ದೇಶಾದ್ಯಂತ ಎಸ್ಐಆರ್ಗೆ ಮುನ್ನ ಬಿಎಲ್ಒಗಳಿಗೆ ತರಬೇತಿ:ಸಿಇಒಗಳಿಗೆ ಚು.ಆಯೋಗದ ಸೂಚನೆ
ಚುನಾವಣಾ ಆಯೋಗ | Photo Credit : PTI
ಹೊಸದಿಲ್ಲಿ,ಅ.೨೪:ಬೂತ್ ಮಟ್ಟದ ಅಧಿಕಾರಿಗಳಿಗೆ(ಬಿಎಲ್ಒಗಳು) ತರಬೇತಿಯನ್ನು ಆರಂಭಿಸುವಂತೆ ಚುನಾವಣಾ ಆಯೋಗವು ಎಲ್ಲ ಮುಖ್ಯ ಚುನಾವಣಾಧಿಕಾರಿಗಳಿಗೆ(ಸಿಇಒ),ವಿಶೇಷವಾಗಿ ಮುಂದಿನ ವರ್ಷ ವಿಧಾನಸಭಾ ಚುನಾವಣೆಗಳು ನಡೆಯಲಿರುವ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಸಿಇಒಗಳಿಗೆ ಸೂಚಿಸಿದೆ. ಇದೇ ವೇಳೆ,ದೇಶಾದ್ಯಂತ ಹಂತಹಂತವಾಗಿ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ(ಎಸ್ಐಆರ್)ಯನ್ನು ಪ್ರಕಟಿಸುವ ಮುನ್ನ ಸಾಕಷ್ಟು ಸಂಖ್ಯೆಯಲ್ಲಿ ಬೂತ್ ಮಟ್ಟದ ಏಜೆಂಟ್ಗಳನ್ನು ನೇಮಿಸುವಂತೆ ಅದು ರಾಜಕೀಯ ಪಕ್ಷಗಳನ್ನು ಆಗ್ರಹಿಸಿದೆ.
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ ಕುಮಾರ ಅವರ ಅಧ್ಯಕ್ಷತೆಯಲ್ಲಿ ನಡೆದ ಸಿಇಒಗಳ ಸಮಾವೇಶ ಗುರುವಾರ ಸಂಪನ್ನಗೊಂಡಿದ್ದು,ಅದೇ ದಿನ ಆಯೋಗವು ಈ ನಿರ್ದೇಶನಗಳನ್ನು ಹೊರಡಿಸಿದೆ. ಆಯೋಗವು ಗುರುವಾರ ಚುನಾವಣೆಗಳು ನಡೆಯಲಿರುವ ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ,ಅಸ್ಸಾಂ ಮತ್ತು ಪುದುಚೇರಿಗಳ ಸಿಇಒಗಳಿಗೆ ಇರಬಹುದಾದ ಯಾವುದೇ ಸಮಸ್ಯೆಗಳ ಬಗ್ಗೆ ತಿಳಿದುಕೊಳ್ಳಲು ಅವರೊಂದಿಗೆ ಪ್ರತ್ಯೇಕವಾಗಿ ಸಂವಾದಗಳನ್ನು ನಡೆಸಿತು.
ಆರಂಭಿಕ ಹಂತದಲ್ಲಿ ಈ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತ್ತು ಇತರ ಕೆಲವು ರಾಜ್ಯಗಳಲ್ಲಿ ನಡೆಯಲಿರುವ ಎಸ್ಐಆರ್ ಮೂರು ತಿಂಗಳಿಗೂ ಹೆಚ್ಚಿನ ಸಮಯವನ್ನು ತೆಗೆದುಕೊಳ್ಳಲಿದೆ ಮತ್ತು ಅಂತಿಮ ಮತದಾರರ ಪಟ್ಟಿಗಳು ಜನವರಿ ಅಂತ್ಯದಲ್ಲಿ ಅಥವಾ ಫೆಬ್ರವರಿ ಆರಂಭದಲ್ಲಿ ಪ್ರಕಟಗೊಳ್ಳಲಿವೆ.
ಚುನಾವಣಾ ಆಯೋಗವು ದೇಶಾದ್ಯಂತ ಎಸ್ಐಆರ್ ಪ್ರಕ್ರಿಯೆಯ ಮೊದಲ ಹಂತವನ್ನು ಮುಂದಿನ ೩-೪ ದಿನಗಳಲ್ಲಿ ಪ್ರಕಟಿಸುವ ನಿರೀಕ್ಷೆಯಿದೆ.
ಆಯೋಗವು ದೇಶಾದ್ಯಂತ ಎಸ್ಐಆರ್ ವೇಳಾಪಟ್ಟಿಯನ್ನು ಅಂತಿಮಗೊಳಿಸಲು ಮುಂದಿನೆರಡು ದಿನಗಳ ಕಾಲ ಆಂತರಿಕ ಚರ್ಚೆಗಳನ್ನು ನಡೆಸಲಿದೆ.