ಶ್ರೀಲಂಕಾ ಪ್ರವಾಸ | ಸಾಯಿರಾಜ್ ಬಹುತುಳೆ ಭಾರತದ ಬೌಲಿಂಗ್ ಕೋಚ್
Photo : PTI
ಮುಂಬೈ : ಆರು ಪಂದ್ಯಗಳ ಬಿಳಿ ಚೆಂಡಿನ ಕ್ರಿಕೆಟ್ ಸರಣಿಯಲ್ಲಿ ಟೀಮ್ ಇಂಡಿಯಾದ ಬೌಲಿಂಗ್ ಕೋಚ್ ಆಗಿ ಭಾರತ ಮತ್ತು ಮುಂಬೈ ತಂಡದ ಮಾಜಿ ಲೆಗ್ ಸ್ಪಿನ್ನಿಂಗ್ ಆಲ್ರೌಂಡರ್ ಸಾಯಿರಾಜ್ ಬಹುತುಳೆ ಶ್ರೀಲಂಕಾಕ್ಕೆ ಪ್ರಯಾಣಿಸಲಿದ್ದಾರೆ ಎಂದು ‘ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ.
ಅವರು ಕಳೆದ ಮೂರು ವರ್ಷಗಳಿಂದ ಬೆಂಗಳೂರಿನಲ್ಲಿರುವ ನ್ಯಾಶನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಬೌಲಿಂಗ್ ಕೋಚ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ನಿರ್ಗಮನ ಪ್ರಧಾನ ಕೋಚ್ ರಾಹುಲ್ ದ್ರಾವಿಡ್ ಮತ್ತು ನ್ಯಾಶನಲ್ ಕ್ರಿಕೆಟ್ ಅಕಾಡೆಮಿಯ ಅಧ್ಯಕ್ಷ ವಿ.ವಿ.ಎಸ್. ಲಕ್ಷ್ಮಣ್ ಅಡಿಯಲ್ಲಿ ಭಾರತ ಎ ಮತ್ತು ಭಾರತ ಹಿರಿಯರ ತಂಡದಲ್ಲಿ ಸಹಾಯಕ ಸಿಬ್ಬಂದಿಯಾಗಿ ಕೆಲಸ ಮಾಡಿದ್ದಾರೆ.
ಬಹುತುಳೆ 1997-2003ರ ನಡುವಿನ ಅವಧಿಯಲ್ಲಿ ಭಾರತದ ಪರವಾಗಿ ಎರಡು ಟೆಸ್ಟ್ಗಳು ಮತ್ತು ಎಂಟು ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಅವರು 188 ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯಗಳಲ್ಲಿ ಆಡಿ 26ರ ಸರಾಸರಿಯಲ್ಲಿ 630 ವಿಕೆಟ್ ಗಳನ್ನು ಗಳಿಸಿದ್ದಾರೆ ಮತ್ತು 31.83ರ ಸರಾಸರಿಯಲ್ಲಿ 6176 ರನ್ಗಳನ್ನು ಮಾಡಿದ್ದಾರೆ.
ಭಾರತದ ಯುವ ಸ್ಪಿನ್ನರ್ಗಳಿಗೆ ಅವರು ನೀಡಿರುವ ತರಬೇತಿಯು ಯಶಸ್ವಿಯಾಗಿದೆ. ಅವರ ಉಪಸ್ಥಿತಿಯು ಮುಖ್ಯವಾಗಿ ಭಾರತೀಯ ಸ್ಪಿನ್ನರ್ಗಳಾದ ಅಕ್ಷರ್ ಪಟೇಲ್, ರವಿ ಬಿಷ್ಣೋಯ್ ಮತ್ತು ವಾಶಿಂಗ್ಟನ್ ಸುಂದರ್ಗೆ ನೆರವಾಗಲಿದೆ. ಅವರೆಲ್ಲರೂ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿರುವ ಭಾರತೀಯ ಟ್ವೆಂಟಿ20 ಕ್ರಿಕೆಟ್ ತಂಡದ ಭಾಗವಾಗಿದ್ದಾರೆ. ಏಕದಿನ ಸರಣಿಯಲ್ಲಿ ಆಡಲಿರುವ ಕುಲದೀಪ್ ಯಾದವ್ ಕೂಡ ಬಹುತುಳೆಯ ಸೇವೆಯ ಪ್ರಯೋಜನವನ್ನು ಪಡೆಯಲಿದ್ದಾರೆ.
ಕಳೆದ ವರ್ಷ ಶ್ರೀಲಂಕಾ ವಿರುದ್ಧದ ದೇಶಿ ಸರಣಿಯಲ್ಲೂ ಅವರು ಭಾರತೀಯ ತಂಡದೊಂದಿಗೆ ಇದ್ದರು. 2017ರಲ್ಲಿ ಅವರು ಕ್ರಿಕೆಟ್ ಆಸ್ಟ್ರೇಲಿಯದ ಸೆಂಟರ್ ಅಫ್ ಎಕ್ಸಲೆನ್ಸ್ನಲ್ಲಿ ಆಸ್ಟ್ರೇಲಿಯದ ಯುವ ಸ್ಪಿನ್ನರ್ಗಳಿಗೆ ತರಬೇತಿ ನೀಡಿದ್ದರು.