ಭಟ್ಕಳ: ಮೀನುಗಾರಿಕೆಗೆ ತೆರಳಿದ್ದ ದೋಣಿ ಮುಳುಗಡೆ; ನಾಲ್ಕು ಮಂದಿ ನಾಪತ್ತೆ
Update: 2025-07-30 17:55 IST
ಭಟ್ಕಳ: ಮೀನುಗಾರಿಕೆಗೆ ತೆರಳಿದ್ದ ದೋಣಿಯೊಂದು ಸಮುದ್ರದಲ್ಲಿ ಮುಳುಗಿದ ಪರಿಣಾಮ ನಾಲ್ವರು ಮೀನುಗಾರು ನಾಪತ್ತೆಯಾಗಿದ್ದು, ಇಬ್ಬರನ್ನು ರಕ್ಷಣೆ ಮಾಡಿ ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ.
ನಾಪತ್ತೆಯಾದ ಮೀನುಗಾರರನ್ನು ರಾಮಕೃಷ್ಣ ಮೊಗೇರ, ಸತೀಶ ಮೊಗೇರ, ಗಣೇಶ ಮೊಗೇರ, ನಿಶ್ಚಿತ ಮೊಗೇರ ಎಂದು ತಿಳಿದು ಬಂದಿದೆ.
ರಕ್ಷಣೆಯಾದ ಮೀನುಗಾರನನ್ನು ದೋಣಿ ಮಾಲಕ ಮನೋಹರ ಮೊಗೇರ ಹಾಗೂ ಬೆಳ್ನಿ ಮೂಲದ ರಾಮ ಖಾರ್ವಿ ಎಂದು ತಿಳಿದು ಬಂದಿದೆ.
ಅವರು ಬುಧವಾರ ಮಧ್ಯಾಹ್ನ ಅಳ್ವೆಕೋಡಿಯಿಂದ ಮಹಾಸತಿ ಗಿಲ್ನಟ್ ದೋಣಿ ಮೂಲಕ ಮೀನುಗಾರಿಕೆಗೆ ತೆರಳಿದ್ದ ವೇಳೆ ಸಮುದ್ರದ ಅಲೆಗೆ ಸಿಲುಕಿ ದೋಣಿ ಮುಳುಗಡೆಯಾಗಿದೆ. ಈ ವೇಳೆ ಇಬ್ಬರನ್ನು ರಕ್ಷಣೆ ಮಾಡಲಾಗಿದ್ದು. ನಾಲ್ವರು ನಾಪತ್ತೆಯಾಗಿದ್ದಾರೆ.
ರಕ್ಷಣೆ ಮಾಡಿದ ಇಬ್ಬರನ್ನು ಕರಾವಳಿ ಪಡೆಯ ಪಿಎಸ್ಐ ವೀಣಾ ಚಿತ್ರಪುರ ತಮ್ಮ ವಾಹನದ ಮೂಲಕ ಭಟ್ಕಳ ಸರ್ಕಾರಿ ಆಸ್ಪತ್ರೆ ದಾಖಲು ಮಾಡಿದ್ದಾರೆ ಎಂದು ತಿಳಿದುಬಂದಿದೆ.