Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವೈವಿಧ್ಯ
  3. ಜೀವ ಭಕ್ಷಕಗಳಾಗುತ್ತಿರುವ ಜೀವ ರಕ್ಷಕ...

ಜೀವ ಭಕ್ಷಕಗಳಾಗುತ್ತಿರುವ ಜೀವ ರಕ್ಷಕ ಔಷಧಗಳು

ಡಾ॥ ಮುರಲೀ ಮೋಹನ್ ಚೂಂತಾರುಡಾ॥ ಮುರಲೀ ಮೋಹನ್ ಚೂಂತಾರು17 Jan 2017 11:51 PM IST
share
ಜೀವ ಭಕ್ಷಕಗಳಾಗುತ್ತಿರುವ ಜೀವ ರಕ್ಷಕ ಔಷಧಗಳು

ಔಷಧ ಅಂಗಡಿಯಲ್ಲಿ ಮಾಲಕರು ಅಥವಾ ನೌಕರರು ದಿನನಿತ್ಯ ವೈದ್ಯರ ಪಾತ್ರವನ್ನು ನಿರಾತಂಕವಾಗಿ ವರ್ಷಾನೂ ವರ್ಷಗಳಿಂದ ನಿಭಾಯಿಸುತ್ತಿದ್ದಾರೆ. ಅವರ ಬಳಿ ಔಷಧ ಮಾರುವ ಲೈಸನ್ಸ್ ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ರೋಗಿಗಳಿಗೆ ಔಷಧವನ್ನು ಯಾವುದೇ ಅಡೆತಡೆ ಇಲ್ಲದೇ ನೀಡುತ್ತಲೇ ಇದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಂತೂ ತಲೆನೋವು, ಹಲ್ಲುನೋವು, ಹೊಟ್ಟೆನೋವು, ವಾಂತಿ, ಭೇದಿ, ಹೊಟ್ಟೆ ಉರಿ, ಶೀತ, ಕೆಮ್ಮು, ನೆಗಡಿ ಇತ್ಯಾದಿಗಳಿಗೆ ಔಷಧ ಅಂಗಡಿಗಳ ಮಾಲಕರೇ ಮೊದಲ ವೈದ್ಯರು. ಅವರು ನೀಡಿದ ಔಷಧದಲ್ಲಿ ಕಡಮೆಯಾಗದಿದ್ದರೆ ಮಾತ್ರ ವೈದ್ಯರ ಬಳಿ ಬರುತ್ತಾರೆ. ಕೆಲವೊಮ್ಮೆ ವೈದ್ಯರ ಬಳಿ ತಲುಪಿದಾಗ ರೋಗಿಯ ರೋಗ ಉಲ್ಬಣವಾಗಿ, ವಿಪರೀತ ಹಂತಕ್ಕೆ ತಲುಪಿರುತ್ತದೆ. ಇನ್ನು ಕೆಲವೊಮ್ಮೆ ಔಷಧ ಇಲ್ಲದೆ ಗುಣವಾಗುವ ರೋಗಗಳಿಗೂ ಅನಗತ್ಯ ಔಷಧ ಸೇವನೆ ಮಾಡಲಾಗುತ್ತದೆ. ಔಷಧ ಅಂಗಡಿಗಳಲ್ಲಿ ವೈದ್ಯರ ಚೀಟಿ ಇಲ್ಲದೆ ಔಷಧ ನೀಡಬಾರದು ಎಂಬ ಕಾನೂನು ಇದ್ದರೂ ಈ ರೀತಿಯ ಮೆಡಿಕಲ್ ಔಷಧಗಾರಿಕೆ ನಮ್ಮ ಭಾರತ ದೇಶದಲ್ಲಿ ಸರ್ವೇಸಾಮಾನ್ಯವಾಗಿ ಬಿಟ್ಟಿದೆ. ಕೆಲವು ಸಂದರ್ಭಗಳಲ್ಲಿ ಆ್ಯಂಟಿಬಯೋಟಿಕ್ ಔಷಧದ ಅಗತ್ಯವೇ ಇಲ್ಲದಿದ್ದರೂ ಅನಗತ್ಯವಾಗಿ ಆ್ಯಂಟಿಬಯೋಟಿಕ್ ಔಷಧವನ್ನು ಬಳಸಿ, ಮುಂದೆ ನಿಜವಾಗಿಯೂ ಆ್ಯಂಟಿಬಯೋಟಿಕ್ ಅಗತ್ಯವಿರುವ ಸಂದರ್ಭಗಳಲ್ಲಿ ಪುನಃ ಬಳಸಿದಾಗ ಅದರ ತೀವ್ರತೆ ಮತ್ತು ಗುಣಮಟ್ಟ ಕಡಮೆಯಾಗುವ ಸಾಧ್ಯತೆ ಇರುತ್ತದೆ. ಪದೇ ಪದೇ ಆ್ಯಂಟಿಬಯೋಟಿಕ್ ಬಳಸುವುದು, (ಅಗತ್ಯವಿಲ್ಲದಿದ್ದರೂ) ಸ್ವಯಂ ಔಷಧಗಾರಿಕೆ, ಸರಿಯಾದ ಪ್ರಮಾಣದಲ್ಲಿ ಬಳಸದೇ ಇರುವುದು, ಸರಿಯಾದ ದಿನಗಳವರೆಗೆ ಒಂದು ಸಂಪೂರ್ಣ ಕೋರ್ಸ್ ಆ್ಯಂಟಿಬಯೋಟಿಕ್ ತೆಗೆದುಕೊಳ್ಳದಿರುವುದು ಇತ್ಯಾದಿ ಕಾರಣಗಳಿಂದಾಗಿ ಆ್ಯಂಟಿಬಯೋಟಿಕ್ ಪ್ರತಿರೋಧ ಶಕ್ತಿಯನ್ನು ಬ್ಯಾಕ್ಟೀರಿಯಾಗಳು ಗಳಿಸಿಕೊಳ್ಳುತ್ತವೆ. ಮುಂದೆ ನಿಜವಾಗಿಯೂ ಮಾರಣಾಂತಿಕ ಅಥವಾ ಪ್ರಾಣಾಂತ ಕಾರಿ ಸೋಂಕು ಬಂದಾಗ ಈ ಆ್ಯಂಟಿಬಯೋಟಿಕ್‌ಗಳು ಬ್ಯಾಕ್ಟೀರಿಯಾಗಳ ಮೇಲೆ ಯಾವುದೇ ಪರಿಣಾಮ ಬೀರಲು ಸಾಧ್ಯವಾಗದೆ ರೋಗಿಯ ಜೀವಕ್ಕೂ ತುತ್ತು ಬರುವ ಸಾಧ್ಯತೆ ಹೆಚ್ಚಾಗುತ್ತದೆ.

ಆ್ಯಂಟಿಬಯೋಟಿಕ್ ಪ್ರತಿರೋಧಕತೆ ಯಾಕಾಗಿ ಬರುತ್ತದೆ?:

ಬ್ಯಾಕ್ಟೀರಿಯಾ ಎಂದರೆ ಕೇವಲ ಒಂದು ಜೀವಕೋಶವಿರುವ ಸೂಕ್ಷಾಣು ಜೀವಿಯಾಗಿದ್ದು, ದೇಹದ ಎಲ್ಲೆಡೆ (ಒಳಗೆ ಮತ್ತು ಹೊರಗೆ) ಇರುತ್ತದೆ. ಹೆಚ್ಚಿನ ಬ್ಯಾಕ್ಟೀರಿಯಾಗಳು ನಿರುಪದ್ರವಿಯಾಗಿದ್ದು, ನಮ್ಮ ದೇಹದೊಳಗಡೆ ಬದುಕುತ್ತಿರುತ್ತವೆ. ಹೆಚ್ಚಿನ ಬ್ಯಾಕ್ಟೀರಿಯಾಗಳು ನಮ್ಮ ದೇಹದ ಕರುಳು (Intestine)ನಲ್ಲಿ ಕಾಣಸಿಗುತ್ತದೆ. ಕೆಲವೊಂದು ಬ್ಯಾಕ್ಟೀರಿಯಾಗಳು ದೇಹದ ಪ್ರತಿರೋಧಕ ಶಕ್ತಿ ಕಡಮೆಯಾದಾಗ ಸೋಂಕನ್ನು ಉಂಟುಮಾಡಿ ರೋಗಕ್ಕೆ ಕಾರಣವಾಗುತ್ತದೆ. ಇನ್ನೂ ಕೆಲವು ಬ್ಯಾಕ್ಟೀರಿಯಾಗಳು ನಿಜವಾಗಿಯೂ ಉಪದ್ರಕಾರಕ ಜೀವಿಯಾಗಿದ್ದು ಆಕಸ್ಮಿಕವಾಗಿ ದೇಹದೊಳಗೆ ಸೇರಿದಲ್ಲಿ ರೋಗಕ್ಕೆ ನಾಂದಿ ಹಾಡುತ್ತದೆ. ಇನ್ನು ವೈರಾಣುಗಳು (Virus) ಬ್ಯಾಕ್ಟೀರಿಯಾಗಳಿಗಿಂತಲೂ ಚಿಕ್ಕದಾದ ಜೀವಿಯಾಗಿದ್ದು, ಮನುಷ್ಯನ ದೇಹದ ಜೀವಕೋಶದ ಹೊರಗೆ ಬದುಕಲಾರವು. ಆರೋಗ್ಯವಂತ ಜೀವಕೋಶಗಳನ್ನು ಆಕ್ರಮಿಸಿಕೊಂಡು ರೋಗಕ್ಕೆ ಕಾರಣವಾಗುತ್ತದೆ. ಈ ಬ್ಯಾಕ್ಟೀರಿಯಾಗಳನ್ನು ಎದುರಿಸಲು ಮತ್ತು ನಿರ್ನಾಮ ಮಾಡಲು ಬಳಸುವ ಔಷಧಿಯನ್ನು ಆ್ಯಂಟಿಬಯೋಟಿಕ್ ಎನ್ನುತ್ತಾರೆ. ಈ ಆ್ಯಂಟಿಬಯೋಟಿಕ್‌ಗಳು ಬ್ಯಾಕ್ಟೀರಿಯಾವನ್ನು ನಾಶಮಾಡುತ್ತದೆ, ಇಲ್ಲವೇ ಅವುಗಳ ಸಂತಾನೋತ್ಪತ್ತಿಯನ್ನು ತಡೆಗಟ್ಟಿ ರೋಗ ಉಂಟಾಗದಂತೆ ನೋಡಿಕೊಳ್ಳುತ್ತವೆ. ಆದರೆ ಈ ಆ್ಯಂಟಿಬಯೋಟಿಕ್‌ಗಳಿಂದ ವೈರಾಣುಗಳಿಗೆ ಯಾವುದೇ ಹಾನಿ ಆಗುವುದಿಲ್ಲ. ಇದನ್ನೇ ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ವೈರಾಣುವಿನ ಸೋಂಕಿನಿಂದ ಆದ ಶೀತ, ಜ್ವರ, ಗಂಟಲು ಕೆರೆತ, ಕೆಮ್ಮುಗಳಿಗೆ ಆ್ಯಂಟಿಬಯೋಟಿಕ್ ಆವಶ್ಯಕತೆ ಇರುವುದಿಲ್ಲ. ಆ್ಯಂಟಿಬಯೋಟಿಕ್ ಪ್ರತಿರೋಧಕತೆ ಎಂದರೆ, ಬ್ಯಾಕ್ಟೀರಿಯಗಳು ಆ್ಯಂಟಿಬಯೋಟಿಕ್ ಔಷಧದ ಪರಿಣಾಮವನ್ನು ಮೆಟ್ಟಿನಿಂತು ರೋಗವನ್ನು ಉಲ್ಬಣಗೊಳಿಸುವ ಪ್ರಕ್ರಿಯೆ. ಈ ಆ್ಯಂಟಿಬಯೋಟಿಕ್ ಪ್ರತಿರೋಧಕತೆ ಒಂದು ಜಾಗತಿಕವಾದ ಸಮಸ್ಯೆಯಾಗಿದ್ದು ಮುಂದುವರಿದ ದೇಶಗಳಲ್ಲಿ ಬಹುದೊಡ್ಡ ಆರೋಗ್ಯ ಸಮಸ್ಯೆಯಾಗಿ ಕಂಡುಬಂದಿದೆ.

ಆ್ಯಂಟಿಬಯೋಟಿಕ್‌ಗಳ ಪ್ರತಿರೋಧಕಕ್ಕೆ ಮುಖ್ಯ ಕಾರಣಗಳು:

1. ಅತಿಯಾದ ಆ್ಯಂಟಿಬಯೋಟಿಕ್‌ಗಳ ಸೇವನೆ.

2. ಅನಗತ್ಯವಾಗಿ ಆ್ಯಂಟಿ ಬಯೋಟಿಕ್ ಔಷಧಗಳ ಸೇವನೆ. ಉದಾ:- ಶೀತ, ಕೆಮ್ಮು, ಪ್ಲೂ, ಇತ್ಯಾದಿ...

3. ಸರಿಯಾದ ಪ್ರಮಾಣದಲ್ಲಿ ಆ್ಯಂಟಿಬಯೋಟಿಕ್ ಔಷಧ ಬಳಸದಿರುವುದು.

4. ನಿಗದಿತ ದಿನಗಳವರೆಗೆ ಆ್ಯಂಟಿಬಯೋಟಿಕ್ ಔಷಧ ಬಳಸದಿರುವುದು.

5. ಸ್ವಯಂ ಔಷಧಗಾರಿಕೆ, ಅಂದರೆ ವೈದ್ಯರ ಸಲಹೆ ಇಲ್ಲದೆ ತಾವೇ ರೋಗಿ ಮತ್ತು ವೈದ್ಯರಾಗಿ, ರೋಗಕ್ಕೆ ತಾವು ಔಷಧ ನಿರ್ಣಯ ಮಾಡಿ ಔಷಧ ಸೇರಿಸುವ ಹುಂಬತನ.

ಈ ರೀತಿ ಆ್ಯಂಟಿಬಯೋಟಿಕ್‌ಗಳನ್ನು ದುರ್ಬಳಕೆ ಮಾಡಿದಾಗ, ಕೆಲವೊಮ್ಮೆ ಹಲವಾರು ಬ್ಯಾಕ್ಟೀರಿಯಾಗಳು ಔಷಧಗಳ ಪರಿಣಾಮವನ್ನು ಮೆಟ್ಟಿನಿಂತು ತಮ್ಮ ದೇಹದ ಆಕೃತಿಗಳಲ್ಲಿ ಬದಲಾವಣೆ ಮಾಡಿಕೊಂಡು, ವಿಪರೀತ ಪರಿಸ್ಥಿತಿಯಲ್ಲೂ ಬದುಕುವ ದಾರಿ ಕಂಡು ಕೊಳ್ಳುತ್ತವೆ ಮತ್ತು ಹೊಸದಾದ ದೇಹರಚನೆ ಉಳ್ಳ (mutation) ಹೊಸತೊಂದು ಬ್ಯಾಕ್ಟೀರಿಯಾಗಳ ಜನನಕ್ಕೆ ಕಾರಣವಾಗಿ, ಹೊಸದಾದ ರೋಗವನ್ನು ಹುಟ್ಟು ಹಾಕುತ್ತದೆ. ತಮ್ಮ ದೇಹದ ರಚನೆಯನ್ನು ಮಾರ್ಪಾಡು ಮಾಡಿಕೊಂಡು ಆ್ಯಂಟಿಬಯೋಟಿಕ್ ಔಷಧಗಳು ತಮ್ಮ ದೇಹದ ಜೀವಕೋಶಗಳ ಒಳಗೆ ಸೇರದಂತೆ ಮಾಡಿಕೊಂಡು ವಿಷಮ ಪರಿಸ್ಥಿತಿಯಲ್ಲೂ ಬದುಕಲು ಕಲಿತುಕೊಂಡು, ಹೊಸ ರೀತಿಯ ದೇಹ ರಚನೆ ಉಳ್ಳ ಬ್ಯಾಕ್ಟೀರಿಯಾಗಳ ಉಗಮಕ್ಕೆ ಕಾರಣವಾಗಿರುತ್ತದೆ ಮತ್ತು ಈ ರೀತಿ ಹುಟ್ಟಿಕೊಂಡ ಬ್ಯಾಕ್ಟೀರಿಯಾಗಳು ಮತ್ತಷ್ಟು ಉಗ್ರಸ್ವರೂಪದಲ್ಲಿ ರೋಗಿಯನ್ನು ಕಾಡಿ, ಮಾರಣಾಂತಿಕವಾದ ಸೋಂಕಿಗೆ ಕಾರಣವಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಸಾಮಾನ್ಯವಾಗಿ ಬಳಸುವ ಆ್ಯಂಟಿ ಬಯೋಟಿಕ್ ರೋಗದ ಮೇಲೆ ಮತ್ತು ರೋಗ ಉಂಟುಮಾಡುವ ಬ್ಯಾಕ್ಟೀರಿಯಾದ ಮೇಲೆ ಯಾವುದೇ ಪರಿಣಾಮ ಬೀರದೆ, ರೋಗಿಯ ರೋಗ ಉಲ್ಬಣವಾಗುತ್ತದೆ.

ರೋಗಿಯ ಪಾತ್ರ:

1. ನಿಮ್ಮ ವೈದ್ಯರು ಸೂಚಿಸಿದ ಆ್ಯಂಟಿ ಬಯೋಟಿಕ್ ಔಷಧವನ್ನು ಅದೇ ಪ್ರಮಾಣದಲ್ಲಿ ಸೇವಿಸಿರಿ. ಯಾವತ್ತೂ ಡೋಸ್‌ನ್ನು ವೈದ್ಯರ ಸಲಹೆಯಿಲ್ಲದೆ ಬದಲಿಸಬೇಡಿ.

2. ಆ್ಯಂಟಿಬಯೋಟಿಕ್ ಪ್ರತಿರೋಧಕತೆಯ ಬಗ್ಗೆ ನಿಮಗಿರುವ ಕಾಳಜಿಯನ್ನು ವೈದ್ಯರ ಬಳಿ ಮುಕ್ತವಾಗಿ ಹೇಳಿ.

3. ಆ್ಯಂಟಿಬಯೋಟಿಕ್ ಇಲ್ಲದೆಯೇ ರೋಗ ಮತ್ತು ರೋಗದ ಲಕ್ಷಣಗಳನ್ನು ನಿವಾರಿಸಲು ಯಾವುದಾದರೂ ಅಗತ್ಯ ಕ್ರಮಗಳಿದ್ದಲ್ಲಿ ಅದನ್ನೇ ವೈದ್ಯರ ಬಳಿ ತಿಳಿದುಕೊಂಡು ಅನುಸರಿಸಿ.

4. ಯಾವುದೇ ಕಾರಣಕ್ಕೂ ವೈದ್ಯರ ಬಳಿ ಆ್ಯಂಟಿಬಯೋಟಿಕ್ ಬಳಸಿ ರೋಗದಿಂದ ಬೇಗನೆ ವಾಸಿಮಾಡಿ ಎಂದು ಒತ್ತಡ ಹಾಕಬೇಡಿ.

5. ನಿಮಗಾಗಿ ಸೂಚಿಸಿದ ಆ್ಯಂಟಿ ಬಯೋಟಿಕ್ ಔಷಧವನ್ನು ಸಂಪೂರ್ಣವಾಗಿ ಬಳಸಿ, ರೋಗದ ಲಕ್ಷಣಗಳು ಕಡಿಮೆಯಾಗಿದೆ ಎಂದು ನೀವೇ ಔಷಧವನ್ನು ನಿಲ್ಲಿಸಬೇಡಿ. ವೈದ್ಯರ ಸಲಹೆಯನ್ನು ಚಾಚೂ ತಪ್ಪದೆ ಪಾಲಿಸಿರಿ.

6. ಆ್ಯಂಟಿಬಯೋಟಿಕ್ ಔಷಧವನ್ನು ಉಳಿಸಿ ಹಣ ಉಳಿಸುವ ಜಾಣತನ ಒಳ್ಳೆಯದಲ್ಲ.

7. ಬೇರೆಯವರಿಗೆ ನೀಡಿದ ಆ್ಯಂಟಿಬಯೋಟಿಕ್ ಔಷಧವನ್ನು ನೀವು ಬಳಸಲೇಬಾರದು.

8. ಉಳಿದ ಆ್ಯಂಟಿಬಯೋಟಿಕ್ ಔಷಧಗಳನ್ನು ನಿರ್ದಾಕ್ಷಿಣವಾಗಿ ಎಸೆದುಬಿಡಿ. ಮುಂದಿನ ಬಾರಿ ಬೇಕಾಗುತ್ತದೆ ಎಂದು ಶೇಖರಣೆ ಮಾಡುವ ಉಸಾಬರಿ ಬೇಡವೇ ಬೇಡ.

9. ಸಾಮಾನ್ಯ ವೈರಲ್ ಜ್ವರ, ಶೀತ, ಕೆಮ್ಮು, ಪ್ಲೂ ಇತ್ಯಾದಿಗಳಿಗೆ ಆ್ಯಂಟಿಬಯೋಟಿಕ್ ಅಗತ್ಯ ಇರುವುದಿಲ್ಲ. ಸ್ವಯಂ ಔಷಧಗಾರಿಕೆ ಬೇಡವೇ ಬೇಡ. ಸಂದೇಹವಿದ್ದಲ್ಲಿ ವೈದ್ಯರನ್ನು ಸಮಾಲೋಚಿಸಿ ವೈದ್ಯರು ಸೂಚಿಸಿದಲ್ಲಿ ಮಾತ್ರ ಬಳಸಬೇಕು.

10. ವೈದ್ಯರು ದಿನಕ್ಕೆರಡು ಬಾರಿ ಆ್ಯಂಟಿಬಯೋಟಿಕ್ ಸೇವಿಸಿರಿ ಎಂದಿದ್ದಲ್ಲಿ ದಿನಕ್ಕೆರಡೇ ಬಾರಿ ಸೇವಿಸಿರಿ. ರೋಗ ಬೇಗನೆ ಕಡಿಮೆಯಾಗಲೆಂದು ದಿನಕ್ಕೆ ಮೂರು ಬಾರಿ ಸೇವಿಸುವ ಅತಿ ಬುದ್ಧಿವಂತಿಕೆ ಬೇಡ. ಅದೇ ರೀತಿ ದಿನಕ್ಕೆ ಮೂರು ಬಾರಿ ಸೇವಿಸಲು ಹೇಳಿದ್ದರೆ ಎರಡು ಬಾರಿ ಮಾತ್ರ ಸೇವಿಸಿ ಹಣ ಉಳಿಸುವ ಜಿಪುಣತನ ಕೂಡ ಮಾಡಬೇಡಿ.

11. ರೋಗ ಬರದಂತೆ ತಡೆಗಟ್ಟುವ ಲಸಿಕೆಗಳು ಇದ್ದಲ್ಲಿ, ವೈದ್ಯರ ಬಳಿ ಕೇಳಿ ತಿಳಿದುಕೊಂಡು ಲಸಿಕೆ ಹಾಕಿಸಿಕೊಳ್ಳುವುದು ಬಹಳ ಮುಖ್ಯ. ಈ ರೀತಿ ಲಸಿಕೆ ಹಾಕಿಸಿಕೊಂಡಲ್ಲಿ ರೋಗ ಬರದಂತೆ ತಡೆಗಟ್ಟಿದ್ದಲ್ಲಿ ಆ್ಯಂಟಿಬಯೋಟಿಕ್‌ಗಳ ದುರ್ಬಳಕೆಯನ್ನು ತಪ್ಪಿಸಬಹುದು.

ವೈದ್ಯರ ಪಾತ್ರ

1. ಅತೀ ಅಗತ್ಯವಿದ್ದಲ್ಲಿ ಮಾತ್ರ ಆ್ಯಂಟಿಬಯೋಟಿಕ್ ಔಷಧವನ್ನು ಬಳಸುವುದು. ರೋಗದ ಲಕ್ಷಣಗಳನ್ನು ಮತ್ತು ರೋಗವನ್ನು ಆ್ಯಂಟಿಬಯೋಟಿಕ್ ಔಷಧಯಿಲ್ಲದೆ ಚಿಕಿತ್ಸೆ ಮಾಡಲು ಸಾಧ್ಯವಿದ್ದಲ್ಲಿ ಆ್ಯಂಟಿಬಯೋಟಿಕ್ ಬಳಕೆ ಮಾಡಬಾರದು. ರೋಗಿಗಳಿಗೆ ತಿಳಿಹೇಳಿ, ಸಾಂತ್ವನ ಹೇಳಿ ಧೈರ್ಯ ತುಂಬಿ ಆ್ಯಂಟಿಬಯೋಟಿಕ್‌ಗಳ ಅಡ್ಡ ಪರಿಣಾಮಗಳ ಬಗೆ ಮನವರಿಕೆ ಮಾಡಿ ತಾಳ್ಮೆಯಿಂದ ವರ್ತಿಸುವಂತೆ ತಿಳಿ ಹೇಳಿ ರೋಗ ಗುಣ ಮಾಡುವ ಪ್ರಾಮಾಣಿಕ ಪ್ರಯತ್ನವನ್ನು ವೈದ್ಯರು ಮಾಡಲೇ ಬೇಕಾದ ಅನಿವಾರ್ಯತೆ ಇದೆ. ವಿಷಾದನೀಯ ವಿಚಾರ ಎಂದರೆ ಎಲ್ಲವೂ ವ್ಯಾಪಾರೀಕರಣವಾಗಿರುವ ಈ ಕಾಲಘಟ್ಟದಲ್ಲಿ ವೈದ್ಯ- ರೋಗಿಯ ಸಂಬಂಧವೂ ಹಳಸಿದೆ. ಮೊದಲೆಲ್ಲಾ ನಂಬಿಕೆಯ ತಳಹದಿಯ ಮೇಲೆ ಹೆಚ್ಚಿನ ರೋಗಗಳು ಗುಣವಾಗುತ್ತಿತ್ತು. ಈಗ ಯಾವ ರೋಗಿಯೂ ಕಾಯುವ ಮನೋಸ್ಥಿತಿಯಲ್ಲಿ ಇಲ್ಲ. ದಿನ ಬೆಳಗಾಗುವುದರೊಳಗೆ ರೋಗ ಗುಣವಾಗದಿದ್ದಲ್ಲಿ ವೈದ್ಯರ ಪ್ರಾಮಾಣಿಕತೆ ಮತ್ತು ಪಾಂಡಿತ್ಯವನ್ನೇ ಪ್ರಶ್ನಿಸುವ ರೋಗಿಗಳು ಜಾಸ್ತಿಯಾಗಿರುವುದೇ ನಮ್ಮ ಸಮಾಜದ ಬಹುದೊಡ್ಡ ದುರಂತ.

2. ಅಗತ್ಯವಿದ್ದ ರೋಗಿಗಳಿಗೆ ಆ್ಯಂಟಿಬಯೋಟಿಕ್ ಔಷಧ ನೀಡಿದ ಬಳಿಕ, ಸರಿಯಾದ ಪ್ರಮಾಣದಲ್ಲಿ, ಸೂಕ್ತ ದಿನಗಳವರೆಗೆ ಔಷಧ ಸೇವನೆ ಮಾಡುವಂತೆ ತಿಳಿ ಹೇಳಬೇಕು.

3. ರೋಗಿಯನ್ನು ಆ್ಯಂಟಿಬಯೋಟಿಕ್ ಔಷಧ ನೀಡಿದ ಬಳಿಕ ನಿಯಮಿತವಾಗಿ ಬರಹೇಳಿ, ರೋಗದ ತೀವ್ರತೆ ಲಕ್ಷಣಗಳು ಮತ್ತು ಅಡ್ಡ ಪರಿಣಾಮಗಳ ಬಗ್ಗೆ ಹೆಚ್ಚು ನಿಗಾ ವಹಿಸಬೇಕು. ಆ್ಯಂಟಿಬಯೋಟಿಕ್‌ಗಳಿಂದ ರೋಗದ ಮೇಲೆ ಯಾವುದೇ ಪರಿಣಾಮ ಬೀರಿಲ್ಲವಾದಲ್ಲಿ, ಔಷಧವನ್ನು ಬದಲಿಸಲು ಬೇಕಾದ ಸೂಕ್ತ ಪರೀಕ್ಷೆಗಳನ್ನು ಮಾಡಿ ಬದಲಿಸತಕ್ಕದ್ದು. 4. ರೋಗ ಬೇಗನೆ ಗುಣವಾಗಲಿ ಎಂದು, ಒಂದೇ ಬಾರಿಗೆ ಅತೀ ಹೆಚ್ಚು ಬ್ಯಾಕ್ಟೀರಿಯಾಗಳನ್ನು ನಿಯಂತ್ರಿಸುವ ಆ್ಯಂಟಿಬಯೋಟಿಕ್ (Broad Spectrum Antibiotics) ಬಳಸಬಾರದು. ಮೊದಲಾಗಿ ಕಡಿಮೆ ಬ್ಯಾಕ್ಟೀರಿಯಾಗಳನ್ನು ನಿಯಂತ್ರಿಸುವ (Narrow Spectrum Antibiotics) ಔಷಧಗಳನ್ನು ಬಳಸಿ, ರೋಗವನ್ನು ನಿಯಂತ್ರಿಸಲು ಪ್ರಾಮಾಣಿಕ ಪ್ರಯತ್ನವನ್ನು ಮಾಡಬೇಕು. ಈಗಿನ ಬದಲಾದ ಸಾಮಾಜಿಕ ಮತ್ತು ವ್ಯಾಪಾರಿ ವಾತಾವರಣದಲ್ಲಿ ಎಲ್ಲಾ ವೈದ್ಯರು ಮನುಕುಲದ ಉನ್ನತಿ ಮತ್ತು ಹಿತದ ದೃಷ್ಟಿಯಿಂದ ವೈದ್ಯ ವೃತ್ತಿಯ ರಾಜಧರ್ಮವನ್ನು ಎತ್ತಿಹಿಡಿದಲ್ಲಿ ಈ ಬ್ಯಾಕ್ಟೀರಿಯಾಗಳ ಆರ್ಭಟ ಮತ್ತು ಮನುಕುಲದ ಮೇಲಿನ ರುದ್ರನರ್ತನವನ್ನು ಖಂಡಿತವಾಗಿಯೂ ಕಡಮೆ ಮಾಡಬಹುದು.

 ಕೊನೆ ಮಾತು:

ಔಷಧ ಸೇವನೆ ಎಂಬುವುದು ಆಧುನಿಕ ಜೀವನ ಶೈಲಿಯಲ್ಲಿ ಪ್ರತಿಯೊಬ್ಬ ವ್ಯಕ್ತಿಯ ದೈನಂದಿನ ಅನಿವಾರ್ಯತೆಯಾಗಿರುವುದು ಈ ಶತಮಾನದ ಬಹುದೊಡ್ಡ ದುರಂತ. ಪ್ರತಿಯೊಬ್ಬ ವ್ಯಕ್ತಿಯೂ ಜ್ವರ, ತಲೆನೋವು, ಸ್ನಾಯು ನೋವು, ವಾಂತಿ, ನೆಗಡಿ, ಶೀತ, ಕೆಮ್ಮು, ದಮ್ಮು ಹೀಗೆ ಯಾವುದಾದರೂ ಒಂದು ಕಾರಣದಿಂದ ಔಷಧ ತಿನ್ನುವ ಖಯಾಲಿ ಬೆಳೆಸಿಕೊಂಡಿರುವುದು ಬಹಳ ದೌರ್ಭಾಗ್ಯದ ಸಂಗತಿ. 1923ರಲ್ಲಿ ಅಲೆಗ್ಸಾಂಡರ್ ಪ್ಲೆಮಿಂಗ್ ಎಂಬ ಪುಣ್ಯಾತ್ಮ ‘ಪೆನ್ಸಿಲಿನ್’ ಎಂಬ ಜೀವರಕ್ಷಕ ಔಷಧ ಕಂಡು ಹಿಡಿದ ಬಳಿಕ, ಕೋಟ್ಯಾಂತರ ಮಂದಿಯ ಜೀವ ಉಳಿದದ್ದಂತೂ ಸತ್ಯವಾದ ಮಾತು. ಆದರೆ ಈಗೀಗ ಜನರು ಜೀವರಕ್ಷಕ ಆ್ಯಂಟಿಬಯೋಟಿಕ್ ಔಷಧಗಳನ್ನು ಬಳಸುವ ಪರಿನೋಡಿದರೆ ಬಹುಷಃ ಅಲೆಗ್ಸಾಂಡರ್ ಪ್ಲೆಮಿಂಗ್‌ನ ಆತ್ಮ ಗೋರಿಯೊಳಗೆ ಯಾಕಾಗಿ ಈ ಜೀವರಕ್ಷಕ ಔಷಧ ಕಂಡು ಹಿಡಿದೆ ಎಂದು ಪರಿತಪಿಸುತ್ತಿರಲೂಬಹುದು ಎಂದರೂ ತಪ್ಪಗಾಲಿಕ್ಕಿಲ್ಲ.

ನಗ್ನ ಸತ್ಯಗಳು:

► 2 ಮಿಲಿಯನ್ ಮಂದಿ ವ್ಯಕ್ತಿಗಳು, ಅಮೆರಿಕ ದೇಶವೊಂದರಲ್ಲಿಯೇ ಪ್ರತಿ ವರ್ಷ ಆ್ಯಂಟಿಬಯೋಟಿಕ್ ಪ್ರತಿರೋಧಕ ಸೋಂಕಿನಿಂದ ಬಳಲುತ್ತಿದ್ದು ಇದರಲ್ಲಿ ಸುಮಾರು 23,000 ಮಂದಿ ಸಾವನ್ನಪ್ಪುತ್ತಾರೆ. * 2,50,000 ಮಂದಿ ಪ್ರತಿ ವರ್ಷ ಆ್ಯಂಟಿಬಯೋಟಿಕ್ ಔಷಧದ ಅತಿಯಾದ ಬಳಕೆಯಿಂದಾಗಿ ಕರುಳಿನ ಒಳಭಾಗದಲ್ಲಿ ಕ್ಲೋಸ್ಟ್ರಿಡಿಯಾ ಡಿಫಿಸಿಲ್ (Clostridia Difficile ) ಬ್ಯಾಕ್ಟೀರಿಯಾದ ಸೋಂಕಿನಿಂದ ಅಮೆರಿಕದಲ್ಲಿ ಬಳಲುತ್ತಾರೆ. ಇದರಲ್ಲಿ ಸುಮಾರು 14,000 ಮಂದಿ ಪ್ರತಿ ವರ್ಷ ಸಾವನ್ನಪ್ಪುತ್ತಾರೆ. ► ಜಗತ್ತಿನಲ್ಲಿ ಅತೀ ಹೆಚ್ಚು ಬಳಸಲ್ಪಡುವ ಔಷಧ ಎಂದರೆ ಆ್ಯಂಟಿಬಯೋಟಿಕ್. ಇದರಲ್ಲಿ ಶೇ. 50 ಮಂದಿಗೆ ಔಷಧ ಅಗತ್ಯವಿರುವುದಿಲ್ಲ.

►ಆ್ಯಂಟಿಬಯೋಟಿಕ್  ದುರ್ಬಳಕೆಯಿಂದಾಗಿ ಉಂಟಾಗುವ ವೆಚ್ಚ ಅಮೆರಿಕ ದೇಶವೊಂದರಲ್ಲಿಯೇ ವರ್ಷಕ್ಕೆ ಸುಮಾರು 20 ಮಿಲಿಯನ್ ಡಾಲರ್ ಆಗಿರುತ್ತದೆ ಮತ್ತು ಮಾನವ ಸಂಪನ್ಮೂಲ ಸೋರಿಕೆಯಿಂದಾಗುವ ನಷ್ಟ ಸುಮಾರು 35 ಮಿಲಿಯನ್ ಡಾಲರ್ ಪ್ರತಿ ವರ್ಷಕ್ಕೆ ಆಗುತ್ತದೆ.
► ಭಾರತದ ಔಷಧ ಕಂಪೆನಿಗಳ ಮಾರುಕಟ್ಟೆ ವ್ಯವಹಾರ ಸುಮಾರು 35 ಸಾವಿರ ಕೋಟಿಗೂ ಮೀರಿದ್ದು, ಇದರಲ್ಲಿ ಸಿಂಹ ಪಾಲು (20,000ಕೋಟಿ) ಆ್ಯಂಟಿಬಯೋಟಿಕ್‌ಗೆ ಸಲ್ಲುತ್ತದೆ. ಇದರಲ್ಲಿ ಸರಿಸುಮಾರು 40% ಅನಗತ್ಯವಾಗಿಯೇ ಬಳಸಲಾಗುತ್ತದೆ ಎಂಬ ಸಂದೇಹ ಇದೆ.
► ಆ್ಯಂಟಿಬಯೋಟಿಕ್ ಬಳಕೆಯಲ್ಲಿ ಭಾರತ ಅಗ್ರಸ್ಥಾನದಲ್ಲಿದೆ, ಕಳೆದ ದಶಕದಲ್ಲಿ ಬರೋಬ್ಬರಿ ಶೇ. 62 ಹೆಚ್ಚಾಗಿ, ಭಾರತ ಅಗ್ರಸ್ಥಾನ ಗಳಿಸಿದೆ. 2001ರಲ್ಲಿ 8 ಬಿಲಿಯನ್ ಯೂನಿಟ್‌ಗಳಷ್ಟು ಇದ್ದ ಬಳಕೆ 2010ರಲ್ಲಿ 13 ಬಿಲಿಯನ್ ಯೂನಿಟ್‌ಗೆ ಏರಿದೆ. 125 ಕೋಟಿಯಷ್ಟು ಇರುವ ಭಾರತ ಜನಸಂಖ್ಯೆಯಲ್ಲಿ ಪ್ರತಿಯೊಬ್ಬ ಭಾರತೀಯ ವರ್ಷ ಒಂದರಲ್ಲಿ 11 ಆ್ಯಂಟಿಬಯೋಟಿಕ್ ಮಾತ್ರೆ ಬಳಸುತ್ತಾನೆ ಎಂಬುವುದು ಅಂಕಿ ಅಂಶಗಳಿಂದ ತಿಳಿದು ಬಂದಿದೆ. ಅಮೆರಿಕದಲ್ಲಿ ಪ್ರತಿಯೊಬ್ಬ ಪ್ರಜೆ ಸರಾಸರಿ ವರ್ಷವೊಂದರಲ್ಲಿ 22 ಆ್ಯಂಟಿಬಯೋಟಿಕ್ ಮಾತ್ರೆ, ಚೀನಾದಲ್ಲಿ ಸರಾಸರಿ 7 ಆ್ಯಂಟಿಬಯೋಟಿಕ್‌ನ್ನು ಬಳಸುತ್ತಾರೆ ಎಂದು ತಿಳಿದು ಬಂದಿದೆ.

share
ಡಾ॥ ಮುರಲೀ ಮೋಹನ್ ಚೂಂತಾರು
ಡಾ॥ ಮುರಲೀ ಮೋಹನ್ ಚೂಂತಾರು
Next Story
X