ಭಟ್ಕಳ ನಗರಸಭೆಯಾಗಿ ಮೇಲ್ದರ್ಜೆಗೆ ಏರಿಕೆ: ಸಚಿವ ಸಂಪುಟದಿಂದ ನಿರ್ಧಾರ
ಭಟ್ಕಳ: ಭಟ್ಕಳ ನಗರದ ಅಭಿವೃದ್ಧಿಗೆ ಹೊಸ ದಾರಿ ತೆರೆಯುವಂತಹ ಮಹತ್ವದ ನಿರ್ಧಾರವೊಂದನ್ನು ರಾಜ್ಯ ಸರ್ಕಾರ ಇಂದು ತೆಗೆದುಕೊಂಡಿದೆ. ಭಟ್ಕಳ ಪುರಸಭೆ, ಜಾಲಿ ಪಟ್ಟಣ ಪಂಚಾಯತಿ ಮತ್ತು ಹೆಬ್ಬಾಳೆ ಗ್ರಾಮ ಪಂಚಾಯತಿಗಳನ್ನು ಒಂದಾಗಿ ಸೇರಿಸಿ, ಭಟ್ಕಳವನ್ನು ಇದೀಗ ನಗರಸಭೆ (Municipal Council) ಆಗಿ ಘೋಷಿಸಲಾಗಿದೆ.
ಈ ನಿರ್ಧಾರವನ್ನು ರಾಜ್ಯ ಸಚಿವ ಸಂಪುಟ ಗುರವಾರ ಅಂಗೀಕರಿಸಿದ್ದು, ಇದರಿಂದ ಭಟ್ಕಳಕ್ಕೆ ಹೆಚ್ಚಿನ ಆರ್ಥಿಕ ನೆರವು, ಉತ್ತಮ ಮೂಲಸೌಕರ್ಯಗಳು ಮತ್ತು ಸ್ಥಳೀಯ ಆಡಳಿತದಲ್ಲಿ ಸ್ವತಂತ್ರತೆ ದೊರೆಯಲಿದೆ.
ಈ ಐತಿಹಾಸಿಕ ಸಾಧನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಮತ್ತು ಪೌರಾಡಳಿತ ಸಚಿವ ರಹೀಮ್ ಖಾನ್ ಮಹತ್ವದ ಪಾತ್ರವಹಿಸಿದ್ದಾರೆ.
ಭಟ್ಕಳದ ಶಾಸಕ ಮತ್ತು ಬಂದರು-ಮೀನುಗಾರಿಕೆ ಸಚಿವರಾದ ಮಂಕಾಳ ವೈದ್ಯರು, ಈ ನಿರ್ಧಾರಕ್ಕಾಗಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಸಂಪುಟ ಸಹೋದ್ಯೋಗಿಗಳಿಗೆ ಧನ್ಯವಾದ ತಿಳಿಸಿದ್ದಾರೆ.
ಇದರ ಹಿನ್ನೆಲೆಯಲ್ಲಿ ಭಟ್ಕಳದ ಜನತೆ ಖುಷಿಪಟ್ಟಿದ್ದು, ತಮ್ಮ ಶಾಸಕರಾದ ಮಂಕಾಳ ವೈದ್ಯರನ್ನು ಅಭಿನಂದಿಸಿದ್ದಾರೆ. ಈ ನಿರ್ಧಾರ ಭಟ್ಕಳದ ಅಭಿವೃದ್ಧಿಗೆ ದೊಡ್ಡ ಹೆಜ್ಜೆಯೆಂದು ಎಲ್ಲರೂ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.