ಭಟ್ಕಳ ಎರಡನೇ ವಿಜ್ಞಾನ ಮೇಳ: 52 ತಂಡಗಳಿಂದ ವೈಜ್ಞಾನಿಕ ಪ್ರತಿಭೆ ಪ್ರದರ್ಶನ
ಭಟ್ಕಳ, ನ.21: ಶಮ್ಸ್ ಪಿಯು ಕಾಲೇಜು ಮತ್ತು ಎಜೆ ಅಕಾಡಮಿ ಆಫ್ ರಿಸರ್ಚ್ ಆಂಡ್ ಡೆವಲಪ್ಮೆಂಟ್ನ ಸಹಯೋಗದೊಂದಿಗೆ ಎರಡನೇ ಭಟ್ಕಳ ಅಂತರ ಶಾಲೆ ಮತ್ತು ಅಂತರ ಕಾಲೇಜು ವಿಜ್ಞಾನ ಮೇಳ (ಸೈನ್ಸ್ ಫೇರ್) ಗುರುವಾರ ಡಾ. ಎಂ.ಟಿ. ಹಸನ್ ಬಾಪಾ ಸಭಾಂಗಣದಲ್ಲಿ ಯಶಸ್ವಿಯಾಗಿ ನಡೆಯಿತು.
ಮೇಳದಲ್ಲಿ ಒಟ್ಟು 10 ಸಂಸ್ಥೆಗಳ 52 ತಂಡಗಳು ತಮ್ಮ ಸಂಶೋಧನಾ ಯೋಜನೆಗಳನ್ನು ಪ್ರದರ್ಶಿಸಿದವು. ಮುಖ್ಯ ಅತಿಥಿ ಅಂಜುಮನ್ ಹಾಮಿ-ಎ-ಮುಸ್ಲಿಮೀನ್ನ ಉಪಾಧ್ಯಕ್ಷ ಡಾ.ಮುಹಮ್ಮದ್ ಜುಬೈರ್ ಕೋಲಾ ಅವರು ಶಿಕ್ಷಣದ ಮಹತ್ವ ಮತ್ತು ಶಾಲಾ ಮಟ್ಟದಲ್ಲಿಯೇ ಸಂಶೋಧನಾ ದೃಷ್ಟಿಕೋನವನ್ನು ಬೆಳೆಸುವ ಅಗತ್ಯ ಕುರಿತು ಮಾತನಾಡಿದರು.
ತರಬಿಯತ್ ಎಜ್ಯುಕೇಶನ್ ಸೊಸೈಟಿಯ ಚೇರ್ಮನ್ ನಝೀರ್ ಅಹ್ಮದ್ ಖಾಝಿ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭವು ಅಹ್ಮದ್ ಜಯಾನ್ ಅವರ ಕಿರಾತ್ ಮತ್ತು ಮೊಹಮ್ಮದ್ ಅಝಾನ್ ಅವರ ಅನುವಾದದೊಂದಿಗೆ ಪ್ರಾರಂಭವಾಯಿತು. ನ್ಯೂ ಶಮ್ಸ್ ಶಾಲೆಯ ಪ್ರಾಂಶುಪಾಲ ಲಿಯಾಖತ್ ಅಲಿ ಅತಿಥಿಗಳನ್ನು ಸ್ವಾಗತಿಸಿದರು. ಶಮ್ಸ್ ಪಿಯು ಕಾಲೇಜಿನ ಪ್ರಾಂಶುಪಾಲ ಮುಹಮ್ಮದ್ ರಝಾ ಮಾನ್ವಿ ಪರಿಚಯಿಸಿದರು. ಸೈನ್ ಫೇರ್ನ ಸಂಚಾಲಕಿ ಡಾ.ಮಮತಾ ನಾಯ್ಕ ಧನ್ಯವಾದ ಅರ್ಪಿಸಿದರು.
ಎಐಟಿಎಂನ ಪ್ರೊ.ಖುರ್ರತುಲೈನ್ ವಸೀಮ್ ಎಚ್. (ಗಣಿತ), ಡಾ. ಚೇತನ್ ಪೈ (ಭೌತಶಾಸ್ತ್ರ), ಪ್ರೊ.ಅಲ್ ಶಿಫಾ (ರಸಾಯನಶಾಸ್ತ್ರ), ಅಂಜುಮನ್ ಪದವಿ ಮಹಾವಿದ್ಯಾಲಯದ ಡಾ. ವಿನಾಯಕ್ ಆನಂದ್ ಕಾಮತ್ (ಭೌತಶಾಸ್ತ್ರ), ಅಂಜುಮನ್ ಮಹಿಳಾ ಪದವಿ ಮಹಾವಿದ್ಯಾಲಯದ ಡಾ.ರೂಪಾ ಡಿ. ಶಾನಭಾಗ್ (ಜೂಲಜಿ) ಹಾಗೂ ಪ್ರೊ.ಶಹೀದಾ ಇಕ್ಕೇರಿ (ಬೋಟನಿ) ಮೌಲ್ಯಮಾಪಕರಾಗಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ದಿ ನ್ಯೂ ಇಂಗ್ಲಿಷ್ ಪಿಯು ಕಾಲೇಜಿನ ಪ್ರಾಂಶುಪಾಲ ಡಾ. ವೀರೇಂದ್ರ ವಿ. ಶಾನಭಾಗ್, ಎಜೆ ಅಕಾಡಮಿ ಆಫ್ ರಿಸರ್ಚ್ ಆಂಡ್ ಡೆವಲಪ್ಮೆಂಟ್ನ ನಿರ್ದೇಶಕ ಅಬ್ದುಲ್ಲಾ ಜಾವೇದ್, ಸಂಸ್ಥೆಯ ಅಧ್ಯಕ್ಷ ಮುಹಮ್ಮದ್ ಇಸ್ಮಾಯಿಲ್ ಮೊಹತೆಶಮ್, ಉಪಾಧ್ಯಕ್ಷ ಸೈಯದ್ ಖುತುಬ್ ಬರ್ಮಾವರ್ ನದ್ವಿ, ಮೌಲಾನ ಅಝೀಝುರ್ರಹ್ಮಾನ್ ನದ್ವಿ, ಸೈಯದ್ ಶಕೀಲ್ ಎಸ್.ಎಂ. ಮತ್ತಿತರರು ಉಪಸ್ಥಿತರಿದ್ದರು.