ಕಲಬುರಗಿ | ಆರೋಗ್ಯವೇ ಮನುಷ್ಯನ ದೊಡ್ಡ ಸಂಪತ್ತು : ಡಾ.ಅಂಕಿತ್ ಕದರ್ಗಿ
ಕಲಬುರಗಿ: ಆರೋಗ್ಯ ಕಳೆದುಕೊಂಡು ಬೇರೆ ಎಲ್ಲ ಸಂಪತ್ತು ಗಳಿಸಿದರೂ ವ್ಯರ್ಥ. ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಂಡರೆ ಅನೇಕ ಕಾಯಿಲೆಗಳಿಂದ ದೂರವಿರಬಹುದು ಎಂದು ತಜ್ಞ ವೈದ್ಯ ಡಾ.ಅಂಕಿತ್ ಆರ್.ಕದರ್ಗಿ ಅಭಿಪ್ರಾಯಪಟ್ಟರು.
ನಗರದ ಆಳಂದ ರಸ್ತೆಯ ಕೆ.ಎಚ್.ಬಿ ಗ್ರೀನ್ ಪಾರ್ಕ್ನ ಹನುಮಾನ ದೇವಾಲಯ ಆವರಣದಲ್ಲಿ ‘ಆಯುಸಿಂಕ್ ಮೆಡಿಕಲ್ ಕಂಪನಿ’ ಹಾಗೂ ಬಡಾವಣೆಯ ಜಂಟಿ ಆಶ್ರಯದಲ್ಲಿ ಭಾನುವಾರ ಆಯೋಜಿಸಿದ್ದ ಒಂದು ದಿನದ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಅವರು ಮಾತನಾಡಿದರು.
ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಕೆ.ಎಚ್.ಬಿ ಗ್ರೀನ್ ಪಾರ್ಕ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸಂಜೀವಕುಮಾರ ಶೆಟ್ಟಿ ಮತ್ತು ಸಿಪಿಐ ಶ್ರೀಶೈಲ ತಾರದಾಳ, ಪೌಷ್ಠಿಕಾಂಶಯುತ ಆಹಾರ ಸೇವನೆ, ಶುದ್ಧ ನೀರು, ದಿನಕ್ಕೆ 7–8 ಗಂಟೆಗಳ ನಿದ್ರೆ, ನಿಯಮಿತ ವ್ಯಾಯಾಮ, ಯೋಗ ಹಾಗೂ ಸಕಾರಾತ್ಮಕ ಚಿಂತನೆಗಳನ್ನು ಅಳವಡಿಸಿಕೊಳ್ಳುವುದು ಆರೋಗ್ಯಕರ ಜೀವನದ ಗುಟ್ಟು” ಎಂದು ತಿಳಿಸಿದರು. ಸಮಸ್ಯೆ ಎದುರಾದರೆ ಸ್ವಂತ ಚಿಕಿತ್ಸೆ ಮಾಡದೇ ತಜ್ಞ ವೈದ್ಯರನ್ನು ಸಂಪರ್ಕಿಸಬೇಕು ಎಂದರು. ಆಯುಸಿಂಕ್ ಕಂಪನಿಯ ಸಮಾಜಪರ ಕಾಳಜಿ ಶ್ಲಾಘನೀಯ ಎಂದು ಹೇಳಿದರು.
ಆಯುಸಿಂಕ್ ಮೆಡಿಕಲ್ ಕಂಪನಿಯ ಸಂಸ್ಥಾಪಕ ಹಾಗೂ ಸಿಇಓ ಆದರ್ಶ ಕೆ. ಮಾತನಾಡಿ, “ರಾಜ್ಯದೆಲ್ಲೆಡೆ ಉಚಿತ ಆರೋಗ್ಯ ಶಿಬಿರಗಳನ್ನು ಆಯೋಜಿಸುವ ಮೂಲಕ ಆರೋಗ್ಯಯುತ ಸದೃಢ ಸಮಾಜ ನಿರ್ಮಾಣ ನಮ್ಮ ಧ್ಯೇಯ” ಎಂದು ಹೇಳಿದರು.
ಶಿಬಿರದಲ್ಲಿ 12 ಜನ ವೈದ್ಯರು ಹಾಗೂ ಸಿಬ್ಬಂದಿಯ ತಂಡವು ಬೆಳಿಗ್ಗೆಯಿಂದ ಸಂಜೆವರೆಗೆ 400ಕ್ಕೂ ಹೆಚ್ಚು ಜನರಿಗೆ ರಕ್ತದೊತ್ತಡ, ಮಧುಮೇಹ, ಹೃದಯ ಸಂಬಂಧಿ ಕಾಯಿಲೆ, ಕೊಲೆಸ್ಟ್ರಾಲ್ ಸೇರಿದಂತೆ ವಿವಿಧ ತಪಾಸಣೆಗಳನ್ನು ನಡೆಸಿತು.
ಕಾರ್ಯಕ್ರಮದಲ್ಲಿ ಆಯುಸಿಂಕ್ ಮೆಡಿಕಲ್ ಕಂಪನಿಯ ಸೌರಭ ಪಾಂಡೆ, ಶ್ರೇಯಸ್ ಎಸ್., ವಿಜಿಮಾಲ್ ಎಸ್., ಸ್ನೇಹಾ, ರಂಜಿತ್, ಸೌರಭ, ಹರಿತಾ, ಸಾನಿಯಾ, ಸೈನಾ, ರಿಪಾ, ಅಂಕಿತ್, ಶೌಕತ್, ಶಮೀನಾ, ಡಾ. ವಿಜಯಶ್ರೀ, ಯೋಗೇಶ್, ನವಾಜ್ ಸೇರಿದಂತೆ ವೈದ್ಯರು ಹಾಗೂ ಸಿಬ್ಬಂದಿ ಸೇವೆ ಸಲ್ಲಿಸಿದರು.
ಸಮಾಜ ಸೇವಕರಾದ ಎಚ್.ಬಿ. ಪಾಟೀಲ್, ಶಿವಯೋಗೆಪ್ಪಾ ಎಸ್. ಬಿರಾದಾರ, ಸಂಘದ ಉಪಾಧ್ಯಕ್ಷ ಬಾಲಕೃಷ್ಣ ಕುಲಕರ್ಣಿ, ಸಂಗಮೇಶ್ವರ ಸರಡಗಿ, ರಾಜಕುಮಾರ ಕದರ್ಗಿ, ಬಸವರಾಜ ಹೆಳವರ ಯಾಳಗಿ, ವಿರೇಶ್ ಬೋಳಶೆಟ್ಟಿ ನರೋಣಾ, ಮಲ್ಲಿನಾಥ ಮುನ್ನಳ್ಳಿ, ಶಿವಕಾಂತ ಚಿಮ್ಮಾ, ವೀರಯ್ಯ ಹಿರೇಮಠ, ಶ್ರೀನಿವಾಸ ಬುಜ್ಜಿ ಸೇರಿದಂತೆ ಅನೇಕರು ಹಾಜರಿದ್ದರು.