2 ದಿನ ವಿಮಾನ ನಿಲ್ದಾಣದೊಳಗೆ ದಿಗ್ಬಂಧನದ ನೆನಪು: ಅಬ್ದುಲ್ ರಹ್ಮಾನ್ ಅರಿಯಡ್ಕ
ಹಜ್ಯಾತ್ರೆ ಅನುಭವ

7 ವರ್ಷಗಳ ಹಿಂದೆ ಪವಿತ್ರ ಹಜ್ ಯಾತ್ರೆಯನ್ನು ನಾನು ಪತ್ನಿ ಬೀಫಾತಿಮ ಅವರೊಂದಿಗೆ ಕೈಗೊಂಡಿದ್ದೆ. ಸರಕಾರಿ ಕೋಟಾದ ಅಡಿಯಲ್ಲಿ ನನ್ನ ಯಾತ್ರೆಯಾಗಿತ್ತು. ಆದರೆ ಹಜ್ ನಿರ್ವಹಣೆಯ ವೇಳೆಯಲ್ಲಿ ಆಗಿರುವ ಸಂಕಷ್ಟದ ಅನುಭವ ಮಾತ್ರ ನಾನು ಜೀವನದಲ್ಲಿಯೇ ಮರೆಯಲು ಸಾಧ್ಯವಿಲ್ಲ.
ನಾವು 2010ರಲ್ಲಿ ಹಜ್ ಯಾತ್ರೆ ಕೈಗೊಂಡಿದ್ದೆವು. ನಮ್ಮ ತಂಡ ಹೊರಡುವಾಗಲೇ ಸಮಸ್ಯೆಗಳು ಆರಂಭವಾದುವು. ನಮಗೆ ಮಧ್ಯಾಹ್ನ 2 ಗಂಟೆಗೆ ವಿಮಾನ ಎಂದಿದ್ದರು. ಹಾಗೆ ನಾವು ಸಾಕಷ್ಟು ಮುಂಚಿತವಾಗಿಯೇ ವಿಮಾನ ನಿಲ್ದಾಣ ತಲುಪಿದ್ದೆವು. ಆದರೆ ವಿಮಾನ ಹೊರಟಿದ್ದು ರಾತ್ರಿ 2 ಗಂಟೆಗೆ. ಅಲ್ಲಿಯ ತನಕ ವಿಮಾನ ನಿಲ್ಧಾಣದಲ್ಲಿಯೇ ಬಾಕಿಯಾಗಿದ್ದೆವು. ಬಳಿಕ ಜಿದ್ದಾಕ್ಕೆ ಹೋಗಿ ಅಲ್ಲಿಂದ ಮಕ್ಕಾ ತಲುಪಿದೆವು. ಬಳಿಕ ಎಲ್ಲಾ ಹಜ್ ಕರ್ಮಗಳನ್ನು ಸುಸೂತ್ರವಾಗಿ ನಡೆಸಿದೆವು. ಎಲ್ಲವೂ ಒಳ್ಳೆಯ ರೀತಿಯಲ್ಲಿಯೇ ನಡೆಯಿತು. ಆದರೆ ಹಜ್ ಕರ್ಮ ಮುಗಿಸಿ ಹಿಂದಿರುಗುವಾಗ ನಾವು ಸಾಕಷ್ಟು ಸಂಕಷ್ಟವನ್ನು ಎದುರಿಸಬೇಕಾಯಿತು.
ನಮ್ಮನ್ನು ಜಿದ್ದಾ ವಿಮಾನ ನಿಲ್ದಾಣದಲ್ಲಿ ತುಂಬಾ ಸತಾಯಿಸಿದರು. ಮಂಗಳೂರಿಗೆ ಬರುವ ವಿಮಾನವಿಲ್ಲದೆ ಜಿದ್ದಾ ವಿಮಾನ ನಿಲ್ದಾಣದ ಒಳಗೆ 2 ದಿನಗಳ ಕಾಲ ಉಳಿಯ ಬೇಕಾಯಿತು. ಈ ಬಗ್ಗೆ ನಮಗೆ ಯಾವುದೇ ಪೂರ್ವ ಮಾಹಿತಿಯನ್ನು ನೀಡಿರಲಿಲ್ಲ. ಅಲ್ಲದೆ ವಿಮಾನ ನಿಲ್ದಾಣದ ಒಳಗೆ ನಮಗೆ ಆಹಾರದ ವ್ಯವಸ್ಥೆಯೂ ಇಲ್ಲದೆ ಹಸಿವಿನಿಂದ ಬಳಲ ಬೇಕಾಯಿತು. ನಮ್ಮ ತಂಡದಲ್ಲಿ ಪ್ರಾಯಸ್ಥ ಮಹಿಳೆಯರು, ಪುರುಷರು ಸೇರಿದಂತೆ ಸುಮಾರು 200ಕ್ಕೂ ಅಧಿಕ ಮಂದಿಯಿದ್ದರು. ಎಲ್ಲರಿಗೂ ಭಯ ಹಾಗೂ ಆತಂಕವಾಗಿತ್ತು. ನಾವು ಹೋಗುವ ವಿಮಾನದ ಬಗ್ಗೆ ಯಾವುದೇ ಮಾಹಿತಿಗಳಿರಲಿಲ್ಲ. ಒಂದೆಡೆ ನಮ್ಮನ್ನು ಕೇಳುವವರಿಲ್ಲದೆ ಇನ್ನೊಂದೆಡೆ ಆಹಾರಗಳಿಲ್ಲದೆ ನಾವು ಕಂಗಾಲಾಗಿದ್ದೆವು. ಪ್ರಾಯದ ಹಜ್ಜಾಜ್ಗಳು ಅಶಕ್ತರಾಗಿ ಕಂಗಾಲಾಗಿದ್ದರು.
ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಅರಬ್ಬಿ ಮತ್ತು ಇಂಗ್ಲೀಷ್ ಭಾಷೆ ಮಾತ್ರ ಗೊತ್ತಿತ್ತು. ನಮಗೆ ಅವೆರಡೂ ಭಾಷೆಯೂ ಗೊತ್ತಿರಲಿಲ್ಲ. ಇದರಿಂದ ನಾವು ಹೇಳುವ ನೋವು ಅವರಿಗೆ ಅರ್ಥವಾಗುತ್ತಿರಲಿಲ್ಲ. ಅವರು ಹೇಳುತ್ತಿರುವುದು ನಮಗೂ ಅರ್ಥವಾಗುತ್ತಿರಲಿಲ್ಲ.
ಕರ್ನಾಟಕದವರೇ ಆಗಿದ್ದ ಎಸ್.ಎಂ.ಕೃಷ್ಣ ಆಗ ವಿದೇಶಾಂಗ ಸಚಿವರಾಗಿದ್ದರು. ನಾನು ಸಮಸ್ಯೆಯನ್ನು ಪುತ್ತೂರಿನ ಕೆಲವು ಸ್ನೇಹಿತರಿಗೆ ತಿಳಿಸಿ ಇಲ್ಲಿಂದ ಪಾರು ಮಾಡುವಂತೆ ಕೇಳಿಕೊಂಡಿದ್ದೆ. ನನ್ನ ಸ್ನೇಹಿತರು ಎಸ್.ಎಂ.ಕೃಷ್ಣ ಅವರನ್ನು ಸಂಪರ್ಕಿಸಿ ಸಮಸ್ಯೆಯನ್ನು ತಿಳಿಸಿದರು. ಸಚಿವರ ಆಪ್ತ ಸಹಾಯಕರ ಮೂಲಕ ಪ್ರಯತ್ನ ನಡೆಸಿದ್ದರು. ಆದರೆ ಯಾವುದೇ ಪರಿಣಾಮವಾಗಿರಲಿಲ್ಲ. ಇದರೊಂದಿಗೆ ನನ್ನ ಪತ್ನಿಯ ಆರೋಗ್ಯದ ಸಮಸ್ಯೆಯೂ ನನ್ನನ್ನು ಅಧೀರನನ್ನಾಗಿಸಿತ್ತು.
ನಮ್ಮಂದಿಗಿದ್ದ ಮುಸ್ಲಿಯಾರ್ ಒಬ್ಬರಿಗೆ ಅಲ್ಪಸ್ವಲ್ಪ ಅರಬ್ಬಿ ಭಾಷೆ ಗೊತ್ತಿತ್ತು. ಅವರಲ್ಲಿ ಸಮಸ್ಯೆಯನ್ನು ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ತಿಳಿಸುವಂತೆ ಕೇಳಿಕೊಂಡ ನಾನು ಒಂದೋ ನಮಗೆ ಊರಿಗೆ ಹೋಗಲು ಏನಾದರೂ ವ್ಯವಸ್ಥೆ ಮಾಡಲಿ, ಇಲ್ಲದಿದ್ದರೆ ನಮ್ಮನ್ನು ವಿಮಾನ ನಿಲ್ದಾಣದಿಂದ ಹೊರಗಾದರೂ ಕಳುಹಿಸಲಿ ಎಂದು ಕೇಳಿಕೊಂಡೆ. ಹಸಿವು, ಸಂಕಷ್ಟದಿಂದ ನಾನು ಹತಾಶನಾಗಿದ್ದೆ. ಇದರಿಂದಾಗಿ ನನಗೆ ಸಿಟ್ಟೂ ಬಂದಿತ್ತು. ಆದರೆ ಸೌದಿಯಲ್ಲಿ ಜೋರಾಗಿ ಮಾತನಾಡಿದರೆ ಜೈಲಿಗೆ ಹಾಕುತ್ತಾರೆ. ನಮಗೆ ಇನ್ನೂ ತೊಂದರೆಯಾಗಬಹುದು ಎಂದು ಉಳಿದವರು ನನ್ನ ಮಾತನ್ನು ತಡೆಯುವ ಪ್ರಯತ್ನ ಮಾಡಿದರು. ಇನ್ನು ಇಲ್ಲಿಂದ ಹೋಗುವ ದಾರಿಯೇ ಇಲ್ಲ ಎಂದು ನನಗೆ ಕಣ್ಣೀರು ಬಂತು. ಆದರೆ ನನ್ನೊಂದಿಗೆ ಪತ್ನಿ ಹಾಗೂ ಇತರರು ಇದ್ದ ಕಾರಣ ಅವರು ಹೆದರಿಕೊಳ್ಳಬಹುದು ಎಂದು ನೋವನ್ನು ತೋರ್ಪಡಿಸಿಕೊಳ್ಳದೆ ಸಹಿಸಿಕೊಂಡಿದ್ದೆ.
ವಿಮಾನ ನಿಲ್ದಾಣದಲ್ಲಿದ್ದ ಇತರರು ಉಪಾಹಾರ ಸೇವಿಸುವಾಗ ಅವರಲ್ಲಿ ಕೇಳಿಕೊಂಡು ಅವರು ನೀಡಿದ ಅಲ್ಪಸ್ವಲ್ಪ ಆಹಾರವನ್ನು ನಮ್ಮಾಂದಿಗೆ ಇದ್ದವರಿಗೆ ಮುಖ್ಯವಾಗಿ ವಯಸ್ಕರಿಗೆ ನೀಡುತ್ತಿದ್ದೆವು.
2ದಿನಗಳು ವಿಮಾನ ನಿಲ್ದಾಣದಲ್ಲಿ ಹೀಗೆ ಕಳೆದ ಮೇಲೆ ಒಬ್ಬ ಮಲಯಾಳಂ ಗೊತ್ತಿದ್ದ ಅಧಿಕಾರಿ ನಾವಿರುವಲ್ಲಿಗೆ ಬಂದು ನಮ್ಮ ಸಮಸ್ಯೆಯನ್ನು ಕೇಳಿದರು. ಅವರಲ್ಲಿ ಎಲ್ಲಾ ವಿಚಾರ ತಿಳಿಸಿ ನಾವು 2 ದಿನಗಳಿಂದ ಅನ್ನ ಆಹಾರವಿಲ್ಲದೆ ಬಳಲಿದ್ದೇವೆ. ಹಿರಿಯ ಜೀವಗಳು ಕಂಗಾಲಾಗಿವೆ. ನಮ್ಮನ್ನು ಊರಿಗೆ ತಲುಪಿಸಿ, ಇಲ್ಲಿ ನಮ್ಮನ್ನು ಕೇಳುವವರೇ ಇಲ್ಲ ಎಂದು ಸಮಸ್ಯೆಗಳನ್ನು ತಿಳಿಸಿದೆ. ಅವರು ಕನಿಕರ ತೋರಿ ನಮಗೆ ಊಟದ ವ್ಯವಸ್ಥೆಯನ್ನು ಮಾಡಿದರು. ಆ ಬಳಿಕ ನಮ್ಮನ್ನು ತುರ್ಕಿ ಸೇರಿದಂತೆ ಬೇರೆ ಬೇರೆ ದೇಶಗಳಿಗೆ ಸುತ್ತ ಬಳಸಿ ಆಗಮಿಸುವ ವಿಮಾನದಲ್ಲಿ ಮಂಗಳೂರಿಗೆ ತಲುಪಿಸಿದರು. ಎರಡು ದಿನಗಳ ಕಾಲ ನಾವು ಅನುಭವಿಸಿದ್ದ ನೋವು, ಭಯವನ್ನು ನಾನಿನ್ನೂ ಮರೆತಿಲ್ಲ. ಇವೆಲ್ಲದರ ನಡುವೆ ಪವಿತ್ರ ಹಜ್ ಕರ್ಮವನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಿದ ಸಂತೃಪ್ತಿ ನನಗಿದೆ.







