‘‘ಯುದ್ಧದ ಭಯವೇ ಅಂತಿಮ ಭಯ’’
‘ಭಯಾನಕಮ್’ ಕುರಿತು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತ ಜಯರಾಜ್

‘ಭಯಾನಕಮ್’ ಚಲನಚಿತ್ರಕ್ಕಾಗಿ ಒಂದಲ್ಲ, ಎರಡು ರಾಷ್ಟ್ರಪ್ರಶಸ್ತಿಗಳನ್ನು ಪಡೆದಿರುವ ಜಯರಾಜ್ ಸಂಭ್ರಮದಲ್ಲಿದ್ದಾರೆ. ನಿರ್ದೇಶನ ಮತ್ತು ಅತ್ಯುತ್ತಮ ಚಿತ್ರಕತೆಗಾಗಿ ಪ್ರಶಸ್ತಿಗಳನ್ನು ಪಡೆದಿರುವ ಅವರು ಈ ಹಿಂಸೆ ನಿರ್ದೇಶನ ಮತ್ತು ಮುಖ್ಯ ನಟನ (ಸುರೇಶ್ ಗೋಪಿ) ಪಾತ್ರಕ್ಕಾಗಿ 1997ರಲ್ಲಿ ಒಥೆಲೊ ನಾಟಕದ ‘ಕಲಿಯಾಟ್ಟಮ್’ ರೂಪಾಂತರಕ್ಕಾಗಿ ರಾಷ್ಟ್ರಪ್ರಶಸ್ತಿಗಳನ್ನು ಪಡೆದಿದ್ದರು. 2001ರಲ್ಲಿ ಅವರು ‘ಶಾಂತಮ್’ ಚಿತ್ರಕ್ಕಾಗಿ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಯನ್ನು ಪಡೆದಿದ್ದರು.
ಜಯರಾಜ್ ಹಲವಾರು ವರ್ಷಗಳಿಂದ ಸ್ವತಂತ್ರ ಹಾಗೂ ಮುಖ್ಯಪ್ರವಾಹ (ಮೈನ್ ಸ್ಟ್ರೀಮ್)ಸಿನೆಮಾಗಳಲ್ಲಿ ತನ್ನನ್ನು ತೊಡಸಿಕೊಂಡಿದ್ದಾರೆ. ಸನ್ಯಾಸಿಯಾಗಲು ನಿರ್ಧರಿಸುವ ಹತ್ತು ವರ್ಷದ ಹುಡುಗನೊಬ್ಬನ ಬಗ್ಗೆ ಅವರು 1996ರಲ್ಲಿ ‘ದೇಸ ದಾನಮ್’ಎಂಬ ಸಿನೆಮಾ ಮಾಡಿದ್ದರು. ಅವರ ‘4 ದಿ ಪೀಪಲ್ (2004) ಗಲ್ಲಾ ಪೆಟ್ಟಿಗೆಯಲ್ಲಿ ಹಿಟ್ ಆಗಿತ್ತು ಆದರೆ ತನಗೆ ಕಲಾತ್ಮಕ ಚಿತ್ರಗಳನ್ನು ಮಾಡುವುದೇ ಹೆಚ್ಚು ಸುಲಭ ಎನ್ನುತ್ತಾರೆ ಅವರು.
♦ ನೀವು ಸಾಕಷ್ಟು ಸಮಯದಿಂದ ‘ಭಯಾನಕಮ್’ನಲ್ಲಿ ತೊಡಗಿದ್ದೀರಿ?
ಜಯರಾಜ್: ನಿಜವಾಗಿ 2000ದಿಂದಲೇ ನಾನು ಅದನ್ನು ಕೈಗೆತ್ತಿಕೊಂಡಿದ್ದೆ. ದುರದೃಷ್ಟವಶಾತ್ ಆಗ ಅದು ಕೈಗೂಡಲಿಲ್ಲ. ಆದರೆ ಈಗ ವಿಶ್ವದಲ್ಲಿ ಯುದ್ಧದ ಪರಿಸ್ಥಿತಿ ಇದೆ. ಎಲ್ಲೆಲ್ಲೂ ಭಯ ಆವರಿಸಿದೆ. ಆದ್ದರಿಂದ ಈ ಸಿನೆಮಾ ಮಾಡಲು ಅತ್ಯಂತ ಸೂಕ್ತ ಸಮಯ ಅನ್ನಿಸಿತು.
‘ಭಯಾನಕಮ್’ ಅಂದರೆ ಹೆದರಿಕೆ. ಈ ಸಿನೆಮಾ ತಗಳಿ ಶಿವಶಂಕರ ಪಿಳ್ಳ್ಳೈಯ ವರ ಅಭಿಜಾತ ಕಾದಂಬರಿ ‘ಕಯಾರ್’ನ ಎರಡು ಅಧ್ಯಾಯಗಳನ್ನಾಧರಿಸಿದೆ. ದ್ವಿತೀಯ ಮಹಾಯುದ್ಧದ ವೇಳೆ ಕುಟ್ಟನಾಡಿನ ಹಿನ್ನೀರ ಪ್ರದೇಶಕ್ಕೆ ಬರುವ ‘ಒಬ್ಬ ಪೋಸ್ಟ್ಮ್ಯಾನ್ನ ಕಥೆ ಅದು. ಈ ಪ್ರದೇಶದ 650 ಮಂದಿ ಬ್ರಿಟಿಷ್ ಸೇನೆಯಲ್ಲಿ ಸೈನಿಕರಾಗಿ ಯುದ್ಧದಲ್ಲಿ ತೊಡಗಿದ್ದಾರೆ. ಪೋಸ್ಟ್ಮಾನ್ (ರಂಜಿತ್ ಫಣಿಕ್ಕರ್) ಯುದ್ಧದಲ್ಲಿ ಸೈನಿಕರು ಸತ್ತಿರುವ ಸುದ್ದಿ ಹೊತ್ತ ಟೆಲಿಗ್ರಾಮ್ಗಳನ್ನು ತರಲಾರಂಭಿಸುತ್ತಾನೆ. ಮೊದಲ ಮಹಾಯುದ್ಧದಲ್ಲಿ ಓರ್ವ ಸೈನಿಕನಾಗಿದ್ದ ಆತ, ಕ್ರಮೇಣ ಊರಿನ ಜನರ ಪಾಲಿಗೆ ಸಾವಿನ ಒಂದು ಅಪಶಕುನವಾಗುತ್ತಾನೆ.
ಅಂತಿಮ ಭಯ, ಯುದ್ಧದ ಭಯ. ಪೋಸ್ಟ್ಮ್ಯಾನ್ ಯುದ್ಧದ ಯಾತನೆ ಮತ್ತು ಭಯದ ಒಂದು ಸಂಕೇತ
♦ ನಿಮ್ಮ ನವರಸ ಸಿನೆಮಾ ಸರಣಿಯಲ್ಲಿ ‘ಭಯಾನಕಮ್’ ಅತ್ಯಂತ ಇತ್ತೀಚಿನದು.
ಜಯರಾಜ್: ಹೌದು ಈ ಸರಣಿಯಲ್ಲಿ ನನ್ನ ಹಿಂದಿನ ಸಿನೆಮಾಗಳು ಮುದುಕರನ್ನು/ವಯಸ್ಸಾದವರನ್ನು ಹೇಗೆ ನೋಡಿಕೊಳ್ಳಲಾಗುತ್ತದೆ ಎಂಬುದನ್ನು ಚಿತ್ರಿಸುವ ‘ಕರುಣಮ್’ ಮತ್ತು ಕೇರಳದಲ್ಲಿ ನಡೆಯುವ ರಾಜಕೀಯ ಹಿಂಸೆಯನ್ನು ತೋರಿಸುವ ‘ಶಾಂತಮ್’ ಬಳಿಕ ಹಿಂದಿಯಲ್ಲಿ ಸೀಮಾ ಬಿಸ್ವಾಸ್ ನಟಿಸಿದ ‘ಬೀಭತ್ಸ್’, ಮತ್ತು ‘ಅದ್ಭುತಮ್’ ಹಾಗೂ ‘ವೀರಮ್’. ‘ಭಯಾನಕಮ್’ ಬಳಿಕ ನಾನು ಶೃಂಗಾರ, ರೌದ್ರ(ಕೋಪ) ಮತ್ತು ಹಾಸ್ಯದ ಬಗ್ಗೆ ಸಿನೆಮಾ ಮಾಡುವವನಿದ್ದೇನೆ.
♦ ನೀವು ಅತ್ಯುತ್ತಮ ರೂಪಾಂತರಕ್ಕಾಗಿಯೂ ಪ್ರಶಸ್ತಿ ಗಳಿಸಿದ್ದೀರಿ. ಟಿಎಸ್ ಪಿಳ್ಳ್ಳೈಯವರ ಕೃತಿಯನ್ನು ಹೀಗೆ ಅಳವಡಿಸಿಕೊಳ್ಳುವ ನಿಮ್ಮ ಅನುಭವ ಹೇಗಿತ್ತು?
ಜಯರಾಜ್: 2008ರಲ್ಲಿ ನಾನು ಪಿಳ್ಳೆಯವರ ‘ವೆಲ್ಲಪೊಕ್ಕತ್ತಿಲ್ (ಪ್ರವಾಹದಲ್ಲಿ) ಕತೆಯನ್ನಾಧರಿಸಿ ಒಂದು ಕಿರುಚಿತ್ರ ಮಾಡಿದೆ. ಒಬ್ಬ ದಲಿತ ಮತ್ತು ಅವನ ನಾಯಿಯ ಕುರಿತಾದ ಕತೆ ಅದು.
ಜಾತಿ ಅಸ್ಮಿತೆಯ ಹಾಗೂ ಪ್ರತ್ಯೇಕತೆಯ ಯಾತನೆ ಹಾಗೂ ಅಸಹಾಯಕತೆಯನ್ನು ಅದು ಶೋಧಿಸುತ್ತದೆ. ತಗಳಿಯವರ ಕತೆಯನ್ನು ಸಿನೆಮಾ ಮಾಡುವುದು ನನಗೆ ಸುಲಭ ಅನ್ನಿಸುತ್ತದೆ. ಶ್ರೇಷ್ಠ ಅಭಿವ್ಯಕ್ತಿ, ತುಂಬ ವಿವರವಾದ ಪಾತ್ರ ಚಿತ್ರಣ ಅವರ ಕತೆಗಳಲ್ಲಿರುತ್ತದೆ.
♦ ಚಿತ್ರ ಬಿಡುಗಡೆಯಾಗದೆಯೇ ‘ಭಯಾನಕಮ್’ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಗಳಿಸಿದೆ.
ಜಯರಾಜ್: ಮೇ 30ರಂದು ಚಿತ್ರ ಬಿಡುಗಡೆಗೊಳ್ಳಲಿದೆ. ಪಾಶ್ಚಾತ್ಯ ದೇಶ ಗಳಲ್ಲಿ, ಚಿತ್ರವೊಂದಕ್ಕೆ ಪ್ರಶಸ್ತಿಗಳು ಲಭಿಸಿದಾಗ ಅದನ್ನು ನೋಡಲು ಜನ ಚಿತ್ರ ಮಂದಿರಗಳಿಗೆ ನುಗ್ಗುತ್ತಾರೆ. ಭಾರತದಲ್ಲಿ ಇದರ ವಿರುದ್ಧ ನಡೆಯುತ್ತದೆ. ಜನ ಇಲ್ಲಿ ಪ್ರಶಸ್ತಿ ವಿಜೇತ ಚಿತ್ರವೊಂದನ್ನು ಚಿತ್ರೋತ್ಸವದಲ್ಲಿ ನೋಡುತ್ತಾರೆಯೇ ಹೊರತು ಥಿಯೇಟರ್ಗಳಿಗೆ ಬರುವುದಿಲ್ಲ.
♦ ನೀವು ಕಮರ್ಷಿಯಲ್ ಮತ್ತು ಕಲಾತ್ಮಕ ಎರಡೂ ಚಿತ್ರಗಳನ್ನು ಮಾಡಿದ್ದೀರಿ. ಇವೆರಡರಲ್ಲಿ ನಿಮ್ಮ ಆಯ್ಕೆ ಯಾವುದು?
ಜಯರಾಜ್: ಪ್ರಯೋಗಾತ್ಮಕ ಸಿನೆಮಾ ನಿರ್ದೇಶಿಸುವುದು ನನಗೆ ಸುಲಭ ಅನ್ನಿಸುತ್ತದೆ. ಆದರೆ ಒಂದು ಕಮರ್ಷಿಯಲ್ ಹಿಟ್ ಸಿನೆಮಾ ಮಾಡುವುದು ಕಷ್ಟ. ಜನರಿಗೆ ಯಾವುದು ಇಷ್ಟ ಎಂದು ಯಾರಿಗೂ ಗೊತ್ತಿರುವುದಿಲ್ಲ. ನಾನು ಪ್ರಯೋಗಾತ್ಮಕ ಸಿನೆಮಾ ಮಾಡುವಾಗ ನನಗೆ ಬೇಕಾದಂತೆ ಮಾಡುವ ಸ್ವಾತಂತ್ರವಿದೆ. ಕಮರ್ಷಿಯಲ್ ಸಿನೆಮಾ ಯಶಸ್ವಿಯಾಗಬೇಕಾದರೆ, ಪ್ರೇಕ್ಷಕರನ್ನು ತೃಪ್ತಿ ಪಡಿಸುವುದು ಹೇಗೆ! ಎಂದು ನಾನು ಯೋಚಿಸಬೇಕು. ಅಕಡಮಿಕ್ ಮತ್ತು ಕಮರ್ಷಿಯಲ್ ಎರಡೂ ಮಟ್ಟದಲ್ಲಿ ಯಶಸ್ವಿ ಯಾಗುವಂತೆ ಮಾಡಬಲ್ಲ ಸೇತುವೆಯೊಂದನ್ನು ನಿರ್ಮಿಸಲು ನಾನು ಪ್ರಯತ್ನಿಸುತ್ತಿದ್ದೇನೆ.
♦ ಮಲಯಾಳಂ ಸಿನೆಮಾಗಳು ರಾಷ್ಟ್ರೀಯ ಪ್ರಶಸ್ತಿಗಳ ಮಟ್ಟದಲ್ಲಿ ಪಾರಂಪರಿಕವಾಗಿ ಪ್ರಶಸ್ತಿ ಗಳಿಸಿವೆ.
ಜಯರಾಜ್: ಮಲಯಾಳಂ ಮಾತ್ರವಲ್ಲ, ಈ ಪ್ರಶಸ್ತಿಗಳ ಮಟ್ಟದಲ್ಲಿ ಪ್ರಾದೇಶಿಕ ಸಿನೆಮಾ ಕೂಡ ಉತ್ತಮ ಹೆಸರುಗಳಿಸಿದೆ. ಯಾಕೆಂದರೆ ಅವುಗಳು ನಿಜವಾದ ಜೀವನ, ನಿಜವಾದ ಪಾತ್ರಗಳನ್ನು ತೋರಿಸುತ್ತವೆ. ಮಲಯಾಳಂ ಸಿನೆಮಾ ಸದಾ ಪ್ರಯೋಗ ಶೀಲವಾಗಿದೆ. ಹೊಸ ಧೈರ್ಯದ ಕಥಾ ವಸ್ತುಗಳನ್ನು ಆಯ್ದುಕೊಳ್ಳಲು ಹಿಂಜರಿಯದ, ನಾಚಿಕೊಳ್ಳದ ಸಾಕಷ್ಟು ನಟರು ಮತ್ತು ಸಿನೆಮಾ ತಯಾರಕರು ನಮ್ಮಲ್ಲಿದ್ದಾರೆ. ನಮ್ಮ ಸಿನೆಮಾಗಳು ಜನಸಾಮಾನ್ಯರ ಭಾವನೆಗಳಿಗೆ ತುಂಬ ಹತ್ತಿರವಾಗಿವೆ. ಮಲೆಯಾಳವಷ್ಟೇ ಅಲ್ಲ; ತುಳು, ಅಸ್ಸಾಮೀ, ಗುಜರಾತೀ, ಮರಾಠಿ-ಎಲ್ಲ ಪ್ರಾದೇಶಿಕ ಸಿನೆಮಾಗಳೂ ಸತ್ಯನಿಷ್ಠವಾಗಿವೆ.
ಕೃಪೆ: scroll.in