ಮೋಟಾರ್ ಸೈಕಲ್ ರೇಸಿಂಗ್ ಚಾಂಪಿಯನ್ಶಿಪ್: ಬೆಂಗಳೂರಿನ ಭರವಸೆಯ ರೈಡರ್ ಶ್ರೇಯಸ್ ಅಪಘಾತದಲ್ಲಿ ಮೃತ್ಯು
Photo credit: timesofindia.com
ಚೆನ್ನೈ: ಬೆಂಗಳೂರಿನ 13 ವರ್ಷದ ಭರವಸೆಯ ರೈಡರ್ ಕೊಪ್ಪರಂ ಶ್ರೇಯಸ್ ಹರೀಶ್ ಮದ್ರಾಸ್ ಇಂಟರ್ನ್ಯಾಶನಲ್ ಸರ್ಕ್ಯೂಟ್ನಲ್ಲಿ ಶನಿವಾರ ನಡೆದ ಇಂಡಿಯನ್ ನ್ಯಾಶನಲ್ ಮೋಟಾರ್ ಸೈಕಲ್ ರೇಸಿಂಗ್ ಚಾಂಪಿಯನ್ಶಿಪ್ -2023ರ ಮೂರನೇ ಸುತ್ತಿನಲ್ಲಿ ಅಪಘಾತಕ್ಕೀಡಾಗಿ ಗಂಭೀರ ಗಾಯಗೊಂಡು ಸಾವನ್ನಪ್ಪಿದ್ದಾರೆ.
ಇಂದು ಬೆಳಗ್ಗೆ ಪೋಲ್ ಪೊಸಿಶನ್ನಲ್ಲಿ ಅರ್ಹತೆ ಪಡೆದಿದ್ದ ರೂಕಿ ರೇಸ್ ಆರಂಭವಾದ ನಂತರ ಈ ಘಟನೆ ನಡೆದಿದೆ. ಒಂದು ತಿರುವಿನಲ್ಲಿ ನಿರ್ಗಮಿಸುವಾಗ ಶ್ರೇಯಸ್ ಅಪಘಾತಕ್ಕೀಡಾಗಿದ್ದು, ತಲೆಗೆ ಗಂಭೀರ ಗಾಯವಾಗಿತ್ತು.
ಘಟನೆ ನಡೆದ ತಕ್ಷಣವೇ ರೇಸ್ನ್ನು ಸ್ಥಗಿತಗೊಳಿಸಿ ಟ್ರಾಕ್ನಲ್ಲಿ ಇರಿಸಲಾಗಿದ್ದ ಟ್ರಾಮಾ ಕೇರ್ ಆ್ಯಂಬುಲೆನ್ಸ್ನಲ್ಲಿ ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು. ಆಸ್ಪತ್ರೆಗೆ ತಲುಪುವಷ್ಟರಲ್ಲಿ ಶ್ರೇಯಸ್ ಮೃತಪಟ್ಟಿದ್ದರು. ಈ ವೇಳೆ ಶ್ರೇಯಸ್ ತಂದೆ ಕೊಪ್ಪರಂ ಹರೀಶ್ ಇದ್ದರು.
59 ವರ್ಷದ ಕುಮಾರ್ ಜನವರಿಯಲ್ಲಿ ಸಲೂನ್ ಕಾರು ರೇಸಿಂಗ್ ಅಪಘಾತದಲ್ಲಿ ಸಾವನ್ನಪ್ಪಿದ ನಂತರ ಈ ವರ್ಷ ಮದ್ರಾಸ್ ಇಂಟರ್ನ್ಯಾಶನಲ್ ಸರ್ಕ್ಯೂಟ್ನಲ್ಲಿ ಸಂಭವಿಸಿದ ಎರಡನೇ ಸಾವು ಇದಾಗಿದೆ.
2010ರ ಜುಲೈ 26ರಂದು ಜನಿಸಿದ್ದ ಶ್ರೇಯಸ್ ಬೆಂಗಳೂರಿನ ಕೆನ್ಶ್ರೀ ಸ್ಕೂಲ್ನ ವಿದ್ಯಾರ್ಥಿಯಾಗಿದ್ದು, ಈ ಋತುವಿನಲ್ಲಿ ಪೆಟ್ರೋನಾಸ್ ಟಿವಿಎಸ್ ಒನ್ ಮೇಕ್ ಚಾಂಪಿಯನ್ಶಿಪ್ನ ರೂಕಿ ವಿಭಾಗದಲ್ಲಿ ಸ್ಪರ್ಧಿಸಿರುವ ಸತತ 4 ಸೇರಿದಂತೆ ರಾಷ್ಟ್ರಮಟ್ಟದಲ್ಲಿ ಹಲವಾರು ರೇಸ್ಗಳನ್ನು ಗೆದ್ದಿದ್ದರು.