×
Ad

ಕಲಬುರಗಿ | ಜಗತ್ತಿನ ಮುಂದುವರಿದ ರಾಷ್ಟ್ರಗಳು ಇವಿಎಂ ಬಳಕೆಗೆ ಹಿಂದೇಟು ಹಾಕುತ್ತಿದೆ : ಸಚಿವ ರಾಮಲಿಂಗಾರೆಡ್ಡಿ

Update: 2025-09-06 22:39 IST

ಕಲಬುರಗಿ: ಚುನಾವಣೆಯಲ್ಲಿ ಬ್ಯಾಲೇಟ್ ಪೇಪರ್ ಬಳಕೆಯಿಂದ ಯಾವುದೇ ಮೋಸ ಆಗುವುದಿಲ್ಲ, ಜಗತ್ತಿನ ಮುಂದುವರೆದ ಕೆಲವು ರಾಷ್ಟ್ರಗಳು ಇವಿಎಂ ಬಳಕೆಗೆ ಹಿಂದೇಟು ಹಾಕುತ್ತಿರುವಾಗ ನಾವ್ಯಾಕೆ ಮೆಷಿನ್‌ಗಳನ್ನು ಬಳಸಬೇಕು ಎಂದು ರಾಜ್ಯ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪ್ರಶ್ನಿಸಿದ್ದಾರೆ.

ಕಾಂಗ್ರೆಸ್‌ನವರು ವಾಪಸ್ ಶಿಲಾಯುಗಕ್ಕೆ ಹೋಗುತ್ತಿದ್ದಾರೆ ಎಂಬ ಬಿಜೆಪಿ ಶಾಸಕ ಸುರೇಶಕುಮಾರ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ರಾಮಲಿಂಗಾರೆಡ್ಡಿ, ಶಿಲಾಯುಗ ಅಲ್ಲ, ಮೋಸದ ಯುಗದಿಂದ ಯಾವ ಯುಗಕ್ಕೆ ಬಂದರೂ ತೊಂದರೆ ಇಲ್ಲ. ಸದ್ಯ ಅವರಿರುವುದು ಮೋಸದ ಯುಗದಲ್ಲಿ. ಆದರೆ ಇಲ್ಲಿ ಎಲೆಕ್ಷನ್‌ನಲ್ಲಿ ಮೋಸ ಮಾಡುವವರು ಇರುವುದಿಲ್ಲ. ಸಮಯ ಸಂದರ್ಭ ಗಮನಿಸಿ ತಮಗೆ ಬೇಕಾದ ರೀತಿಯಲ್ಲಿ ಮಾತ್ರ ಮೋಸಕ್ಕಿಳಿಯುತ್ತಾರೆ ಎಂದು ಹೇಳಿದರು.

ಬ್ಯಾಲೇಟ್ ಪೇಪರ್ ಮತದಾನ ಸಾಧ್ಯದ ಕೆಲಸ, ಆದರೆ ಇವಿಎಂ ಬಗ್ಗೆ ಎಲ್ಲಿಯೋ ಕುಳಿತುಕೊಂಡು ಮೇಲ್ವಿಚಾರಣೆ ಮಾಡುವುದೆಂದರೆ ಅನುಮಾನಕ್ಕೆ ಕಾರಣವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಕಾಂಗ್ರೆಸ್ ಸೋತಾಗ ಮಾತ್ರ ಇವಿಎಂ ವಿಚಾರ ಮುನ್ನೆಲೆಗೆ ಬರುತ್ತದೆಯೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ಜರ್ಮನ ದೇಶದವರು ಮೊದಲ ಬಾರಿಗೆ ಮೊದಲು ಇವಿಎಂ ತಯಾರಿಸಿದವರು. ಅಲ್ಲಿನ ಸುಪ್ರೀಂಕೋರ್ಟ್ ಇವಿಎಂ ಬೇಡವೆಂದು ತೀರ್ಮಾನಿಸಿದೆ. ಅಲ್ಲದೆ ಅಮೆರಿಕ, ಇಂಗ್ಲೆoಡ್ ಮತ್ತು ಫ್ರಾನ್ಸ್ ನಲ್ಲಿಯೂ ಇವಿಎಂ ಬಳಕೆ ಮಾಡುತ್ತಿಲ್ಲ. ಭಾರತದಲ್ಲಿ ಮಾತ್ರ ಯಾಕೆ? ಎಂದು ಮರುಪ್ರಶ್ನಿಸಿದರು.

ಈ ಹಿಂದೆ ಪ್ರಧಾನಿ ದಿ. ರಾಜೀವಗಾಂಧಿ ಸರಕಾರ ಇದ್ದಾಗ ಕೇಂದ್ರ ಚುನಾವಣಾ ಆಯೋಗ, ಕೇಂದ್ರ ಸರಕಾರ ಇವಿಎಂ ಬಳಕೆ ಬಗ್ಗೆ ತೀರ್ಮಾನಿಸಿರುವುದು ನಿಜ. ಆದರೆ ಇತ್ತೀಚೆಗೆ ಇವಿಎಂನಲ್ಲಿ ಭಾರಿ ಮೋಸ ಕಂಡುಬರುತ್ತಿದೆ ಎನ್ನುವ ಸಂಶಯ ಕಾಡುತ್ತಿದೆ. ಇದರಿಂದ ನಾವು ತಂತ್ರಜ್ಞಾನದಿoದ ಹಿಂದೆ ಬರುತ್ತಿದ್ದೇವೆ ಎಂಬ ಭಾವನೆ ಸರಿಯಲ್ಲ ಎಂದು ತಿಳಿಸಿದರು.

ರಾಜಕೀಯದಲ್ಲಿ ಸುಧೀರ್ಘ ಸೇವೆ ಸಲ್ಲಿಸಿರುವ ಮಾಜಿ ಸಚಿವ ಕೆ.ಎನ್ ರಾಜಣ್ಣ ಕಾಂಗ್ರೆಸ್‌ನಿoದ ಬಿಜೆಪಿಗೆ ಸೇರ್ಪಡೆ ಆಗುವುದು ಊಹಾಪೋಹ, ಇತ್ತೀಚೆಗೆ ಅವರ ಜನ್ಮದಿನಕ್ಕೆ ಶುಭಾಶಯ ಕೊರಲು ಹೋಗಿದ್ದೆ. ರಾಜಣ್ಣ ಯಾವುದೇ ಪಕ್ಷಕ್ಕೆ ಹೋಗಲ್ಲ, ಹಿಂದೆಯೂ ಕಾಂಗ್ರೆಸ್, ಮುಂದೆಯೂ ಕಾಂಗ್ರೆಸ್‌ನಲ್ಲಿ ಉಳಿಯುತ್ತಾರೆ. ಈಗಲೂ ಕಾಂಗ್ರೆಸ್‌ನವರಾಗಿದ್ದಾರೆ ಎಂದು ರಾಮಲಿಂಗಾರೆಡ್ಡಿ ಹೇಳಿದರು. 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News