ಭಟ್ಕಳ | ಮೀನುಗಾರಿಕಾ ಬಲೆಗೆ ಸಿಲುಕಿದ್ದ ಅಪರೂಪದ ಆಮೆಯನ್ನು ಕಾಪಾಡಿದ ‘ಜಸ್ಟ್ ಡೈವ್' ತಂಡ
ಭಟ್ಕಳ: ನೇತ್ರಾಣಿ ದ್ವೀಪದ ಸಮೀಪ ಮೀನುಗಾರಿಕೆ ಬಲೆಗೆ ಸಿಲುಕಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಅಪರೂಪದ ಸಮುದ್ರ ಆಮೆಯನ್ನು ಮುರುಡೇಶ್ವರದ ಸ್ಕೂಬಾ ಡೈವಿಂಗ್ ತಂಡವೊಂದು ರಕ್ಷಿಸಿ, ಸುರಕ್ಷಿತವಾಗಿ ನೀರಿಗೆ ಬಿಡುವ ಮೂಲಕ ಮಾನವೀಯತೆ ಮೆರೆದಿದೆ.
ಮುರುಡೇಶ್ವರದ ಜಸ್ಟ್ ಡೈವ್’(Just Dive) ಸ್ಕೂಬಾ ಡೈವಿಂಗ್ ತಂಡವು ಪ್ರವಾಸಿಗರನ್ನು ನೇತ್ರಾಣಿ ದ್ವೀಪಕ್ಕೆ ಡೈವಿಂಗ್ ಗಾಗಿ ಕರೆದುಕೊಂಡು ಹೋಗಿತ್ತು. ಡೈವಿಂಗ್ ಮುಗಿಸಿಕೊಂಡು ಮರಳಿ ಮುರುಡೇಶ್ವರಕ್ಕೆ ಬರುವ ಮಾರ್ಗಮಧ್ಯೆ ಸಮುದ್ರದಲ್ಲಿ ಆಮೆಯೊಂದು ಮೀನುಗಾರಿಕಾ ಬಲೆಗೆ ಸಿಲುಕಿ ಒದ್ದಾಡುತ್ತಿರುವುದನ್ನು ತಂಡದ ಸದಸ್ಯರು ಗಮನಿಸಿದರು.
ತಕ್ಷಣವೇ ಬೋಟ್ ನಿಲ್ಲಿಸಿದ ತಂಡವು, ಆಮೆಯನ್ನು ಹಿಡಿದು ಅದಕ್ಕೆ ಬಿಗಿಯಾಗಿ ಸುತ್ತಿಕೊಂಡಿದ್ದ ಬಲೆಯನ್ನು ಜಾಗರೂಕತೆಯಿಂದ ಬಿಡಿಸಿದರು. ಬಲೆಯಿಂದ ಮುಕ್ತಗೊಂಡ ಆಮೆಯನ್ನು ಪುನಃ ಸಮುದ್ರಕ್ಕೆ ಬಿಡಲಾಯಿತು. ಸ್ಕೂಬಾ ಡೈವಿಂಗ್ ತಂಡದ ಈ ಸಮಯಪ್ರಜ್ಞೆಗೆ ಬೋಟ್ ನಲ್ಲಿದ್ದ ಪ್ರವಾಸಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.