ಭಟ್ಕಳ| ಬಾಲಕಿಯ ಅಪಹರಣ ಯತ್ನ ಪ್ರಕರಣ: 6 ಗಂಟೆಗಳಲ್ಲಿ ಆರೋಪಿಗಳು ಪೊಲೀಸ್ ವಶಕ್ಕೆ
ಭಟ್ಕಳ: ಗುರುವಾರ ರಾತ್ರಿ ಭಟ್ಕಳದ ಹನೀಫಾಬಾದ್ 1ನೇ ಕ್ರಾಸ್ನಿಂದ ಬಾಲಕಿಯನ್ನು ಬೊಲೆರೊ ವಾಹನದಲ್ಲಿ ಅಪಹರಿಸಿ ಪರಾರಿಯಾಗಲು ಯತ್ನಿಸಿದ ಆರೋಪದಡಿ ಇಬ್ಬರು ಆರೋಪಿಗಳನ್ನು ಭಟ್ಕಳ ಗ್ರಾಮೀಣ ಪೊಲೀಸರು ಸಿದ್ದಾಪುರದ ಮಾವಿನಗುಂಡಿ ಸಮೀಪ ವಶಕ್ಕೆ ಪಡೆದಿದ್ದಾರೆ.
ಆರೋಪಿಗಳನ್ನು ಹಾವೇರಿಯ ಶಿವಪುರದ ಆಸೀಫ್ ಜಮಾಲಸಾಬ್ ಹಾಗೂ ಭಟ್ಕಳದ ಜಾಲಿ ತಗ್ಗರಗೋಡ ನಿವಾಸಿ ಮುಹಮ್ಮದ್ ಮೋಸಿನ್ ಎಂದು ಗುರುತಿಸಲಾಗಿದೆ.
ಬಾಲಕಿಯ ತಾಯಿ ನೀಡಿದ ದೂರಿನ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಭಟ್ಕಳ ಗ್ರಾಮೀಣ ಠಾಣೆಯ ಪೊಲೀಸರು, ಅಪಹರಣ ನಡೆದ ಆರು ಗಂಟೆಗಳ ಒಳಗೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸಿಪಿಐ ಮಂಜುನಾಥ ಲಿಂಗಾರೆಡ್ಡಿ ಅವರ ಮಾರ್ಗದರ್ಶನದಲ್ಲಿ ಎಎಸ್ಐ ನಾರಾಯಣ, ಹೆಡ್ ಕಾನ್ಸ್ಟೇಬಲ್ ನಾರಾಯಣ ಹಾಗೂ ಸಿಬ್ಬಂದಿ ಅಕ್ಷಯಕುಮಾರ್ ಅವರನ್ನು ಒಳಗೊಂಡ ತಂಡ ಈ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಿರ್ವಹಿಸಿತು.
ಈ ಕಾರ್ಯಾಚರಣೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿಲೀಪನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.