ಭಟ್ಕಳ | ಮುರ್ಡೇಶ್ವರದಲ್ಲಿ ಕಟ್ಟಡ ಕಾಮಗಾರಿಯ ವೇಳೆ ಲಿಫ್ಟ್ ಕುಸಿತ : ಇಬ್ಬರು ಕಾರ್ಮಿಕರು ಮೃತ್ಯು
ಸಾಂದರ್ಭಿಕ ಚಿತ್ರ
ಭಟ್ಕಳ: ಮುರ್ಡೇಶ್ವರದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಯ ವೇಳೆ ತಾತ್ಕಾಲಿಕವಾಗಿ ಅಳವಡಿಸಲಾಗಿದ್ದ ಲಿಫ್ಟ್ ಕುಸಿದ ಪರಿಣಾಮ ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಗುರುವಾರ ಸಂಜೆ ನಡೆದಿದೆ.
ಮೃತರನ್ನು ಪ್ರಭಾಕರ ಮುತಪ್ಪ ಶೆಟ್ಟಿ (ಮುರ್ಡೇಶ್ವರದ ಬಸ್ತಿಯ ನಿವಾಸಿ) ಮತ್ತು ಬಾಬಣ್ಣ ಪೂಜಾರಿ (ಬೈಂದೂರು ತಾಲೂಕಿನ ನಿವಾಸಿ) ಎಂದು ಗುರುತಿಸಲಾಗಿದೆ.
ಮಾಹಿತಿಯ ಪ್ರಕಾರ, ಮುರ್ಡೇಶ್ವರದ ಓಲಗಾ ಮಂಟಪದ ಸಮೀಪ ನಾಲ್ಕು ಮಹಡಿಗಳ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿತ್ತು. ಕಾಮಗಾರಿ ಸಾಮಗ್ರಿಗಳನ್ನು ಮೇಲ್ಮಹಡಿಗೆ ಸಾಗಿಸಲು ತಾತ್ಕಾಲಿಕ ಲಿಫ್ಟ್ ಅಳವಡಿಸಲಾಗಿತ್ತು. ಆದರೆ ಗುರುವಾರ ಸಂಜೆ, ಲಿಫ್ಟ್ಗೆ ಅತಿಭಾರವಾದ ಕಾರಣದಿಂದ ಅದರ ಹಗ್ಗ ಅಚಾನಕ್ ಆಗಿ ತುಂಡಾಗಿ, ಲಿಫ್ಟ್ ಭಾರವಾಗಿ ನೆಲಕ್ಕುರುಳಿದೆ ಎಂದು ತಿಳಿದು ಬಂದಿದೆ.
ಈ ವೇಳೆ ಲಿಫ್ಟ್ನಲ್ಲಿದ್ದ ಇಬ್ಬರು ಕಾರ್ಮಿಕರು ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಯ ಬಳಿಕ ಸ್ಥಳೀಯ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಭಟ್ಕಳ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ.