ಆಸ್ಟ್ರೇಲಿಯದ ಬೌಲಿಂಗ್ ದಾಳಿಗೆ ಕುಸಿದ ಭಾರತ
Photo : x/bcci
ರಾಯ್ಪುರ : ಇಲ್ಲಿನ ಶಹೀದ್ ವೀರ್ ಸಿಂಗ್ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟ20 ಸರಣಿಯ ಆಸ್ಟ್ರೇಲಿಯ ವಿರುದ್ಧದ ಪಂದ್ಯದಲ್ಲಿ ಭಾರತ ತಂಡ 9 ವಿಕೆಟ್ ಕಳೆದುಕೊಂಡು 174 ರನ್ ಗಳಿಸಿತು. ಆಸ್ಟ್ರೇಲಿಯ ತಂಡದ ಸಂಘಟಿತ ಬೌಲಿಂಗ್ ದಾಳಿಯನ್ನು ಎದುರಿಸಲು ವಿಫಲವಾದ ಭಾರತ ತಂಡ ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿ ಉಂಟಾಗಿತ್ತು.
ಸರಣಿಯಲ್ಲಿ ಸತತ 4 ನೇ ಬಾರಿ ಟಾಸ್ ಗೆದ್ದ ಆಸ್ಟ್ರೇಲಿಯ ಭಾರತ ತಂಡವನ್ನು ಬ್ಯಾಟಿಂಗ್ ಗೆ ಆಹ್ವಾನಿಸಿತು. ಇನ್ನಿಂಗ್ಸ್ ಆರಂಭಿಸಿದ ಯಶಸ್ವಿ ಜೈಸ್ವಾಲ್, ಋತುರಾಜ್ ಗಾಯಕ್ವಾಡ್ ಭಾರತಕ್ಕೆ ಸ್ಪೋಟಕ ಆರಂಭ ನೀಡಿದರು. 5.6 ನೇ ಓವರ್ ನಲ್ಲಿ ಯಶಸ್ವಿ ಜೈಸ್ವಾಲ್ 28 ಎಸೆತಗಳಲ್ಲಿ 1 ಸಿಕ್ಸರ್, 6 ಬೌಂಡರಿ ಸಹಿತ 37 ರನ್ ಗಳಿಸಿದ್ದಾಗ ಆರೋನ್ ಹಾರ್ಡಿ ಎಸೆತದಲ್ಲಿ ಬೆನ್ ಮೆಕ್ಡರ್ಮಾಟ್ ಅವರಿಗೆ ಕ್ಯಾಚ್ ನೀಡಿ ನಿರ್ಗಮಿಸಿದರು.
ಮೂರನೇ ಕ್ರಮಾಂಕದಲಿ ಬ್ಯಾಟಿಂಗ್ ಬಂದ ಶ್ರೇಯಸ್ ಅಯ್ಯರ್ ನಿರೀಕ್ಷಿತ ಆಟವಾಡಲಿಲ್ಲ. 3 ಪಂದ್ಯಗಳ ನಂತರ ಟಿ20 ತಂಡ ಸೇರಿಕೊಂಡ ಶ್ರೇಯಸ್ ಐಯ್ಯರ್ ಬಗ್ಗೆ ಹೆಚ್ಚಿನ ನಿರೀಕ್ಷೆಯಿತ್ತು. ಅವರು 7 ಎಸೆತಗಳಲ್ಲಿ ಕೇವಲ 8 ರನ್ ಗಳಿಸಿ ತನ್ವೀರ್ ಸಂಗಾ ಎಸೆತದಲ್ಲಿ ಕ್ರಿಸ್ ಗ್ರೀನ್ ಗೆ ಕ್ಯಾಚಿತ್ತು ವಿಕೆಟ್ ಒಪ್ಪಿಸಿದರು.
ನಾಯಕ ಸೂರ್ಯ ಕುಮಾರ್ ಯಾದವ್ ಕೇವಲ 1 ರನ್ ಗಳಿಸಿದರು. ಋತ್ ರಾಜ್ ಗಾಯಕ್ವಾಡ್ 32, ಇಶಾನ್ ಕಿಶನ್ ಬದಲಿಗೆ ಬಂದಿರುವ ವಿಕೆಟ್ ಕೀಪರ್ ಜಿತೇಶ್ ಶರ್ಮಾ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿ 19 ಎಸೆತಗಳಲ್ಲಿ 35 ರನ್ ಗಳಿಸಿದರು.
ಐಪಿಎಲ್ ಫಿನಿಶರ್ ರಿಂಕು ಸಿಂಗ್ ಭರ್ಜರಿ ಆಟವಾಡಿದರು. 29 ಎಸೆತಗಳಲ್ಲಿ 2 ಸಿಕ್ಸರ್, 4 ಬೌಂಡರಿಗಳೊಂದಿಗೆ 46 ರನ್ ಗಳಿಸಿ ಭಾರತ ತಂಡದ ಮೊತ್ತ ಹೆಚ್ಚಿಸಿದರು.
ಆಸೀಸ್ ಪರ ಬೆನ್ ಬೆನ್ ದ್ವಾರ್ಶುಯಿಸ್ 3 ವಿಕೆಟ್ ಪಡೆದರು. ತನ್ವೀರ್ ಸಂಗಾ, ಜೇಸನ್ ಬೆಹ್ರೆನ್ಡಾರ್ಫ್ ತಲಾ 2 ವಿಕೆಟ್ ಪಡೆದರು. ಆರೋನ್ ಹಾರ್ಡಿ ಒಂದು ವಿಕೆಟ್ ಪಡೆದರು.