಡ್ ಅವರ ದೊಡ್ಡ ಅಭಿಮಾನಿ. 14 ವರ್ಷಗಳ ಹಿಂದೆ ರಮೇಶ್ ಅರವಿಂದ್ ಅವರ ‘ವೆಂಕಟ ಇನ್ ಸಂಕಟ’ ಸಿನೆಮಾದಲ್ಲಿ ದೇವದಾಸ್ ಕಾಪಿಕಾಡ್ ನಟಿಸಿದ್ದರು. ಅದನ್ನು ರವಿಕುಮಾರ್ ನೋಡಿ ಕಾಪಿಕಾಡ್ ಅಭಿಮಾನಿಯಾಗಿದ್ದರು. ತುಳು ಕಾಮಿಡಿಯನ್ನು ರವಿ ಯೂಟ್ಯೂಬ್‌ನಲ್ಲಿ ನೋಡುತ್ತಿದ್ದರು. ಆದರೆ ಕಾಪಿಕಾಡ್ ಅವರನ್ನು ಸಂಪರ್ಕಿಸಲಾಗಿರಲಿಲ್ಲ. ರವಿಕುಮಾರ್ ನಿರ್ಮಾಪಕರಾಗಿ ಈ ಹಿಂದೆ ‘ಕಿಸ್’ ಹೆಸರಿನ ಮೂವೀ ಮಾಡಿ ಹಿಟ್ ಆಗಿತ್ತು. ಈ ಚಿತ್ರದಿಂದ ಪರಿಚಯವಾದ ನಾಯಕಿ ಇಂದು ತೆಲುಗು ಚಿತ್ರದಲ್ಲಿ ಬಹುಬೇಡಿಕೆಯ ನಟಿಯಾಗಿ ಬೆಳೆದಿದ್ದಾರೆ. ಇನ್ನೊಂದು ಚಿತ್ರವನ್ನು ದೇವದಾಸ್ ಕಾಪಿಕಾಡ್ ನಿರ್ದೇಶನದಲ್ಲಿ ಮಾಡಬೇಕೆಂಬ ಹಂಬಲ ರವಿ ಅವರಲ್ಲಿತ್ತು. ಈ ಬಗ್ಗೆ ರವಿಕುಮಾರ್ ಸ್ನೇಹಿತರಾದ ಅಬೂಬಕರ್ ಪುತ್ತು ಉಪ್ಪಿನಂಗಡಿ ಅವರ ಮೂಲಕ ಕಾಪಿಕಾಡ್‌ರನ್ನು ಸಂಪರ್ಕಿಸಿ ‘ಪುರುಷೋತ್ತಮನ ಪ್ರಸಂಗ’ಕ್ಕೆ ಅಂಕಿತ ಹಾಕಿದರು.

ಹಲವಾರು ತುಳುಚಿತ್ರ ನಿರ್ದೇಶಿಸಿರುವ ಕಾಪಿಕಾಡ್ ಪ್ರಥಮ ಬಾರಿಗೆ ಕನ್ನಡ ಚಿತ್ರ ನಿರ್ದೇಶಿಸಿ ಸೈ ಎನಿಸಿಕೊಂಡಿದ್ದಾರೆ. ಕಥೆ-ಚಿತ್ರಕಥೆ ಕೂಡಾ ಅವರದ್ದೇ. ಸಹ ನಿರ್ದೇಶಕರಾಗಿ ಅರ್ಜುನ್ ಕಾಪಿಕಾಡ್ ನ್ಯಾಯ ತುಂಬಿದ್ದಾರೆ. ಸಹ ನಿರ್ಮಾಪಕರಾಗಿ ರವಿಯವರ ಮಿತ್ರ ಸಂಶುದ್ದೀನ್, ನಾಯಕಿಯರಾಗಿ ರಿಷಿಕಾ ನಾಯ್ಕ್ ಮತ್ತು ದೀಪಿಕಾ ಮನೋಜ್ಞವಾಗಿ ನಟಿಸಿದ್ದಾರೆ. ದೇವದಾಸ್ ಕಾಪಿಕಾಡ್, ನವೀನ್ ಡಿ. ಪಡೀಲ್, ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರು, ಸಾಯಿಕೃಷ್ಣ ಕುಡ್ಲ, ಶೋಭರಾಜ್ ಪಾವೂರು, ರೂಪಾ ವರ್ಕಾಡಿ, ದೀಪಕ್ ರೈ ಪಾಣಾಜೆ, ಚೇತನ್ ರೈ ಮಾಣಿ, ಜ್ಯೋತಿಷ್ ಶೆಟ್ಟಿ, ರೊನಾಲ್ಡ್ ಮಾರ್ಟಿಸ್ ಕುಲಶೇಖರ, ನವೀದ್ ಮಾಗುಂಡಿ, ಮಂಗೇಶ್ ಭಟ್ ವಿಟ್ಲ, ಮುಹಮ್ಮದ್ ಬಡ್ಡೂರು ಮೊದಲಾದವರು ತಾರಾಗಣದಲ್ಲಿದ್ದಾರೆ.

ಚಿತ್ರದಲ್ಲಿ ಮಂಗಳೂರಿನ ಕನ್ನಡ ಭಾಷೆಯಲ್ಲದೇ ಅಲ್ಪಸ್ವಲ್ಪ ಬ್ಯಾರಿ, ಕೊಂಕಣಿ, ಸರಳ ಇಂಗ್ಲಿಷ್ ಭಾಷೆ ಅಡಕವಾಗಿದೆ. ಸಹಾಯಕ ನಿರ್ದೇಶಕರಾಗಿ ಅರ್ಜುನ್ ಕಜೆ, ಪ್ರಶಾಂತ್ ಕಲ್ಲಡ್ಕ, ವಿಕ್ರಮ್ ದೇವಾಡಿಗ, ಅನೂಪ್ ಸಾಗರ್, ಕ್ಯಾಮರಾ ವಿಷ್ಣು, ಸಹಾಯಕರಾಗಿ ಪುಟ್ಟ, ಸಂಗೀತ ನಕುಲ್ ಅಭಯಂಕರ್, ವಸ್ತ್ರ ವಿನ್ಯಾಸ ಶರತ್ ಪೂಜಾರಿ, ಸಹಾಯಕ ನಿರ್ಮಾಪಕರಾಗಿ ಅಬೂಬಕರ್ ಪುತ್ತು ಉಪ್ಪಿನಂಗಡಿ, ಲೈನ್ ಪ್ರೊಡ್ಯೂಸರ್ ಸಂದೀಪ್ ಶೆಟ್ಟಿ, ಪ್ರೊಡಕ್ಷನ್ ತಂಡದಲ್ಲಿ ಸಂತೋಷ್, ರಮಾನಂದ, ಮುನ್ನ ಹಾಗೂ ರಾಜೇಶ್ ಸಹಕರಿಸಿದ್ದಾರೆ. ಒಟ್ಟಿನಲ್ಲಿ ಸಿನೆಮಾ ಪ್ರಿಯರಿಗೆ ಪುರುಷೋತ್ತಮನ ಪ್ರಸಂಗ ಒಂದೊಳ್ಳೆಯ ಬೂಸ್ಟ್ ನೀಡುವುದಂತೂ ಖಂಡಿತ. ಮಾರ್ಚ್ 1ರಿಂದ ರಾಜ್ಯಾದ್ಯಂತ ನೂರಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಪುರುಷೋತ್ತಮನ ಪ್ರಸಂಗ’ ತೆರೆ ಕಂಡಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ರವಿ

contributor

Similar News