ಭಟ್ಕಳ: ಕೆರೆಗೆ ಬಿದ್ದು ಬಾಲಕ ಮೃತ್ಯು
Update: 2025-11-08 17:51 IST
ಭಟ್ಕಳ: ತಾಲೂಕಿನ ಆಸರಕೇರಿಯ ಜಂಬೂರಮಠ ಬಾಲಕನೊಬ್ಬ ಆಕಸ್ಮಿಕವಾಗಿ ಕೆರೆಗೆ ಬಿದ್ದು ಮೃತಪಟ್ಟ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ.
ಮೃತನನ್ನು ಶಶಿಧರ್ ಯೋಗೇಶ್ ಮೊಗೇರ್ (15) ಎಂದು ಗುರುತಿಸಲಾಗಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಶಶಿಧರ್ ಶಾಲೆಯಿಂದ ಮನೆಗೆ ಬಂದ ಬಳಿಕ ಕೆಲವು ಸ್ನೇಹಿತರೊಂದಿಗೆ ಕೆರೆಯ ಬಳಿಗೆ ಮೀನು ಹಿಡಿಯಲು ತೆರಳಿದ್ದನು. ಈ ವೇಳೆ ಕಾಲು ಜಾರಿ ನೀರಿಗೆ ಬಿದ್ದು ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ಘಟನೆಯ ನಂತರ ಬಾಲಕನ ಅಣ್ಣ ಬಾಲಾಜಿ ಯೋಗೇಶ್ ಮೊಗೇರ್ ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಈ ಘಟನೆ ಸಂಪೂರ್ಣ ಆಕಸ್ಮಿಕವಾಗಿದ್ದು ಯಾವುದೇ ಸಂಶಯಾಸ್ಪದ ಅಂಶಗಳಿಲ್ಲ ಎಂದು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಡಿವೈಎಸ್ಪಿ ಮಹೇಶ್ ಕೆ. ಹಾಗೂ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಮೃತದೇಹವನ್ನು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.
ಈ ಕುರಿತು ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.