×
Ad

ಅರಕಲಗೂಡು | ಮರಕ್ಕೆ ಕಾರು ಢಿಕ್ಕಿ; ಓರ್ವ ಮೃತ್ಯು, ಮೂವರಿಗೆ ಗಾಯ

Update: 2025-07-21 19:39 IST

ಅರಕಲಗೂಡು : ತೆಂಗಿನಮರಕ್ಕೆ ಕಾರು ಢಿಕ್ಕಿ ಹೊಡೆದ ಪರಿಣಾಮ ಓರ್ವ ಸ್ಥಳದಲ್ಲೇ ಮೃತಪಟ್ಟು, ಮೂವರು ಗಾಯಗೊಂಡಿರುವ ಘಟನೆ ರಾಮನಾಥಪುರದ ಹಿರೇಹಳ್ಳಿ ಗೇಟ್ ಬಳಿ ನಡೆದಿದೆ.

ತಾಲೂಕಿನ ಹೊನ್ನವಳ್ಳಿ ಗ್ರಾಮದ ಭೈರ (35) ಮೃತ ವ್ಯಕ್ತಿ. ಕಾರಿನಲ್ಲಿ ಹೊನ್ನವಳ್ಳಿ ಗ್ರಾಮದ ನಾಲ್ವರು ಮೈಸೂರಿಗೆ ತೆರಳುತ್ತಿದ್ದರು. ಈ ವೇಳೆ ಟ್ರಾವೆಲ್ಸ್ ಮಾಲೀಕ ಭೈರ ಕಾರು ಚಲಾಯಿಸುತ್ತಿದ್ದ ಎನ್ನಲಾಗಿದೆ.

ಹಿರೇಹಳ್ಳಿ ಗ್ರಾಮದ ಬಳಿ ರಾಜ್ಯ ಹೆದ್ದಾರಿಯಲ್ಲಿ ಎದುರಿನಿಂದ ಬಂದ ಬೈಕ್‌ಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ತೆಂಗಿನಮರಕ್ಕೆ ಕಾರು ಗುದ್ದಿದೆ. ತೆಂಗಿನಮರಕ್ಕೆ ಢಿಕ್ಕಿ ಹೊಡೆದು ಕಾರು ಪಲ್ಟಿಯಾಗಿ ನಜ್ಜುಗುಜ್ಜಾಗಿದೆ. ಚಾಲಕ ಭೈರ ಸ್ಥಳದಲ್ಲೇ ಮೃತಪಟ್ಟರೆ, ಮೂವರು ಗಾಯಗೊಂಡಿದ್ದಾರೆ.

ಗಾಯಾಳುಗಳನ್ನು ಅರಕಲಗೂಡು ತಾಲ್ಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಗಂಭೀರವಾಗಿರುವವರನ್ನು ಹಾಸನಕ್ಕೆ ರವಾನೆ ಮಾಡಲಾಗಿದೆ.

ಸ್ಥಳಕ್ಕೆ ಕೊಣನೂರು ಪೊಲೀಸರು ಭೇಟಿ ನೀಡಿ, ಪರಿಶೀಲಿಸಿ ತನಿಖೆ ಕೈಗೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News