×
Ad

638 ಬಾಲ್ ಗಳಲ್ಲಿ ಅಜೇಯ 404 ರನ್!

Update: 2024-01-15 19:12 IST

Photo: NDTV 

ಶಿವಮೊಗ್ಗ: ಸೋಮವಾರ ಕೂಚ್ ಬಿಹಾರ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಮುಂಬೈ ವಿರುದ್ಧ ಕರ್ನಾಟಕದ ಯುವ ಬ್ಯಾಟರ್ ಪ್ರಖರ್ ಚತುರ್ವೇದಿ ಅಮೋಘ ಪ್ರದರ್ಶನ ನೀಡಿದರು. 19 ವರ್ಷದೊಳಗಿನವರ ಕ್ರಿಕೆಟ್ ಫೈನಲ್ ಪಂದ್ಯದಲ್ಲಿ ಅಜೇಯ 404 ರನ್ ಗಳಿಸುವ ಮೂಲಕ ಪ್ರಖರ್ ದಾಖಲೆ ನಿರ್ಮಿಸಿದರು. ನಾಲ್ಕು ದಿನಗಳ ಈ ಪಂದ್ಯದಲ್ಲಿ 46 ಬೌಂಡರಿ ಹಾಗೂ ಮೂರು ಸಿಕ್ಸರ್ ಗಳೊಂದಿಗೆ 404 ರನ್ ಗಳಿಸಿದ ಪ್ರಖರ್, ಅಜೇಯವಾಗುಳಿದರು. ಇದರ ಬೆನ್ನಿಗೇ ಕರ್ನಾಟಕ ತಂಡವು ತಂಡದ ಮೊತ್ತ 8 ವಿಕೆಟ್ ನಷ್ಟಕ್ಕೆ 890 ರನ್ ಆಗಿದ್ದಾಗ ಡಿಕ್ಲೇರ್ ಮಾಡಿಕೊಂಡಿತು.

ಶಿವಮೊಗ್ಗದ ಕೆಎಸ್‍ಸಿಎ ನವುಲೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಫೈನಲ್ ಪಂದ್ಯದಲ್ಲಿ ಮುಂಬೈ ವಿರುದ್ಧ ಬೃಹತ್ 510 ರನ್ ಗಳ ಮುನ್ನಡೆ ಸಾಧಿಸಿದ ಕರ್ನಾಟಕ ತಂಡವು, ನಾಲ್ಕನೆಯ ದಿನ ಡಿಕ್ಲೇರ್ ಮಾಡಿಕೊಂಡಿತು. ನಂತರ ಉಭಯ ತಂಡಗಳು ಡ್ರಾಗೆ ಸಹಮತ ವ್ಯಕ್ತಪಡಿಸಿದವು. ಮೊದಲ ಇನಿಂಗ್ಸ್ ಮುನ್ನಡೆಯ ಆಧಾರದಲ್ಲಿ ಕರ್ನಾಟಕ ತಂಡವು ಚಾಂಪಿಯನ್ ಪಟ್ಟವನ್ನು ಮುಡಿಗೇರಿಸಿಕೊಂಡಿತು.

ಇದಕ್ಕೂ ಮುನ್ನ ಟಾಸ್ ಗೆದ್ದ ಕರ್ನಾಟಕ ತಂಡವು ಮುಂಬೈ ತಂಡವನ್ನು ಬ್ಯಾಟಿಂಗ್ ಗೆ ಆಹ್ವಾನಿಸಿತು. ಆಯುಷ್ ಮಹಾತ್ರೆ ಅವರ 145 ರನ್ ಗಳ ನೆರವಿನಿಂದ ಮುಂಬೈ ತಂಡವು 380 ರನ್ ಗಳ ಉತ್ತಮ ಮೊತ್ತವನ್ನೇ ಪೇರಿಸಿತು.

ಕರ್ನಾಟಕದ ಪರವಾಗಿ ಹಾರ್ದಿಕ್ ರಾಜ್ 80 ರನ್ ನೀಡಿ 4 ವಿಕೆಟ್ ಕಬಳಿಸಿದರೆ, ಭಾರತ ತಂಡದ ಕೋಚ್ ರಾಹುಲ್ ದ್ರಾವಿಡ್ ಅವರ ಪುತ್ರ ಸಮಿತ್ ದ್ರಾವಿಡ್ ಹಾಗೂ ಸಮರ್ಥ್ ಎನ್. ತಲಾ ಎರಡು ವಿಕೆಟ್ ಗಳನ್ನು ಕಿತ್ತರು.


ಆದರೆ, ಪ್ರಖರ್ ಚತುರ್ವೇದಿಯ ಅಜೇಯ 404 ರನ್ ಗಳ ಕಾರಣಕ್ಕೆ ಪಂದ್ಯದ ಲೆಕ್ಕಾಚಾರವೆಲ್ಲ ತಲೆಕೆಳಕಾಗಿ, ಕರ್ನಾಟಕ ತಂಡವು ಫೈನಲ್ ಪಂದ್ಯದ ಮೇಲೆ ಬಲವಾದ ನಿಯಂತ್ರಣ ಸಾಧಿಸಿತು. ಕೂಚ್ ಬಿಹಾರ್ ಕ್ರೀಡಾಕೂಟದ ಫೈನಲ್ ಪಂದ್ಯದಲ್ಲಿ 400ಕ್ಕೂ ಹೆಚ್ಚು ರನ್ ಗಳಿಸಿದ ಪ್ರಪ್ರಥಮ ಬ್ಯಾಟರ್ ಎಂಬ ಹಿರಿಮೆಗೆ ಪ್ರಖರ್ ಪಾತ್ರವಾದರು.

ಕರ್ನಾಟಕ ತಂಡದ ಮತ್ತೊಬ್ಬ ಬ್ಯಾಟರ್ ಹರ್ಶಿಲ್ ಧರ್ಮಾನಿ ಕೂಡಾ 169 ರನ್ ಗಳಿಸಿದರಾದರೂ, ಪ್ರಖರ್ ಅಮೋಘ ಆಟದೆದುರು ಅವರ ಪ್ರದರ್ಶನ ಮಂಕಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News