ಕಲಬುರಗಿ | ವೈದ್ಯಕೀಯ ಆರೈಕೆಯಲ್ಲಿ ಮಾನವೀಯ ಸ್ಪರ್ಶದಿಂದ ಉತ್ತಮ ಫಲಿತಾಂಶ: ಡಾ.ಪೀಟರ್ ಆಂಡ್ರೂ ಬ್ರೇನನ್
ಕಲಬುರಗಿ: ವೈದ್ಯಕೀಯ ಆರೈಕೆಯಲ್ಲಿ ಮಾನವೀಯತೆಯ ಸ್ಪರ್ಶವು ರೋಗಿಯ ಸ್ವಾತಂತ್ರ್ಯವನ್ನು ಗೌರವಿಸಿ, ನಂಬಿಕೆ ಮತ್ತು ಸಹಾನುಭೂತಿಯ ಆಧಾರದ ಮೇಲೆ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ, ಇದು ಉತ್ತಮ ವೈದ್ಯಕೀಯ ಫಲಿತಾಂಶಗಳಿಗೆ ಕಾರಣವಾಗುತ್ತದೆ ಎಂದು ಇಂಗ್ಲೆಂಡ್ ಮೂಲದ ವೈದ್ಯ ಡಾ.ಪೀಟರ್ ಆಂಡ್ರೂ ಬ್ರೇನನ್ ಹೇಳಿದರು.
ಅವರು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಎಸ್.ನಿಜಲಿಂಗಪ್ಪ ದಂತ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಸೊಸೈಟಿ ಆಫ್ ಕ್ಲಿನಿಕಲ್ ರಿಸರ್ಚ್ ಆಂಡ್ ಮೆಡಿಕಲ್ ಪ್ರೋಪೆಷನ್ ಸಹಯೋಗದಲ್ಲಿ ನಡೆದ 'ಮಾನವೀಯತೆ ಹಾಗೂ ರೋಗಿಯ ಆರೈಕೆ' ಎಂಬ ವಿಷಯದ ಕುರಿತಾದ ಆತಿಥ್ಯ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ವೈದ್ಯಕೀಯ ಸಂವಹನವು ನಂಬಿಕೆಯಿಂದ ಕೂಡಿದ್ದು, ರೋಗಿಯ ಅಗತ್ಯಗಳಿಗೆ ಪ್ರಾಮುಖ್ಯತೆ ನೀಡುವಂತಿರಬೇಕು. ಇದು ರೋಗಿಯು ತಮ್ಮ ದೀರ್ಘಾವಧಿಯ ಆಸಕ್ತಿಗಳಿಗೆ ಅನುಗುಣವಾಗಿ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ ಎಂದು ಹೇಳಿದರು.
ಈ ವೈದ್ಯರು ಸುಮಾರು 350 ಹೆಚ್ಚು ಲೇಖನಗಳನ್ನು ಹಾಗೂ ಮಾನವ ದೇಹ ರಚನಾ ಶಾಸ್ತ್ರದ ಮೇಲೆ ಹಲವಾರು ಕೃತಿಗಳನ್ನು ಬರೆದಿದ್ದಾರೆ. ಅಷ್ಟೇ ಅಲ್ಲದೆ ಮೌಖಿಕ ಮತ್ತು ಮ್ಯಾಕ್ಸಿಲೊಫೇಶಿಯಲ್ ಶಸ್ತ್ರಚಿಕಿತ್ಸೆಯಲ್ಲಿ ಜಾಗತಿಕವಾಗಿ ಪ್ರಸಿದ್ಧರಾಗಿರುವ ಇಂಗ್ಲೇಂಡ್ ನ ಬ್ರಿಸ್ಟಲ್ ವೈದ್ಯಕೀಯ ವಿಶ್ವವಿದ್ಯಾಲಯದ ಎಲಿಜಬೆತ್ ಬ್ರೇನನ್, ಎಮಿಲಿ ಮೋರಿಯಾ ಸಿಂಪ್ಸನ್, ಮಿಸ್ ಕಾನ್ಸೇಟ್ನ್ಸ ಅಲೈನ್ಸ್ ಭಾಗವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು ಹಾಗೂ ಕಾಲೇಜಿನ ಸಂಯೋಜಕರಾದ ಡಾ.ಅನಿಲಕುಮಾರ ಪಟ್ಟಣ, ಕಾಲೇಜಿನ ಪ್ರಾಚಾರ್ಯರಾದ ಡಾ.ಜಯಶ್ರೀ ಮುದ್ದಾ, ಉಪ ಪ್ರಾಚಾರ್ಯರಾದ ಡಾ.ವೀರೇಂದ್ರ ಪಾಟೀಲ್, ಡಾ.ಸುರಭಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ವಿವಿಧ ದಂತ ಮಹಾವಿದ್ಯಾಲಯಗಳ ಹಲವಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.