ರೈಲ್ವೆ ಪ್ರಯಾಣಿಕರಿಗೆ ಇ-ಕೇಟರಿಂಗ್ ಸೌಲಭ್ಯ

ರೈಲ್ವೆ ಸಚಿವ ಸುರೇಶ್ ಪ್ರಭು ಅವರು, ಎಲ್ಲ ಕೇಟರಿಂಗ್ ಗುತ್ತಿಗೆಯನ್ನು ಪರಾಮರ್ಶೆ ಮಾಡಿದ್ದು, ಭ್ರಷ್ಟ ಹಾಗೂ ಅನೈತಿಕ ಮಾರ್ಗಗಳ ಮೂಲಕ ಕಾರ್ಯಾಚರಿಸುವ ಕಂಪೆನಿಗಳನ್ನು ಕಪ್ಪುಪಟ್ಟಿಗೆ ಸೇರಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಸಾರ್ವಜನಿಕರಿಂದ ನಿರಂತರವಾಗಿ ದೂರುಗಳ ಪ್ರವಾಹ ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ಮತ್ತು ಇ-ಕೇಟರಿಂಗ್ ಸೌಲಭ್ಯವನ್ನು ಪ್ರಚುರಪಡಿಸುವ ಸಲುವಾಗಿ ರೈಲ್ವೆ ಸಚಿವಾಲಯ ರೈಲುಗಳಲ್ಲಿನ ಕೇಟರಿಂಗ್ ಸೇವೆಗಳ ದರಪಟ್ಟಿ ಬಿಡುಗಡೆ ಮಾಡಿದೆ. ಈ ಕ್ರಮದಿಂದಾಗಿ ಸಾರ್ವಜನಿಕರ ಅಹವಾಲುಗಳನ್ನು ಬಗೆಹರಿಸಲು ಅನುಕೂಲವಾಗಲಿದೆ. ರೈಲುಗಳಲ್ಲಿ ತಿಂಡಿ ತಿನಿಸು ಹಾಗೂ ಪಾನೀಯಗಳಿಗೆ ಅಧಿಕ ದರ ವಿಧಿಸಲಾಗುತ್ತಿದೆ ಎಂಬ ದೂರು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಕೇಳಿಬಂದಿರುವ ಹಿನ್ನೆಲೆಯಲ್ಲಿ ಈ ಕ್ರಮ ಮಹತ್ವದ್ದಾಗಿದೆ.
ಹೊಸ ಕೇಟರಿಂಗ್ ನೀತಿಯ ಮಾರ್ಗಸೂಚಿಯನ್ನು ಸಿದ್ಧಪಡಿಸುವ ಸಲುವಾಗಿ ಮಾರ್ಚ್ 21ರಂದು ವಿಚಾರ ಸಂಕಿರಣವನ್ನೂ ಏರ್ಪಡಿಸಲಾಗಿತ್ತು.
ಭಾರತೀಯ ರೈಲ್ವೆ ಕೇಟರಿಂಗ್ ಹಾಗೂ ಟೂರಿಸಂ ಕಾರ್ಪೊರೇಷನ್ (ಐಆರ್ಸಿಟಿಸಿ) ವಿಶ್ವದ ನಾಲ್ಕನೆ ಅತಿದೊಡ್ಡ ಜಾಲವಾಗಿದೆ. ಆದರೆ ಗುಣಮಟ್ಟದ ಸೇವೆಯ ಮೂಲಕ ಇದು ಪ್ರಯಾಣಿಕರ ಮೇಲೆ ಪ್ರಭಾವ ಬೀರುವಲ್ಲಿ ವಿಫಲವಾಗಿದೆ. ರೈಲ್ವೆ ಪ್ರತಿದಿನ ಸುಮಾರು 11 ಲಕ್ಷ ಪ್ರಯಾಣಿಕರಿಗೆ ಊಟೋಪಚಾರ ಸೇವೆ ನೀಡುತ್ತಿದೆ. ಈ ಪೈಕಿ ಹಲವು ಮಂದಿ ಉದ್ರಿಕ್ತ ಪ್ರಯಾಣಿಕರು ಕೇಟರಿಂಗ್ ಸೇವೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ದೂರು ನೀಡಲು ಲಭ್ಯವಿರುವ ಇತರ ಪೋರ್ಟೆಲ್ಗಳಲ್ಲಿ ದೂರುಗಳನ್ನು ವ್ಯಾಪಕವಾಗಿ ನೀಡುತ್ತಿದ್ದಾರೆ.
ಲಾಜಿಕಲ್ ಇಂಡಿಯನ್ ಐಆರ್ಸಿಟಿಸಿ ನೀಡುವ ಆಹಾರದ ದರದ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿತ್ತು. ಟ್ವಿಟರ್ ಖಾತೆಯಲ್ಲಿ ದರಪಟ್ಟಿಯನ್ನು ಪ್ರಕಟಿಸಲಾಗಿದ್ದು, ಇದಕ್ಕಿಂತ ಹೆಚ್ಚಿನ ದರವನ್ನು ವಿಧಿಸಿದರೆ ಈ ಬಗ್ಗೆ ದೂರು ನೀಡುವಂತೆ ಪ್ರಯಾಣಿಕರಿಗೆ ಮನವಿ ಮಾಡಲಾಗಿತ್ತು. ಈ ದರಪಟ್ಟಿಯು, ಗ್ರಾಹಕರಿಗೆ ವಿಧಿಸುವ ದರ ಹಾಗೂ ವಾಸ್ತವ ದರದ ನಡುವಿನ ಅಂತರವನ್ನು ಕಡಿಮೆ ಮಾಡುವ ಸಾಧ್ಯತೆ ಇದೆ.
ಮಾಂಸಾಹಾರಿ ಊಟದ ನಿಗದಿತ ದರ 55 ರೂಪಾಯಿ ಆಗಿದ್ದು, ಸಸ್ಯಾಹಾರಿ ಊಟದ ದರ 50 ರೂಪಾಯಿಗಳು. ಬೆಳಗ್ಗಿನ ಉಪಾಹಾರಕ್ಕೆ ಕ್ರಮವಾಗಿ 30 ಹಾಗೂ 35 ರೂಪಾಯಿ ನಿಗದಿಪಡಿಸಲಾಗಿದೆ. ಅಂತೆಯೇ ತಾಜಾವಾಗಿ ಸಿದ್ಧಪಡಿಸಿದ ಆಹಾರ ಇದಾಗಿರುತ್ತದೆ. ಹೆಚ್ಚೆಂದರೆ ಎರಡು ಗಂಟೆ ಮುಂಚಿತವಾಗಿ ಸಿದ್ಧಪಡಿಸಿದ್ದಾಗಿರುತ್ತದೆ ಎಂದು ಐಆರ್ಸಿಟಿಸಿ ಖಾತ್ರಿ ನೀಡಿತ್ತು.
ಐಆರ್ಸಿಟಿಸಿ, ಪ್ರಯಾಣಿಕರಿಗೆ ಈ ಆಹಾರ ಸರಬರಾಜು ಮಾಡಲು ಕೆಲ ಖಾಸಗಿ ಮಾರಾಟಗಾರರನ್ನು ನೇಮಕ ಮಾಡಿಕೊಂಡಿದ್ದು, ಬಹುತೇಕ ಸಂದರ್ಭದಲ್ಲಿ ಅಧಿಕ ದರ ವಿಧಿಸುವ ಆಹಾರದ ಗುಣಮಟ್ಟದ ಬಗ್ಗೆಯೂ ವ್ಯಾಪಕ ದೂರುಗಳು ಕೇಳಿ ಬರುತ್ತಿದ್ದವು. ಐಆರ್ಸಿಟಿಸಿ ಹಾಗೂ ಖಾಸಗಿ ಮಾರಾಟಗಾರರ ನಡುವಿನ ಒಪ್ಪಂದದ ಪ್ರಕಾರ, ಆಯ್ದ ಮಾರಾಟಗಾರರು, ಐಆರ್ಸಿಟಿಸಿ ನಿಗದಿಪಡಿಸಿದ ದರದಲ್ಲಿ ಆಹಾರ ಸರಬರಾಜು ಮಾಡಬೇಕು. ಇದರ ಜತೆಗೆ ಇಂಥ ಮಾರಾಟಗಾರರು ಐಆರ್ಸಿಟಿಸಿಯ ದರಪಟ್ಟಿ ಮತ್ತು ಮೆನು ಕಾರ್ಡ್ ಪ್ರದರ್ಶಿಸುವುದು ಕಡ್ಡಾಯ. ಜತೆಗೆ ಪ್ರಯಾಣಿಕರಿಗೆ ಸ್ವಚ್ಛ ಆಹಾರವನ್ನೂ ಪೂರೈಸಬೇಕು.
ರೈಲ್ವೆ ಸಚಿವ ಸುರೇಶ್ ಪ್ರಭು ಅವರು, ಎಲ್ಲ ಕೇಟರಿಂಗ್ ಗುತ್ತಿಗೆಯನ್ನು ಪರಾಮರ್ಶೆ ಮಾಡಿದ್ದು, ಭ್ರಷ್ಟ ಹಾಗೂ ಅನೈತಿಕ ಮಾರ್ಗಗಳ ಮೂಲಕ ಕಾರ್ಯಾಚರಿಸುವ ಕಂಪೆನಿಗಳನ್ನು ಕಪ್ಪುಪಟ್ಟಿಗೆ ಸೇರಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಪ್ರಭು ಹೊಸ ಕೇಟರಿಂಗ್ ನೀತಿಯನ್ನು ಕೂಡಾ ಪ್ರಕಟಿಸಿದ್ದು, ಇದರ ಅನ್ವಯ ಆಹಾರ ಉತ್ಪಾದನೆ ಹಾಗೂ ವಿತರಣೆಯನ್ನು ಪ್ರತ್ಯೇಕಿಸಲಾಗಿದೆ. ಈ ಮೂಲಕ ಆರೋಗ್ಯಕರ ಹಾಗೂ ಸ್ವಚ್ಛ ಆಹಾರವನ್ನು ರೈಲುಗಳಲ್ಲಿ ಪೂರೈಕೆ ಮಾಡುವುದು ಉದ್ದೇಶ.
ಪ್ರಮುಖ ನಿಲ್ದಾಣಗಳಲ್ಲಿ ಪ್ರಮುಖ ಹೋಟೆಲ್ಗಳು ಆಹಾರ ಸಿದ್ಧಪಡಿಸುವ ಘಟಕವನ್ನು ನಿರ್ಮಿಸುವ ನಿಟ್ಟಿನಲ್ಲಿ ಕೂಡಾ ರೈಲ್ವೆ ಸಚಿವಾಲಯ ಪ್ರಯತ್ನ ಆರಂಭಿಸಿದೆ. ಐಆರ್ಸಿಟಿಸಿ ನಿಗಮವು 1999ರ ಸೆಪ್ಟಂಬರ್ನಲ್ಲಿ ಆರಂಭವಾಗಿದ್ದು, ಇದು ಆಹಾರ ಸರಬರಾಜಿನ ಹೊಣೆ ಹೊತ್ತಿದೆ. ಸಾರ್ವಜನಿಕ ವಲಯದ ರೈಲ್ವೆಯನ್ನು ಕೇಟರಿಂಗ್ ಸೇವೆಗಳಿಂದ 2010ರಲ್ಲಿ ಬಿಡುಗಡೆ ಮಾಡಲಾಗಿದ್ದು, ಅಂದಿನ ರೈಲ್ವೆ ಸಚಿವೆ ಮಮತಾ ಬ್ಯಾನರ್ಜಿ ಈ ಕ್ರಮ ಕೈಗೊಂಡಿದ್ದರು.
ರೈಲ್ವೆ ಸಚಿವಾಲಯದ ಈ ಕ್ರಮವನ್ನು ಲಾಜಿಕಲ್ ಇಂಡಿಯನ್ ಸ್ವಾಗತಿಸಿದೆ. ಇದು ರೈಲ್ವೆ ಪ್ರಯಾಣಿಕರು ಇ- ಕೇಟರಿಂಗ್ ವ್ಯವಸ್ಥೆಯ ಮೂಲಕ ಹೆಚ್ಚುವರಿಯಾಗಿ ಆಹಾರವನ್ನು ಮುಂಗಡವಾಗಿ ಕಾಯ್ದಿರಿಸಲು ಅನುಕೂಲವಾಗಲಿದೆ. ಇದರ ಜತೆಗೆ ಸಾಮಾಜಿಕ ಜಾಲತಾಣಗಳಲ್ಲಿ ದರಪಟ್ಟಿಯ ಮಾಹಿತಿಯನ್ನು ಪ್ರಚುರಪಡಿಸಿರುವುದು ಕೂಡಾ ಪ್ರಯಾಣಿಕರಿಗೆ ಒದಗಿಸುವ ಊಟೋಪಚಾರಕ್ಕೆ ಐಆರ್ಸಿಟಿಸಿ ವಿಧಿಸುವ ದರದ ಬಗ್ಗೆಯೂ ಸ್ಪಷ್ಟತೆ ಲಭ್ಯವಾಗಲಿದೆ.