ಕಾರವಾರ | ಕದಂಬ ನೌಕಾನೆಲೆಯ ಚಿತ್ರ, ಮಾಹಿತಿ ವಿದೇಶಿ ಬೇಹುಗಾರರಿಗೆ ರವಾನೆ ಆರೋಪ: ಅಕ್ಷಯ್ ನಾಯ್ಕ, ವೇತನ್ ತಾಂಡೇಲ್ ಎನ್ಐಎ ವಶಕ್ಕೆ
ಎನ್ಐಎ | PC: National Investigation Agency
ಕಾರವಾರ: ಇಲ್ಲಿನ ಐಎನ್ಎಸ್ ಕದಂಬ ನೌಕಾನೆಲೆಯ ಸೂಕ್ಷ್ಮ ಚಿತ್ರ, ವಿವಿಧ ಮಾಹಿತಿಗಳನ್ನು ವಿದೇಶ ಬೇಹುಗಾರರಿಗೆ ರವಾನಿಸಿದ ಆರೋಪದಡಿ ನೌಕಾನೆಲೆಯಲ್ಲಿ ಹೊರಗುತ್ತಿಗೆ ನೌಕರರಾಗಿದ್ದ ಇಬ್ಬರನ್ನು ರಾಷ್ಟ್ರೀಯ ತನಿಖಾ ದಳ (ಎನ್ಐಎ) ಮಂಗಳವಾರ ಬೆಳಗ್ಗೆ ವಶಕ್ಕೆ ಪಡೆದಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಅಂಕೋಲಾದ ಅಕ್ಷಯ್ ನಾಯ್ಕ ಮತ್ತು ಕಾರವಾರದ ಮುದಗಾದ ವೇತನ್ ತಾಂಡೇಲ್ ಎಂಬವರನ್ನು ಎನ್ಐಎ ವಶಕ್ಕೆ ಪಡೆದಿದೆ. ಇವರನ್ನು ಎನ್ಐಎ ಎರಡು ತಂಡಗಳು ಏಕಕಾಲದಲ್ಲಿ ದಾಳಿ ಮಾಡಿ ಮುದಗಾ ಮತ್ತು ಅಂಕೋಲಾದಲ್ಲಿ ವಶಕ್ಕೆ ಪಡೆದಿದೆ.
ಇವರಿಬ್ಬರನ್ನು ವಿದೇಶಿ ಬೇಹುಗಾರರು ಸೋಶಿಯಲ್ ಮೀಡಿಯಾದಲ್ಲಿ ಯುವತಿಯರ ಹೆಸರಿನಲ್ಲಿ ಪರಿಚಯ ಮಾಡಿಕೊಂಡು ಕದಂಬ ನೌಕಾನೆಲೆಯ ಚಿತ್ರಗಳನ್ನು ಸಂಗ್ರಹಿಸಿದ್ದರು. ಅದಕ್ಕಾಗಿ ಅವರಿಗೆ ಹಣವನ್ನೂ ಪಾವತಿಸಿದ್ದರು ಎನ್ನುವ ವಿಚಾರ ವಿಚಾರಣೆ ವೇಳೆ ತಿಳಿದುಬಂದಿದೆ ಎಂದು ಮೂಲಗಳು ತಿಳಿಸಿವೆ.
2023ರಲ್ಲಿ ನೌಕಾನೆಲೆಯ ಚಿತ್ರಗಳು ಪಾಕಿಸ್ತಾನದ ಬೇಹುಗಾರರಿಗೆ ರವಾನೆ ಮಾಡಲಾಗಿತ್ತು. ಇದನ್ನು ಆಧರಿಸಿ ಎನ್ ಐಎ ಹೈದರಾಬಾದ್ ತಂಡವು ನೌಕಾನೆಲೆಯ ಕೆಲ ಅಧಿಕಾರಿ, ಸಿಬ್ಬಂದಿಯನ್ನು ವಶಕ್ಕೆ ಪಡೆದಿತ್ತು. ಅದೇ ಪ್ರಕರಣ ಮುಂದಿನ ಭಾಗವಾಗಿ, ನೌಕಾನೆಲೆಯಲ್ಲಿ ಹೊರಗುತ್ತಿಗೆ ನೌಕರರಾಗಿದ್ದ ವೇತನ್ ಮತ್ತು ಅಕ್ಷಯರನ್ನು ಎನ್ಐಎ ವಶಕ್ಕೆ ಪಡೆದಿದೆ ಎಂದು ಹೇಳಲಾಗಿದೆ.
2024ರ ಆ.28 ರಂದು ಈ ಆರೋಪಿಗಳು ಸೇರಿ ಮೂವರನ್ನು ಎನ್ಐಎ ವಿಚಾರಣೆ ನಡೆಸಿ, ನೋಟಿಸ್ ನೀಡಿತ್ತು. ಸೋಮವಾರ ಮತ್ತೆ ಆರು ಮಂದಿ ಎನ್ಐಎ ಅಧಿಕಾರಿಗಳ ತಂಡವು ಕಾರವಾರ ನಗರ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ಬಗ್ಗೆ ಮಾಹಿತಿ ಕಲೆ ಹಾಕಿದೆ. ಬಳಿಕ ಹೆಚ್ಚಿನ ವಿಚಾರಣೆಗಾಗಿ ಅವರಿಬ್ಬರನ್ನು ವಶಕ್ಕೆ ಪಡೆದಿದೆ ಎಂದು ತಿಳಿದುಬಂದಿದೆ.