ಉತ್ತರಾಖಂಡದ ಬಿನ್ಸಾರ್ ವನ್ಯಜೀವಿ ಅಭಯಾರಣ್ಯದಲ್ಲಿ ಬೆಂಕಿ |ಅರಣ್ಯ ಸಿಬ್ಬಂದಿ ಸೇರಿ ಕನಿಷ್ಠ ನಾಲ್ವರ ಮೃತ್ಯು
Update: 2024-06-13 22:05 IST
PC : NDTV
ಡೆಹ್ರಾಡೂನ್ : ಉತ್ತರಾಖಂಡದ ಅಲ್ಮೋರಾ ಜಿಲ್ಲೆಯ ಬಿನ್ಸಾರ್ ವನ್ಯಜೀವಿ ಅಭಯಾರಣ್ಯದಲ್ಲಿ ಗುರುವಾರ ಬೆಂಕಿ ಕಾಣಿಸಿಕೊಂಡಿದ್ದು, ಅರಣ್ಯ ಇಲಾಖೆಯ ಮೂವರು ಸಿಬ್ಬಂದಿಗಳು ಸೇರಿದಂತೆ ಕನಿಷ್ಠ ನಾಲ್ವರು ಮೃತಪಟ್ಟಿದ್ದಾರೆ.
ವನ್ಯಜೀವಿ ಅಭಯಾರಣ್ಯದ ಸಿವಿಲ್ ಸೋಯಮ್ ಅರಣ್ಯ ವಿಭಾಗದಲ್ಲಿ ಅಪರಾಹ್ನ 3:30ರ ಸುಮಾರಿಗೆ ಈ ದುರಂತ ಸಂಭವಿಸಿದೆ.
ದಿವಾನ ರಾಮ(35),ಕರಣ ಆರ್ಯ(21) ಮತ್ತು ತ್ರಿಲೋಕ ಮೆಹ್ತಾ(56) ಮೃತ ಅರಣ್ಯ ಇಲಾಖೆ ಸಿಬ್ಬಂದಿಗಳಾಗಿದ್ದು, ಪ್ರಾಂತೀಯ ರಕ್ಷಕ ದಳದ ಸಿಬ್ಬಂದಿ ಪೂರಣ ಮೆಹ್ರಾ(52) ಅವರೂ ಬೆಂಕಿಗೆ ಬಲಿಯಾಗಿದ್ದಾರೆ.
ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ ಸಿಂಗ್ ಧಾಮಿ ಘಟನೆಯ ಕುರಿತು ತೀವ್ರ ದುಃಖವನ್ನು ವ್ಯಕ್ತಪಡಿಸಿದ್ದು, ಮೃತರ ಕುಟುಂಬಗಳಿಗೆ ತಲಾ 10 ಲಕ್ಷ ರೂ.ಗಳ ಪರಿಹಾರವನ್ನು ಪ್ರಕಟಿಸಿದ್ದಾರೆ.
ತೀವ್ರ ಸುಟ್ಟ ಗಾಯಗಳಾಗಿರುವ ಇತರ ನಾಲ್ವರು ಅರಣ್ಯ ಇಲಾಖೆ ಸಿಬ್ಬಂದಿಗಳನ್ನು ಹೆಲಿಕಾಪ್ಟರ್ ಮೂಲಕ ಹಲ್ದ್ವಾನಿ ಬೇಸ್ ಹಾಸ್ಪಿಟಲ್ಗೆ ಸಾಗಿಸಲಾಗಿದೆ.