ಟಿಪ್ಪುವಿನ ವಿಶೇಷತೆಗಳು

ಲೇಖಕ ಟಿಪ್ಪು!
ಟಿಪ್ಪುತನ್ನ ಬಿಡುವಿಲ್ಲದ ದಿನಚರಿಯ ನಡುವೆಯೂ ಹಲವು ಪುಸ್ತಕಗಳನ್ನು ರಚಿಸಿದ್ದಾನೆ. ಟಿಪ್ಪುವು ಕನ್ನಡ, ತೆಲುಗು, ತಮಿಳು, ಭಾಷೆ ಬಲ್ಲವನಾಗಿದ್ದ. ಆತ ಬರೆದ ಪುಸ್ತಕಗಳ ಮೂಲಧಾತುವೂ ಸಹ ಬ್ರಿಟಿಷ್ ವಸಾಹತುಶಾಹಿಯಿಂದ ಹಾಗೂ ಊಳಿಗಮಾನ್ಯತೆಯಿಂದ ನಾಡಿನ ಬಿಡುಗಡೆಯ ಅಂಶವನ್ನೇ ಹೊಂದಿತ್ತು. ಅವುಗಳಲ್ಲಿ ‘ಫಾತುಲ್ ಮುಜಾಹಿದೀನ್’(ಸೈನಿಕನ ವಿಜಯ)ಯುದ್ಧ, ಕಲೆ, ಹಾಗೂ ವಿಜ್ಞಾನಗಳ ಬಗ್ಗೆಯಾಗಿತ್ತು. ಭೂ ಕಂದಾಯ ಕಾಯ್ದೆ ಹಾಗೂ ವಾಣಿಜ್ಯ ಕಾಯ್ದೆಗಳು ಟಿಪ್ಪುವಿನ ರಾಷ್ಟ್ರ ನಿರ್ಮಾಣದ ಪ್ರಣಾಳಿಕೆಯೇ ಆಗಿತ್ತು. ಅಲ್ಲದೇ ಟಿಪ್ಪು ಕನಸುಗಳು ಎಂಬ ಪುಸ್ತಕ 38 ಲೇಖನಗಳನ್ನು ಹೊಂದಿದ್ದು ಸ್ವತಂತ್ರ ರಾಷ್ತ್ರ ನಿರ್ಮಾಣದ ಬಗೆ ಟಿಪ್ಪುವಿನ ಕನಸುಗಳನ್ನು ದಾಖಲಿಸುತ್ತದೆ
ಮೂರು ಬಗೆಯ ಯುದ್ಧಗಳಲ್ಲೂ ನಿಷ್ಣಾತ:
ಟಿಪ್ಪು-ಹೈದರಲಿ ಇವರಿಬ್ಬರೂ ತಾವು ನಡೆಸಿದ ವಸಾಹತುಶಾಹಿ ವಿರೋಧಿ ಯುದ್ಧಗಳಲ್ಲಿ ಮೂರು ಬಗೆಯ ಸಮರ ಪದ್ಧತಿಗಳನ್ನು ಬಳಸಿದರು.
1. ಗೆರಿಲ್ಲಾ ಯುದ್ಧ
2. ಚಲನ ಯುದ್ಧ
3. ಸ್ಥಾನಿಕ ಯುದ್ಧ
ಗೆರಿಲ್ಲಾ ಯುದ್ಧತಂತ್ರಗಳ ವಿಧಾನಗಳನ್ನು ಅಂದಿನ ಪಾಳೇಗಾರರು ಹಾಗೂ ಕೊಡಗಿನ ಜನತೆ ಅನುಸರಿಸುತ್ತಿದ್ದರೆ, ಚಲನ ಯುದ್ಧ ಮರಾಠರ ಪ್ರಮುಖ ಯುದ್ಧ ತಂತ್ರವಾಗಿತ್ತು. ಇನ್ನು ಸ್ಥಾನಿಕ ಯುದ್ಧ ಬ್ರಿಟಿಷರು, ಫ್ರೆಂಚರು ಭಾರತದಲ್ಲಿ ಅನುಸರಿಸಿದ ಯೂರೋಪಿಯನ್ ಯುದ್ಧ ಪದ್ಧತಿಯಾಗಿತ್ತು.
ಟಿಪ್ಪು ಈ ಮೂವರು ಶತ್ರುಗಳ ವಿರುದ್ಧ ಯುದ್ಧ ಮಾಡುತ್ತಲೇ ತನ್ನ ಶತ್ರುಗಳು ನಿಷ್ಣಾತರಾಗಿದ್ದ ಯುದ್ಧ ಕಲೆಗಳನ್ನು ಅಭ್ಯಸಿಸಿ ಅದರಲ್ಲಿ ಪರಿಣಿತನಾದ. ಯುದ್ಧರಂಗದಲ್ಲಿ ಯುದ್ಧ ಕಲೆಯನ್ನು ಕಲಿತು, ತಾನು ಕಲಿತದ್ದನ್ನೆಲ್ಲಾ ಬ್ರಿಟಿಷರನ್ನು ಒದ್ದೋಡಿಸಲು ಪ್ರಯೋಗಿಸಿದ ಯುದ್ಧ ಚತುರ ಹಾಗೂ ಶಿಸ್ತು ಬದ್ಧ ಸೈನಿಕ ಟಿಪ್ಪುಸುಲ್ತಾನ್
ಕೆರೆಕಟ್ಟೆಗಳು:
ಟಿಪ್ಪುವಿನ ಕಾಲದಲ್ಲಿ ನೀರಾವರಿ ಸೌಲಭ್ಯ ವಿಸ್ತೃತವಾಗಿ ಹರಡಿತು. ಅವುಗಳಲ್ಲಿ ಸರಕಾರವೇ ಕೈಗೆತ್ತಿಕೊಂಡ ಬೃಹತ್ ನೀರಾವರಿ ಯೋಜನೆಗಳು, ಜನ ಹಾಗೂ ಸರಕಾರ ಜೊತೆಗೂಡಿ ನಿರ್ವಹಿಸುತ್ತಿದ್ದ ಮಧ್ಯಮ ನೀರಾವರಿ ಯೋಜನೆಗಳು ಹಾಗೂ ಜನತೆಯೇ ಸರಕಾರದ ಬೆಂಬಲದಿಂದ ನಿರ್ವಹಿಸಿದ ನೀರಾವರಿ ಯೋಜನೆಗಳು. ಈ ಒಟ್ಟಾರೆ ನೀರಾವರಿ ಜಾಲದಿಂದಾಗಿ ಟಿಪ್ಪುವಿನ ಮೈಸೂರು ಸಂಸ್ಥಾನದಲ್ಲಿ 39,000 ಕೆರೆ ಕಟ್ಟೆಗಳಿದ್ದು ಭಾರತದಲ್ಲೇ ಪ್ರಥಮ ಸ್ಥಾನದಲ್ಲಿತ್ತು. 1803-1804ರ ಅಂದಾಜಿನಂತೆ ಆಗ ಉಳುಮೆಯಾಗುತ್ತಿದ್ದ 30,12,397 ಎಕರೆ ಜಮೀನಿನಲ್ಲಿ 8,13,491 ಎಕರೆ ಜಮೀನು ನೀರಾವರಿಗೆ ಒಳಪಟ್ಟಿತ್ತು. ಮತ್ತೊಂದು ಅಂದಾಜಿನಂತೆ 1799ರ ವೇಳೆಗೆ ಶೇ.35ರಷ್ಟು ಭೂಮಿ ನೀರಾವರಿಗೆ ಒಳಪಟ್ಟಿತ್ತು. ಅಲ್ಲದೆ 1798ರಲ್ಲಿ ಇಂದು ಕೆ.ಆರ್.ಎಸ್ ಇರುವ ಜಾಗದಲ್ಲೇ ಕಾವೇರಿ ನದಿಗೆ ಬೃಹತ್ ಅಣೆಕಟ್ಟು ಕಟ್ಟುವ ಯೋಜನೆಗೆ ಟಿಪ್ಪುಸರಕಾರ ಅಸ್ತಿಭಾರ ಹಾಕಿತ್ತು. ಅಷ್ಟುಹೊತ್ತಿಗೆ ನಾಲ್ಕನೆ ಮೈಸೂರು ಯುದ್ಧದ ಸಾಧ್ಯತೆಗಳಿದ್ದವು ಎಂಬುದನ್ನು ಗಮನಿಸಬೇಕು.
ನಾಡಿನ ಪ್ರಪ್ರಥಮ ರೇಷ್ಮೆ ಬೆಳೆಗಾರ:
ಟಿಪ್ಪುಸದಾ ಪ್ರಯೋಗಶೀಲನಾಗಿರುತ್ತಿದ್ದ. ವಿಶ್ವದ ಯಾವುದೇ ಮೂಲೆಯಲ್ಲಿ ಕೃಷಿ ಹಾಗೂ ಕೈಗಾರಿಕೆಗೆ ಸಂಬಂಧಪಟ್ಟ ಯಾವುದೇ ಹೊಸ ಅಥವಾ ಇಲ್ಲಿ ಇರದಿದ್ದ ಪದ್ಧತಿಗಳು, ಅನ್ವೇಷಣೆಗಳನ್ನು ಕಂಡರೂ ಆತ ಕೂಡಲೇ ರಾಯಭಾರಿಗಳನ್ನು ಕಳುಹಿಸಿ ತರಿಸಿಕೊಂಡು ಉತ್ಪಾದನೆಗೆ ಹಚ್ಚುತ್ತಿದ್ದ.
ಟಿಪ್ಪುವಿನ ಈ ಅದಮ್ಯ ಅಭಿವೃದ್ಧಿಶೀಲ ಗುಣದಿಂದಲೇ ವಿದೇಶಿ ರೇಷ್ಮೆ ಬೆಳೆ ಕರ್ನಾಟಕದಲ್ಲಿ ಪರಿಚಯಗೊಂಡಿತು. ಟಿಪ್ಪುರೇಷ್ಮೆ ಕೃಷಿಯ ಬಗ್ಗೆ ಅದೆಷ್ಟು ಜತನ ವಹಿಸಿದನೆಂದರೆ 1786ರಲ್ಲಿ ಯುದ್ಧದ ಮಧ್ಯೆ ಸುತ್ತುವರಿಯಲ್ಪಟ್ಟಿದ್ದರೂ ತನ್ನ ಬಿಡುವಿಲ್ಲದ ದಿನಚರಿಯ ನಡುವೆಯೂ ವಿದೇಶದಿಂದ ತರುವ ರೇಷ್ಮೆಗೂಡುಗಳನ್ನು ಹೇಗೆ ಕಾಪಾಡಿ, ಬೆಳೆಸಬೇಕು ಎಂಬುದರ ಬಗ್ಗೆ ಅಧಿಕಾರಿಗಳಿಗೆ ಸುದೀರ್ಘ ಪತ್ರ ಬರೆದು ಮಾರ್ಗದರ್ಶನ ಮಾಡುತ್ತಿದ್ದ. ಟಿಪ್ಪುವಿನ ಈ ನಿರಂತರ ಕಾಳಜಿಯಿಂದ 18ನೇ ಶತಮಾನದ ಕೊನೆಯ ವೇಳೆಗೆ ಮೈಸೂರು ಪ್ರಾಂತದಲ್ಲಿ 318 ರೇಷ್ಮೆ ಉತ್ಪಾದನಾ ಕುಟುಂಬಗಳಿದ್ದವು. ಇಂದು ಕರ್ನಾಟಕ ರೇಷ್ಮೆ ಉತ್ಪಾದನೆಯಲ್ಲಿ ಭಾರತದಲ್ಲೇ ಮೊತ್ತ ಮೊದಲ ಸ್ಥಾನ ಪಡೆದಿದೆ.
ಸಸ್ಯಶಾಸ್ತ್ರ ಪ್ರಯೋಗಶಾಲೆ-ಲಾಲ್ಬಾಗ್:
ಬೆಂಗಳೂರಿನಲ್ಲಿರುವ ಲಾಲ್ಬಾಗ್ ಸಸ್ಯತೋಟವನ್ನು ಅಪರೂಪದ ಸಸ್ಯತಳಿಗಳನ್ನು ಸಂರಕ್ಷಿಸಲೆಂದೇ ಟಿಪ್ಪುಪ್ರಾರಂಭಿಸಿದ. ಪ್ರಾಕ್ಸಿ ಫೆರ್ನಾಂಡಿಸ್ ಎಂಬವರು ಬರೆದಿರುವಂತೆ; ಲಾಲ್ ಬಾಗ್ ಸಸ್ಯ ಉದ್ಯಾನವು ಕೇವಲ ಮನೋಲ್ಲಾಸಕ್ಕಾಗಿ ನಿರ್ಮಿಸಿದ ತೋಟವಾಗಿರಲಿಲ್ಲ. ವಿಶ್ವದ ಬೇರೆಬೇರೆ ಕಡೆಗಳಿಂದ ತರಿಸಲಾಗಿದ್ದ ಅಪರೂಪದ ಸಸ್ಯ ತಳಿಗಳನ್ನೆಲ್ಲಾ ಇಲ್ಲಿ ಸಂರಕ್ಷಣೆ ಮಾಡಲಾಗಿತ್ತು. ಇಂಗ್ಲೆಂಡಿನ ಓಕ್ಮರ, ದಕ್ಷಿಣ ಆಫ್ರಿಕಾದ ಪೈನ್ಮರ, ಮೆಕ್ಸಿಕೋದ ಅವೋಕಾಡೋ, ಮಾವು, ಕಿತ್ತಳೆ, ಹಿಪ್ಪುನೇರಳೆ, ಸೀಬೆಗಿಡಗಳು ಹಾಗೂ ಹತ್ತಿ ಮತ್ತು ನೀಲಿ ಬೆಳೆಯ ಪ್ರಾಯೋಗಿಕ ಕ್ಷೇತ್ರಗಳು ಲಾಲ್ ಬಾಗ್ನಲ್ಲಿದ್ದವು.
ವಿಶ್ವದಲ್ಲೇ ಅತ್ಯುತ್ತಮ ಕಬ್ಬಿಣ:
ಟಿಪ್ಪುವಿನ ಆಳ್ವಿಕೆಯಲ್ಲಿ ದೊರೆತ ಕಬ್ಬಿಣದ ಬಗ್ಗೆ ಹೇನ್ಸ್ ಎಂಬವನು ಈಸ್ಟ್ ಇಂಡಿಯಾ ಕಂಪನಿಗೆ ಈ ರೀತಿ ವರದಿ ಮಾಡಿದ್ದ; ‘‘....ಒಟ್ಟಿನಲ್ಲಿ ಹೇಳುವುದಾದರೆ ಇಂಗ್ಲೀಷ್ ಉದ್ಯಮಿಗಳಿಗೆ ಭಾರತದ ಕಬ್ಬಿಣ ಅತ್ಯುತ್ತಮ ಸರಕಾಗುತ್ತದೆ ಎಂದು ನನ್ನ ಭಾವನೆ. ಏಕೆಂದರೆ ಇದಕ್ಕೆ ಹೋಲಿಸಿದರೆ ನಮ್ಮ ಇಂಗ್ಲಿಷ್ ಕಬ್ಬಿಣ ಕನಿಷ್ಟಪಕ್ಷ 30-40 ವರ್ಷಕ್ಕಿಂತ ಹಳತಾದ ಕೆಳದರ್ಜೆಯದು...... ನಾನಿದುವರೆಗೆ ನೋಡಿರುವ ಕಬ್ಬಿಣದಲ್ಲಿ ಭಾರತದ ಈ ಕಬ್ಬಿಣ ಅತ್ಯುತ್ತಮ ದರ್ಜೆಯದು.’’
ಸಿಟಿಝನ್ ಟಿಪ್ಪು:
ಬ್ರಿಟಿಷರ ವಿರುದ್ಧ ಟಿಪ್ಪು ಫ್ರಾನ್ಸ್ನೊಡನೆ ಸತತ ರಾಜತಾಂತ್ರಿಕ ಸಂಪರ್ಕವಿರಿಸಿ ಕೊಂಡಿದ್ದರೂ ಅಲ್ಲಿ ಕ್ರಾಂತಿಯ ಸಂಕ್ಷೋಭೆ ಉಂಟಾದಾಗ ಟಿಪ್ಪುಕ್ರಾಂತಿಕಾರಿಗಳ ಪರವಾಗಿ ನಿಂತಿದ್ದು ಸಹಜವಾಗಿತ್ತು. ಫ್ರಾನ್ಸಿನ ಕಾಂ್ರತಿಕಾರಿ ಸಂಘಟನೆಯಾದ ‘ಜಾಕೋಬಿನ್ ಕ್ಲಬ್’ ಅನ್ನು ಟಿಪ್ಪುವಿನ ಆಶ್ರಯದಲ್ಲಿದ್ದ ಫ್ರೆಂಚರು ಪ್ರಾರಂಭಿಸಿ ದಾಗ ಟಿಪ್ಪು ಅದಕ್ಕೆ ಆಶ್ರಯ ಕೊಟ್ಟು ತಾನೂ ಸಹ ಅದರ ಸದಾಶಯದಲ್ಲಿ ಸಿಟಿಝನ್ ಟಿಪ್ಪು ಆಗಿ ಭಾಗವಹಿಸಿದ. ಅಲ್ಲದೆ ಟಿಪ್ಪುವಿನ ಪ್ರಾಂಗಣದಲ್ಲಿ ವಿಮೋಚನಾ ವೃಕ್ಷವೊಂದನ್ನು ನೆಡಲಾಯಿತು. ಫ್ರೆಂಚ್ ಕ್ರಾಂತಿ ಸಂಭವಿಸಿದಾಗ ಅದರ ಯಶಸ್ಸಿಗೆ ಶ್ರೀರಂಗಪಟ್ಟಣದಲ್ಲೂ ಟಿಪ್ಪುಸಂಭ್ರಮಾಚರಣೆ ನಡೆಸಿದ. ಹೀಗೆ ಟಿಪ್ಪು ಕೇವಲ ನಾಡಿನೊಳಗೆ ಮಾತ್ರವಲ್ಲ, ವಿಶ್ವದೆಲ್ಲೆಡೆಯಿದ್ದ ಪ್ರಗತಿಪರ ಶಕ್ತಿಗಳೊಡನೆ ಗುರುತಿಸಿಕೊಂಡ.
ಮಹಿಳಾ ಕಾಳಜಿ:
ಟಿಪ್ಪುಸುಲ್ತಾನ್ ಹಾಗೂ ಹೈದರಲಿ ಇಬ್ಬರೂ ಮೂಢ ಸಂಪ್ರದಾಯದಡಿ ಮಹಿಳೆಯರು ಅನುಭವಿಸುತ್ತಿದ್ದ ಶೋಷಣೆಯ ಬಗ್ಗೆ ಸಂವೇದನಾ ಶೀಲರಾಗಿದ್ದರು. ಈಗಿನ ಆಧುನಿಕ ಮಹಿಳಾ ವಿಮೋಚನಾ ಪ್ರಜ್ಞೆ ಅವರಿಗಿರಲಿಲ್ಲವಾದರೂ ಅವರಿದ್ದ ಐತಿಹಾಸಿಕ ಕಾಲಘಟ್ಟ ಮಿತಿ ಹಾಗೂ ಅವರು ಪ್ರತಿನಿಧಿಸುತ್ತಿದ್ದ ಪ್ರಗತಿಪರವಾದರೂ ವ್ಯಾಪಾರೋದ್ಯಮಿ ವರ್ಗದೃಷ್ಟಿಯ ಮಿತಿಯಲ್ಲಿ ಅವರು ಮೂಢ-ಸಂಪ್ರದಾಯಗಳಿಂದ ಮಹಿಳೆಯರ ಶೋಷಣೆಯನ್ನು ನಿಲ್ಲಿಸಲು ಸಾಕಷ್ಟು ಪ್ರಯತ್ನಿಸಿದರು. ಉದಾಹರಣೆಗೆ ಕೇರಳದ ಉತ್ತರ ಮಲಬಾರ್ ಪ್ರಾಂತದಲ್ಲಿ ಊಳಿಗಮಾನ್ಯ ಪ್ರಭುಗಳು ವಿಧಿಸಿದ್ದ ಕಂದಾಚಾರಗಳಿಗೆ ಬಲಿಯಾಗಿದ್ದ ಮಹಿಳೆಯರು ಎದೆಯಮೇಲೆ ಬಟ್ಟೆ ಹಾಕುವಂತಿರಲಿಲ್ಲ.
ಜನಕಂಟಕ ಪಾಳೇಗಾರರನ್ನೆಲ್ಲಾ ನಾಶಮಾಡಿದ ನಂತರ ಟಿಪ್ಪುಈ ಮಹಿಳಾ ವಿರೋಧಿ ಕಂದಾಚಾರಗಳ ವಿರುದ್ಧ ಕ್ರಮ ಕೈಗೊಂಡ. ಈ ನಿಟ್ಟಿನಲ್ಲಿ ಅತ ತನ್ನ ಅಧಿಕಾರಿಗಳಿಗೆ ಹೊರಡಿಸಿದ ನಿರೂಪವೊಂದರಲ್ಲಿ ಮಹಿಳೆಯರ ಎದೆಯಮೆಲೆ ಬಟ್ಟೆ ಹಾಕಲಾರದ ಅನಿಷ್ಟ ಸಂಪ್ರದಾಯವೊಂದು ಆ ಪ್ರಾಂತದಲ್ಲಿ ಅಸ್ತಿತ್ವದಲ್ಲಿದೆ. ಇದು ಸಮಾಜಕ್ಕೆ ಒಂದು ಕಳಂಕ. ಒಂದು ವೇಳೆ ಬಲಪ್ರಯೋಗದಿಂದ ಮಹಿಳೆಯರನ್ನು ಈ ಸ್ಥಿತಿಗೆ ದೂಡಿದ್ದರೆ ಕೂಡಲೇ ಅಂಥವರ ವಿರುದ್ಧ ಕ್ರಮ ಕೈಗೊಳ್ಳತಕ್ಕದ್ದು ಅಥವಾ ಇದು ಅಲ್ಲಿ ಧಾರ್ಮಿಕ ಸಂಪ್ರದಾಯಗಳ ಭಾಗವಾಗಿ ಅಸ್ತಿತ್ವದಲ್ಲಿದ್ದರೆ ಅಲ್ಲಿನ ಧರ್ಮಗುರುಗಳ ಮನ ಒಲಿಸುವ ಮೂಲಕ ಈ ಕಂದಾಚಾರವನ್ನು ನಿಲ್ಲಿಸಲು ಪ್ರಯತ್ನಿಸತಕ್ಕದ್ದು ಎಂದು ಆದೇಶ ನೀಡಿದ್ದ.
ಸಂಪೂರ್ಣ ಮದ್ಯಪಾನ ನಿಷೇಧ:
ಮದ್ಯಪಾನ ನಿಷೇಧಿಸಿದರೆ ಸರಕಾರದ ಖಜಾನೆ ಖಾಲಿಯಾಗುತ್ತದೆ ಎಂದು ಇಂದಿನ ಸರಕಾರಗಳು ಈಗಲೂ ಜನರನ್ನು ಕುಡಿತದ ಅಮಲಿನಲ್ಲಿಟ್ಟು ಶೋಷಣೆ ಮುಂದುವರಿಸಿದ್ದಾರೆ. ಆದರೆ ಎರಡು ಶತಮಾನಗಳ ಮೊದಲೇ ಟಿಪ್ಪುವು ಸಂಪೂರ್ಣ ಮದ್ಯಪಾನ ನಿಷೇಧವನ್ನು ಜಾರಿಗೆ ತಂದಿದ್ದ. 1787ರಲ್ಲಿ ಮೀರ್ಸಾದಿಕ್ಗೆ ಬರೆದ ಪತ್ರವೊಂದರಲ್ಲಿ ಈ ವಿಷಯದಲ್ಲಿ ಮಾತ್ರ ನಾವು ಯಾವುದೇ ಹಣಕಾಸಿನ ವಿಷಯವನ್ನು ಪ್ರಧಾನಗೊಳಿಸಿ ನೋಡಬಾರದು. ಏನೇ ಆದರೂ ಸಂಪೂರ್ಣ ಮದ್ಯಪಾನ ನಿಷೇಧ ಮಾತ್ರ ಜಾರಿಗೆ ಬರಲೇಬೇಕು. ಅದು ಕೇವಲ ಧಾರ್ಮಿಕ ವಿಷಯವಲ್ಲ. ನಾವು ನಮ್ಮ ಜನತೆಯ ಆರ್ಥಿಕ ಸದೃಢತೆ, ನೈತಿಕ ಔನ್ನತ್ಯಗಳನ್ನು ಪ್ರಧಾನವಾಗಿ ಪರಿಗಣಿಸಬೇಕು. ನಮ್ಮ ಯುವಕರಲ್ಲಿ ಸನ್ನಡತೆಯನ್ನು ಬೆಳೆಸಬೇಕು. ಖಜಾನೆಯ ಹಣಕಾಸಿನ ವಿಷಯ ಪ್ರಮುಖವಾದರೂ ಅದು ನಮ್ಮ ಜನತೆಯ ಆರೋಗ್ಯ ಹಾಗೂ ನೈತಿಕತೆಗಿಂತಲೂ ಮುಖ್ಯವಾದದ್ದೇ? ಎಂದು ಪ್ರಶ್ನಿಸಿದ್ದ.
ಇಂದಿನ ನಮ್ಮ ಸಮಾಜವಾದಿಗಳಿಗೂ ಇಲ್ಲದಂತಹ ನೈತಿಕ ಹಾಗೂ ದೂರದೃಷ್ಟಿ ಟಿಪ್ಪುವಿಗಿತ್ತು. ಅಲ್ಲದೇ ಟಿಪ್ಪು ಇದನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ನಾಡಿನಾದ್ಯಂತದ ಈಚಲುಮರಗಳನ್ನು ಕಡಿಸಲು ಆಜ್ಞೆ ಮಾಡಿದ್ದ.
ಭಾರತದ ಅತಿದೊಡ್ಡ ವ್ಯಾಪಾರಿ ಕೇಂದ್ರ ಗುಬ್ಬಿ:
ಹೈದರಲಿ ಹಾಗೂ ಟಿಪ್ಪುಅವರ ಆಳ್ವಿಕೆಯಲ್ಲಿ ವಾಣಿಜ್ಯೀಕರಣ ಅದೆಷ್ಟು ತೀವ್ರಗತಿ ಪಡೆದುಕೊಂಡಿತ್ತೆಂದರೆ ಗುಬ್ಬಿ ಹಾಗೂ ಹರಿಹರದ ಸಂತೆಗಳು ಇಡೀ ಸಂಸ್ಥಾನಲ್ಲೇ ಅತ್ಯಂತ ಪ್ರಾಮುಖ್ಯತೆಯನ್ನು ಪಡೆದುಕೊಂಡವು.ಬುಕಾನನ್ ದಾಖಲಿಸಿರುವಂತೆ ಆಗ ಗುಬ್ಬಿಯಲ್ಲಿ ನಡೆಯುತ್ತಿದ್ದ ಸಂತೆ ಭಾರತದಲ್ಲೇ ಅತಿ ದೊಡ್ಡ ಸಂತೆಯಾಗಿತ್ತು.
ಮಠಗಳಿಂದ ಅಕ್ಷರ ವಿಮೋಚನೆ!
ಒಂದು ಕೇಂದ್ರೀಕೃತ ಪ್ರಭುತ್ವದ ಯಶಸ್ವಿ ನಿರ್ವಹಣೆಗೆ ಅಕ್ಷರಸ್ಥ ಅಧಿಕಾರಿ ವರ್ಗದ ಅಗತ್ಯವನ್ನು ಟಿಪ್ಪುಮನಗಂಡಿದ್ದ. ಈ ಕಾರಣದಿಂದ ಟಿಪ್ಪು ವಿನ ಆಳ್ವಿಕೆಯಲ್ಲಿ ಶ್ರೀರಂಗಪಟ್ಟಣದಲ್ಲಿ ಅಧಿಕಾರಿಗಳಿಗೆ ಹಾಗೂ ಅವರ ಮಕ್ಕಳು ಓದು ಬರಹ ಕಲಿಯುವುದು ಕಡ್ಡಾಯವಾಗಿತ್ತು. ಹೀಗೆ ಶತಶತಮಾನಗಳಿಂದ ಸಾಗಿಬಂದಿದ್ದ ಅಕ್ಷರದ ಮೇಲೆ ಬ್ರಾಹ್ಮಣಶಾಹಿ ಹತೋಟಿ ತಪ್ಪಿಸಾರ್ವಜನಿಕ ಗೊಳಿಸುವ ಪ್ರಕ್ರಿಯೆಯು ಸಣ್ಣದಾಗಿ ಪ್ರಾರಂಭಗೊಂಡಿತ್ತು.